ಗಾಯತ್ರಿಯೇ ಪರಬ್ರಹ್ಮವು

    ಉಪನಿಷತ್ಪ್ರತಿಪಾದ್ಯವಾಗಿರುವ ಪರಬ್ರಹ್ಮದ ವಿಜ್ಞಾನದಿಂದಲೇ ಪರಮ ಪುರುಷಾರ್ಥರೂಪವಾದ ಮೋಕ್ಷಪ್ರಾಪ್ತಿಯೆಂಬುದನ್ನು ಎಲ್ಲಾ ಶಾಸ್ತ್ರಗಳಲ್ಲಿಯೂ ಹೇಳಿರುತ್ತದೆ. ಈಗ ಗಾಯತ್ರೀಜಪಕ್ಕೂ ಪರಬ್ರಹ್ಮವಿಜ್ಞಾನಕ್ಕೂ ಏನು ಸಂಬಂಧವಿದೆ? ಎಂಬುದನ್ನು ವಿಚಾರಿಸೋಣ ಇದರಿಂದ ನಾವು ಗಾಯತ್ರಿಯ ಮಹತ್ತ್ವವನ್ನು ಮತ್ತಷ್ಟು ಅರಿತಂತಾಗುವದು.

    ಛಾಂದೋಗ್ಯೋಪನಿಷತ್ತಿನಲ್ಲಿ ಮೂರನೆಯ ಅಧ್ಯಾಯದ ಹನ್ನೆರಡನೆಯ ಖಂಡದಲ್ಲಿ ಗಾಯತ್ರಿಯ ಮಹಿಮೆಯನ್ನು ಕೊಂಡಾಡಿರುತ್ತದೆ. ಶ್ರೀಶಂಕರಾಚಾರ್ಯರು ಈ ಮಂತ್ರಗಳಿಗೆ ಭಾಷ್ಯವನ್ನು ಬರೆಯುವಾಗ ಅವತರಣಿಕೆಯಲ್ಲಿ ಹೀಗೆಂದಿದ್ದಾರೆ :
"ಗಾಯತ್ರೀದ್ವಾರೇಣ ಚೋಚ್ಯತೇ ಬ್ರಹ್ಮ  |.....
  ಗಾಯತ್ರ್ಯಾ ಏವ ಬ್ರಹ್ಮಜ್ಞಾನದ್ವಾರತಯೋಪಾದಾನಂ ಪ್ರಾಧಾನ್ಯಾತ್ .....
   ಗಾಯತ್ರೀ ಸಾರತ್ವಾಚ್ಚ ಬ್ರಾಹ್ಮಣಸ್ಯ ಮಾತರಮಿವ .....
   ಅತಃ ಗಾಯತ್ರೀಮುಖೇನೈವ ಬ್ರಹ್ಮ ಉಚ್ಯತೇ ||"
ಎಂದರೆ ಬ್ರಹ್ಮವು ಸರ್ವವಿಶೇಷರಹಿತವಾಗಿರುವದರಿಂದ 'ನೇತಿ ನೇತಿ' ಎಂದು ವರ್ಣಿಸಿದರೆ ತಿಳಿಯುವದು ಕಷ್ಟ. ಅದಕ್ಕಾಗಿ ಗಾಯತ್ರೀರೂಪದಿಂದ ಹೇಳಿದೆ. ಆದರೆ ವೇದದಲ್ಲಿ ಅನೇಕಛಂದಸ್ಸುಗಳಿದ್ದರೂ ಈ ಗಾಯತ್ರಿಯು ಎಲ್ಲಾ ಛಂದಸ್ಸುಗಳನ್ನೂ ವ್ಯಾಪಿಸಿಕೊಂಡಿರುವದರ ಮೂಲಕ ಎಲ್ಲಾ ಯಜ್ಞಗಳಲ್ಲಿಯೂ ಹರಡಿಕೊಂಡಿರುವದರಿಂದ ಯಜ್ಞದಲ್ಲಿ ಗಾಯತ್ರೀಛಂಸ್ಸಿಗೇ ಪ್ರಾಧಾನ್ಯವಿದೆ. ವೇದಗಳೆಲ್ಲದರ ಸಾರವೇ ಗಾಯತ್ರಿಯು. ತಾಯಿಯಂತೆ ಇದರಲ್ಲಿ ಹೆಚ್ಚಿನ ಗೌರವವಿರುವದು ಯುಕ್ತವಾಗಿದೆ. ಆದ್ದರಿಂದ ಗಾಯತ್ರೀರೂಪದಿಂದಲೇ ಬ್ರಹ್ಮವನ್ನು ಇಲ್ಲಿ ಹೇಳಿರುತ್ತದೆ ಎಂದು ಆಚಾರ್ಯರು ಅಭಿಪ್ರಾಯಪಟ್ಟಿರುತ್ತಾರೆ.

