ನಃ ಪ್ರಯಚ್ಛನ್ತು ಸೌಖ್ಯಮ್

     ರುದ್ರರು ಅನೇಕರೊ, ಒಬ್ಬನೊ? ಎಂಬ ಸಂಶಯವು ಬರುವದು ಸ್ವಾಭಾವಿಕವಾಗಿದೆ. ಏಕೆಂದರೆ ವೇದದಲ್ಲಿ ಒಂದುಕಡೆ 'ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ರುದ್ರನು ಒಬ್ಬನೇ - ಎಂದು ಸ್ತುತಿಸಿದೆ. ಮತ್ತೊಂದು ಕಡೆ 'ಸಹಸ್ರಾಣಿ ಸಹಸ್ರಶೋ ಯೇ ರುದ್ರಾಃ' ಎಂದು ರುದ್ರರು ಅನಂತಸಂಖ್ಯಾಕರು ಎಂದು ಹೇಳಿದೆ. ಪುರಾಣಗಳಲ್ಲಿ ದೇವತೆಗಳನ್ನು ಪಟ್ಟಿಮಾಡುವಾಗ 'ಏಕಾದಶರುದ್ರರು' - ಎಂದು ಹನ್ನೊಂದು ಜನರೆಂತ ಗೊತ್ತುಮಾಡಲಾಗಿದೆ. ಇವುಗಳಿಗೆಲ್ಲ ಏಕವಾಕ್ಯತೆಯು ಹೇಗೆ? ಎಂಬುದನ್ನು ವಿಚಾರಿಸೋಣ.
     ಜಗತ್ ಸೃಷ್ಟಿಕ್ರಮವನ್ನು ವರ್ಣಿಸುವಾಗ ಪುರಾಣಗಳಲ್ಲಿ ಹೀಗಿದೆ : 'ಬ್ರಹ್ಮನ ಕೋಪದಿಂದ ರುದ್ರನು ಅವತರಿಸಿದನು. ಸೃಷ್ಟಿಕರ್ಮದಲ್ಲಿ ಸಹಕರಿಸಬೇಕೆಂದು ಬ್ರಹ್ಮನು ರುದ್ರನಿಗೆ ತಿಳಿಸಿದಾಗ ರುದ್ರನು ತನ್ನಂತೆಯೇ ಶರೀರ, ವೇಷ, ಭೂಷಣಗಳು, ಬಲ, ಮರಣವಿಲ್ಲದಿರುವಿಕೆ - ಮುಂತಾದ ಧರ್ಮಗಳಿಂದ ಕೂಡಿದ ಸಹಸ್ರಾರು ರುದ್ರರನ್ನು ಸೃಷ್ಟಿಸಿಬಿಟ್ಟನು. ಆಗ ಬ್ರಹ್ಮನು ನೋಡಿ ಈ ರುದ್ರನ ಸೃಷ್ಟಿಯು ಹೀಗೆಯೇ ಮುಂದುವರೆದುಬಿಟ್ಟರೆ ಎಲ್ಲರೂ ಅಮರರೇ ಆಗಿಬಿಡುವದರಿಂದ ಬ್ರಹ್ಮಾಂಡದಲ್ಲಿ ಜಾಗವಿಲ್ಲದೆಹೋಗುವದು ನಿಶ್ಚಯ- ಎಂತ ಭಾವಿಸಿ ಇನ್ನುಮುಂದೆ ಸೃಷ್ಟಿಮಾಡಕೂಡದೆಂದೂ ಈವರೆಗೆ ಸೃಷ್ಟರಾಗಿರುವ ರುದ್ರರಿಗೆ ಬ್ರಹ್ಮಾಂಡದಲ್ಲಿ ಬೇರೆಬೇರೆಯ ಸ್ಥಾನಗಳನ್ನು ಕಲ್ಪಿಸುವದಾಗಿಯೂ ತಿಳಿಸಿದನು. ಅದರಂತೆ ರುದ್ರರನ್ನು ಜಗತ್ತಿನಲ್ಲೆಲ್ಲ ಹರಡಿಬಿಟ್ಟನು. ಹೀಗೆ ರುದ್ರನಿಂದಲೇ ಉತ್ಪನ್ನರಾದ ರುದ್ರರು ಇಡಿಯ ಬ್ರಹ್ಮಾಂಡವನ್ನೆಲ್ಲ ವ್ಯಾಪಿಸಿಕೊಂಡು ಎಲ್ಲೆಲ್ಲಿಯೂ ಇದ್ದುಕೊಂಡಿರುತ್ತಾರೆ.'
