ಮೂವತ್ತು ಭಾವಗೀತೆಗಳ ಪುಷ್ಪಮಾಲೆ



ತೂಮಣಿ ಮಾಡುತ್ತು ಚುಟ್ರುಮ್ ವಿಳಕ್ಕೆರಿಯ
ದೂಪಮ್ ಕಮಳ್ ತ್ತುಯಿಲಣೈ ಮೇಲ್ ಕಣ್ವಳರುಮ್
ಮಾಮಾನ್ ಮಗಳೇ ಮಣಿಕ್ಕದವಂ ತಾಳ್ ತೆರುವಾಯ್
ಮಾಮಿರ್ ಅವಳೈ ಎಳುಪ್ಪೀರೋ, ಉನ್ ಮಗಳ್ ತಾನ್
ಊಮೆಯೋ ಅನ್ರಿ ಚ್ಯೆವುಡೋ ಅನನ್ದಲೋ
ಏಮಪ್ಪೆರುನ್ದುಯಿಲ್ ಮನ್ದಿರಪ್ಪಟ್ಟಾಳೋ
ಮಾಮಾಯನ್ ಮಾದವನ್ ವೈಗುನ್ದ ನೆನ್ನೆನ್ರು
ನಾಮಮ್ ಪಲವುಮ್ ನವಿನ್ರೇಲೋ ರೆಮ್ಬಾವಾಯ್
    ಎಂತಹ ಸುಂದರವಾದ ವರ್ಣನೆ. ಒಳಗೆ ಮಾನವ ಮಗಳು ನಿದ್ರಿಸುತ್ತಿದ್ದಾಳೆ. ಆ ಗೃಹವಾದರೋ ಪರಿಶುದ್ಧವಾದ ಮಾಣಿಕ್ಯದಿಂದ ಕಟ್ಟಲ್ಪಟ್ಟಿದೆ. ಸುತ್ತಲೂ ದೀಪಗಳು ಉರಿಯುತ್ತಿವೆ. ಅಗರು, ಹಾಲು ಮಡ್ಡಿ ಮುಂತಾದ ಧೂಫ ಘಮಘಮಿಸುತ್ತಿದೆ. ಅವಳು ಹಂಸತೂಲಿಕಾಕಲ್ಪದಲ್ಲಿ ಮಲಗಿ ನಿದ್ರಿಸುತ್ತಿದ್ದಾಳೆ. ಹೊರಗಿನಿಂದ ಬಾಲೆಯರು ಅವಳನ್ನು ಎಬ್ಬಿಸುತ್ತಿದ್ದಾರೆ. "ಏಳು, ಮಾವನ ಮಗಳೇ, ಚಿಲಕವನ್ನು ತೆಗೆಯುವವಳಾಗು." ಉಹುಂ, ಶ್ರೀ ಕೃಷ್ಣಾನುಭಾವದ ರಸದಲ್ಲಿ ತಲ್ಲಿನಳಾಗಿರುವ ಅವಳು ಏಳುವುದಿಲ್ಲ. ಆಗ ಬಾಲೆಯರು ಅವಳ ತಾಯಿಗೆ ಹೇಳುತ್ತಾರೆ. 'ಅತ್ತೆಯವರೆ ನೀವಾದರೂ ಅವಳನ್ನು ಎಬ್ಬಿಸಿ. ಅವಳೇನು ಮೂಕಿಯೋ, ಕಿವುಡಿಯೋ ಅಥವಾ ಸೋಮಾರಿಯೋ ಕೇಳಿ ಯಾರಾದರೂ ಇವಳಿಗೆ ಮಂಕುಬೂದಿ ಚೆಲ್ಲಿದ್ದಾರೇನು? ಮಂತ್ರ ಮಗ್ಧಳನ್ನಾಗಿ ಮಾಡಿದ್ದಾರೇನು? ಅಥವಾ ಇವಳ ನೆರೆಮನೆಯಲ್ಲೇ ಶ್ರೀಕೃಷ್ಣನಿರುವುದರಿಂದ ರಾತ್ರಿಯೆಲ್ಲಾ, ಅವನು ಇವಳೊಡನಿದ್ದು ಈಗ ತಾನೇ ಎದ್ದು ಹೋಗಿರಬಹುದಾದ್ದರಿಂದ ಈಕೆ ಇನ್ನೂ ಅದೇ ತನ್ಮಯತೆಯಲ್ಲಿದ್ದಾಳೋ? ನಾವು ವ್ರತಾನುಷ್ಠಾನಕ್ಕಾಗಿ ಹೋಗುತ್ತಿರುವಾಗ ಇವಳೊಬ್ಬಳು ಬಾರದಿದ್ದರೆ ನಮಗೆ ಕಷ್ಟವಾಗುತ್ತದೆ. ಆದ್ದರಿಂದ ಜಾಗ್ರತೆ ಎಬ್ಬಿಸಿ ಅದಕ್ಕೆ ಅವಳ ತಾಯಿ ಉತ್ತರ ಕೊಡುತ್ತಾಳೆ ಮಕ್ಕಳಿರಾ ನೀವು ಇವಳ ಮುಂದೆ ಶ್ರೀಕೃಷ್ಣನ ನಾಮ ಸಂಕೀರ್ತನೆಮಾಡಿ ಆಗ ಇವಳು ಏಳುತ್ತಾಳೆ. ಅದಕ್ಕೆ ಆ ಬಾಲಿಕೆಯರು "ಇದುವರೆಗೂ ನಾವು ಅವನ ಸಹಸ್ರ ನಾಮಗಳನ್ನು ಹಾಡಿದ್ದೇವೆ. ಇನ್ನು ಎಬ್ಬಿಸಿ" ಎನ್ನುತ್ತಾರೆ.
