ವೇದದಲ್ಲಿ ಗಾಯತ್ರೀ ತತ್ತ್ವ

    ವಿಶ್ವಸಾಹಿತ್ಯದಲ್ಲಿ ವೇದಗಳು ಎಲ್ಲಕ್ಕಿಂತ ಪ್ರಾಚೀನಗ್ರಂಥಗಳಾಗಿವೆ. ಇವು ಋಷಿಮುನಿಗಳ ತಪೋಬಲದಿಂದ ಹೊರಬಂದ ಅನುಭವಸ್ವರೂಪವಾದ ಜ್ಞಾನಭಂಡಾರಗಳು. 'ಯಾಸ್ಯ' ಮಹಾಮುನಿಗಳು ತಮ್ಮ ಪ್ರಸಿದ್ಧಗ್ರಂಥವಾದ ನಿರುಕ್ತ (1-6-20)ದಲ್ಲಿ "ಸಾಕ್ಷಾತ್ಕೃಧರ್ಮಾಣಃ ಋಷಯೋ ಬಭೂವುಃ" - ಎಂದರೆ ಋಷಿಗಳಿಗೆ ಧರ್ಮಸಾಕ್ಷಾತ್ಕಾರವಾಗಿದ್ದಿತು. ಅವರುಗಳು ವೇದಮಂತ್ರಗಳನ್ನು ತಿಳಿದಿದ್ದರು. ಆದರೆ ಅವುಗಳನ್ನು ರಚಿಸಿದವರಲ್ಲ - ಎಂದು ಬರೆದಿದ್ದಾರೆ, ಆದ್ದರಿಂದ ಧರ್ಮಸಾಕ್ಷಾತ್ಕಾರಮಾಡಿಕೊಂಡ ಋಷಿಗಳ ಅನುಭವವಾಣಿಗಳೇ ವೇದಗಳು ಈ ವೇದಗಳೇ ಭಾರತೀಯ ಸಂಸ್ಕೃತಿ-ಸಮಾಜ-ವೇದಾಂತ-ಜೀವನ ಹಾಗೂ ವಿವಿಧ ವಿದ್ಯೆಗಳ ಮೂಲವೇ ಆಗಿವೆ.

    ಶಿಕ್ಷಾ-ವ್ಯಾಕರಣ-ಛಂದಸ್ಸು-ನಿರುಕ್ತ-ಜ್ಯೋತಿಷ್ಯ-ಕಲ್ಪ-ಈ ಆರು ವೇದಾಂಗಗಳು. ವೇದಮಂತ್ರಗಳಿಗೆ ಅರ್ಥಮಾಡುವಾಗ ಇವು ಬೇಕಾಗುತ್ತವೆ. ಮಂತ್ರಗಳ ಚಿಕ್ಕ ಚಿಕ್ಕಗುಂಪುಗಳನ್ನು 'ಸೂಕ್ತ'ಗಳೆಂದು ಕರೆಯುತ್ತಾರೆ. ಋಗ್ವೇದದ ಪ್ರತಿಯೊಂದು ಸೂಕ್ತದ ಋಷಿ - ದೇವತೆ - ಛಂದಸ್ಸುಗಳನ್ನು ತಿಳಿದುಕೊಳ್ಳುವದು ಅವಶ್ಯವಾಗಿರುತ್ತದೆ. ಆರರಿಂದ ಹನ್ನೆರಡರವರೆಗಿನ ಅಕ್ಷರಗಳಿಂದ ಕೂಡಿದ ಒಂದು ಪಾದವು ಎಲ್ಲಾ ಋಕ್ಕುಗಳಿಗೂ ಮೂಲವಾಗಿದ್ದು ನಾಲ್ಕು ಪಾದಗಳು ಸೇರಿದಾಗ ಒಂದು ಋಕ್ಕು ಎನಿಸುತ್ತದೆ. ಋಷಿ, ದೇವತೆ, ಛಂದಸ್ಸು-ಗಳ ಜ್ಞಾನವಿಲ್ಲದೆ ವೇದವನ್ನು ಅಧ್ಯಯನಮಾಡುವಂತಿಲ್ಲ ಇದು ಋಗ್ವೇದದ ಅಧ್ಯಯನಕ್ಕೆ ಕಡ್ಡಾಯವಾಗಿದೆ.

    ಛಂದಸ್ಸು ಹಾಗೂ ವೇದಗಳ ಸಂಬಂಧವು ಗಹನವಾದುದು. ಛಂದಸ್ಸಿನ ಪ್ರಯೋಗವನ್ನು ಪಾಣಿನಿಯು ಅನೇಕ ವೇಳೆ ವೇದವೆಂಬ ಅರ್ಥದಲ್ಲಿ ಬಳಸಿರುತ್ತಾನೆ. ವೇದದಲ್ಲಿನ ಪುರುಷಸೂಕ್ತದಲ್ಲಿ ಸಂಪೂರ್ಣವಾಗಿ ಹುತವಾಗಿದ್ದ ಯಜ್ಞಕುಂಡದಲ್ಲಿ ಋಕ್ಕುಗಳೂ ಹಾಗೂ ಸಾಮಗಳು ಆವಿರ್ಭವಿಸಿದವು ಎಂದು ತಿಳಿಸಿದೆ. ಛಂದಸ್ಸುಗಳ ಕ್ರಮವಾಗಿ ಆರು ಅಕ್ಷರಗಳ ಒಂದು ಪಾದದಿಂದ ಆರಂಭಿಸಿ ಹದಿಮೂರು ಅಕ್ಷರಗಳವರೆಗೂ ಇದ್ದುಕೊಂಡಿವೆ. ಅನುಷ್ಟುಪ್ ಛಂದಸ್ಸಿನಿಂದ ಮುಂದಿನ ಛಂದಸ್ಸುಗಳ ಋಕ್ಕುಗಳೆಲ್ಲವೂ ನಾಲ್ಕು ಪಾದಗಳುಳ್ಳದ್ದಾಗಿವೆ. ಈ ಏಳು ಛಂದಸ್ಸುಗಳ ಹೆಸರುಗಳು ಕ್ರಮವಾಗಿ ಹೀಗೆವೆ : 1) ಗಾಯತ್ರೀ  (2) ಉಷ್ಣಿಕ್  (3) ಅನುಷ್ಟುಪ್  (4) ಬೃಹತೀ  (5) ಪಂಕ್ತಿ  (6) ತ್ರಿಷ್ಟತ್  (7) ಜಗತೀ - ಹೀಗೆ ಛಂದಸ್ಸುಗಳ ಹೆಸರುಗಳನ್ನು ನಿರ್ದೇಶಿಸಲಾಗಿದೆ. ಗಾಯತ್ರೀ ಹಾಗೂ ಉಷ್ಣಿಕ್ ಛಂದಸ್ಸುಗಳಲ್ಲಿರುವ ಋಕ್ಕುಗಳು ಮೂರು ಪಾದಗಳುಳ್ಳದ್ದಾಗಿವೆ.

