ದೀಪಾವಳಿ-ಗೀತಾಜಯಂತಿ

    ಪ್ರತಿವರ್ಷವೂ ಕಾರ್ತಿಕಮಾಸದಲ್ಲಿ ದೀಪಾವಳಿಯು ಬರುತ್ತದೆ. ಮಾರ್ಗಶೀರ ಮಾಸದಲ್ಲಿ ಗೀತಾಜಯಂತಿಯು ಬರುತ್ತದೆ. ದೀಪಾವಳಿಯನ್ನು ಬಹು ಮಟ್ಟಿಗೆ ಎಲ್ಲರೂ ಅನುಷ್ಠಿಸುತ್ತಾರೆ. ಆಗ್ಗೆ ಅಭ್ಯಂಗನಸ್ನಾನ, ಹೊಸಬಟ್ಟೆಗಳನ್ನು ಉಡುವದು, ಪಟಾಕಿಗಳನ್ನು ಸುಡುವದು, ಬಂಧು-ಮಿತ್ರರೊಡನೆ ಕಲೆತು ಮೃಷ್ಟಾನ್ನಭೋಜನಮಾಡುವದು ಮುಂತಾದವುಗಳನ್ನು ಜನರು ಆಚರಿಸುತ್ತಾರೆ, ಪತ್ರಿಕಾಪ್ರಪಂಚದವರು 'ವಿಶೇಷಾಂಕ'ಗಳನ್ನು ಹೊರಡಿಸಿ ಜನರನ್ನು ಆಕರ್ಷಿಸುತ್ತಾರೆ. ವಿದ್ಯುಚ್ಛಕ್ತಿಯ ವಿವಿಧವಾದ ದೀಫಗಳನ್ನು ಬೆಳಗಿಸಿ ಕೆಲವರು ತಮ್ಮ ಗೃಹಗಳನ್ನೂ ದೇವಾಲಯ- ಸಭಾಮಂದಿರಗಳನ್ನೂ ಅಲಂಕರಿಸುತ್ತಾರೆ. ಆದರೆ ಅನಂತರ ಪ್ರಾಪ್ತವಾಗುವ 'ಗೀತಾಜಯಂತಿ'ಯನ್ನು ಮಾತ್ರ ಎಲ್ಲಿಯೋ ಕೆಲವರು ನಡೆಯಿಸುತ್ತಾರೆ. ಜಹುಜನರಿಗೆ ಗೀತಾಜಯಂತಿ ಎಂಬ ಹಬ್ಬಮೊಂದಿದೆ ಎಂಬುದೇ ತಿಳಿದಿಲ್ಲ. ಪತ್ರಿಕೆಗಳವರು ಎಲ್ಲಾ ವಿಧವಾದ ಜಾಹಿರಾತುಗಳು, ಕಥೆಗಳು, ನಾಟಕ, ವಿಡಂಬನೆ, ರಾಜಕೀಯ, ವರ್ಷಬವಿಷ್ಯ, ಸಿನೆಮ-ಕ್ರೀಡಾಸುದ್ದಿಗಳು ಮುಂತಾದ ವಿಪುಲ ಸಾಹಿತ್ಯವನ್ನು ಪ್ರಕಟಿಸಿ ಪ್ರಚಾರಮಾಡುತ್ತಾರಾದರೂ 'ಯಾವ ವಿಶೇಷಸಂಚಿಕೆಯಲ್ಲೂ - ಅದು ಎಷ್ಟೇ ಗಾತ್ರದ್ದಿರಲಿ ಅರ್ಧ ಪುಟದಷ್ಟು ಕೂಡ ಗೀತೆಯ ವಿಚಾರಗಳಿರುವದಿಲ್ಲ ಅಧ್ಯಾತ್ಮವಿದ್ಯಾಪೀಠಗಳಾದ ಮಠಗಳಲ್ಲಿ ಕೂಡ ವಿನಾಯಕಚತುರ್ಥಿ, ಶಂಕರಜಯಂತಿ, ಶರನ್ನವರಾತ್ರಿ, ಮಧ್ವನವಮಿ, ತಿರುನಕ್ಷತ್ರಗಳಲ್ಲಿ ಉತ್ಸವಗಳು ನಡೆಯುವಂತೆ ಗೀತಾಜಯಂತಿ ಉತ್ಸವವು ವೈಭವದಿಂದ ನಡೆಯುವ ಸುದ್ಧಿಗಳು ಕೇಳಬರುತ್ತಿಲ್ಲ ಬಹಳ ಊರುಗಳಲ್ಲಿ ಸಾರ್ವಜನಿಕವಾಗಿ ವೈಭವಯುತವಾಗಿ ಲಕ್ಷಾಂತರರೂಪಾಯಿಗಳ ವೆಚ್ಚದಿಂದ ಆಚರಿಸುವ ಗಣಪತಿಯ ಉತ್ಸವಗಳೊಡನೆ ಹೋಲಿಸಿದರೆ ಗೀತಾಜಯಂತಿಯೆಂಬುದು ಕೆರೆಯ ನೀರಿನಲ್ಲಿ ಒಂದು ಬಿಂದುವಿನಷ್ಟಾದೀತು.
