ಕಾವ್ಯಸಾಹಿತ್ಯದಲ್ಲಿ ನಿರ್ವಿಘ್ನಕಾರಕ

 
    ಇಡೀ ಭರತ ಖಂಡದಲ್ಲಿ ಆಚರಣೆಯಲ್ಲಿಟ್ಟುಕೊಂಡು ಭಕ್ತಿಯಿಂದ ಸೇವಾಕೈಂಕರ್ಯಾದಿಗಳನ್ನು ನಡೆಸಿಕೊಂಡು ಬರುತ್ತಿರುವ ಉತ್ಸವಾದಿಗಳಲ್ಲಿ ಶ್ರೀ ಗಣಪತಿಯ ಮಹೋತ್ಸವವು ಬಹು ಪ್ರಸಿದ್ಧಿಗೆ ಬಂದಿರುವ ವಿಚಾರ ಸಕಲರಿಗೂ ವೇದ್ಯವಾಗಿದೆ. ಈ ಜಗತ್ತಿನ ಯಾವ ಭಾಗದಲ್ಲೇ ಇರಲಿ ಸಕಲ ಭಾರತೀಯರೂ ಕಡ್ಡಾಯವಾಗಿ ಶ್ರೀಗಣಪತಿಯನ್ನು ಪೂಜಿಸುತ್ತಲಿರುತ್ತಾರೆ. ಭರತಖಂಡದ ಆಸ್ತೀಕರನ್ನು ಮುಖ್ಯವಾಗಿ ನಾಲ್ಕು ಗುಂಪನ್ನಾಗಿ ಮಾಡಬಹುದು : 1. ವಿಷ್ಣುವಿನ ಆರಾಧಕರು 2. ಶೈವಾರಾಧಕರು 3. ಶಕ್ತಿ ಆರಾಧಕರು 4. ಶೂನ್ಯೋಪಾಸಕರು ಇವರಲ್ಲಿ ಕೆಲವರು ವೇದಗಳನ್ನು ಒಪ್ಪುವವರು, ಕೆಲವರು ಒಪ್ಪರು. ಕೆಲವು ವೈಷ್ಣವರು ಶೈವಾರಾಧನೆಯನ್ನು ಮಾಡುವುದಿಲ್ಲ ಮತ್ತೆ ಕೆಲವು ಶೈವರು ವಿಷ್ಣುವನ್ನು ಪೂಜಿಸುವುದಿಲ್ಲ ಆದರೆ ಪ್ರತಿ ಒಬ್ಬರೂ ಯಾವ ಮತವನ್ನೇ ಅವಲಂಬಿಸಿರಲಿ ಇಂದಿನ ಕಥಾನಾಯಕನಾದ ನಮ್ಮ ಗಣಪತಿಯನ್ನು ಸ್ವಪ್ರೇರಣೆಯಿಂದ ಆರಾಧಿಸುತ್ತಾರೆ ಅಂದಮೇಲೆ ಈ ಗಣಪತಿಯ ಮಹಿಮೆಯನ್ನು ತಿಳಿಯಬೇಕಾದುದು ಆದ್ಯಕರ್ತವ್ಯವಾಗಿದೆ.
    ಹಿಂದೆ ನೈಮಿಶಾರಣ್ಯದಲ್ಲಿ ಮಹರ್ಷಿಗಳು ಮಾಡುತ್ತಿದ್ದ ಸಾತ್ವಿಕ ಕರ್ಮಗಳಿಗೆ ಅಡ್ಡಿಬರಲು, ಸೂತರು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಲ್ಲಿ ಈ ಗಣಪತಿಯನ್ನು ಆರಾಧಿಸಿದರೆ ಎಲ್ಲಾ ಕಾರ್ಯಗಳೂ ಸುಗಮವಾಗುವುದೆಂದರು.
    ಉತ್ತಮಕಾರ್ಯಾದಿಗಳಲ್ಲಿ ಸುಜನರಿಗೆ ಅನುಕೂಲನಾಗಿ ದುಷ್ಟರಿಗೆ ವಿಘ್ನಕಾರಿಯಾಗಿಯೂ ಇದ್ದು ತನ್ಮುಖಾಂತರ ಭಗವದಾರಾಧನ ಮಾಡುವವನೇ ನಮ್ಮ ಶ್ರೀ ಗಣಪತಿ. ಇಂತಹ ಗಣಪತಿಯ ವಿಚಾರದಲ್ಲಿ ಕೆಲವು ಪ್ರಶ್ನೆಗಳುಂಟಾಗುವುದು ಸಹಜ.