    ಗೋಪೀಗೀತದ ಛಾಯೆಯಂತಿರುವ ಈ ಗೀತೆ ಶ್ರೀ ಗೋದಾದೇವಿಯ 'ತಿರುಪ್ಪಾವೈ' ಎಂಬ ಪ್ರಬಂಧದ ಒಂಬತ್ತನೆಯ ಪಾಶುರ ಅಥವಾ ಗೀತೆಯಾಗಿದೆ.
     ಭಕ್ತಾಗ್ರೇಸರಳೂ, ಭಕ್ತಿ ಜ್ಞಾನಗಳಲ್ಲಿ ಮಿಗಿಲಾದವಳೂ ಆದ ಶ್ರೀ ಗೋದಾದೇವಿ ಹರಿದಾಸರೆಲ್ಲರಿಗಿಂತ ಕಿರಿಯ ವಯಸ್ಸಿನಲ್ಲಿಯೇ ಅಂದರೆ ತನ್ನ ಐದನೆಯ ವಯಸ್ಸಿನಲ್ಲೇ ಈ ಪ್ರಬಂಧವನ್ನು ರಚಿಸಿದ್ದಾಳೆ. ತಮಿಳಿನ ನಾಲ್ಕು ಸಾವಿರ ಪ್ರಬಂಧಗಳಲ್ಲಿ ಇವಳ 'ತಿರುಪ್ಪಾವೈ' ಹಾಗೂ 'ನಾಯಕೀ ಗೀತವೂ' ಸೇರಿ ಶ್ರೀವೈಷ್ಣವರಿಂದ ನಿತ್ಯಾನುಸಂಧಾನಗಳಾಗಿವೆ. ಸ್ವಯಂ ಶ್ರೀರಾಮನುಜಾಚಾರ್ಯರು ಇವಳ ಗೀತೆಗಳನ್ನು ಹಾಡುತ್ತಾ ತನ್ಮಯರಾಗಿ ಹೋಗುತ್ತಿದ್ದರೆಂದು ತಿಳಿಯಬಂದಿದೆ.
    ಶ್ರೀವಿಲ್ಲಿಪುತ್ತೂರಿನಲ್ಲಿ ವಿಷ್ಣುಚಿತ್ತರೆಂಬ ಭಾಗವತೋತ್ತಮರು ವಟಪತ್ರಶಾಯಿಯಾದ ಶ್ರೀಕೃಷ್ಣನ ಕೈಂಕರ್ಯಕ್ಕಾಗಿ ತುಲಸೀ ತೋಟವೊಂದನ್ನು ಬೆಳೆಸಿಕೊಂಡಿದ್ದು ಅದರಲ್ಲಿ ಹಲವು ಜಾತಿಯ ಪುಷ್ಪಗಳ ಗಿಡಗಳನ್ನು ನೆಟ್ಟ ಪೋಷಿಸುತ್ತಿದ್ದರು. ಒಂದು ದಿನ ತುಳಸೀ ಗಿಡವೊಂದರ ಬುಡದಲ್ಲಿ ಪೆಟ್ಟಿಗೆಯೊಂದು ಕಾಣಬಂದಿತು. ವಿಷ್ಣು ಚಿತ್ತರಿಗೆ ಸುಂದರವಾದ ಹೆಣ್ಣು ಕೂಸು ಅದರಲ್ಲಿ ಕಂಡಿತು. ವಿಷ್ಣುಚಿತ್ತರು ಅದನ್ನೆತ್ತಿಕೊಂಡು ಅದಕ್ಕೆ "ಕೋದೈ" ಎಂದು ನಾಮಕರಣ ಮಾಡಿದರು ತಮಿಳಿನಲ್ಲಿ 'ಕೋದೈ' ಎಂದ್ರ ಸುಂದರವಾದ ಮುಂಗುರುಳುಗಳಿರುವವಳೆಂದು ಅರ್ಥವಾಗುತ್ತದೆ. ಇದರ ಸಂಸ್ಕೃತದ ರೂಪವೇ ಗೋದಾ. ಇವಳು ಗೋಚರಿಸಿದ ಕಾಲ ಕಲಿಯುಗದ 98ನೇ ನಳವರ್ಷ ಅಂದರೆ ಕ್ರಿ.ಪೂ 3005ನೇ ಕರ್ಕಾಟಕ ಮಾಸ ಫಲ್ಗುನೀ ನಕ್ಷತ್ರವೆಂದು 'ಸೂರಿ ಚರಿತಂ', 'ಗುರುಪರಂಪರಾ', ಮತ್ತು 'ಪ್ರಪನ್ನಾಮೃತಂ' ಎಂಬ ಗ್ರಂಥಗಳಲ್ಲಿ ಹೇಳಿದೆ.