    ಕಾರ್ತಿಕಮಾಸದ ದೀಪಾವಳಿಯನ್ನು ಜನರು ಈಗ ಆಚರಿಸುವದಕ್ಕಿಂತಲೂ ಇನ್ನೊಂದು ವಿಲಕ್ಷಣರೀತಿಯಿಂದ ಆಚರಿಸಬೇಕಾದದ್ದು ಅವಶ್ಯವಾಗಿರುತ್ತದೆ. ಪ್ರಾಯಶಃ ಹಾಗೆ ಆಚರಿಸಿದ್ದರೆ ಗೀತಾಜಯಂತಿಯು ನೆನಪಾಗುತ್ತಿತ್ತೇನೊ? ಎನಿಸುತ್ತದೆ ಹೇಗೆಂದರೆ ನರಕಚತುರ್ದಶಿಯ ದಿನ ಅಜ್ಞಾನನರಕಾಸುರನ ಸಂಹಾರವಾದದ್ದರ ನೆನಪಾಗಿ ಭಕ್ತಿಯ ಎಣ್ಣೆಯನ್ನು ಸವರಿಕೊಂಡು ಅಭ್ಯಂಜನ ಮಾಡಿಕೊಂಡು ಕಾಮಕ್ರೋಧಗಳೆಂಬ ಪಟಾಕಿಗಳನ್ನು ಸುಟ್ಟು ಜ್ಞಾನದೀಫದ ಕುರುಹಾಗಿ ದೀಪಾವಳಿಯನ್ನು ಬೆಳಗಿ ಆಚರಿಸಬೇಕಾಗಿತ್ತು ಆಗ್ಗೆ ಭಗವದ್ಗೀತೆಯ ನೆನಪು ಬರುತ್ತಿತ್ತು ಈಗಲಾದರೂ ದೀಪಾವಳಿಯನ್ನು ಈ ಕ್ರಮದಲ್ಲಿ ಮತ್ತೊಮ್ಮೆ ಆಚರಿಸಿ ಬರಲಿರುವ ಗೀತಾಜಯಂತಿಯನ್ನು ಸ್ವಾಗತಿಸೋಣ.
    ಭಗವದ್ಗೀತೆಯನ್ನು ಭಗವಂತನು ಅರ್ಜುನನ ಶೋಕಮೋಹಗಳನ್ನು ಕಳೆಯುವದಕ್ಕಾಗಿ ಉಪದೇಶಿಸಿದ್ದಾನೆಂದು ಶ್ರೀಶಂಕರಾಚಾರ್ಯರು ಅಭಿಪ್ರಾಯ ಪಟ್ಟಿರುತ್ತಾರೆ. ಇದಕ್ಕೆ ಗೀತೆಯಲ್ಲಿ ಆಧಾರವಿದೆಯೆ? ಎಂದು ವಿಚಾರಮಾಡುವಾಗ ಈ ಶ್ಲೋಕವು ನಮ್ಮ ಮುಂದೆ ನಿಲ್ಲುತ್ತದೆ.
