ಸರಸ್ವತೀ ವ್ರತ

    ವ್ರತವಿವೇಕದಂತೆ ಪೂಜೆಯನ್ನು ಪುಸ್ತಕಮಂಡಲದಲ್ಲಿ ಆಶ್ವಯುಜ ಶುಕ್ಲ ಪಕ್ಷದಲ್ಲಿ ಮೂಲಾನಕ್ಷತ್ರದ ದಿನ ಮಾಡಬೇಕೆಂದು ಹೇಳಿದೆ. ಜಗನ್ಮೂಲಳಾದ ಪ್ರಕೃತಿಮಾತೆಯೇ ಸರಸ್ವತಿಯೆಂದು ತಿಳಿಸಲು ಈ ನಕ್ಷತ್ರವನ್ನು ಪೂಜೆಗೆ ಹೇಳಿರಬಹುದು. ಆ ದಿನದಿಂದ ನಾಲ್ಕು ದಿನಗಳು ದೇವೀಪೂಜೆಗೆ ಪ್ರಶಸ್ತವೆಂದೂ ತಿಳಿಸಿದೆ. ಶ್ರವಣನಕ್ಷತ್ರದ ಕೊನೆಯಲ್ಲಿ ವಿಸರ್ಜನೆಮಾಡಬೇಕೆಂಬುದು ನಿಯಮವು. ಪುಸ್ತಕಮಂಡಲದಲ್ಲಿ ಸದಾಕಾಲವೂ ದೇವಿಯ ಸಾನ್ನಿಧ್ಯವಿದ್ದೇ ಇರುತ್ತದೆ. ಪೂಜೆಗಾಗಿ ಮಾತ್ರ ನಾವು ಆಗ್ಗೆ ಭಾವನೆಮಾಡಿಕೊಳ್ಳಬೇಕಾಗಿದೆ. ಹಿಂದಿನ ಕಾಲಕ್ಕೆ ಸೂತಿಕಾಗೃಹದಿಂದ 11ದಿನ ಶಿಶುವಿಗೆ ಸ್ನಾನಮಾಡಿಸಿ ಒಳಕ್ಕೆ ಕರೆದು ಕೊಂಡಾಗ ಮೊರದಲ್ಲಿ ಮಲಗಿಸಿ ತಲೆದಿಂಬಿನಂತೆ ಒಂದು ಪುಸ್ತಕವನ್ನು ಮಸ್ತಕದ ಸಮಿಪದಲ್ಲಿಡುತ್ತಿದ್ದರು, ಈಗಿನ ನಾಗರಿಕತೆಯ ಪ್ರಭಾವದಿಂದ ಇದು ಲೋಪವಾಗಿದೆ, ಈ ಆಚರಣೆಗೆ ಮಗುವು ವಿದ್ಯಾವಂತನಾಗಲೆಂಬುದೇ ಹಿಂದಿನವರ ಉದ್ದೇಶವಾಗಿರಬೇಕು ಇರಲಿ, ಹೀಗೆ ಪುಸ್ತಕಮಂಡಲದಲ್ಲಿ ಕುರಿತ ದಿನದಲ್ಲಿ ದೇವಿಯನ್ನು ಆವಾಹಿಸಿ ಪೂಜಿಸಬೇಕು, ಪೂಜಾದ್ರವ್ಯಗಳ ಸಂಖ್ಯೆಯು ಎಲ್ಲವೂ ಹದಿನಾಲ್ಕು ಇರಬೇಕೆಂದು ವಿಧಿಸಿದೆ, ಹದಿನಾಲ್ಕು ವಿದ್ಯೆಗಳಲ್ಲಿ ನಿಪುಣನಾದವನನ್ನು ಚತುರ್ದಶವಿದ್ಯಾಪಾರಂಗತನೆನ್ನುವರು. ಸರಸ್ವತಿಯ ಆರಾಧಕನಿಗೆ ಈ ಫಲವುಂಟಾಗಲು ಹೀಗೆ ವಿಧಿಸಿದೆ. ಈಗ ದೇವಿಯ ಧ್ಯಾನಶ್ಲೋಕವನ್ನು ನೋಡೋಣ.