    ವೇದಮಂತ್ರಗಳ ಛಂದಸ್ಸುಗಳನ್ನು "ವರ್ಣಿಕಛಂದಸ್ಸು"ಗಳೆಂದು ಕರೆಯುತ್ತಾರೆ. ಇವು ಲಘು-ಗುರುಗಳ ಆಧಾರದ ಮೇಲೆ ರಚಿಸಲ್ಪಟ್ಟಿರುವ ಛಂದಸ್ಸುಗಳಲ್ಲ ಆದರೆ ಕೇವಲ ಅಕ್ಷರಗಳನ್ನು ಮಾತ್ರ ಎಣಿಸಲಾಗುವದು. ಅರ್ಧಾಕ್ಷರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವದಿಲ್ಲ ಗಾಯತ್ರಿಛಂದಸ್ಸಿನಲ್ಲಿ ಅನುಕ್ರಮವಾಗಿ ಮೂರು ಪಾದಗಳಲ್ಲಿಯೂ ಎಂಟು ಎಂಟರಂತೆ ಅಕ್ಷರಗಳಿರಬೇಕು ಆದರೆ ಗಾಯತ್ರಿಯ ಮೊದಲನೆಯ ಪಾದದಲ್ಲಿ ಏಳು ಅಕ್ಷರಗಳಿವೆ ಆದ್ದರಿಂದ "ತತ್ಸವಿತುರ್ವರೇಣ್ಯಂ" ಎಂಬ ಪಾದದಲ್ಲಿ "ವರೇಣ್ಯಂ" ಎಂಬುದಕ್ಕೆ ಬದಲಾಗಿ "ವರೇಣಿಯಂ" ಎಂದು ಪಠಿಸಬೇಕೆಂದು ಸೂಚಿಸಲಾಗಿದೆ. ಈ ರೀತಿಯಲ್ಲಿ ಉಚ್ಚರಿಸಿದರೆ ಎಂಟು ಅಕ್ಷರಗಳಾಗುವವು.

    ಬೃಹದಾರಣ್ಯಕೋಪನಿಷತ್ತಿನ ಆಧಾರದಂತೆ ಗಾಯತ್ರೀಮಂತ್ರವು ನಾಲ್ಕು ಪಾದಗಳುಳ್ಳದ್ದಾಗಿದೆ. ಈ ಗಾಯತ್ರಿಯಲ್ಲಿ "ಭೂಮಿರಂತರಿಕ್ಷಂ ದ್ಯೌಃ" ಎಂಬುದು ಪ್ರಥಮಪಾದವೆಂದು ಹೇಳಲಾಗಿದೆ. "ಋಚೋ ಯಜೂಂಷಿ ಸಾಮಾನಿ" ಎಂಬುದು ಎರಡನೆಯ ಪಾದವೆಂದೂ "ಪ್ರಾಣೋಪಾನೋ ವ್ಯಾನಃ" ಎಂಬುದು ತೃತೀಯ ಪಾದವೆಂದೂ "ಪರಬ್ರಹ್ಮಪರಮಾತ್ಮಾ" ಎಂಬುದೇ ಚತುರ್ಥಪಾದವೆಂದೂ ತಿಳಿಸಿರುತ್ತದೆ.

    ಗಾಯತ್ರೀಮಂತ್ರದ ಋಷಿಗಳು-ವಿಶ್ವಾಮಿತ್ರರು. ಗಾಯತ್ರೀರಹಸ್ಯೋಪ ನಿಷತ್ತಿನಲ್ಲಿ 24 ಅಕ್ಷರಗಳಿಗೂ ಒಬ್ಬೊಬ್ಬ ಋಷಿಯನ್ನು ಉಲ್ಲೇಖಿಸಿದೆ ವಿವರವು ಹೀಗಿದೆ ಪ್ರಥಮಾಕ್ಷರದ ಋಷಿ ವಸಿಷ್ಠರು ಇದರಂತೆ (2) ಭಾರದ್ವಾಜರು (3) ಗರ್ಗರು (4) ಉಪಮನ್ಯು (5) ಭೃಗು (6) ಶಾಂಡಿಲ್ಯ (7) ಲೋಹಿತ (8) ವಿಷ್ಣು (9) ಶಾತಾತಪ (10) ಸನತ್ಕುಮಾರ (11) ವೇದವ್ಯಾಸ (12)ಶುಕ (13) ಪಾರಾಶರ್ಯ (14) ಪೌಂಡ್ರಕರ್ಮ (15) ಕ್ರತು (16) ವಕ್ಷ  (17) ಕಶ್ಯಪ  (18) ಅತ್ರಿ  (19) ಅಗಸ್ತ್ಯ  (20) ಉದ್ದಾಲಕ  (21) ಅಂಗೀರಸ  (22) ನಾಮಕೇತು (23) ಮುದ್ಗಲ (24) ವಿಶ್ವಾಮಿತ್ರ - ಹೀಗೆ ಪ್ರತಿಯೊಂದು ಅಕ್ಷರಕ್ಕೂ ಋಷಿಗಳ ನಾಮನಿರ್ದೇಶವಿದೆ.