    ಲಕ್ಷ್ಮ್ಯಂಶಸಂಭೂತಳಾದ ಈ ಬಾಲಿಕೆಯು ದಿನದಿನಕ್ಕೆ ಪೂರ್ಣಚಂದ್ರನಂತೆ ಅಭಿವೃದ್ಧಿಗೊಳ್ಳುತ್ತಾ ತನ್ನ ಅನಾದೃಶವಾದ ಸೌಂದರ್ಯದಿಂದಲೂ, ಮನಮೋಹಕವಾದ ಆಟಪಾಟಗಳಿಂದಲೂ, ಪೋಷಕ ಪಿತೃವಿನ ಮನಸ್ಸನ್ನೂ, ಪರಿವಾರದವರನ್ನೂ, ಮುಗ್ದಗೊಳಿಸುತ್ತಿದ್ದಳು.
    ಇವಳ ಆಟಪಾಟಗಳೆಲ್ಲಾ ಶ್ರೀಕೃಷ್ಣನ ವಿಷಯಕವಾಗಿಯೇ ಇದ್ದುದರಿಂದ ಜ್ಞಾನಿಗಳಾದ ವಿಷ್ಣುಚಿತ್ತರಿಗೆ ಇವಳು ಸಾಕ್ಷಾತ್ ಲಕ್ಷ್ಮಿಯ ಅಂಶವೇ ಎಂಬುದು ಸ್ಥಿರ ಪಟ್ಟಿತು.
    ಐದು ವರ್ಷಗಳ ಬಾಲ್ಯಾವಸ್ಥೆಯಲ್ಲಿಯೇ ಇವಳಿಗೆ ಸಕಲ ವೇದಾರ್ಥಸಾರಗಳೂ ತಿಳಿದಿದ್ದುವು. ಶ್ರೀಕೃಷ್ಣವಿರಹದಿಂದ ಇವಳು ತಪ್ತಳಾಗಿರುತ್ತಿದ್ದಳು. ಹೀಗಿರುವಲ್ಲಿ ಒಮ್ಮೆ ಪರಮಭಾಗವತಶಿಖಾಮಣಿಗಳಾದ ಕೆಲವರು ಈಕೆಯನ್ನು ಕಂಡು ಶ್ರೀಕೃಷ್ಣಸಮಾಗಮವಾಗಬೇಕಾದ್ರೆ ಗೋಪೀಭಾವವನ್ನು ಅನುಕರಿಸಬೇಕೆಂದು ಹೇಳಿದರು. ಒಡನೆ ಅವಳು ತನ್ನಲ್ಲಿ ಗೋಪಿಭಾವವನ್ನು ಅವಾಹನೆ ಮಾಡಿಕೊಂಡಳೂ. ಅವಳ ನಡೆ, ನುಡಿ, ಮುಡಿ ಎಲ್ಲಾ ಗೋಪಿಯರಂತ ಮಾರ್ಪಟ್ಟವು ಆಗ ಭಾಗವತದಲ್ಲಿ ವರ್ಣಿತವಾಗಿರುವ ಕಾತ್ಯಾಯನೀ ವ್ರತವನ್ನು ತಾನು ಆಚರಿಸ ತೊಡಗಿದಳು. ನಂದಗೋಕುಲದಲ್ಲಿ ಶ್ರೀಕೃಷ್ಣನು ಪ್ರಾಪ್ತವಯಸ್ಕರಾದ ಹೆಣ್ಣುಮಕ್ಕಳೊಂದಿಗೆ ನಡೆಸುತ್ತಿದ್ದ ವ್ಯವಹಾರದಿಂದ ಶಂಕೆಗೊಂಡು ಹಿರಿಯರು ತಂತಮ್ಮ ಹೆಣ್ಣು ಮಕ್ಕಳನ್ನು ನೆಲಮಾಳಿಗೆಗಳಲ್ಲಿ ಬಂಧಿಸಿಟ್ಟಿದ್ದರು. ಅಲ್ಲದೆ ಶ್ರೀಕೃಷ್ಣನು ಅವರ ಕಣ್ಣಿಗೆ ಬೀಳದಂತೆ ಕಟ್ಟಾಜ್ಞೆಯನ್ನು ಮಾಡಿದ್ದರು. ಆಗ ಗೋಕುಲದಲ್ಲಿ ಸರಿಯಾದ ಕಾಲದಲ್ಲಿ ಮಳೆಯಾಗದೆ ಪೈರು ಪಚ್ಚೆಗಳು ಒಣಗಿ ಗೋವುಗಳಿಗೆ ಮೇವಿಲ್ಲದೆ ಹೋಯಿತು. ಗೋವಳರೆಲ್ಲರೂ ಕಂಗೆಟ್ಟು ಒಟ್ಟಿಗೆ ಕಲೆತು. ಹೀಗೆಯೇ ಆದ್ರೆ ನಮಗಾಗಲೀ ಗೋವುಗಳೀಗಾಗಲೀ ಉಳಿಗಾಲವಿಲ್ಲ ಆದ್ದರಿಂದ ನಮ್ಮ ಊರಿನ ಹೆಣ್ಣು ಮಕ್ಕಳನ್ನೆಲ್ಲಾ ಸೇರಿಸಿ ಒಂದು ವ್ರತವನ್ನಾಚರಿಸೋಣ ಅದಕ್ಕೆ ಶ್ರೀಕೃಷ್ಣನೇ ನಾಯಕನಾಗಿರಲಿ ಎಂದು ತೀರ್ಮಾನಿಸಿ ಅದರಂತೆ ಶ್ರೀಕೃಷ್ಣನನ್ನು ಸಮಾಧಾನ ವಚನಗಳೀಂದ ಒತ್ತಾಯ ಪಡಿಸಿ ಗೋಪಬಾಲಿಕೆಯರನ್ನು ಶ್ರೀಕೃಷ್ಣನ ವಶಕ್ಕೆ ಒಪ್ಪಿಸಿದರು. ಕೃಷ್ಣನೂ ಗೋಪಬಾಲೆಯರೂ ಮತ್ತೆ ಕಲೆತುದಕ್ಕಾಗಿ ಸಂತೋಷಗೊಳ್ಳುತ್ತಿರಲು ರಾತ್ರಿಯಾಗಿ ಹೋಯಿತು. ಪುನಃ ಹಿರಿಯರ ಅಸಮಾಧಾನಕ್ಕೆ ಒಳಗಾಗಬಾರದೆಂದು ಅವರೆಲ್ಲಾ ತಂತಮ್ಮ ಮನೆಗಳಿಗೆ ಹೋದರು. ಶ್ರೀಕೃಷ್ಣನು ನಪ್ಪಿನ್ನೈವಿರಾಟ್ಟಿಯ ಮನೆ ಹೊಕ್ಕನು. ಮಾರನೆಯ ಬೆಳಗ್ಗೆ ಉಷಃ ಕಾಲದಲ್ಲಿಯೇ ಎದ್ದು ವ್ರತಾಚರಣೆಗೆ ಮೊದಲು ಎಲ್ಲರೂ ಸ್ನಾನಮಾಡೋಣ ಎಂದು ನಿರ್ಧರಿಸಿದರು.
    ಹೀಗೆ ಮನೆ ಸೇರಿದ ಗೋಪಿಯರು ಬಹುಕಾಲದ ನಂತರ ಆಗ ತಾನೇ ಶ್ರೀಕೃಷ್ಣನೊಂದಿಗೆ ಸೇರಿ ಮತ್ತೆ ಅಗಲಿದ ಪ್ರಯುಕ್ತ ವಿರಹತಪ್ತರಾಗಿ ರಾತ್ರಿಯಾದ ಕೂಡಲೇ ತಮ್ಮ  ಮನೆಗಳಿಂದ ಹೊರಟು ತಮ್ಮಂತೆಯೇ ಶ್ರೀ ಕೃಷ್ಣ ಗುಣಗಳನ್ನು ಚಿಂತಿಸುತ್ತ ಮಲಗಿದ್ದ ಎಲ್ಲ ಗೋಫಿಯರ ಮನೆಗಳಿಗೂ ಹೋಗಿ ಒಬ್ಬಳನ್ನೂ ಬಿಡದೆ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ನಂದಗೋಪನ ಮನೆಯನ್ನು ಸೇರಿ ಅಲ್ಲಿ ಮಲಗಿದ್ದ ಕೃಷ್ಣನನ್ನು ಎಬ್ಬಿಸಿ, ತಮ್ಮ ಕೋರಿಕೆಯನ್ನು ಮನಮುಟ್ಟುವಂತೆ ಅವನಿಗೆ ನಿವೇದಿಸಿ ಅವನಿಂದ ಅನುಗ್ರಹೀತರಾಗುವುದೇ ಕಾತ್ಯಾಯನೀವ್ರತ.
    ಆಂಡಾಳ್ ಈ ವ್ರತಾಚರಣೆಗಾಗಿ ನಂದಗೋಕುಲಕ್ಕೆ ಹೋಗಲಿಲ್ಲ. ತಾನಿರುವ ಶ್ರೀವಿಲ್ಲಿಪುತ್ತೂರನ್ನೇ ನಂದಗೋಕುಲವೆಂತಲೂ ತನ್ನ ಗೆಳತಿಯರನ್ನು ಗೋಪಿಯರೆಂತಲೂ, ಅಲ್ಲಿನ ಪ್ರಜೆಗಳೇ ಗೋಪಾಲಕರೆಂತಲೂ, ದೇವ ಮಂದಿರವನ್ನೇ ನಂದಗೋಪನ ಗೃಹವೆಂತಲೂ ವಟಪತ್ರಾಶಾಯಿಯೇ ಶ್ರೀಕೃಷ್ಣನೆಂತಲೂ ಭಾವಿಸಿ ವ್ರತವನ್ನಾಚರಿಸಲು ತೊಡಗಿದಳು.