     ಈ ವರ್ಣನೆಯಿಂದ ತಿಳಿಯುವದೇನೆಂದರೆ : ರುದ್ರನು ಒಬ್ಬನೇ ಆದರೂ ಮೂರ್ತಿಭೇದದಿಂದ ಅನೇಕರಾಗಿ ತೋರಿಕೊಂಡಿರುತ್ತಾನೆ. ವಿಶೇಷವಾಗಿ ಜಗತ್ತಿನ ಲಯಕಾರ್ಯದಲ್ಲಿ ಈತನು ನೇಮಿಸಲ್ಪಟ್ಟಿರುತ್ತಾನೆಂದು ತಿಳಿಯುತ್ತದೆ. ಆದ್ದರಿಂದ ಶ್ರುತಿಯಲ್ಲಿ ಏಕನೆಂದೂ ಅನೇಕನೆಂದೂ ದೃಷ್ಟಿಭೇದದಿಂದ ಹೊಗಳಿರುವದು ಸೂಕ್ತವೇ ಆಗಿದೆ. ಇಂಥ ರುದ್ರನು ಅಷ್ಟಮೂರ್ತಿರೂಪನಾಗಿ ಅನೇಕನಾಮರೂಪೋಪಾಧಿಗಳಿಂದ ಪ್ರಪಂಚವನ್ನೆಲ್ಲ ವ್ಯಾಪಿಸಿಕೊಂಡಿರುವದರ ಮಹಿಮೆಯನ್ನು ರುದ್ರಾಧ್ಯಾಯವು ಚೆನ್ನಾಗಿ ವಿವರಿಸಿ ತಿಳಿಸುತ್ತದೆ.
     ಪ್ರಪಂಚದ ಸೃಷ್ಟಿ, ಸ್ಥಿತಿ, ಲಯ - ಎಂಬ ಕಾರ್ಯಗಳ ಅಪೇಕ್ಷೆಯಿಂದ ಒಬ್ಬ ಭಗವಂತನೇ ಮೂರು ರೂಪವಾಗಿ ತೋರಿಕೊಳ್ಳುವದರಿಂದ ಮೂಲತಃ ಭಗವಂತನೆಂಬುವನು ತ್ರಿಮೂರ್ತಿಗಳೆಂಬ ಉಪಾಧಿಗಳನ್ನೂ ಮಿರಿದ ಪರಬ್ರಹ್ಮವೇ ಆಗಿರುತ್ತಾನೆ. ಈ ಅರ್ಥದಲ್ಲಿ ರುದ್ರನೊಬ್ಬನೇ ; ಅವನೇ ಪರಮೇಶ್ವರನು, ಸರ್ವಜ್ಞನು, ಶಿವನು - ಎಂದು ವೇದಗಳು ಸ್ತುತಿಸಿವೆ. ಹೀಗೆ ರುದ್ರನ ಸ್ವರೂಪವನ್ನು ನಾವು ಅರಿತುಕೊಳ್ಳಬೇಕು. ಪ್ರಕೃತದಲ್ಲಿ ರುದ್ರನು ತನ್ನ ಮಹಿಮೆಯನ್ನು ನಾನಾರೂಪಗಳಿಂದ ಪ್ರಕಟಿಸಿಕೊಂಡು ಸಹಸ್ರಾರು ರುದ್ರರ ರೂಪನಾಗಿ ತೋರಿಕೊಂಡಿರುವ ವಿಭೂತಿಯು ನಿರತಿಶಯವಾದುದು. ಇಂಥ ರುದ್ರರುಗಳನ್ನು ಕುರಿತು ಈ ಧ್ಯಾನಶ್ಲೋಕವನ್ನು ನೋಡಿರಿ :