    ಶಂಕರರು ಇಲ್ಲದ ಸಮಯದಲ್ಲಿ ಪಾರ್ವತಿ ದೇವಿಯು ಸೃಷ್ಟಿಸಿದ ಈ ಗಣಪತಿಯು ಉಮೆಯ ನಂದನೋ ಅಥವ ಶಂಕರಾತ್ಮಜನೊ? ಈತ ಹೇಗೆ ಪೂಜ್ಯನಾದವನು ?
    ಪಾರ್ವತಿಯು ಮೈಕೊಳೆಯಿಂದ ಸೃಷ್ಟಿಸಿದ ಮೂರ್ತಿ ಈ ಗಣೇಶ ಎಂದು ಪುರಾಣವಚನಗಳಿವೆಯಲ್ಲಾ ಪಾರ್ವತಿಯಲ್ಲಿ ಅಷ್ಟೊಂದು ಕೊಳೆ ಇತ್ತೇ ?
    ಗಣಪತಿ ಆನೆಮುಖ ದೊಡ್ಡ ಹೊಟ್ಟೆ, ಅದಕ್ಕೊಂದು ಹಾವು, ಪುಟ್ಟ ಇಲಿವಾಹನ ನಾಲ್ಕ ಕೈಗಳು ಹೀಗೆಲ್ಲಾ ಹೇಳುವರಲ್ಲಾ; ಇದು ನಿಜವೆ? ಇತ್ಯಾದಿ ಈ ಪ್ರಶ್ನೆಗಳನ್ನು ಹೀಗೆ ಉತ್ತರಿಸಬಹುದು.
    ಪಾರ್ವತಿಯು ಪೃಥ್ವೀ ತತ್ತ್ವಕ್ಕೆ ಅಭಿಮಾನ ದೇವತೆ, ಆದಕಾರಣ ಮೃತ್ತಿಕೆಯಿಂದ ಒಂದು ವಿಗ್ರಹವನ್ನು ಮಾಡಿ ಅದಕ್ಕೆ ಜೀವಕಳೆ ಕೊಟ್ಟಳೆಂದು ತಿಳಿಯಬೇಕು. ಮೈಕೊಳೆಯಿಂದ ನಿರ್ಮಿಸಿದ ವ್ಯಕ್ತಿಯಲ್ಲ ಗಣಪತಿ.
    ಪಾರ್ವತಿಯಿಂದ ಸೃಷ್ಟಿಯಾದ ಗಣಪತಿ ತಂದೆಯಾದ ಶಂಕರನಿಂದ ತಲೆಯನ್ನು ಕಳೆದುಕೊಂಡು ಮತ್ತೆ ಗಜಮುಜನಾಗಿ ತಂದೆಯಿಂದ ಬದುಕಿದ ಕಾರಣ; ಈತ ಉಮೆಯನಂದನನೂ ಹೌದು, ಶಂಕರಾತ್ಮಜನೂ ನಿಜ.
    ಗಣಪತಿಯು ವಿಶ್ವಂಭರ ಮೂರ್ತಿಯ ಔಪಾಕನಾದ ಕಾರಣ ದೊಡ್ಡ ಉದರವನ್ನು ಹೊಂದಿರುವನು.
    ಪರಮಾತ್ಮನ ವಿರಾಟ್ ರೂಪದಲ್ಲಿ ಈತ ಗಜಮುಖ ಮೂರ್ತಿಯನ್ನು ಉಪಾಸನೆ ಮಾಡಿದ್ದರಿಂದ ಗಣಪತಿಗೆ ಗಜಮುಖವು ಬಂದಿತು ಇನ್ನೊಂದು ಅರ್ಥ ಗಜಮುಖ ಬುದ್ಧಿ ಸೂಚಕ ಮೂರ್ತಿ.
    ಮನುಜರ ಉದರದಲ್ಲಿ ಬರೀ ಕಾಮ ಕ್ರೋಧಾದಿಗಳಿವೆ ಎಂಬುದನ್ನು ತಿಳಿಸಲು ಈ ಗಣಪತಿಯು ಹಾವನ್ನು ಉದರಕ್ಕೆ ಸುತ್ತಿ ಕೊಂಡಿರುತ್ತಾನೆ.
    ದವಸ ಧಾನ್ಯಾದಿಗಳನ್ನು ಇಲಿಯು ತಿಂದು ಜೊಳ್ಳು ಮಾಡುವಂತೆ ನಮ್ಮ ಆಯುಸ್ಸನ್ನು ಕಾಲನು ತಿನ್ನುತ್ತಿದ್ದಾನೆ. ಅಂತಹ ಮೃತ್ಯುವನ್ನು ಮೆಟ್ಟಿ ಕೂತವನೇ ನಮ್ಮ ಗಣಪತಿ ಆದ್ದರಿಂದ ಈತನಿಗೆ ಇಲಿ ವಾಹನ.
    ಗಣಪತಿಗೆ 'ಸಿದ್ಧಿ, ಬುದ್ಧಿ' ಎನ್ನುವರು ಪತ್ನಿಯರು, ಆದರೆ ಸಾರಸಂಗ್ರಹದ ಪ್ರಕಾರ ಒಂಬತ್ತು ಜನ ಪತ್ನಿಯರು. ತೀವ್ರಾ, ಜ್ವಾಲಿನಿ, ನಂದಾ, ಭೋಗದಾ, ಕಾಮರೂಪಣೀ, ತೇಜೋವತಿ, ಸತ್ಯಾ, ವಿಘ್ನನಾಶಿನಿ ಎಂಬುದು ಅವರ ಹೆಸರುಗಳು ಸಿದ್ಧಿಕುಮಾರನು 'ಲಾಭ'. ಬುದ್ಧಿ ಕುಮಾರನು ಲಕ್ಷ್ಯ.
    'ಗ' ಎಂದರೆ ಬುದ್ಧಿ 'ಣ' ಎಂದರೆ ವಿದ್ಯಾ ವಿವೇಕಗಳು. ವಿದ್ಯಾಬುದ್ಧಿಗಳಿಗೆ ಅಧಿಪತಿ ವಿನಾಯಕನೆಂದು ವಿಶೇಷಾರ್ಥ. 'ಏಕದಂತ' ಎನ್ನುವುದು ಅದ್ವೈತತತ್ತ್ವಕ್ಕೆ ಪ್ರತೀಕ ಸೊಂಡಿಲು ಓಂಕಾರವನ್ನು ಸೂಚಿಸುತ್ತದೆ. 'ಕಡುಬು' ಮುಕ್ತಿಯ ಅಪೇಕ್ಷೆಯನ್ನು ತಿಳಿಸುತ್ತದೆ. 'ಪಾಶ' ರಾಗವನ್ನು, ಅಂಕುಶ ತಾಳವನ್ನು, ಸರ್ಪ ಆಲಾಪನೆಯನ್ನು ವ್ಯಕ್ತಮಾಡುತ್ತದೆ. ಮೋಹವನ್ನು ಬಂಧಿಸುವನಾದ್ದರಿಂದ ಕೈಯಲ್ಲಿ ಪಾಶ. ವಿಶ್ವನಿಯಂತೃತ್ವಕ್ಕೆ ಲಾಂಛನ ಅಂಕುಶ, ಸುರ, ಅಸುರ, ನರ, ನಾಗ ಜಾತಿಗಳನ್ನು, ಚತುರ್ವೇದಗಳನ್ನು, ಚತುರ್ವಿಧ ಪುರುಷಾರ್ಥಗಳನ್ನು ಚತುರ್ವಿಧ ವರ್ಣದವರಿಗೂ ಕೊಡುವ ಸಮರ್ಥನಾದುದರಿಂದ ವಿನಾಯಕನು ಚತುರ್ಭಜನಾದ.