    ಇನ್ನು ಉಪನಿಷತ್ತಿನಲ್ಲಿ ಗಾಯತ್ರಿಯನ್ನು ವರ್ಣಿಸಿರುವ ಬಗೆಯನ್ನು ನೋಡಿರಿ : "ಗಾಯತ್ರಿಯೇ ಇದೆಲ್ಲವೂ ಆಗಿದೆ. ವಾಕ್ಕೆಂಬುದೇ ಗಾಯತ್ರಿಯು. ಏಕೆಂದರೆ ವಾಕ್ಕೇ ಗಾನವಾಗಿದೆ. ಹಾಗೂ ತ್ರಾಣನ (ರಕ್ಷಣೆ) ಮಾಡುತ್ತದೆ. ಹೇಗೆಂದರೆ : ಎಲ್ಲಾ ಪ್ರಾಣಿಗಳೂ ಧ್ವನಿರೂಪವಾದ ಶಬ್ದವನ್ನು ಮಾಡುತ್ತವೆ. ಮನುಷ್ಯರು ಭಾಷಾತ್ಮಕವಾಗಿ ವಾಕ್ಕನ್ನು (ಶಬ್ದವನ್ನು) ಬಳಸುತ್ತಾರೆ. ಹೀಗೆ ವಾಕ್ಕೆಂಬುದು ಸರ್ವಭೂತಮಯವಾಗಿದೆ. ವಾಕ್ಕಿನಿಂದಲೇ ಇದು ಹಸು, ಇದು ಕುದುರೆ ಎಂಬ ವ್ಯವಹಾರವಾಗುತ್ತದೆ ಹೆದರಿದವರಿಗೆ ಆಶ್ವಾಸನೆಕೊಡುವಾಗ 'ಹೆದರಬೇಡ, ನಿನಗೇನು ಭಯವಾಗಿದೆ?' ಎಂದು ವಾಕ್ಕಿನಿಂದಲೇ ರಕ್ಷಣೆಕೊಡುತ್ತೇವೆ. ಆದ್ದರಿಂದ ವಾಕ್ಕು ಗಾಯತ್ರಿ ಎರಡೂ ಒಂದೇ ಹಾಗೆಯೇ ಈ ಭೂಮಿಯೂ ಗಾಯತ್ರಿಯೇ ಏಕೆಂದರೆ ಎಲ್ಲಾ ಸ್ಥಾವರಜಂಗಮಪ್ರಾಣಿಗಳೂ ಈ ಭೂಮಿಯನ್ನೇ ಆಶ್ರಯಿಸಿಕೊಂಡಿವೆ. ವಾಕ್ಕು ಹೇಗೆ ಗಾನ-ತ್ರಾಣಗಳಿಂದ ಭೂತಗಳಿಗೆ ಆಶ್ರಯವೋ ಹಾಗೆ ಆಧಾರವಾಗಿರುವ ಮೂಲಕ ಎಲ್ಲಾ ಭೂತಗಳಿಗೂ ಪೃಥಿವಿಯು ಆಶ್ರಯವು ಆದ್ದರಿಂದ ಪೃಥಿವಿಯೇ ಗಾಯತ್ರಿಯು ಇನ್ನೂ ಒಳಹೊಕ್ಕು ನೋಡಿದರೆ ಈ ಶರೀರವೇ ಗಾಯತ್ರಿಯು ಏಕೆಂದರೆ ಶರೀರದಲ್ಲೇ ಭೂತರೂಪವಾದ ಪ್ರಾಣಗಳೆಲ್ಲವೂ ಇವೆ ಹೀಗೆಯೇ ಶರೀರಕ್ಕೂ ಸಾರವಾದ ಹೃದಯವೇ ಗಾಯತ್ರಿಯು ಏಕೆಂದರೆ ಪ್ರಾಣಗಳೆಲ್ಲವೂ ಹೃದಯವನ್ನಾಶ್ರಯಿಸಿಕೊಂಡಿವೆ. ಆದ್ದರಿಂದ ಹೃದಯವೆಂದರೆ ಈ ಪರಮಾತ್ಮನೇ ಗಾಯತ್ರಿಯು ಪರಬ್ರಹ್ಮವೇ ಎಂಬುದು ಹೀಗೆ ಸಿದ್ಧವಾಯಿತು."

