ನಂಬಿಕೆ, ಅರಿವುಗಳೆರಡೂ ಶ್ರೇಯಸ್ಸಾಧನವೇ......

    'ನಂಬು, ನಂಬು - ನಾರಾಯಣನ' ಎಂದು ಭಕ್ತರು ಹಾಡಿರುತ್ತಾರೆ. ಇಲ್ಲಿ ನಂಬಿಕೆ - ಎಂಬುದು ಯಾವದು? ನಾರಾಯಣನೆಂದರೆ ಯಾರು? ನಾರಾಯಣನೆಂದರೆ ನರರಿಗೆಲ್ಲ ಆಶ್ರಯನಾಗಿರುವ ಪರಮಾತ್ಮನು. ಪರಮಾತ್ಮನೊಬ್ಬನಿದ್ದಾನೆ; ಅವನು ನಮಗೆಲ್ಲ ಅಂತರಾತ್ಮನು. ಆತನಲ್ಲಿ ಶ್ರದ್ಧಾ ಭಕ್ತಿಗಳುಂಟಾದರೆ ನಮಗೆ ಇಹಲೋಕದಲ್ಲಿ ಸುಖವೂ ಪರದಲ್ಲಿ ಶ್ರೇಯಸ್ಸೂ ಉಂಟಾಗುತ್ತದೆ - ಎಂಬ ದೃಢವಿಶ್ವಾಸವೇ ನಂಬಿಕೆ.
    ಇದೊಂದು ಮಹಾತತ್ತ್ವವು. ಇದನ್ನು ಸುಮ್ಮನೆ ನಂಬಿಕೊಂಡಿರುವದಕ್ಕೂ ಅರಿತುಕೊಳ್ಳುವದಕ್ಕೂ ಹೆಚ್ಚು ಕಡಿಮೆಯಿದೆ. ಸಮಿಪದ ಕಾಡಿನಲ್ಲಿ ಒಂದು ಹುಲಿಯಿದೆ - ಎಂದು ಆ ಊರಿನವರಿಗೆಲ್ಲ ನಂಬಿಕೆಯಿರಬಹುದು, ಆದರೆ ಕಾಡಿನಲ್ಲಿ ಕಟ್ಟಿಗೆಯನ್ನು ತರುವದಕ್ಕೆಂದು ಹೋದವನೊಬ್ಬನು ದೂರದಲ್ಲಿ ಹುಲಿಯನ್ನು ಕಂಡರೆ ಅವನಿಗೆ ಅದರ ಅರಿವೂ ಆಗುವದು. ಹೀಗೆಯೇ ಪರಮೇಶ್ವರನನ್ನು ನಂಬುವದಕ್ಕೂ ಆತನ ಸ್ವರೂಪವನ್ನು ಅರಿತುಕೊಳ್ಳುವದಕ್ಕೂ ವ್ಯತ್ಯಾಸವಿದೆ.
    ನಂಬಿಕೆಯು ಅರಿವಲ್ಲವಾದರೂ ಅರಿವನ್ನು ಸಂಪಾದಿಸಿಕೊಳ್ಳುವದಕ್ಕೆ ಅದು ಒಂದು ದೊಡ್ಡ ಸಾಧನವಾಗಿರುತ್ತದೆ. ಯಾವನಿಗೆ ಭಗವಂತನ ಇರುವಿಕೆಯಲ್ಲಿ ನಂಬಿಕೆಯಿಲ್ಲವೋ ಯಾವನಿಗೆ ಭಗವಂತನಿಂದ ಪುರುಷಾರ್ಥಪ್ರಾಪ್ತಿಯಾಗುವದೆಂಬ ವಿಶ್ವಾಸವಿಲ್ಲವೋ ಅವನಿಗೆ ಭಗವಂತನನ್ನು ಅರಿತುಕೊಳ್ಳುವದು ಎಂದಿಗೂ ಸಾಧ್ಯವಿಲ್ಲ. ಅವನು ಎಂದೆಂದಿಗೂ ಭಗವಂತನನ್ನು ಅರಿಯುವದಕ್ಕೆ ಪ್ರಯತ್ನಮಾಡುವ ಸಂಭವವೂ ಇಲ್ಲ. ಆದ್ದರಿಂದ ಭಗವಂತನ ಇರುವಿಕೆಯಲ್ಲಿಯೂ ಆತನ ಕಲ್ಯಾಣ ಗುಣಗಳ ವಿಷಯದಲ್ಲಿಯೂ ನಂಬಿಕೆಯನ್ನು ಸತ್ಸಹವಾಸದಿಂದ ಸಂಪಾದಿಸಿಕೊಳ್ಳುವದು ಮೊಟ್ಟಮೊದಲನೆಯ ಆಧ್ಯಾತ್ಮ ಸಾಧನವಾಗಿರುತ್ತದೆ.
    ನಂಬಿಕೆಯನ್ನು ಶ್ರದ್ಧೆ ಎಂದೂ ಕರೆಯುವರು. ಶ್ರದ್ಧೆ-ಭಕ್ತಿ-ಧ್ಯಾನ ಇವು ಮೂರು ಭಗವತ್ ಪ್ರಾಪ್ತಿಗೆ ಮುಖ್ಯಸಾಧನಗಳು. ನಾರಾಯಣತತ್ತ್ವವು ಎಂದೆಂದಿಗೂ ಇದ್ದುಕೊಂಡಿರುವ ಶಾಶ್ವತ-ಶಿವ-ಅಚ್ಯುತತತ್ತ್ವವಾದ್ದರಿಂದ ಅದನ್ನು ಇದೆ ಎಂದು ನಂಬುವದು ಮೂಢಭಕ್ತಿ ಎಂದಿಗೂ ಆಗಲಾರದು. ಅದು ಪದಾರ್ಥದ ಅರಿವಿಗಾಗಿ ಹಾಗೂ ಆ ಅರಿವನ್ನು ಗಟ್ಟಿಗೊಳಿಸಿಕೊಳ್ಳುವದಕ್ಕಾಗಿ ಬಳಸುವ ಸಾಧನವಾಗಿರುತ್ತದೆ. ಹೀಗೆ ನಂಬಿಕೆ, ಅರಿವುಗಳೆರಡೂ ಶ್ರೇಯಸ್ಸಾಧನವೆನಿಸಿವೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