    ನಮಗೆ ಮೂರು ಶರೀರಗಳು, ಸ್ಥೂಲಶರೀರ, ಸೂಕ್ಷ್ಮಶರೀರ, ಕಾರಣಶರೀರ. ಶರೀರದಲ್ಲಿ ಸಪ್ತಧಾತುಗಳಿರುತ್ತವೆ. (7*3=21) ಆದ್ದರಿಂದ ನಾವು ಇಪ್ಪತ್ತೊಂದು ಪತ್ರೆಗಳಿಂದ ಪೂಜೆಮಾಡುತ್ತೇವೆ. ಆ ಪತ್ರಗಳು - ಮಾಚೀಪತ್ರೆ, ಬೃಹತೀಪತ್ರೆ, ಬಿಲ್ವಪತ್ರೆ, ದೂರ್ವಾಯುಗ್ಮ, ದತ್ತೂರಪತ್ರೆ, ಬದರೀಪತ್ರೆ, ಅಪಾಮಾರ್ಗಪತ್ರೆ, ತುಲಸೀ ಪತ್ರೆ, ಚೂತಪತ್ರೆ, ಕರವೀರಪತ್ರೆ, ವಿಷ್ಣುಕ್ರಾಂತಪತ್ರೆ, ದಾಡಿಮಿಪತ್ರೆ, ದೇವದಾರುಪತ್ರೆ, ಮರುವಕಪತ್ರೆ, ಸಿಂಧುವಾರಪತ್ರೆ, ಜಾಜೀಪತ್ರೆ, ಗಂಡಕೀಪತ್ರೆ, ಶಮಿಪತ್ರೆ, ಅಶ್ವತ್ಥಪತ್ರೆ, ಅರ್ಜುನಪತ್ರೆ, ಅರ್ಕಪತ್ರೆ - ವೈದ್ಯಶಾಸ್ತ್ರದಲ್ಲಿ ಈ ಪತ್ರೆಗಳಿಗೆ ವಿಶೇಷ ಪ್ರಾಮುಖ್ಯವುಂಟು ಅನೇಕ ವ್ಯಾಧಿಗಳನ್ನು ಈ ಪತ್ರೆಗಳು ನಿವಾರಣೆ ಮಾಡುತ್ತವೆ.
    ಶ್ರೀ ಗಣಪತಿಯು ನಿರ್ವಿಘ್ನಕಾರಕ ಅವನನ್ನು ಎಲ್ಲರೂ ಆರಾಧಿಸಿ ತಮ್ಮ ತಮ್ಮ ಕಾರ್ಯಗಳಲ್ಲಿ ನಿರ್ವಿಘ್ನತೆಯನ್ನು ಪಡೆದಿದ್ದಾರೆ; ಪಡೆಯುತ್ತಿದ್ದಾರೆ. ಕವಿಗಳೂ ಸಹ ಕಾವ್ಯಗಳ ಪ್ರಾರಂಭದಲ್ಲಿ ಶ್ರೀ ಗಣಪತಿಯನ್ನು ಸ್ತುತಿಸಿ ಅವನ ಅನುಗ್ರಹವನ್ನು ಪಡೆದು ತಮ್ಮ ಕಾವ್ಯವನ್ನು ನಿರ್ವಿಘ್ನವಾಗಿ ಮಂಗಳಗೊಳಿಸಿದ್ದಾರೆ, ಅಮರವನ್ನಾಗಿಸಿದ್ದಾರೆ.
   
ಆದಿಕವಿ ಪಂಪ : ಆದಿಕವಿ ಪಂಪನು ಗಣಪತಿಯನ್ನಿ 'ವಿನಾಯಕನ' ರೂಪದಲ್ಲಿ ಕಂಡು ತನ್ನ ಕಾವ್ಯಕ್ಕೆ ನಿರ್ವಿಘ್ನತೆಯನ್ನು ಪ್ರಾರ್ಥಿಸಿದ್ದಾರೆ :
ಎನ್ನ ದಾನ ಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ |
ಚ್ಛಿನ್ನ ದಾನಮಿದಾಗಳುಂ ವಿಭುದಾಶ್ರಯಂ ಗೆಲೆವಂದನೆ |
ನ್ನನ್ನಿ ಚೋನ್ನತಿಯಿಂ ಭುವೀಪತಿಯೆಂದು ಮೆಚ್ಚಿ ವಿನಾಯಕಂ |
ತಾನ್ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ ||