    ಮೇಲಿನ ವಾಕ್ಯಗಳಲ್ಲಿ ಗಾಯತ್ರಿಯ ಬಗ್ಗೆ ಉಪನಿಷತ್ತು ಎಷ್ಟು ರಹಸ್ಯವಾದ ಹಾಗೂ ಸುಂದರವಾದ ವಿವರಣೆಯನ್ನು ಕೊಟ್ಟಿದೆ ಎಂಬುದನ್ನು ನಾವು ಲಕ್ಷ್ಯದಲ್ಲಿಟ್ಟು ಕೊಳ್ಳಬೇಕು ಇದರಿಂದ ಗಾಯತ್ರಿಯೆಂದರೆ ದ್ವಿಜರು ಮಾತ್ರ ಜಪಿಸುವ ಕೇವಲ ಮಂತ್ರವೆಂದೂ ಅದು ಎಲ್ಲರಿಗೂ ಅನ್ವಯಿಸುವದಿಲ್ಲವೆಂದೂ ಹೇಳುವದು ಎಷ್ಟು ತಪ್ಪು ಎಂದೂ ಗೊತ್ತಾಗುತ್ತದೆ ವ್ಯಾಪಕವಾದ ದೃಷ್ಟಿಯಿಂದ ನೋಡಿದರೆ ನಾವು ಬಳಸುವ ಮಾತು ಓದುವ ವಿದ್ಯೆ ಇವುಗಳಲ್ಲೆಲ್ಲ ಗಾಯತ್ರಿಯ ತತ್ತ್ವವೇ ಅಡಕವಾಗಿದೆ ನಮ್ಮ ಶರೀರವ್ಯಾಪರಗಳೆಲ್ಲವೂ ಗಾಯತ್ರಿಯ ಚೈತನ್ಯದಿಂದಲೇ ನಡೆಯುತ್ತಿವೆ. ಹೀಗೆ ನಮ್ಮ ಜೀವನದ ಉಸಿರಾದ ಗಾಯತ್ರಿಯ ಚಿಂತನೆಯೂ ಧ್ಯಾನವೂ ಉಪಾಸನೆಯೂ ಯಾರಿಗೆ ಬೇಡ ?

    ಈಗ ನಾವು ಗಾಯತ್ರಿಯ ತತ್ತ್ವವನ್ನು ಸ್ವಲ್ಪಮಟ್ಟಿಗೆ ಅರಿತಂತೆ ಆಗಿರುತ್ತದೆ. ಇನ್ನು ಆಕೆಯ ಉಪಾಸನೆಯನ್ನು ತಿಳಿದು ಮಾಡುವಾಗ ಯಾವರೀತಿಯಿಂದ ಮಾಡಿದರೂ ಫಲವು ಒಂದೇ. ಆದ್ದರಿಂದ 1) ಬ್ರಾಹ್ಮಣರೇ ಮುಂತಾದ ದ್ವಿಜರು ವೇದೋಕ್ತಮಂತ್ರಜಪರೂಪದಿಂದ ಗಾಯತ್ರಿಯನ್ನು ಆರಾಧಿಸಬೇಕು. 2) ವೇದಾಧಿಕಾರವಿಲ್ಲದ ಸ್ತ್ರೀಯರೇ ಮುಂತಾದವರು ನಾಮಮಂತ್ರ ಹಾಗೂ ದೇವಿಯ ಧ್ಯಾನಶ್ಲೋಕಗಳು ಪೌರಾಣಿಕಮಂತ್ರ - ಸ್ತೋತ್ರ - ಹಾಡು - ಈ ರೂಪಗಳಿಂದ ಆರಾಧಿಸಬೇಕು. 3) ಅತ್ಯಾಶ್ರಮಿಗಳಾದ ಸಂನ್ಯಾಸಿಗಳು, ಅವಧೂತರು ಮುಂತಾದವರು ಕೇವಲ ಓಂಕಾರರೂಪದಿಂದ ಚಿಂತಿಸುತ್ತಾರೆ. ಹೀಗೆ ಅವರವರ ಅಧಿಕಾರ ಅರ್ಹತೆಗಳಿಗೆ ತಕ್ಕಂತೆ ಪ್ರತಿಯೊಬ್ಬರೂ ಗಾಯತ್ರಿಯ ಉಪಾಸನೆಯನ್ನು ಮಾಡುವದರ ಮೂಲಕ ಚಿತ್ತಶುದ್ಧಿಯನ್ನು ಸಂಪಾದಿಸಕೊಳ್ಳಬೇಕು, ಆದರೆ ನಮಗೇಕೆ ವೇದಾಧಿಕಾರವಿಲ್ಲ? ನಾವೇಕೆ ಓಂಕಾರವನ್ನು ಹೇಳಬಾರದು? ಸಮಯವಿಲ್ಲ? ಎಂಬ ಶುಷ್ಕಚರ್ಚೆಯನ್ನು ಮುಂದುವಾಡಿಕೊಂಡು  ಭಕ್ತಿಶ್ರದ್ಧೆಗಳನ್ನು ಹಾಳುಮಾಡಿಕೊಳ್ಳಬಾರದು. ಪೂರ್ವಿಕರಾದ ತ್ರಿಕಾಲಜ್ಞಾನಿಗಳೂ, ಲೋಕದ ಹಿತಚಿಂತಕರೂ ಆದ ಮಹರ್ಷಿಗಳ ವಾಕ್ಯದಲ್ಲಿ ಶ್ರದ್ಧೆಯಿಟ್ಟು ಅವರು ಹೇಳಿರುವ ಹಾಗೂ ಅನುಷ್ಠಾನಮಾಡಿ ತೋರಿಸಿ ಕೊಟ್ಟಿರುವ ದಾರಿಯಲ್ಲಿ ನಡೆಯುತ್ತಾ ಶ್ರೇಯೋಭಾಗಿಗಳಾಗಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