    'ಮಾಸಾನಾಂ ಮಾರ್ಗಶೀರ್ಷೋಸ್ಮಿ' ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಮಾರ್ಗಶೀರ್ಷಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟಿದ್ದಾನೆ. ಕಾತ್ಯಾಯನೀ ವ್ರತವು ನಡೆದದ್ದು ಈ ಮಾಸದಲ್ಲಿಯೇ ಆದರಂತೆ ಗೋದಾದೇವಿಯು ಉಷಃಕಾಲಕ್ಕೆ ಮುಂಚೆಯೇ ಎದ್ದು ತನ್ನ ಸಖಿಯರನ್ನೆಬ್ಬಿಸುತ್ತಾ ನಂದಗೋಪನ ಮನೆಗೆ ಬಂದು ಅಲ್ಲಿ ಬಾಗಿಲನ್ನು ತೆಗೆಸಿ ಕ್ರಮವಾಗಿ ಒಬ್ಬೊಬ್ಬರನ್ನೇ ಎಬ್ಬಿಸಿ ನಂತರ ನೀಳಾದೇವಿಯ ಜೊತೆಯಲ್ಲಿ ಮಲಗಿದ್ದ ಶ್ರೀಕೃಷ್ಣನನ್ನೆಬ್ಬಿಸಿ ಅವನನ್ನು ಸಿಂಹಾಸನಾರೋಹಣ ಮಾಡಿಸಿ ತಮ್ಮ ಪ್ರಾರ್ಥನೆಗಳನ್ನು ಲಾಲಿಸುವಂತೆ ಕೇಳಿಕೊಂಡು ವ್ರತಕ್ಕೆ ಬೇಕಾದ ಸಾಧನಗಳನ್ನೊದಗಿಸಿಕೊಡಲು ಕೇಳಿ ವ್ರತ ಸಮಾಪ್ತಿಯಾದನಂತ್ರ ತಾವು ಪಡೆಯಲಿರುವ ಸತ್ಕಾರಗಳನ್ನು ವಿವರಿಸಿ ತಮ್ಮ ಅಭಿಮತಸಿದ್ಧಿಗಾಗಿ ಶ್ರೀ ಕೃಷ್ಣನ ಹಿರಿಮೆಯನ್ನು ಕೊಂಡಾಡಿ. ತಮಗೂ ಅವನಿಗೂ ಇರುವ ನಿತ್ಯಸಂಬಂಧವನ್ನು ತಿಳಿಹೇಳಿ, ನಂತ್ರ ತಮ್ಮ ಅಪೇಕ್ಷೆಗಳನ್ನು ಯಥಾವತ್ ನಿರೂಪಿಸಿ ಹೇಳಿ ಅದನ್ನು ಉಪೇಕ್ಷಿಸದೆ ಈಡೇರಿಸಿ ಕೊಡಬೇಕೆಂದು ಪ್ರಾರ್ಥಿಸಿ ಅದಕ್ಕೆ ಶ್ರೀ ಕೃಷ್ಣನಿಂದ ಸುಮುಖವಾದ ಭರವಸೆ ಪಡೆದು ಕೃತ ಕೃತ್ಯಳಾದಳೂ ಎಂಬುದರ ಸಾರವೇ 'ತಿರುಪ್ಪಾವೈ' ಅಥವಾ 'ಪುಷ್ಪಮಾಲೆ'
    ಅಬಾಲವೃದರಿಂದ ಮನ್ನಣೆಗೊಂಡಿರುವ ಈ ತಿರುಪ್ಪಾವೈ ಸುಂದರವಾದ ತಮಿಳಿನಲ್ಲಿರುವ ಮೂವತ್ತು ಭಾವಗೀತೆಗಳ ಮಾಲೆ. ಸೊಗಸಾದ ಹಾಗೂ ತಿಳಿಯಾದ ಶೈಲಿ, ನಾನಾರ್ಥಗಳಿಂದ ಕೂಡಿದ ದಿವ್ಯ ಭಾವ, ರಸಮಯವರ್ಣನೆ ಇವುಗಳಿಂದ ಮನೋಹರವಾಗಿದೆ. ಜ್ಞಾನ ದೃಷ್ಟಿಯಿಂದ ಪರಿಶೀಲಿಸಿದಲ್ಲಿ ಅದನ್ನು ಒಂದು ಸಾಂಕೇತಿಕ ಪ್ರಬಂಧವೆನ್ನಬಹುದು ಏಕೆಂದ್ರೆ ಸ್ಮೃತಿ, ಇತಿಹಾಸ ಹಾಗೂ ಪುರಾಣಗಳ ಸಾರವಾದ ನಾಲ್ಕು ಸಾವಿರ ಪ್ರಬಂಧಗಳಲ್ಲಿ ಇದು ಸೇರಿದೆ. ಮಾರ್ಗಶಿರ ವ್ರತವನ್ನು ಮಾಡುವೆನೆಂಬ ವ್ಯಾಜದಿಂದ ಈಕೆ ಈ ದಿವ್ಯ ಪ್ರಬಂಧವನ್ನು ಭಕ್ತರಿಗೆ ಕರುಣಿಸಿದ್ದಾಳೆ. ನಂದಗೋಕುಲದ ವನ್ಯ ಸಂಪತ್ತು ಗೋಸಂಪತ್ತುಗಳ ವರ್ಣನೆಯಲ್ಲದೆ ಈಕೆಯ ಕಲ್ಪನೆಯಲ್ಲಿ ಗೋಪಾಲಕ್ರ ಉದಾತ್ತ ಮನೋಭಾವ, ಶ್ರೀಕೃಷ್ಣನಲ್ಲಿದ್ದ ನಿರ್ವ್ಯಾಜ ಪ್ರೇಮ ಮುಗ್ದ ಗೋಪಿಯರ-ಪ್ರೇಮ-ವಿರಹಗಳು