ಮಾನವತೆಗೆ ಅದ್ವೈತದ ಕೊಡುಗೆ
ನಮ್ಮ ಭರತಖಂಡದ ಸಂಸ್ಕೃತಿಯ ಗನಿಗಳಾದ ವೇದ-ಪುರಾಣ ಇತಿಹಾಸಗಳಲ್ಲಿ ಮಾನವನೆಂದರೆ ಯಾರು? ಎಂಬಿದನ್ನು ಚೆನ್ನಾಗಿ ವಿವೇಚಿಸಿ ತಿಳಿಸಿದ್ದಾರೆ. ಪ್ರತ್ಯಕ್ಷಪ್ರಮಾಣದಿಂದ ಕಂಡುಬರುವ, ಮನುಷ್ಯಶರೀರಧಾರಿಯಾದ ವ್ಯಕ್ತಿಯೇ ಮಾನವನು - ಎಂಬಿಷ್ಟನ್ನೇ ಶಾಸ್ತ್ರಗಳು ಒಪ್ಪಿರುವದಿಲ್ಲ. ಶರೀರದ ಜೊತೆಗೆ ಅಂತಃಕರಣವೂ, ಅದಕ್ಕೆ ಹೊಂದಿಕೊಂಡಂತೆ ದೈವೀಗುಣಗಳೂ ಇರುವವನನ್ನೇ ಮಾನವ, ಪುರುಷ - ಎಂದು ಅಲ್ಲಿ ಕರೆದಿರುತ್ತದೆ. ಮಾನವನ ಸೃಷ್ಟಿಯ ವಿಷಯಕ್ಕೆ ಉಪನಿಷತ್ತಿನಲ್ಲಿ ಈ ವರ್ಣನೆಯಿದೆ : "ಆತ್ಮನಿಂದ ಆಕಾಶವು ಹುಟ್ಟಿತು, ಆಕಾಶದಿಂದ ಕ್ರಮವಾಗಿ ವಾಯು, ತೇಜಸ್ಸು, ಜಲ, ಪೃಥ್ವಿಗಳೂ ಅನಂತರ ಪೈರುಗಳೂ ಅನ್ನವೂ ಅನ್ನದಿಂದ ಪುರುಷನೂ ಹುಟ್ಟಿರುತ್ತಾನೆ." ಈ ವಿವರಣೆಯು ತೈತ್ತಿರೀಯೋಪನಿಷತ್ತಿನಲ್ಲಿದೆ. ಅಲ್ಲಿ ಶ್ರೀ ಶಂಕರಾಚಾರ್ಯರು ವ್ಯಾಖ್ಯಾನಮಾಡಿರುವದು ಹೇಗೆಂದರೆ : "ಎಲ್ಲಾ ಚೇತನಾಚೇತನವಸ್ತುಗಳೂ ಬ್ರಹ್ಮದಿಂದಲೇ ಹುಟ್ಟಿ ಬಂದು ಬ್ರಹ್ಮವಂಶಕ್ಕೇ ಸೇರಿದ್ದರೂ ಶ್ರುತಿಯು ಪುರುಷನನ್ನೇ ಏಕೆ ಗ್ರಹಿಸಿದೆ? ಎಂದರೆ ಬ್ರಹ್ಮದ ಆವಿರ್ಭಾವವು ಮನುಷ್ಯನಲ್ಲಿ ಪೂರ್ಣವಾಗಿರುವದರಿಂದ - ಎಂದು ತಿಳಿಯಬೇಕು. ಪುರುಷನು ತಿಳಿವಳಿಕೆಯಿಂದ ಕೂಡಿದವನಾಗಿದ್ದು ಮಾತನಾಡುವದು, ನೋಡುವದು, ಕೇಳುವದು - ಮುಂತಾದ ವ್ಯವಹಾರಗಳ ಜೊತೆಗೆ, ನಾಳೆಗೇನು? ವಯಸ್ಸಾದ ಮೇಲೆ ಹೇಗೆ? ಈ ಶರೀರವನ್ನು ಬಿಟ್ಟ ಅನಂತವೂ ಜನ್ಮಾಂತರಲೋಕಾಂತರಗಳಲ್ಲಿಯೂ ಸುಖವಾಗಿರುವದು ಹೇಗೆ? ಮುಂತಾದ ರೀ...