ಮದೋದಕವು ದುಂಬಿಗಳಿಗೆ ತೃಪ್ತಿಯನ್ನುಂಟು ಮಾಡುವಂತೆ, ತನ್ನ ದಾನಗಳಿಂದ ವಿದ್ದಾಂಸರನ್ನು ತೃಪ್ತಿಪಡಿಸುತ್ತಿರುವ ಈ ಅರಿಕೇಸರಿಯು, ಶತ್ರುಗಳನ್ನು ತನ್ನ ಕೃಪೆಯಿಂದಲೇ ಗೆದ್ದನು - ಎಂದು ಮೆಚ್ಚಿಗೆಯನ್ನು ವ್ಯಕ್ತ ಪಡಿಸುತ್ತಿರುವ ವಿನಾಯಕನು ಗುಣಾರ್ಣವನ ಪ್ರಶಂಸಾರೂಪವಾದ ಈ ಕಾವ್ಯವನ್ನು ತಾನೇ ಪೂರ್ಣಗೊಳಿಸಲಿ - ಎಂದು ಮೇಲಿನ ಪದ್ಯದಲ್ಲಿ ಪಂಪ ಪ್ರಾರ್ಥಿಸಿದ್ದಾನೆ. ಸಂಸ್ಕೃತ ಮಹಾಭಾರತವನ್ನು ವ್ಯಾಸರು ಹೇಳುತ್ತಿದ್ದರೆಂದೂ, ಗಣಪತಿಯು ಅದನ್ನು ಬರೆದಿಡುತ್ತಿದ್ದನೆಂದೂ ಪ್ರತೀತಿಯುಂಟಷ್ಟೆ, ಆ ಗಣಪತಿಯ ವಿಷಯದಲ್ಲಿ ಪಂಪನಿಗೂ ಭಕ್ತಿ ಮೂಡಿ ತನ್ನ ಕಾವ್ಯಕ್ಕೆ ಸತ್ ಪ್ರೇರಣೆ ಮಾಡುವುದರ ಮೂಲಕ ಅವನೇ ಈ ಕಾವ್ಯವನ್ನು ನಿಮಿರ್ಚಲಿ ಎಂದು ಕೇಳಿ ಕೊಳ್ಳುತ್ತಾನೆ.

ರುದ್ರಭಟ್ಟನು : ರುದ್ರಭಟ್ಟನು ತನ್ನ "ಜಗನ್ನಾಥ ವಿಜಯ" ಕಾವ್ಯದಲ್ಲಿ ಗಣಪತಿಯನ್ನು ಅರಿರೌದ್ರನನ್ನಾಗಿ ಕಂಡಿದ್ದಾನೆ.
ಅರಿ ರೌದ್ರಂ ಕರದೈರ್ಘ್ಯ ಮುಲ್ಲಸದಹೀ ನಾಲಂಕೃತಂ ಮೂರ್ತಿ ಸಾ |
ಕ್ಷರ ಸೇವ್ಯಂ ನಿಜ ವಿದ್ಯೆ ವಿಶ್ವವಿನುತಂ ಪಾದಂ ಸದಾಳಿ ಪ್ರಿಯಂ |
ವರ ದಾನಂ ನತ ಭದ್ರ ಲಕ್ಷಣ ವದಂ ಪದ್ಮಾನುಷಂಗಿತ್ವಂ ಮಾ |
ಗಿರೆ ಪೆಂಪಚ್ಚರಿಯಾದ ದೇವಗಣಪಂ ರಕ್ಷಿಕ್ಕೆ ಭೂ ಚಕ್ರಮಂ ||
ಇವನ ಗಣಪತಿಯೇನೋ ಅರಿ ರೌದ್ರನ್. ಅವನ ಕರಗಳೂ ದೀರ್ಘ ಹಾಗೆಂದು ಯಾರೂ ಅವನನ್ನು ನೋಡಿ ಹೆದರಿಕೊಳ್ಳಬೇಕಾಗಿಲ್ಲ ಏಕೆಂದರೆ ಅವನು ಉಲ್ಲಸತ್ ಅಹೀಸಾಲಂಕೃತ ಮೂರ್ತಿ, ರೌದ್ರದಲ್ಲಿ ಶಾಂತತೆಯನ್ನು ಮೂಡಿಸುವುದು ಎಷ್ಟು ಸಹಜ ಎನ್ನುವುದನ್ನು ತೋರಿಸಿ ತನ್ನ ಅಸಾಧಾರಣ ಪದ ಜೋಡಣಾ ಕುಶಲತೆಯನ್ನೂ ಭಾವವ್ಯಂಜಕ ಶಕ್ತಿಯನ್ನೂ ರುದ್ರಭಟ್ಟ ತೋರಿಸಿದ್ದಾನೆ.