ವಿದ್ಯಾತ್ಮಾನಮಶೇಷಲೋಕಜನನೀಂ ದೇವೀಮಿಮಾಮಿಷ್ಟದಾಂ
ಇಚ್ಚಾಕಲ್ಪಿತಭೂಷಣಾಂ ತ್ರಿಣಯನಾಂ ವಂದೇನವದ್ಯಾಂ ಸದಾ |
ಭಕ್ತ್ಯಾನಮ್ರಸುರಾಸುರೇಂದ್ರಮಕುಟಪ್ರತ್ಯುಪ್ತರತ್ನಾಂಕುರ-
ಚ್ಛಾಯಾರಂಜಿತ ಪಾದಪೀಠಯುಗಳಾಮಿಷ್ಟಾರ್ಥಸಂದಾಯಿನೀಮ್ ||
    "ಸಮಸ್ತಲೋಕಕ್ಕೂ ತಾಯಿಯಾದ, ಇಷ್ಟಾರ್ಥಪ್ರದಳಾದ, ಸಂಕಲ್ಪಸಿದ್ಧವಾದ ಆಭರಣಗಳಿಂದ ಅಲಂಕೃತಳಾದ, ಮೂರು ಕಂಗಳುಳ್ಳವಳಾದ, ದೋಷ ರಹಿತಳಾದ, ಹಾಗೂ ಭಕ್ತಿಯಿಂದ ನಮಸ್ಕರಿಸುತ್ತಿರುವ ದೇವರಾಕ್ಷಸಾದಿಗಳ ಕಿರೀಟಗಳಲ್ಲಿ ಮೆಟ್ಟಲ್ಪಟ್ಟಿರುವ ರತ್ನಗಳ ಕಾಂತಿಯ ನೆರಳಿನಿಂದ ವಿರಾಜಮಾನವಾದ ಪಾದಪೀಠವುಳ್ಳ, ದೇವಿಯನ್ನು ನಮಸ್ಕರಿಸುವೆನು."
    ಈ ಪದ್ಯವು ವ್ರತಚೂಡಾಮಣಿಯಲ್ಲಿದೆ. ಈ ಶ್ಲೋಕವು ಪಠನಕ್ಕೆ ಕಷ್ಟವಾಗಬಹುದೆಂತ ಭಾವಿಸುವವರು ಜನಪ್ರಿಯವಾಗಿರುವ ಯಾವದಾದರೂ ಸುಲಭವಾದ ಶ್ಲೋಕದಿಂದಲೇ ಪೂಜಿಸಬಹುದು. 'ಓಂ ಸರಸ್ವತ್ಯೈ ನಮಃ' ಎಂಬ ನಾಮಮಂತ್ರದಿಂದಲೇ ಎಲ್ಲಾ ಉಪಚಾರಗಳನ್ನೂ ಅರ್ಪಿಸಬಹುದು ದೇವಿಯ ಅಷ್ಟೋತ್ತರ ಶತನಾಮಗಳನ್ನು ವ್ರತಗ್ರಂಥದಲ್ಲಿ ಕೊಟ್ಟಿದ್ದಾರೆ. ಆ ನಾಮಗಳಿಂದಲೂ ಅರ್ಚಿಸಬಹುದು ಪೂಜೆಯ ಪೂರೈಸಿದ ಅನಂತರ ಮಾಡಬೇಕಾದ ಪ್ರಾರ್ಥನಾ ಸಂದರ್ಭಕ್ಕಾಗಿ ಕೊಟ್ಟಿರುವ ಶ್ಲೋಕವೊಂದು ಮನನೀಯವಾಗಿದೆ. ಅದನ್ನು ಇಲ್ಲಿ ಕೊಡಲಾಗಿದೆ :-
ಅಂತರ್ವ್ಯಾಪ್ಯ ಬಹಿಶ್ಚ ವಿಶ್ವಮನಿಶಂ ಲೋಕೇ ಸ್ವಶಕ್ತ್ಯಾ ಸ್ಥಿತಂ |
ಆವಿರ್ಭೂತ ಸಮಸ್ತ ಲೋಕಜನನತ್ರಾಣಕ್ಷಮಾಪ್ರಕ್ರಿಯಾಮ್ ||
ದೇವೀಂ ವಾಚಮುಪಾಸ್ಮಹೇ ತ್ರಿಣಯನಾಮಾಮ್ನಾಯಪಾರೇ ಸ್ಥಿತಾಂ |
ಭಾಸ್ವನ್ಮೌಕ್ತಿಕಹಾರರಂಜಿತಕುಚಾಭೋಗಶ್ರಿಯಂ ಸಂತತಮ್ ||
