ಗಾಯತ್ರಿಯೇ ಪರಬ್ರಹ್ಮವು
ಉಪನಿಷತ್ಪ್ರತಿಪಾದ್ಯವಾಗಿರುವ ಪರಬ್ರಹ್ಮದ ವಿಜ್ಞಾನದಿಂದಲೇ ಪರಮ ಪುರುಷಾರ್ಥರೂಪವಾದ ಮೋಕ್ಷಪ್ರಾಪ್ತಿಯೆಂಬುದನ್ನು ಎಲ್ಲಾ ಶಾಸ್ತ್ರಗಳಲ್ಲಿಯೂ ಹೇಳಿರುತ್ತದೆ. ಈಗ ಗಾಯತ್ರೀಜಪಕ್ಕೂ ಪರಬ್ರಹ್ಮವಿಜ್ಞಾನಕ್ಕೂ ಏನು ಸಂಬಂಧವಿದೆ? ಎಂಬುದನ್ನು ವಿಚಾರಿಸೋಣ ಇದರಿಂದ ನಾವು ಗಾಯತ್ರಿಯ ಮಹತ್ತ್ವವನ್ನು ಮತ್ತಷ್ಟು ಅರಿತಂತಾಗುವದು. ಛಾಂದೋಗ್ಯೋಪನಿಷತ್ತಿನಲ್ಲಿ ಮೂರನೆಯ ಅಧ್ಯಾಯದ ಹನ್ನೆರಡನೆಯ ಖಂಡದಲ್ಲಿ ಗಾಯತ್ರಿಯ ಮಹಿಮೆಯನ್ನು ಕೊಂಡಾಡಿರುತ್ತದೆ. ಶ್ರೀಶಂಕರಾಚಾರ್ಯರು ಈ ಮಂತ್ರಗಳಿಗೆ ಭಾಷ್ಯವನ್ನು ಬರೆಯುವಾಗ ಅವತರಣಿಕೆಯಲ್ಲಿ ಹೀಗೆಂದಿದ್ದಾರೆ : "ಗಾಯತ್ರೀದ್ವಾರೇಣ ಚೋಚ್ಯತೇ ಬ್ರಹ್ಮ |..... ಗಾಯತ್ರ್ಯಾ ಏವ ಬ್ರಹ್ಮಜ್ಞಾನದ್ವಾರತಯೋಪಾದಾನಂ ಪ್ರಾಧಾನ್ಯಾತ್ ..... ಗಾಯತ್ರೀ ಸಾರತ್ವಾಚ್ಚ ಬ್ರಾಹ್ಮಣಸ್ಯ ಮಾತರಮಿವ ..... ಅತಃ ಗಾಯತ್ರೀಮುಖೇನೈವ ಬ್ರಹ್ಮ ಉಚ್ಯತೇ ||" ಎಂದರೆ ಬ್ರಹ್ಮವು ಸರ್ವವಿಶೇಷರಹಿತವಾಗಿರುವದರಿಂದ 'ನೇತಿ ನೇತಿ' ಎಂದು ವರ್ಣಿಸಿದರೆ ತಿಳಿಯುವದು ಕಷ್ಟ. ಅದಕ್ಕಾಗಿ ಗಾಯತ್ರೀರೂಪದಿಂದ ಹೇಳಿದೆ. ಆದರೆ ವೇದದಲ್ಲಿ ಅನೇಕಛಂದಸ್ಸುಗಳಿದ್ದರೂ ಈ ಗಾಯತ್ರಿಯು ಎಲ್ಲಾ ಛಂದಸ್ಸುಗಳನ್ನೂ ವ್ಯಾಪಿಸಿಕೊಂಡಿರುವದರ ಮೂಲಕ ಎಲ್ಲಾ ಯಜ್ಞಗಳಲ್ಲಿಯೂ ಹರಡಿಕೊಂಡಿರುವದರಿಂದ ಯಜ್ಞದಲ್ಲಿ ಗಾಯತ್ರೀಛಂಸ್ಸಿಗೇ ಪ್ರಾಧಾನ್ಯವಿದೆ. ವೇದಗಳೆಲ್ಲದರ ಸಾರವೇ ಗಾಯತ್ರಿಯು....