ಹರಿಹರ : ಹರಿಹರ ಕವಿ ತನ್ನ 'ಗಿರಿಜಾ ಕಲ್ಯಾಣ' ಕಾವ್ಯದ ನಿರ್ವಿಘ್ನತೆಗಾಗಿ "ಆನಂದ ವೇಷ"ನಾದ ಗಣಪತಿಯನ್ನೇ ಪ್ರಾರ್ಥಿಸುತ್ತಾನೆ.
ಎನ್ನೀ ಕಾವ್ಯಕ್ಕೆ ನಿರ್ವಿಘ್ನದಿನ್ ಅತುಳ ನವೀನಾರ್ಥ ವಾಕ್ಯ ಪ್ರಸನ್ನೋ
ತ್ಪನ್ನಾಲಂಕಾರಮಂ ಮಾಡುಗೆ ವಿಪುಲ ಕಪೋಳ ಸ್ಥಳಾಂತ ಸ್ಥಳೀ ಸಂ |
ಭಿನ್ನೋದ್ಯದ್ಧಾನ ಧಾರಾ ಪ್ರಬಳ ಪರಿಮಳಾ ಸಕ್ತ ಭೃಂಗಾವಳೀ ಸಂ |
ಪನ್ನ ಪ್ರೋದ್ಬೂತ ಝಂಕಾರಿತ ರವ ಮುದಿತಾ ನಂದವೇಶಂ ಗಣೇಶಂ ||
ತನ್ನ ಕಪೋಲದ ಮದೋದಕದಿಂದ ಮತ್ತವಾದ ದುಂಬಿಗಳ ಝೇಂಕಾರವನ್ನು ಕೇಳುತ್ತಾ ಆನಂದದಲ್ಲಿ ಮಗ್ಗನಾಡ ಗಣಪತಿಯ ರೂಪ, ನಿಜಕ್ಕೂ ಪ್ರಸನ್ನತೆಯ ರೂಪವೇ ಆಗಿದೆ. ಈ ಗಣಪತಿ ಅವನ ಕಾವ್ಯಕ್ಕೆ ನಿರ್ವಿಘ್ನತೆಯನು ಉಂಟು ಮಾಡಲೇಬೇಕಲ್ಲವೆ?

ಕುಮಾರವ್ಯಾಸ : ರೂಪಕ ಸಾಮ್ರಾಜ್ಯ ಚಕ್ರವರ್ತಿಯಾದ ಕುಮಾರವ್ಯಾಸನು ಮಹಾಭಗವತನು. ಜೊತೆಗೆ ಪದ ಶ್ರೀಮಂತಿಕೆಯಿಂದ ಮೆರೆದವನು. ಅವನ ಗಣಪತಿಯೂ ಸಹ ಶ್ರೀಮಂತ ಗಣಪತಿಯೇ ಅವನ ಗಣಪನಿಗ ಯಾವ ಅಲಂಕಾರಕ್ಕೂ ಕೊರತೆಯಿಲ್ಲ ಅವನ ಗಣಪತಿಯ ಮೌಳಿ ಮರಮಣಿಗೆಳಿಂದಲೇ ಅಲಂಕೃತವಾದದ್ದು ಅವನ ಹಣೆ ಸರಸಿಜಾರಿಯ ಕಿರಣದೋಳಿಯಿಂದಲೇ ರಚಿತವಾಗಿ ಸಿಂಧೂರದಿಂದ ಅಲಂಕೃತವಾದದ್ದು ಹಣೆಯ ಅಂಚಿನಲ್ಲಿ ಕುಂತಳಗಳ ಕುಣಿತವಿದೆ, ವದನದಕಾಂತಿ ಕರಿನಿಭಾಕೃತಿಯದು ಅಂದರೆ ಕರಿಯಂತೆಯೇ ಗಂಭೀರವಾದ್ದು, ಗೌರವವಾದದ್ದು ಆದರೆ ಅವನು ಬರೀ ಶ್ರೀಮಂತನೇ ಅಲ್ಲ, ವಿದ್ಯೆ ವಾರಿಧಿಯೂ ಹೌದು ಇವನು ವಿದ್ಯೆಯಿಂದ ವಿನಯಪೂರ್ಣನಾಗಿದ್ದಾನೆ ಆದ್ದರಿಂದಲೇ ಇವನನ್ನು ಅಜಹರಿ ರುದ್ರಾದಿಗಳ ಭಜಿಸುತ್ತಾರೆ. ಕವಿಯ ಮಾತಿನಿಂದಲೇ ಈ ಭಾವವನ್ನು ತಿಳಿಯೋಣ.