    "ತನ್ನ ಶಕ್ತಿಯಿಂದ ಜಗತ್ತನ್ನು ಒಳಗೂ ಹೊರಗೂ ಸದಾ ವ್ಯಾಪಿಸಿಕೊಂಡು ಇರುವವಳಾದ, ಹಾಗೂ (ಭಗವಂತನ ಸಂಕಲ್ಪದಿಂದ) ಹೊರತೋರಿದ ಸಮಸ್ತ ಲೋಕಗಳ ಸೃಷ್ಟಿ ಕಾಪಾಡುವಿಕೆಗಳ ಕಾರ್ಯದಲ್ಲಿ ಸಮರ್ಥಳಾದ, ಮೂರು ಕಂಗಳುಳ್ಳ, ವೇದಶಾಸ್ತ್ರಗಳ ಪರಿಧಿಯನ್ನು ಮಿರಿ ನಿಂತಿರುವ, ಮತ್ತು ಹೊಳೆಯುತ್ತಿರುವ ಮುತ್ತಿನ ಹಾರವನ್ನು ಕಂಠದಲ್ಲಿ ಧರಿಸಿದ್ದರಿಂದ ಕಾಂತಿಯುಕ್ತವಾಗಿರುವ ವಕ್ಷಸ್ಥಳವುಳ್ಳ ವಾಗ್ದೇವಿಯನ್ನು ನಾವು ಯಾವಾಗಲೂ ಚಿಂತಿಸುತ್ತೇವೆ"
    ಈ ಪದ್ಯದಲ್ಲಿ ವಾಗ್ದೇವಿಯೆಂದು ಸರಸ್ವತಿಯನ್ನು ಹೆಸರಿಸಿದೆ, ವೇದಮಂತ್ರಗಳಲ್ಲಿ ಸರಸ್ವತೀ, ವಾಗ್ದೇವೀ-ಎಂಬೆರೆಡು ಶಬ್ದಗಳ ಪ್ರಯೋಗಗಳೂ ಕಂಡುಬಂದಿದೆ. ಈಗ ವಾಗ್ದೇವಿಯೆಂಬ ಹೆಸರಿನ ವೈಶಿಷ್ಟ್ಯವೇನೆಂದು ವಿಚಾರಮಾಡೋಣ. ವಾಕ್ ಎಂದರೆ ಮಾತು ಇದು ಧ್ವನ್ಯಾತ್ಮಕ ವರ್ಣಾತ್ಮಕ ಎಂದು ಎರಡು ವಿಧವಾಗಿದೆ. ಪ್ರಾಣಿಗಳಿಗೆಲ್ಲ ಧ್ವನಿಯೊಂದೇ ವಾಕ್ಕು ಅವು ಅಷ್ಟರಿಂದಲೇ ತಮ್ಮ ಹರ್ಷ-ವಿಷಾದಾದಿಗಳನ್ನು ಪ್ರಕಟಿಸಬೇಕಾಗಿದೆ. ಮನುಷ್ಯರಿಗೆ ಮಾತ್ರ ವರ್ಣಾತ್ಮಕ ವಾಕ್ಕುಸ್ಫುಟವಾಗಿ ಇದ್ದು ಕೊಂಡಿರುವದು. ಇದು ಅನೇಕ ಭಾಷೆಗಳು, ಶಾಸ್ತ್ರಗಳ ರೂಪವಾಗಿ ಹರಡಿಕೊಂಡಿದೆ. ಈ ವಾಗ್ರೂಪಳಾದ ಶಾರದೆಯ ಸಂಸಾರವು ಬಹಳ ದೊಡ್ಡದು ಯಾವನೊಬ್ಬನೂ ಈವರೆಗೂ ಪ್ರಪಂಚದಲ್ಲಿರುವ ಎಲ್ಲಾ ಶಾಸ್ತ್ರಗಳನ್ನೂ ಅಭ್ಯಾಸಮಾಡಲಾಗಿಲ್ಲ ಆದ್ದರಿಂದ ವಾಗ್ದೇವಿಯನ್ನು ಪೂರ್ಣವಾಗಿ ಸಾಕ್ಷಾತ್ಕರಿಸಿ ಕೊಳ್ಳಲು ಮನುಷ್ಯನಿಗೆ ಹತ್ತಾರು ಜನ್ಮಗಳಾದರೂ ಸಾಲದು. ಇಂಥದ್ದರಲ್ಲಿ ನಾವು ಕಾಲವನ್ನು ವಿನೋದಪ್ರಸಂಗಗಳು, ಹರಟೆಗಳಲ್ಲಿ ವ್ಯಯಮಾಡುವದನ್ನು ನೋಡಿದರೆ ತುಂಬಾ ಕನಿಕರವೆನಿಸುತ್ತದೆ. ಲಕ್ಷ್ಮಿ(ಹಣ)ಯನ್ನು ಲಕ್ಷ್ಮಿಯಿಂದಲೇ (ಬಡ್ಡಿಯ ರೂಪದಲ್ಲಿ) ದುಡಿಯಬಹುದು. ಆದರೆ ಸರಸ್ವತಿಯನ್ನು ಹಾಗೆ ಸಂಪಾದಿಸಲಾಗುವದಿಲ್ಲ, ಈಗಲೂ ನಮ್ಮ ದೇಶದಲ್ಲಿ ಬಡವರಿಗಿಂತಲೂ ಅವಿದ್ಯಾವಂತರ ಸಂಖ್ಯೆಯೇ ಹೆಚ್ಚು. ಎರಡೂ ಸಂಭವಿಸಿದರಂತೂ ಲಕ್ಷ್ಮಿ-ಸರಸ್ವತಿಯರ ಶಾಪಕ್ಕೆ ಆತನು ತುತ್ತಾಗಿರುವನೆಂದು ಹೇಳಬೇಕಾಗುವದು.  "Each one-Teach one" ಎಂಬ ಆಂಗ್ಲರ ಘೋಷಣೆಯೊಂದಿದೆ ಇದು ನಿಜವಾದ ಸರಸ್ವತೀ ವ್ರತವೆಂದು ಹೇಳಿದರೆ ತಪ್ಪಾಗಲಾರದು. ಈ ದೃಷ್ಟಿಯಿಂದ ಪ್ರತಿಯೊಬ್ಬ ವಿದ್ಯಾವಂತನೂ ತನಗೆ ಬರುವ ಸದ್ವಿದ್ಯೆಯನ್ನು ಮಾತ್ರ ದಿನಕ್ಕೆ ಒಂದೆರಡು ಘಂಟೆಗಳ ಕಾಲವಾದರೂ ಅದನ್ನು ಬಯಸುವವನಿಗೆ ಹೇಳಿಕೊಡಲೇ ಬೇಕು. ಇದು ನಿತ್ಯ ಸರಸ್ವತೀ ವ್ರತವಾಗಿರುವದು. ಈಗಲಾದರೂ ನಾವು ಸರಸ್ವತೀವ್ರತವನ್ನು ಒಂದಾನೊಂದು ಹಬ್ಬವೆಂತ ದೂಷಿಸುವದನ್ನು ಬಿಟ್ಟು ಅದನ್ನು ವಿದ್ಯಾದಾನರೂಪದಿಂದ ಅನುಷ್ಠಿಸಿ ಕೃತಾರ್ಥರಾಗಬೇಡವೆ? ಹಣವನ್ನು ತೆಗೆದುಕೊಂಡು ಪಾಠಹೇಳಿಕೊಡುವದನ್ನು ಶಾಸ್ತ್ರಕಾರರು ನಿಷೇಧಿಸಿದ್ದಾರೆ, ಆದರೆ ಕಲಿಯುಗದ ಧರ್ಮಕ್ಕನುಗುಣವಾಗಿ ವಿದ್ಯಾವಂತರು ಶ್ರೀಮಂತರಿಂದ ಈ ನೆಪದಲ್ಲಿ ಹಣವನ್ನು ಪಡೆದುಕೊಂಡರೆ ತಪ್ಪಲ್ಲ, ಈ ಮಾತು ಡೊನೇಷನ್ ಪಡೆದು ಸೀಟು ಕೊಡುವ ವಿದ್ಯಾಸಂಸ್ಥೆಗಳಿಗೂ ಅನ್ವಯಿಸುತ್ತದೆ. ಆ ದೋಷಪರಿಹಾರಕ್ಕಾಗಿ ಹಣವನ್ನು ಕೊಡಲು ಶಕ್ತಿಯಿಲ್ಲದ ಒಬ್ಬಿಬ್ಬರಿಗಾದರೂ ಸೀಟುದಾನ, ವಿದ್ಯಾದಾನವನ್ನೇಕೆ ಮಾಡಬಾರದು? (ಜಾತಿಯಿಂದ ಅಳೆಯದೆ) ಈ ರೀತಿಯಾದ ಸರಸ್ವತೀವ್ರತವು ಸರ್ವತ್ರವೂ ಆಚರಣೆಗೆ ಬರಬೇಕಲ್ಲವೆ ?
