ಅನಂತಪದ್ಮನಾಭವ್ರತ
ಅನಂತನೆಂಬ ಹೆಸರು ಉಪನಿಷತ್ಪ್ರಸಿದ್ಧವಾದುದು. 'ಸತ್ಯಂ ಜ್ಞಾನಮನನ್ತಂ ಬ್ರಹ್ಮ' ಎಂಬ ವೇದವಾಕ್ಯವು ಬ್ರಹ್ಮವು ಅನಂತವೆಂದು ತಿಳಿಸುತ್ತದೆ. ದೇಶಕಾಲಗಳಿಂದ ಪರಿಚ್ಛಿನ್ನವಲ್ಲದ ಅಖಂಡವಾದ ವಸ್ತುವೇ ಅನಂತವು. ಬ್ರಹ್ಮದ ಹೊರತು ಬೇರೊಂದು ಇಂಥ ವಸ್ತುವಿರುವದಿಲ್ಲ. ಇದನ್ನು ಕರ್ಮಕಾಂಡದವರು ಸೌಕರ್ಯಕ್ಕಾಗಿ 'ಅನಂತಪದ್ಮನಾಭ'ನೆಂದು ಕಲ್ಪಿಸಿದ್ದಾರೆ. ಅನಂತಶಯನ, ಶೇಷಶಯನ, ಶೇಷಶಾಯೀ - ಎಂಬ ಹೆಸರುಗಳೂ ಬಳಕೆಯಲ್ಲಿವೆ. ಆಗ ಅನಂತನೆಂಬುದು ಒಂದು ನಾಗದೇವತೆಯ ಹೆಸರೆಂದಾಗುವದು. ಈ ನಾಗನು ತನ್ನ ಹೆಡೆಗಳಿಂದ ಭೂಮಿಯನ್ನೇ ಹೊತ್ತಿರುವನೆಂದೂ ಪುರಾಣಗಳು ವರ್ಣಿಸುತ್ತವೆ. ಆತನ ಸಹಸ್ರಾರು ಫಣಗಳೇ ಭೂಮಿಗೆ ಆಧಾರವೆಂದೂ ಆತನೇನಾದರೂ ಆಯಾಸದಿಂದ ಸ್ವಲ್ಪ ಒಂದು ಹೆಡೆಯನ್ನು ಕೊಡವಿದರೆ ಭೂಕಂಪವಾಗುವದೆಂದೂ ಕೆಲವರು ಹೇಳುತ್ತಾರೆ. ವಿಜ್ಞಾನಿಗಳು ಇದನ್ನು ಒಪ್ಪಲಾರರು. ಇರಲಿ, ಈ ಅನಂತನೆಂಬ ಹಾವನ್ನೇ ಹಾಸಿಗೆಯಾಗಿ ಮಾಡಿಕೊಂಡು ಮಹಾವಿಷ್ಣುವು ಕ್ಷೀರಸಮುದ್ರದಲ್ಲಿ ಮಲಗಿರುವನು ಯೋಗಿಗಳು ಈ ತತ್ತ್ವವನ್ನು ಅಧಾರಶಕ್ತಿಯಲ್ಲಿ ನೆಲೆಸಿರುವ ಚತ್ ಎಂಬ ಬ್ರಹ್ಮವೆನ್ನುವರು. ಹೇಗೂ ಶ್ರೀ ಮಹಾವಿಷ್ಣುವು ಶೇಷಶಾಯಿಯಾಗಿ ಭಕ್ತಾನು ಗ್ರಹಮಾಡುತ್ತಿರುವನು. ಭಾರತದ ದಕ್ಷಿಣದ ತುದಿಯಾದ ತಿರುವನಂತಪುರದಲ್ಲಿ ಈ ಪದ್ಮನಾಭನ ದಿವ್ಯ ದೇವಾಲಯವೂ ಇದೆ. ಭಕ್ತರಾದವರು ಈಗಲೂ ಈ ಪದ್ಮನಾಭನ ವ್ರತವನ್ನು ಮಾಡುತ್ತಾರೆ. ಬ್ರಾಹ್ಮಣರು ಮಾತ್ರವಲ್ಲದೆ ಬ್ರಾಹ್ಮಣೇತರರೂ ಈ ವ್ರತಾನುಷ...