ಕಂಡು ಬಂದಾಗ್ಯೂ ಅವರನ್ನೆಲ್ಲ 'ನೀರಾಡೋಣ ಬನ್ನಿ' ಎಂದು ಕರೆದಿರುವುದರ ಅರ್ಥ ಶ್ರೀಕೃಷ್ಣ ಸಂಶ್ಲೇಷಣವನ್ನು ಪಡೆಯೋಣವೆಂಬುದೇ ಎಂದು ಆಚಾರ್ಯರುಗಳು ಅರ್ಥ ಮಾಡಿದ್ದಾರೆ. ಭಗವದಾರಾಧನೆಗೆ ಹೊರಡುವ ಈಕೆ ಪ್ರತಿಯೊಬ್ಬ ಗೋಪಿಯನ್ನೂ ಎಬ್ಬಿಸಿ ಎಬ್ಬಿಸಿ ಕರೆದೊಯ್ಯುವ ರೀತಿಯನ್ನು ನೋಡಿದರೆ ಈಕೆಯೇ ಹೇಳಿರುವಂತೆ, ಕದವನ್ನು ಮುಚ್ಚಿಕೊಂಡು ಭಗವಂತನನ್ನು ಏಕಾಂತವಾಗಿ ಪಡೆಯುವುದಕ್ಕಿಂತೂ ಇತೋಪ್ಯತಿಶಯವಾಗಿ, ಭಗವಂತನ ಭಕ್ತರ ಜೊತೆಗೂಡಿ ಅವರ ಅನುಭವಗಳನ್ನು ಕಣ್ಣಾರೆ ಕಂಡು ಅವರಿಂದ ಸ್ಫೂರ್ತಿಗೊಂಡು ಅವರೊಡನೆ ಆತನನ್ನು ಸೇರಲಿಚ್ಛಿಸುತ್ತಾಳೆ. ಇದರಿಂದ ಆಕೆಯ ಹೃದಯ ವೈಶಾಲ್ಯದ ಅರಿವಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬ ಗೋಪಿಯನ್ನೂ ಅವಳವಳ ಗುಣಾತಿಶಯಗಳ, ರೂಪಸೌಂದರ್ಯದ ವರ್ಣನೆ ಮಾಡಿ ಎಬ್ಬಿಸುತ್ತಾಳೆ. ಇಲ್ಲಿ ಅವಳು ಗೋಪಿಯರೆಂದು ಭಾವಿಸಿದವರೆಲ್ಲ ಹರಿದಾಸರುಗಳಾದ ಆಳ್ವಾರರೆಂದು ವಾಖ್ಯೆ ಮಾಡುತ್ತಾರೆ.
    ತಿರುಪ್ಪಾವೈ ಪ್ರಬಂಧದ ಮೊದಲ ಐದು ಪಾಶುರಗಳು ಕ್ರಮವಾಗಿ ಶ್ರೀ ಮನ್ನಾರಾಯಣನ ಪರ, ವ್ಯೂಹಾ, ವಿಭವ, ಅಂತರ್ಯಾಮಿ ಮತ್ತು ಆರ್ಚಾವತಾರಗಳನ್ನು ಸೂಚಿಸುತ್ತವೆ. ನಂತರದ ಹತ್ತು ಪಾಶುರಗಳಲ್ಲಿ ಹತ್ತು ಆಳ್ವಾರುಗಳನ್ನು ಒಬ್ಬೊರನ್ನಾಗಿ ಎಬ್ಬಿಸುವುದು ಸೂಚಿತವಾಗಿದೆ. ಇವರು ಯಾರೆಂದ್ರೆ ಪೊಯ್ ಗೈ ಆಳ್ವಾರ್, ಪೂದತ್ತಾಳ್ವಾರ್, ಪೇಯಾಳ್ವಾರ್, ತಿರುಮಳೀಶೈಪ್ಪಿರಾನ್, ನಮ್ಮಾಳ್ವಾರ್, ಕುಲಶೇಖರಪ್ಪೆರುಮಾಳ್, ಪೆರಿಯಾಳ್ವಾರ್, ತೊಂಡರಡಿ ಪ್ಪೊಡಿಯಾಳ್ವಾರ್, ತಿರುಪ್ಪಾಣಾಳ್ವಾರ್, ತಿರುಮಂಗೈ ಆಳ್ವಾರ್
    ಇವರೆಲ್ಲಾ ಪರಮಭಾಗವತೋತ್ತಮರು ಜಾತಿ-ಕಾಲ-ದೇಶ-ಗುಣಾತೀತರು. ಶ್ರೀಕೃಷ್ಣ ಸಂಶ್ಲೇಷಣಕ್ಕಾಗಿ ಜನ್ಮವೆತ್ತಿದವರು. ಮಾನವ ಕೋಟಿಯನ್ನು ಉದ್ಧರಿಸಿದವರು. ಇವರಲ್ಲಿ ಪೆರಿಯಾಳ್ವಾರ್ ರಂತೂ ಭಗವಂತನ ಸಮೃದ್ಧಿಯನ್ನು ವಿಶೇಷವಾಗಿ ಅಪೇಕ್ಷಿಸಿದವರು. ಅಂತಹ ಪೆರಿಯಾಳ್ವಾರರೇ ತನ್ನ ಇಷ್ಟ ಪ್ರಾಪ್ತಿಯ ಉಪಾಯವೆಂದರಿತವಳು ಆಂಡಾಳ್. ಆದ್ದರಿಂದ ಅರನೆಯ ಪಾಶುರದಿಂದ ಹದಿನೈದನೆಯ ಪಾಶುರ ಪೂರ್ತಿ ಆಕೆ ಪ್ರತಿಯೊಬ್ಬ ಆಳ್ವಾರರಗುಣಾತಿಶಯಗಳನ್ನು ವರ್ಣಿಸುತ್ತಾಳೆ.