ವರ ಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರ ಭಾಳದಿ ಕುಣಿವ ಕುಂತಳದ |
ಕರಿನಿಭಾಕೃತಿ ಎನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿಯೆ ಮಾಡೆಮಗೆ ನಿರ್ವಿಘ್ನದಾಯಕವ ||
ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತ ಗಿರಿಯೊಡೆಯನ ಕುಮಾರನೆ ವಿದ್ಯೆವಾರಿಧಿಯೆ |
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ||

ಕುವೆಂಪು : ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪುರವರಿಗೆ ತಮ್ಮದೇ ಆದ ವಿಶಿಷ್ಟಸ್ಥಾನವಿದೆ, ಇವರಿಗೆ ಗಣಪತಿ ಕಾಣಿಸಿಕೊಂಡ ರೀತಿಯೇ ಭಿನ್ನರೀತಿಯದು ಇವರ ಗಣಪ ಕೈಲಾಸದಿಂದ ಚೌತಿಯದಿನ ಭೂಲೋಕಕ್ಕೆ ಬರುತ್ತಾನೆ. ಅವನು ಬರುವಾಗ ಒಬ್ಬನೇ ಬರುವುದಿಲ್ಲ ಜೊತೆಯಲ್ಲಿ ಗೌರಿಯನ್ನು ಕರೆ ತರುತ್ತಾನೆ.
ನೀಲವ್ಯೋಮ ವಿಶಾಲ ಪಥದಲಿ |
ಶ್ರಾವಣ ನೀರದ ನೀಲ ಪಢದಲಿ |
ಗೌರಿ ಗಣೇಶರು ಬರುವರದೋ
ಭಾದ್ರಪದಾದಿಯ ಶಾದ್ವಲ ವೇದಿಯ
ಶ್ರೀ ಕೈಲಾಸನ ತರುವರದೋ..... |

ಪುರಂದರ ದಾಸ : ದಾಸ ಸಾಹಿತ್ಯಕ್ಕೆ ಬಂದರಂತೂ ಅವನನ್ನು ಹಾಡಿ ಕೊಂಡಾದ ಹರಿದಾಸರು ಅಪರೂಪ ಪುರಂದರ ದಾಸರು ತಮ್ಮ ಅನೇಕ ಹಾಡುಗಳಲ್ಲಿ, ಸುಳಾದಿಗಳಲ್ಲಿ ಗಣಪತಿಯನ್ನು ಸುತ್ತಿಸಿದ್ದಾರೆ. ಒಮ್ಮೆ ಅವನನ್ನು 'ಸಿದ್ದ ಚಾರಣ ಸೇವಿತ' - ಎಂದರೆ ಮತ್ತೊಂದು ಹಾಡಿನಲ್ಲಿ "ವಿದ್ಯಾ ಪ್ರದಾಯಕ" ಎಂದಿದ್ದಾರೆ. ಅಷ್ಟೇ ಅಲ್ಲ ಅವನು ತಟಲ್ಲತಾಂಕತ ಕೋಮಲಾಂಗ, ಇಂದ್ರಿಯ ನಿಗ್ರಹಿಯೂ ಎಂದು ಹೇಳಿದ್ದಾರೆ.

ಕನಕದಾಸರು : ಕನಕದಾಸರೂ ಸಹ ಗಣಪನನ್ನು ಕೊಂಡಾಡಿದ್ದಾರೆ ಅವರ ಆ ಹಾಡು ಹೀಗಿದೆ -
ಕಮ್ಮಗೋಲನ ವೈರಿ ಸುತನಾದ
ಸೊಂಡಿಲ ಹೆಮ್ಮಯ್ಯ ಗಣನಾಥನೇ
ಮೋರೆ ಕಪ್ಪಿನ ಭಾವ ಮೊರದಗಲ ಕಿಡಿ
ಕೋರೆದಾಡೆಯವನ್ಯಾರಮ್ಮ
ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೇ ಅಮ್ಮಯ್ಯ
ಉಟ್ಟ ದಟ್ಟಯ ಬಿಗಿದುಟ್ಟ ಚಲ್ಲಣದ
ದಿಟ್ಟ ತಾನಿಇವನ್ಯಾರಮ್ಮ
ಶಿವನ ಪಟ್ಟದರಾಣಿ ಪಾರ್ವತಿಯ ಕುಮಾರ
ಹೊಟ್ಟೆಯ ಗಣನಾಥನೇ ಅಮ್ಮಯ್ಯ ||
ಕೀರ್ತನೆಗಳಲ್ಲಿ ಬಿಗಿದುಟ್ಟ ಚಲ್ಲಣದ ದಿಟ್ಟನಾಗಿ ಕಂಡ ಗಣಪತಿ ಕನಕದಾಸರಿಗೆ ಮೋಹನ ತರಂಗಿಣಿಯಲ್ಲಿ ಮತ್ತೊಂದು ರೀತಿಯಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲಿ ಅವನು ಪೊಂಬಳಲ ವಿನಾಯಕ ಈ ಹಾಡಿನಲ್ಲಿ ಕನಕದಾಸರ ಅನನ್ಯ ಶರಣತೆಯೂ ಬೆರೆತು ಹೋಗಿದೆ.