   
ನ ಹಿ ಪ್ರಪಶ್ಯಾಮಿ ಮಮಾಪನುದ್ಯಾತ್-
ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್ |
ಅವಾಪ್ಯ ಭೂಮಾವಸಪತ್ನ ಮೃದ್ಧಂ
ರಾಜ್ಯಂ ಸುರಾಣಾಮಪಿ ಚಾಧಿಪತ್ಯಮ್ ||

    "ಶತ್ರುಗಳಿಲ್ಲದ ಹಾಗೂ ಸಂಪತ್ಸಮೃದ್ಧವಾದ ರಾಜ್ಯವನ್ನಾಗಲಿ, ದೇವತೆಗಳ ಮೇಲಿನ ಒಡೆತನವನ್ನಾಗಲಿ ಪಡೆದುಕೊಂಡಮೇಲೂ ನನ್ನ ಇಂದ್ರಿಯಗಳನ್ನು ಸೋರಗಿಸುತ್ತಿರುವ ಶೋಕವನ್ನು ಯಾವದು ಹೋಗಲಾಡಿಸೀತೋ ಕಾಣೆನು" ಎಂಬೀ ಅರ್ಜುನನ ವಾಕ್ಯದಲ್ಲಿ ಆತನನ್ನು ಬಹಳವಾಗಿ ಪೀಡಿಸುತ್ತಿರುವದೇ ಶೋಕವೆಂಬುದು ಸ್ಪಷ್ಟವಾಗಿದೆ. ಶೋಕಕ್ಕೆ ಮೂಲವು ಯಾವದೆಂದು ಹುಡುಕಿದಾಗ ಮೋಹವು - ಎಂದು ಗೊತ್ತಾಗುವದು ಮೋಹಪರಿಹಾರಕ್ಕೆ ಜ್ಞಾನೋಪ ದೇಶವು ಪರಮೌಷಧವು - ಎಂಬಿದೂ ಪ್ರಸಿದ್ಧವು ಆದ್ದರಿಂದ ಶ್ರೀ ಶಂಕರರ ಅಭಿಪ್ರಾಯವು ಮೂಲಾನುಸಾರಿ ಎಂದು ಸಿದ್ಧವಾಗುತ್ತದೆ.
    ಇಂಥ ಶೋಕಮೋಹಗಳ ಅಪನಯನಕ್ಕಾಗಿ ಜ್ಞಾನದೀಪವನ್ನು ಬೆಳಗುವದಾಗಿ ಭಗವಂತನು ಬಾಯಿಬಿಟ್ಟು ಹೇಳಿರುವ ಸಂದರ್ಭವನ್ನೂ ನೋಡೋಣ. ಗೀತೆಯ 10ನೆಯ ಅಧ್ಯಾಯನ 11ನೆಯ ಪದ್ಯದಲ್ಲಿ ಅದರ ಪ್ರಸ್ತಾಪವಿದೆ. ಆ ಶ್ಲೋಕವನ್ನು ಕೇಳಿರಿ :
   
ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ |
ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ ||
    "ನಾನು ಅಜ್ಞಾನವೆಂಬ ಕತ್ತಲೆಯನ್ನು ಕಳೆಯಲು ಭಕ್ತರಮೇಲಿನ ಅನುಕಂಪದಿಂದ ಅವರ ಅಂತಃಕರಣದಲ್ಲಿಯೇ ಇದ್ದುಕೊಂಡವನಾಗಿ ಪ್ರಕಾಶಮಾನವಾದ ಜ್ಞಾನದೀಪವನ್ನು ಬೆಳಗುವೆನು - ಎಂದು ಭಗವಂತನು ಇಲ್ಲಿ ತಿಳಿಸಿರುತ್ತಾನೆ. ಶ್ರೀ ಶಂಕರಾಚಾರ್ಯರು ಜ್ಞಾನದೀಪವನ್ನು ಕುರಿತು ಹೀಗೆ ವ್ಯಾಖ್ಯಾನಮಾಡಿದ್ದಾರೆ. "ವಿರಕ್ತಿ ಎಂಬ ಹಣತೆಯಲ್ಲಿ ಭಕ್ತಿ ಎಂಬ ಎಣ್ಣೆಯನ್ನು ಹಾಕಿ, ಬ್ರಹ್ಮಚರ್ಯಾದಿ ಸಾಧನಗಳೆಂಬ ಬತ್ತಿಯನ್ನು ಅದರಲ್ಲಿ ನೆನೆಯಿಸಿಟ್ಟು ಭಗವದ್ಭಾವನೆ ಎಂಬ (ದೀಪವು ಉರಿಯಲು ಸಹಾಯಕವಾದ ) ಗಾಳಿಯಿಂದ ಕೂಡಿದ, ವಿಷಯಗಳ ಚಿಂತನೆಯೆಂಬ ಬಿರುಗಾಳಿಯಿಲ್ಲದ ಅಂತಃಕರಣವೆಂಬ ಗೂಡಿನಲ್ಲಿರುವ ಜ್ಞಾನದೀಫವನ್ನು ಭಗವಂತನು ಬೆಳಗುತ್ತಾನೆ." ಈ ದೀಪಾವಳಿಯು ಯಾರ ಹೃದಯದಲ್ಲಿ ಬೆಳಗಲ್ಪಡುವದೋ, ಅಂಥವರು ಭಗವದ್ಗೀತಾಜಯಂತಿಯನ್ನು ಆಚರಿಸಿದಂತೆಯೇ ಎಂದು ತಿಳಿಯಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