ರುದ್ರ - ಅಸ್ಮಾನ್ ವೃಣಕ್ತು ವಿಶ್ವತಃ - 3
ಪರಿ ತೇ ಧನ್ವನೋ ಹೇತಿರಸ್ಮಾನ್ ವೃಣಕ್ತು ವಿಶ್ವತಃ | ಅಥೋ ಯ ಇಷುಧಿಸ್ತವಾರೇ ಆಸ್ಮನ್ನಿಧೇಹಿ ತಮ್ ||15|| '(ಎಲೈ ಭಗವಂತನೆ), ನಿನ್ನ ಧನುಸ್ಸಿನ ಸಂಬಂಧವಾದ (ಬಾಣರೂಪವಾದ ಆಯುಧವು ನಮ್ಮನ್ನು (ಎಲ್ಲಾ ತೊಂದರೆಗಳಿಂದಲೂ) ರಕ್ಷಿಸಿ ಕಾಪಾಡಲಿ! ಮತ್ತು ಇನ್ನು ಯಾವ ನಿನ್ನ ಬಾಣದ ಚೀಲವುಂಟೋ ಅದನ್ನು ನಮ್ಮ ಶತ್ರುಗಳಲ್ಲಿ ಇಡುವವನಾಗು.' ಈ ಮಂತ್ರದಲ್ಲಿಯೂ ಆಯುಧಗಳ ಪ್ರಾರ್ಥನೆಯೇ ಇದೆ. 'ನಿನ್ನ ಧನುಸ್ಸಿನಲ್ಲಿ ಏರಿಸಲ್ಪಟ್ಟ ಯಾವ ಬಾಣರೂಪವಾದ ಆಯುಧವುಂಟೋ ಅದು ನಮ್ಮನ್ನು ಪಾಪಗಳಿಂದ ರಕ್ಷಿಸಲಿ!' ಎಂದು ಭಕ್ತನು ಕೇಳಿಕೊಂಡಿದ್ದಾನೆ. ಇಲ್ಲಿ ಪಾಪಗಳಿಂದ ರಕ್ಷಿಸುವದು - ಎಂದರೆ ನಾವು ಪಾಪವನ್ನು ಮಾಡದಂತೆ ಎಚ್ಚರಿಸುವದು. ಆಯುಧಗಳನ್ನು ಕಂಡು ಹೆದರಿದವನು ಪಾಪಮಾಡಲಾರನು ಎಂದರ್ಥ ಅವೇ ಆಯುಧಗಳು ಪಾಪವನ್ನು ಸುಟ್ಟು ನಾಶಮಾಡಿಯೂ ಬಿಡವವು ಏಕೆಂದರೆ ಪಾಪಗಳನ್ನು ಉಳಿಸಿಕೊಂಡಲ್ಲಿ ಅವುಗಳಿಂದ ಎಂದಾದರೂ ತೊಂದರೆಯುಂಟೇ ಉಂಟು ಅದಕ್ಕಾಗಿ ಆಯುಧ ಚೀಲವನ್ನೇ ಪಾಪರಾಶಿಗಳ ಮೇಲೆ ಇಟ್ಟುಬಿಡು ಎಂದು ಕೇಳಲಾಗಿದೆ ಹೀಗೆ ಆಯುಧಗಳ ಸ್ಪರ್ಶ ಮತ್ತು ಸಂಯೋಗಗಳಿಂದ ಪಾಪಗಳೆಲ್ಲವೂ ಹೇಳಹೆಸರಿಲ್ಲವಾಗುವವು ಆದ್ದರಿಂದ ಇಲ್ಲಿ ಪಾಪಗಳನ್ನೇ ಶತ್ರುಗಳೆಂದು ಕರೆದಿದೆಯೆಂದು ತಿಳಿಯಬೇಕು. ಈ ಮಂತ್ರವನ್ನು ಶತ್ರುನಾಶಕ್ಕಾಗಿಯೂ ಉಪಯೋಗಿಸುತ್ತಾರೆಂದು ಮಂತ್ರಶಾಸ್ತ್ರದಲ್ಲಿ ಹೇಳಿರುತ್ತದೆ ಇಲ್ಲಿಗೆ ಒಂದನೆಯ ಅನುವಾಕವು ಮುಗಿಯಿತು.