ಕಾಯಕ ವಿದು ನಿನ್ನದು ಕೇಳು ನಿರ್ವಿಘ್ನ
ದಾಯಕ ಎನಗೆ ಸತ್ಕೃಪೆಯ
ಜೀಯ ಕಾರುಣ್ಯದಿ ಕಂಡು ಪೊಂಬಲ ವಿ
ನಾಯಕ....ವಿಶ್ವವಲ್ಲಬನೆ ||

ಜಾನಪದ ಗಣಪ : ಜನಪದ ಕವಿಗಳಿಗೆ ಗಣಪತಿ ಅಚ್ಚು ಮೆಚ್ಚಿನ ದೇವತೆ ಅವನನ್ನು ಸ್ಮರಿಸದೇ ಇರುತ್ತಾರೆಯೇ? ಇವರು ಗಣಪತಿಯನ್ನು ಒಂದೆಡೆ ಕೂರಿಸಿ, ದೇಗುಲ ಕಟ್ಟೆ, ಅಲಂಕರಿಸಿ ಪೂಜಿಸಿ ಹೊಗಳಿದವರಲ್ಲ ಅವರಿಗೆ ನಿಂತ ನೆಲವೇ ದೇಗುಲ ಹಾಡಿದ ಹಾಡೇ ಸ್ತುತಿ ನೀಡಿದ ವಸ್ತುವೇ ನಿವೇದನೆ. ಅವರು ಎಲ್ಲಿಗೆ ಹೋಗುತ್ತಾರೆ ಅಲ್ಲಿಗೆ ಗಣಪ ಹೋಗುತ್ತಾನೆ. ಅವರು ಯಾವ ರುಪದಲ್ಲಿ ನೆನೆಯುತ್ತಾರೋ ಆ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಅವರು ಅವನನ್ನು ನೆನೆಯುವುದು ಹೇಗೆ ---
ಶರಣು ಶರಣುವಯ್ಯ ಗಣನಾಯ್ಕ ನಮ್ಮ
ಕರುಣದಿಂದಲಿ ಕಾಯೋ ಗಣನಾಯ್ಕ
ಕಳಿಯಡಕೆ ಚಿಗುರೆಲೆ ಗಣನಾಯ್ಕ ನಿಮಗೆ
ಗೊನೆ ಮೇಗ್ಹ ಬಾಳೆಹಣ್ಣು ಗಣನಾಯ್ಕ
ಕರ್ಪೂರ ಸಾಂಬ್ರಾಣಿ ಗಣನಾಯ್ಕ ನಿಮಗೆ
ಒಡೆದ ತೆಂಗಿನ ಕಾಯಿ ಗಣನಾಯ್ಕ

ಹೀಗೆ ಕನ್ನಡದ ಕವಿಗಳು, ಹರಿದಾಸರು, ಜಾನಪದರು ಗಣೇಶನ ದರ್ಶನವನ್ನು ಮಾಡಿ, ಅವನ ಅನುಗ್ರಹದಿಂದ ತಮ್ಮ ಕೃತಿಗಳನ್ನು ಅವರವನ್ನಾಗಿಸಿ ಕೊಂಡಿದ್ದಾರೆ ತನ್ನೂಲಕ ಜಗತ್ತಿಗೆ ಮಂಗಳವನ್ನು ಪ್ರಾರ್ಥಿಸಿದ್ದಾರೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