    ಈ ನಲ್ನುಡಿಯ ಪ್ರತಿಪದಾರ್ಥದಲ್ಲೂ ಅಡಗಿರುವ ಸಕಲ ವೇದಾರ್ಥಗಳ ಸಾರವನ್ನು ಜನ ತನ್ನ ಸಂಸ್ಕೃತಿ ಹಾಗೂ ಶಿಕ್ಷಣಗಳಿಗನುಗುಣವಾಗಿ ಆಸ್ವಾದಿಸುತ್ತದೆ. ಸ್ವಲ್ಪವಾಗಿ ಹೇಳಬಹುದಾದ್ರೆ ಇದು ಉಪನಿಷತ್ಸಾರ ಭೂತವಾದುದು. ವೇದತಾತ್ಪರ್ಯವಾದ ಪುರುಷಾರ್ಥಗಳನ್ನು ಪ್ರತಿಪಾದಿಸುವ ತಿರುಮಂತ್ರ ಚರಮಶ್ಲೋಕ ಮತ್ತು ಮಂತ್ರದ್ವಯಗಳನ್ನು ವಿವರಿಸುತ್ತದೆ. ಸಕಲಾರ್ಥ ಸಾರಗಳೂ ಇದರಲ್ಲಡಕವಾಗಿರುವುದರಿಂದ ಇದರ ನಿತ್ಯಾನುಸಂಧಾನದಲ್ಲಿ ಮಗ್ನರಾದ ಶ್ರೀರಾಮಾನುಜಾಚಾರ್ಯರು 'ತಿರುಪ್ಪಾವೈ ಜೀಯರ್' ರೆಂದೇ ಪ್ರಸಿದ್ಧಿ ಪಡೆದರು.
    ಇದೇ ಆಂಡಾಳ್ ಪ್ರಾಪ್ತ ವಯಸ್ಕಳಾಗಲು ವಿಷ್ಣುಚಿತ್ತರಿಗೆ ಅವಳ ವಿವಾಹದ ಚಿಂತೆಯುಂಟಾಗುತ್ತದೆ. ಅಷ್ಟು ಹೊತ್ತಿಗೆ ಆಂಡಾಳ್ ಶ್ರೀ ರಂಗರಾಜನನ್ನು ತನ್ನ ಪತಿಯಾಗಿ ಮನಸಾ ವರಿಸುತ್ತಾಳೆ. ಪ್ರತಿ ನಿತ್ಯ  ತಂದೆಯ ತೋಟದ ಪುಷ್ಪಗಳನ್ನು ಸಂಗ್ರಹಿಸಿ ಸುಂದರ ಮಾಲೆಮಾಡಿ ಮೊದಲು ತಾನು ಧರಿಸಿ ನಂತರ ದೇವರಿಗೆ ಮುಡಿಸುತ್ತಾಳೆ. ಒಮ್ಮೆ ವಿಷ್ಣುಚಿತ್ತರು ಇದನ್ನು ನೋಡಿ ಮಾಲೆ ಮಿಸಲಾಗಿಲ್ಲವೆಂದು ದುಃಖಿಸಿ ಮಲಗಿಬಿಡುತ್ತಾರೆ. ಆಗ ಶ್ರೀಕೃಷ್ಣನು ಕನಸಿನಲ್ಲಿ ಬಂದು 'ನಿನ್ನ ಮಗಳು ನನಗೆ ಅತ್ಯಂತ ಪ್ರೀತ್ಯಾಸ್ಪದಳು ಅವಳು ಮುಡಿದ ಮಾಲೆ ನನಗೆ ಬಹಳ ಪ್ರಿಯವಾದುದು ಅದನ್ನು ಮುಡಿಸು' ಎನ್ನುತ್ತಾನೆ. ಆಗ ಇವಳಿಗೆ 'ಶೂಡಿಕುಡುತ್ತವಳ್' ಅಂದರೆ ಮುಡಿದು ಕೊಟ್ಟವಳು ಎಂದು ಹೆಸರು ಬರುತ್ತದೆ.

ತಿರುಪ್ಪಾವೈ ತನಿಯಲ್ಲಿ
"ಅನ್ನವಯಿಲ್ ಪುದುವೈ ಆಂಡಾಳ್ ರಂಗರ್ಕ್ಕು
ಪನ್ನು ತಿರುಪ್ಪಾವೈ ಪಲ್ ಪತಿಯಮ್ ಇನ್ನಿಶೆಯಾಳ್ಪಾಡಿ
ಕೊಡುತ್ತಾಳೈ, ನರ್ಪಾಮಾಲೈ ಶೂಡಿಕೊಡುತ್ತಾಳೈಚ್ಚೂಲ್
   
    ಎಂದು ಹೇಳಿರುವಂತೆ ಶ್ರೀರಂಗನಾಥನಿಗೆ ಭೋಗ್ಯವಾಗಿರುವ ತಿರುಪ್ಪಾವೈಯೆಂಬ ಹಲವು ಪಾಶುರಗಳನ್ನು ಇಂಪಾದ ರಾಗದಿಂದ ಹಾಡಿ ಸಮರ್ಪಿಸಿ ಪುಷ್ಪ ಮಾಲಿಕೆಯನ್ನು ತನು ಮೊದಲು ಧರಿಸಿ ನಂತರ ಶ್ರೀರಂಗನಾಥನಿಗೆ ಸಮರ್ಪಿಸಿದವಳನ್ನು ಸೋತ್ರಮಾಡು ಎಂಬುದರಿಂದ ಇವಳ ಭಕ್ತಿ ಪ್ರೇಮಗಳ ಹಿರಿಮೆ ಗರಿಮೆಗಳು ವ್ಯಕ್ತವಾಗುತ್ತವೆ.