ಬ್ರಹ್ಮಾಂಡವ್ಯಾಪ್ತದೇಹಾ ಭಸಿತಹಿಮರುಚಾ ಭಾಸಮಾನಾ ಭುಜಙ್ಗೈಃ |
ಕಂಠೇ ಕಾಲಾಃ ಕಪರ್ದಾಃ ಕಲಿತಶಶಿಕಲಾಶ್ಚಣ್ಡಕೋದಣ್ಡಹಸ್ತಾಃ ||
ತ್ರ್ಯಕ್ಷಾ ರುದ್ರಾಕ್ಷಭೂಷಾಃ ಪ್ರಣತಭಯಹರಾಃ ಶಾಂಭವಾ ಮೂರ್ತಿಭೇದಾತ್ |
ರುದ್ರಾಃ ಶ್ರೀರುದ್ರಸೂಕ್ತಪ್ರಕಟಿತವಿಭವಾ ನಃ ಪ್ರಯಚ್ಛನ್ತುಸೌಖ್ಯಮ್ ||
     ರುದ್ರಸೂಕ್ತದಲ್ಲಿ ಪ್ರಕಟಿಸಲ್ಪಟ್ಟ ಮಹಿಮೆಯುಳ್ಳ ರುದ್ರರು ನಮಗೆ ಸೌಖ್ಯವನ್ನುಂಟುಮಾಡಲಿ! ಎಂದು ಇಲ್ಲಿ ಪ್ರಾರ್ಥಿಸಿದೆ. ಎಂಥ ರುದ್ರರು ? ಎಂದರೆ ಬ್ರಹ್ಮಾಂಡವನ್ನೆಲ್ಲ ವ್ಯಾಪಿಸಿಕೊಂಡಿರುವ ಶರೀರವುಳ್ಳವರು. ಪಂಚ ಭೂತಗಳೂ ನಕ್ಷತ್ರಾದಿಗಳೂ ಹದಿನಾಲ್ಲು ಲೋಕಗಳೂ ಎಲ್ಲವೂ ರುದ್ರರ ವಾಸ ಸ್ಥಾನಗಳೇ ಆಗಿವೆ. ಮತ್ತು ರುದ್ರರು ಹಿಮದಂತೆ ಬಿಳುಪಾದ ವಿಭೂತಿಯಿಂದಲೂ ಹಾವುಗಳಿಂದಲೂ ಅಲಂಕೃತರಾದವರು, ಕಂಠದಲ್ಲಿ ಕಪ್ಪುಳ್ಳವರು, ಜಟಾಜೂಟವನ್ನು ಧರಿಸಿದವರು, ಮತ್ತು ಮೌಳಿಯಲ್ಲಿ ಚಂದ್ರಕಲೆಯನ್ನುಳ್ಳವರು, ತೀಕ್ಷ್ಣವಾದ ಬಿಲ್ಲುಗಳನ್ನು ಹಿಡಿದಿರುವ ಕೈಗಳುಳ್ಳವರು, ಮುಕ್ಕಣ್ಣರು, ರುದ್ರಾಕ್ಷಿಯ ಆಭರಣಗಳುಳ್ಳವರು, ನಮಸ್ಕಾರಮಾಡಿದವರನ್ನು ಭಯದಿಂದ ಪಾರುಮಾಡುವವರು, ಶಂಭುವಿನ ಅವತಾರರೂಪರು, ಶರೀರಗಳಿಂದ ಭಿನ್ನರಾಗಿ ಕಂಡರೂ ಎಲ್ಲರೂ ಶಂಭುಸ್ವರೂಪರೇ; ಇಂಥ ರುದ್ರರು ನಮಗೆ ಸೌಖ್ಯವನ್ನುಂಟುಮಾಡಲಿ! - ಎಂದು ಇಲ್ಲಿ ಪ್ರಾರ್ಥಿಸಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