ಶ್ರೀ ಲಲಿತಾಸಹಸ್ರನಾಮಸ್ತೋತ್ರವು ಬ್ರಹ್ಮಾಂಡಪುರಾಣದ ಉತ್ತರಖಂಡದ ಹಯಗ್ರೀವ-ಅಗಸ್ತ್ಯಸಂವಾದದಲ್ಲಿದೆ. ಇದರಲ್ಲಿ ಪೀಠಿಕೆ, ಸಹಸ್ರನಾಮ ಮತ್ತು ಫಲಶ್ರುತಿ ಎಂಬ ಮೂರು ಭಾಗಗಳಿವೆ. ಆ ಪರಬ್ರಹ್ಮಸ್ವರೂಪಿಣಿಯೇ ಉದ್ಯದ್ಭಾನುವಿಗೆ ಸಮನಾದ ಕಾಂತಿಯಿಂದೊಡಗೂಡಿ, ದಾಳಿಂಬೆ ಬಣ್ಣದ ಸೀರೆಯನ್ನುಟ್ಟು, ಸರ್ವಾಭರಣ ಭೂಷಿತೆಯಾಗಿ, ಪಾಶಾಂಕುಶ-ಇಕ್ಷುಕೋದಂಡಬಾಣಗಳಿಂದೊಡಗೂಡಿ ಆನಂದ ಸಾಗರಳಾದ ಶ್ರೀ ಲಲಿತಾತ್ರಿಪುರಸುಂದರಿಯಾಗಿ ಹದಿನಾರು ವರುಷದ ಯುವತಿಯಾಗಿ ಇಂದ್ರಾದಿದೇವತೆಗಳು ಮಾಡಿದ ಮಹಾಯಜ್ಞದ ಚಿದಗ್ನಿಕುಂಡದಿಂದ ಭಂಡಾಸುರನೆಂಬ ದುಷ್ಟದೈತ್ಯನನ್ನು ಸಂಹರಿಸಲು ಲೋಕಾನುಗ್ರಹಕ್ಕಾಗಿ ದೇವತೆಗಳ ಪ್ರಾರ್ಥನೆಯಂತೆ ಆವಿರ್ಭವಿಸಿದಳು. ಬ್ರಹ್ಮಾದಿಗಳ ಇಚ್ಛೆಯಂತೆ ಲಾವಣ್ಯವತಿಯಾದ ದೇವಿಯು ಕಾಮೇಶ್ವರನ ರೂಪದಲ್ಲಿದ್ದು ಶಿವನನ್ನು ವರಿಸಿ ಶಿವಕಾಮೇಶ್ವರಾಂಕಸ್ಥಾಯಿಯಾದಳು. ಬ್ರಹ್ಮನೇ ಮಾತೆಗೆ ಕಾಮಾಕ್ಷಿಯೆಂದೂ, ಕಾಮೇಶ್ವರಿಯೆಂದೂ ಬಿರುದುಗಳನ್ನು ಸಮರ್ಪಿಸಿದನು. ಅನಂತರ ಪರಾಶಕ್ತಿಯಾದ ಶ್ರೀಮಾತೆಯು ಭಂಡಾಸುರನೇ ಆದಿಯಾಗಿ ಸಕಲದೈತ್ಯರನ್ನೂ ಕೊಮದು ಅವನ ರಾಜಧಾನಿಯಾದ ಶ್ರೋಣಿತಪುರವನ್ನು ನಾಶಮಾಡಿದಳು. ಅನಂತರ ದೇವಶಿಲ್ಪಿಗಳಾದ ವಿಶ್ವಕರ್ಮ ಮತ್ತು ಮಯರು ಸುಮೇರು ಮಧ್ಯಶೃಂಗದಲ್ಲಿ ಶ್ರೀ ದೇವಿಗಾಗಿ ಶ್ರೀಪುರವೆಂಬ ಪಟ್ಟಣವನ್ನು ನಿರ್ಮಿಸಿ, ಅದರಲ್ಲಿ ಚಿಂತಾಮಣಿ ಎಂಬ ಅರಮನೆಯ ಮಧ್ಯದಲ್ಲಿ ಪಂಚಪ್ರೇತವೆಂಬ ಮ...