    ಮತ್ತೊಂದು ವಿಷಯ ಸರಸ್ವತಿಯ ವಿಚಾರದಲ್ಲಿ ಆಕೆಯು ಯಾರು ತನ್ನನ್ನು ಬಯಸಿ ಗೌರವಿಸಿ ಶ್ರಮಪಟ್ಟು ಉಪಾಸನೆಮಾಡುತ್ತಾರೋ ಅಂಥವರಿಗೆ ಮಾತ್ರ ಅನುಗ್ರಹಿಸುತ್ತಾಳೆ. ಆದ್ದರಿಂದ ವಿದ್ಯೆಯನ್ನು ಬಯಸುವವನು ಬ್ರಹ್ಮಚರ್ಯದಿಂದ ಅನ್ವರ್ಥವಾಗಿ "ವಿದ್ಯಾರ್ಥಿ"ಯಾಗಿಯೇ ಉಳಿಯಬೇಕು ಮತ್ತು ವಿದ್ಯೆಯನ್ನು ಸಂಪಾದಿಸುವಾಗ ಅದಕ್ಕೇ ಅಂಟಿಕೊಂಡಿರಬೇಕು ಮತ್ತು ವಿದ್ಯೆಯನ್ನು ಸಂಪಾದಿಸುವಾಗ ಅದಕ್ಕೇ ಅಂಟಿಕೊಂಡರಬೇಕು ಆದರೆ ಈಗಿನ ಸಮಾಜದಲ್ಲಿ ವಿದ್ಯಾರ್ಥಿಗಳೆಲ್ಲ ರಾಜಕೀಯ ಹಾಗೂ ಪ್ರೀತಿ-ಪ್ರೇಮ ಚಟುವಟಿಕೆಗಳಲ್ಲಿ ಅತಿಯಾಗಿ ತೊಡಗಿರುವದು ಸಾಮಾನ್ಯವಾಗಿಬಿಟ್ಟಿದೆ ಇದೊಂದು ವ್ರತಭಂಗವೇ ಸರಿ. ಇಂಥ ವರ್ತನೆಯಿಂದ ಸರಸ್ವತಿಯು ಕುಪಿತಳಾಗಿ ಅದೃಶ್ಯಳಾಗಿ ಬಿಡುತ್ತಾಳೆ ದೇವತೆಗಳು ಯಾವಾಗಲೂ ಅಪಚಾರಗಳನ್ನು ಸಹಿಸುವದಿಲ್ಲ ಆದ್ದರಿಂದ ಹಿರಿಯರು, ಜನನಾಯಕರು ಪೋಷಕರುಗಳು ದಯಮಾಡಿ ವಿದ್ಯಾರ್ಥಿಗಳು ಸರಸ್ವತೀವ್ರತ ಭ್ರಷ್ಟರಾಗದಂತೆ ಕಾಪಾಡಬೇಕಾಗಿ ಪ್ರಾರ್ಥನೆ. ಭಗವತಿಯು ಎಲ್ಲರಿಗೂ ಸದ್ಬುದಿಯನ್ನು ಕೊಡಲೆಂದು ಬೇಡುವೆನು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