    ಕೊನೆಗೆ ಶ್ರೀರಂಗನಾಥನ ಕಡೆಯವರೇ ಬಂದು ನಿಮ್ಮ ಮಗಳನ್ನು ನಮ್ಮ ಸ್ವಾಮಿಗೆ ಕೊಡಿ ಎಂದು ವಿಷ್ಣುಚಿತ್ತರಲ್ಲಿ ಅರಿಕೆ ಮಾಡುತ್ತಾರೆಂಬುದಾಗಿಯೂ ಆಗ ವಿಷ್ಣುಚಿತ್ತರು ಆಂಡಾಳಳನ್ನು ಸಕಲ ವೈಭವಗಳೊಂದಿಗೆ ಕರೆದೊಯ್ಯಲು ಆಂಡಾಳ್ ದೇವಿಯು ಒಂದೊಂದಾಗಿ ಪಾವಟಿಗೆಗಳನ್ನೇರುತ್ತ ಭಗವಂತನಲ್ಲಿ ಐಕ್ಯವಾಗಿ ಬಿಡುತ್ತಾಳೆಂಬುದಾಗಿಯೂ ಐತಿಹ್ಯವಿದೆ.
    ಆಂಡಾಳ್ ಚರಿತ್ರೆಯನ್ನು ಅವಲೋಕಿಸಿದಾಗ ಆಳ್ವಾರರುಗಳಿಗೂ, ಪೆರಿಯಾಳ್ವಾರರಿಗೂ, ಆಕೆಗೂ ಇದ್ದ ಪರಸ್ಪರ ಸಂಬಂಧವು ಈ ರೀತಿ ವ್ಯಕ್ತ ಪಡುತ್ತದೆ. ಆಳ್ವಾರರು ಲಕ್ಷ್ಮಣನಂತೆ ಕೈಂಕರ್ಯಪರರು, ಭಗವತ್ಸೇವೆಗೆ ನಿದರ್ಶನವಾಗಿರುವವರು ಪೆರಿಯಾಳ್ವಾರರಾದರೋ ಭರತನಂತೆ ಭಗವತ್ ಪಾರತಂತ್ರ್ಯಕ್ಕೆ ಉದಾಹರಣೆಯಾದವರು ಆಂಡಾಳ್ ಶತ್ರುಘ್ನನಂತೆ ಭಾಗವತ ಪಾರತಂತ್ರ್ಯಕ್ಕೆ ಉದಾಹರಣೆಯಾದವಳು ಆಳ್ವಾರರೂ ಲಕ್ಷ್ಮಣನೂ ಭಗವದನುಭಾವವನ್ನು ಬಯಸಿದರು. ಪೆರಿಯಾಳ್ವಾರ್ ಮತ್ತು ಭರತರಿಬ್ಬರೂ ಭಗವತ್ ಸಮೃದ್ಧಿಯನ್ನು ಬಯಸಿದ್ರು. ಗೋದಾದೇವಿಯೂ ಶತ್ರುಘ್ನನೂ ಮಧುರ ಕವಿಗಳಂತೆ ಭಾಗವತಾಭಿಮಾನನಿಷ್ಠರಾಗಿದ್ದರು. ಆಂಡಾಳ್ ಪೆರಿಯಾಳ್ವಾರ್ ಅವರನ್ನೇ ಭಗವಂತನನ್ನು ಕಾಣುವ ಸಾಧನವೆಂದು ನಂಬಿದ್ದಳು.
    ಹೀಗೆ ತನ್ನ ಜೀವನವನ್ನೇ ಶ್ರೀ ರಂಗನಾಥನಿಗೆ ಸಮರ್ಪಿಸಿ ತಿರುಪ್ಪಾವೈಯನ್ನೇ ಅಲ್ಲದೆ ನಾಯಕೀಗೀತವನ್ನು ರಚಿಸಿದ್ದಾಳೆ. ಅಂತಹ ಆಂಡಾಳ್ ದೇವಿಯ ಸ್ಮರಣ ಮಾತ್ರದಿಂದ ಅವಳ ಪಾಶುರಗಳ ಶ್ರವಣ ಪಠಣ ಮನನಗಳಿಂದ ಶ್ರೀ ಹರಿಯು ನಮ್ಮ ಚಿತ್ತದಲ್ಲಿ ನೆಲೆಸಿ ನಮ್ಮ ಜೀವನ ದಿವ್ಯವಾಗಲಿ ಭವ್ಯವಾಗಲಿ.
   
Deepak H V
Mysuru
9886312013

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