    ಶ್ರೀಮದ್ಭಾಗವತಪುರಾಣ - ಮಹಾತ್ಮೈಖಂಡದಲ್ಲಿ ಗಾಯತ್ರಿಯ ಮಹತ್ತ್ವವು ಹೊರಹೊಮ್ಮಿರುವದನ್ನು ಕಾಣಬಹುದು. ಅಲ್ಲಿರುವಂತೆ ಹದಿನಾರು ವಸ್ತುಗಳು ಪರಸ್ಪರ ಸರಿಸಮಾನವಾದವುಗಳೆಂದು ಸ್ತುತಿಸಲ್ಪಟ್ಟಿದೆ. ಅವು ಯಾವವೆಂದರೆ (1) ಓಂಕಾರ (2) ಗಾಯತ್ರೀ (3) ಪುರುಷಸೂಕ್ತ (4) ಋಕ್ - ಯಜುಸ್ - ಸಾಮವೇದಗಳು (5) ಭಾಗವತ (6) ದ್ವಾದಶಾಕ್ಷರಮಂತ್ರ (7) ದ್ವಾದಶಾತ್ಮ (ಸೂರ್ಯ) (8) ಪ್ರಯಾಗ  (9) ಸಂವತ್ಸರಾತ್ಮಕ ಕಾಲ (ಸಂವತ್ಸರಗಳು) (10) ಬ್ರಾಹ್ಮಣ (11) ಅಗ್ನಿಹೋತ್ರ (ಯಜ್ಞ) (12) ಸುರಭಿ  (13) ದ್ವಾದಶೀ ತಿಥಿ  (14) ತುಲಸೀ  (15) ವಸಂತ ಋತು  (16) ಭಗವಾನ್ ಪುರುಷೋತ್ತಮ ಇವರುಗಳು ಈ ಹದಿನಾರು ವಸ್ತುಗಳಲ್ಲಿ ವಿದ್ವಾಂಸರು ಯಾವ ರೀತಿಯ ಭೇದಭಾವವನ್ನೂ ಕಾಣುವದಿಲ್ಲ ಅವರ ದೃಷ್ಟಿಯಲ್ಲಿ ಎಲ್ಲವೂ ಸಮಾನವಾದುದು ಗಾಯತ್ರಿಯಂತೂ ಪರಮಪೂಜ್ಯವೂ ವೇದಗಳ ಸಾರವೂ ಆಗಿದೆ. ಇದರಲ್ಲಿರುವ ವಿದ್ಮಹೇ | ಧೀಮಹೀ | ಪ್ರಚೋದಯಾತ್ | ಈ ಶಬ್ದಗಳನ್ನು ಅಳವಡಿಸಿ ಇನ್ನೂ ಅನೇಕ ದೇವೀ ದೇವತೆಗಳ ಗಾಯತ್ರೀಮಂತ್ರಗಳು ರಚಿಸಲ್ಪಟ್ಟಿವೆ. ಮಹಾನಾರಾಯಣೋಪನಿಷತ್ತಿನಲ್ಲಿಯೂ ಹನ್ನೆರಡು ಗಾಯತ್ರೀಮಂತ್ರಗಳಿವೆ. ಇವುಗಳಲ್ಲದೆ ಇನ್ನೂ ಕೆಲವು ಗಾಯತ್ರೀಮಂತ್ರಗಳು ವಿದ್ವಾಂಸರುಗಳಿಂದ ರಚಿಸಲ್ಪಟ್ಟಿರುವವುಗಳೂ ಇವೆ.
ಉದಾಹರಣೆಗೆ ಕೆಲವನ್ನು ಉಲ್ಲೇಖ :
1) ದಾಶರಥಾಯ ವಿದ್ಮಹೇ ಸೀತಾವಲ್ಲಭಾಯ ಧೀಮಹಿ |
    ತನ್ನೋ ರಾಮಃ ಪ್ರಚೋದಯಾತ್ ||
2) ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ |
    ತನ್ನೋ ಹನುಮಾನ್ ಪ್ರಚೋದಯಾತ್ ||
3) ಮಹಾಲಕ್ಷ್ಯ್ಮೈ ಚ ವಿದ್ಮಹೇ ವಿಷ್ಣುಪತ್ನ್ಯೈ ಚ ಧೀಮಹಿ |
    ತನ್ನೋ ಲಕ್ಷ್ಮೀಃ ಪ್ರಚೋದಯಾತ್ ||
4) ಬ್ರಹ್ಮನಿಷ್ಠಾಯ ವಿದ್ಮಹೇ ಸಂಯಮಿಂದ್ರಾಯ ಧೀಮಹಿ |
    ತನ್ನಃ ಸಚ್ಚಿದಾನಂದಃ ಪ್ರಚೋದಯಾತ್ ||

