ಕಾವ್ಯಸಾಹಿತ್ಯದಲ್ಲಿ ನಿರ್ವಿಘ್ನಕಾರಕ
ಇಡೀ ಭರತ ಖಂಡದಲ್ಲಿ ಆಚರಣೆಯಲ್ಲಿಟ್ಟುಕೊಂಡು ಭಕ್ತಿಯಿಂದ ಸೇವಾಕೈಂಕರ್ಯಾದಿಗಳನ್ನು ನಡೆಸಿಕೊಂಡು ಬರುತ್ತಿರುವ ಉತ್ಸವಾದಿಗಳಲ್ಲಿ ಶ್ರೀ ಗಣಪತಿಯ ಮಹೋತ್ಸವವು ಬಹು ಪ್ರಸಿದ್ಧಿಗೆ ಬಂದಿರುವ ವಿಚಾರ ಸಕಲರಿಗೂ ವೇದ್ಯವಾಗಿದೆ. ಈ ಜಗತ್ತಿನ ಯಾವ ಭಾಗದಲ್ಲೇ ಇರಲಿ ಸಕಲ ಭಾರತೀಯರೂ ಕಡ್ಡಾಯವಾಗಿ ಶ್ರೀಗಣಪತಿಯನ್ನು ಪೂಜಿಸುತ್ತಲಿರುತ್ತಾರೆ. ಭರತಖಂಡದ ಆಸ್ತೀಕರನ್ನು ಮುಖ್ಯವಾಗಿ ನಾಲ್ಕು ಗುಂಪನ್ನಾಗಿ ಮಾಡಬಹುದು : 1. ವಿಷ್ಣುವಿನ ಆರಾಧಕರು 2. ಶೈವಾರಾಧಕರು 3. ಶಕ್ತಿ ಆರಾಧಕರು 4. ಶೂನ್ಯೋಪಾಸಕರು ಇವರಲ್ಲಿ ಕೆಲವರು ವೇದಗಳನ್ನು ಒಪ್ಪುವವರು, ಕೆಲವರು ಒಪ್ಪರು. ಕೆಲವು ವೈಷ್ಣವರು ಶೈವಾರಾಧನೆಯನ್ನು ಮಾಡುವುದಿಲ್ಲ ಮತ್ತೆ ಕೆಲವು ಶೈವರು ವಿಷ್ಣುವನ್ನು ಪೂಜಿಸುವುದಿಲ್ಲ ಆದರೆ ಪ್ರತಿ ಒಬ್ಬರೂ ಯಾವ ಮತವನ್ನೇ ಅವಲಂಬಿಸಿರಲಿ ಇಂದಿನ ಕಥಾನಾಯಕನಾದ ನಮ್ಮ ಗಣಪತಿಯನ್ನು ಸ್ವಪ್ರೇರಣೆಯಿಂದ ಆರಾಧಿಸುತ್ತಾರೆ ಅಂದಮೇಲೆ ಈ ಗಣಪತಿಯ ಮಹಿಮೆಯನ್ನು ತಿಳಿಯಬೇಕಾದುದು ಆದ್ಯಕರ್ತವ್ಯವಾಗಿದೆ. ಹಿಂದೆ ನೈಮಿಶಾರಣ್ಯದಲ್ಲಿ ಮಹರ್ಷಿಗಳು ಮಾಡುತ್ತಿದ್ದ ಸಾತ್ವಿಕ ಕರ್ಮಗಳಿಗೆ ಅಡ್ಡಿಬರಲು, ಸೂತರು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಲ್ಲಿ ಈ ಗಣಪತಿಯನ್ನು ಆರಾಧಿಸಿದರೆ ಎಲ್ಲಾ ಕಾರ್ಯಗಳೂ ಸುಗಮವಾಗುವುದೆಂದರು. ಉತ್ತಮಕಾರ್ಯಾದಿಗಳಲ್ಲಿ ಸುಜನರಿಗೆ ಅನುಕೂಲನಾಗಿ ದುಷ್ಟರಿಗೆ ವಿಘ್ನಕಾರ...