    ಲಘುಹಾರೀತಸ್ಮೃತಿಯಲ್ಲಿರುವಂತೆ : ಬ್ರಾಹ್ಮಣರು ಗಾಯತ್ರೀಮಂತ್ರವನ್ನು ಉಚ್ಚರಿಸುತ್ತಾ ಅರ್ಘ್ಯವನ್ನು ಬಿಟ್ಟಿದ್ದರಿಂದ ಸೂರ್ಯನೊಂದಿಗೆ ಯುದ್ಧಮಾಡುತ್ತಿದ್ದ ರಾಕ್ಷಸರನ್ನು ಅದು ಮಂದೇಹಾರುಣವೆಂಬ ದ್ವೀಪಕ್ಕೆ ಒಯ್ದು ಎಸೆದುಬಿಟ್ಟಿತು ಎಂದು ಸ್ತುತಿಸಿರುತ್ತದೆ. ಒಟ್ಟಿನಲ್ಲಿ "ನ ಗಾಯತ್ರ್ಯಾಃ ಪರೋ ಮಂತ್ರಃ ನ ಮಾತುಃ ಪರದೈವತಮ್" (ಗಾಯತ್ರಿಗಿಂತ ಮಿಗಿಲಾದ ಮಂತ್ರವಿಲ್ಲ ತಾಯಿಗಿಂತ ದೊಡ್ಡ ದೇವರಿಲ್ಲ) ಎಂಬಂತೆ ಗಾಯತ್ರಿಯ ಮಹಿಮೆಯನ್ನು ಇಷ್ಟೆಂದು ವರ್ಣಿಸಲಾಗುವದಿಲ್ಲ. ಗಾಯತ್ರಿಯು ಸಂಪೂರ್ಣವೇದಗಳ ಜನನಿಯಾಗಿದ್ದಾಳೆ. ಬಲ್ಲವರು ಗಾಯತ್ರೀಮಂತ್ರದ ಮೂಲಕ ಸೃಷ್ಟಿಕರ್ತನೂ ಸ್ಥಿತಿಕರ್ತನೂ ಆದ ಪರಮಾತ್ಮನ ಚಿನ್ಮಯತೇಜಸ್ಸನ್ನು ಧ್ಯಾನಿಸುತ್ತಾರೆ. ಇದು ಎಲ್ಲಾ ಬುದ್ಧಿಗಳ ಸಾಕ್ಷಿಯಾಗಿರುತ್ತದೆ ಹೀಗೆ ಗಾಯತ್ರೀಮಂತ್ರವು ವೇದ ಹಾಗೂ ಭಾರತೀಯ ಸಂಸ್ಕೃತೀಯ ಪ್ರಾಣವೇ ಆಗಿದೆ ಎಂಬುದು ಬಲ್ಲವರ ಅಭಿಪ್ರಾಯ.

 

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