ದಾನಗಳ ಫಲ (ಸತ್ಪಾತ್ರರಿಗೆ)

    ನಮ್ಮ ವೈದಿಕ ಸಂಸ್ಕೃತಿಯಲ್ಲಿ ದಾನಕ್ಕೆ ವಿಶಿಷ್ಟವಾದ ಮಹತ್ವವಿದೆ. ಶ್ರುತಿಯಲ್ಲಿ ಸತ್ಯ, ತಪಸ್ಸು, ದಮ ಎಂಬುದಾಗಿ ಜ್ಞಾನ ಸಾದನಗಳನ್ನು ನಿರೂಪಣೆ ಮಾಡುತ್ತಾ ದಾನದ ಬಗ್ಗೆ ಈ ರೀತಿಯಾಗಿ ಹೇಳಿದೆ.

ದಾನಂ ಯಜ್ಞನಾಂ ವರೂಥಂ ದಕ್ಷಿಣಾ |
ಲೋಕೇ ದಾತಾರಗ್ಂ ಸರ್ವಭೂತಾನ್ಯುಪ ಜೀವನ್ತಿ |
ದಾನೇನಾರಾತೀರಪಾನುದಂತ |
ದಾನೇನ ದ್ವಿಷಂತೋ ಮಿತ್ರಾ ಭವನ್ತಿ |
ದಾನೇ ಸರ್ವಂ ಪ್ರತಿಷ್ಠಿತಮ್ |
ತಸ್ಮಾದ್ದಾನಂ ಪರಮಂ ವದನ್ತಿ |

ಯಜ್ಞಗಳ ಸಂಬಂಧಿಯಾದ ಗೋಹಿರಣ್ಯಾದಿದಕ್ಷಿಣೆಯು ಶ್ರೇಷ್ಠವಾದ ದಾನವಾಗಿದೆ. ಲೋಕದಲ್ಲಿಯೂ ಕೂಡ ದಾನಶೀಲಮನುಷ್ಯನನ್ನು ಮೂಢ-ವಿದ್ವಾಂಸರೆನ್ನದೇ ಎಲ್ಲರೂ ಆಶ್ರಯಿಸುತ್ತಾರೆ (ತಮಗೆ ಅಡ್ಡಬಂದ) ಶತ್ರುಗಳನ್ನು ಕೂಡ ದಾನದಿಂದ ದೂರ ತಳ್ಳುತ್ತಾರೆ. ದಾನದಿಂದ ಪ್ರಬಲ ಶತ್ರುಗಳೂ ಮಿತ್ರರಾಗುತ್ತಾರೆ. ದಾನದಲ್ಲಿ ಎಲ್ಲವೂ ನೆಲೆಗೊಂಡಿದೆ. ಆದ್ದರಿಂದ ದಾನವನ್ನು (ಜ್ಞಾನ ಸಾಧನೆಗಳಲ್ಲಿ) ಪರಮ ಸಾಧನವನ್ನಾಗಿ ಹೇಳುತ್ತಾರೆ.

    ಮನುಸ್ಮೃತಿಯ 4ನೇ ಅಧ್ಯಾಯದಲ್ಲಿ ಯಾವ-ಯಾವ ವಸ್ತುಗಳ ದಾನದಿಂದ ಯಾವ ಯಾವ ಫಲಗಳನ್ನು ಹೊಂದುತ್ತಾನೆಂದು ತಿಳಿಸುವುದಕ್ಕೂ ಮೊದಲು ಹೀಗೆ ಹೇಳಿದ್ದಾರೆ.

ದಾನಧರ್ಮಂ ನಿಷೇವೇತ ನಿತ್ಯಮೈಷ್ಟಿಕ ಪೌರ್ತಿಕಮ್ |
ಪರಿತುಷ್ಟೇನ ಭಾವೇನ ಪಾತ್ರಮಾಸಾಧ್ಯ ಶಕ್ತಿತಃ || (4-227ಮ.ಸ್ಮೃ)
ಯಾವಾಗಲೂ ಇಷ್ಟಾಪೂರ್ತರೂಪವಾದ ದಾನವೆಂಬ ಧರ್ಮವನ್ನು ಸರಿಯಾದ ಪಾತ್ರವನ್ನು ಸಮೀಪಿಸಿ ಯಥಾಶಕ್ತಿಯಾಗಿ ಸಂತೋಷದಿಂದ ಮಾಡಬೇಕು.

ಯತ್ಕಿಂಚಿದಪಿ ದಾತವ್ಯಂ ಯಾಚಿತೇನಾನಸೂಯಯಾ |
ಉತ್ಪತ್ಸ್ಯತೇ ಹಿ ತತ್ಪಾತ್ರಂ ಯತ್ತಾರಯತಿ ಸರ್ವತಃ || (4-228)
ಮಾತ್ಸರ್ಯವಿಲ್ಲದ ಯಾರಾದರೂ ಕೇಳಿದರೆ ಏನಾದರೂ ಕೊಡಬೇಕು. ಯಾಕೆಂದರೆ ಅಂತಹ ಪಾತ್ರನು (ನರಕಕ್ಕೆ ಕಾರಣವಾಗುವ) ಎಲದರಿಂದಲೂ ದಾಟಿಸುತ್ತಾನೆ.

ವಾರಿದಸ್ತೃಪ್ತಿಮಾಪ್ನೋತಿ ಸುಖಮಕ್ಷಯ್ಯಮನ್ನದಃ |
ತಿಲಪ್ರದಃ ಪ್ರಜಾಮಿಷ್ಟಾಂ ದೀಪದಶ್ಚಕ್ಷುರುತ್ತಮಮ್ || (4-229)
ನೀರನ್ನು ಕೊಟ್ಟವನು ತೃಪ್ತಿಯನ್ನೂ, ಅನ್ನವನ್ನು ಕೊಟ್ಟವನು ಸುಖವನ್ನೂ, ಎಳ್ಳನ್ನು ಕೊಟ್ಟವನು ತನಗಿಷ್ಟವಾದ ಸಂತತಿಯನ್ನೂ, ದೀಪವನ್ನು ಕೊಟ್ಟವನು ಒಳ್ಳೆಯ ಕಣ್ಣುಗಳನ್ನು ಹೊಂದುತ್ತಾನೆ.

ಭೂಮಿದೋ ಭೂಮಿಮಾಪ್ನೋತಿ ದೀರ್ಘಮಾಯುರ್ಹಿರಣ್ಯದಃ |
ಗೃಹದೋಗ್ರ್ಯಾಣಿ ವೇಶ್ಮಾನಿ ರೂಪ್ಯದೊ ರೂಪಮುತ್ತಮಮ್ || (4-230)
ಭೂದಾನದಿಂದ ಇನ್ನೂ ಹೆಚ್ಚಿನ ಭೂಮಿಯ ಒಡೆತನವನ್ನು, ಸುವರ್ಣದಾನದಿಂದ ದೀರ್ಘಾಯುಷ್ಯನ್ನು, ಮನೆಯ ದಾನದಿಂದ ಶ್ರೇಷ್ಠವಾದ ದೊಡ್ಡ ಮನೆಗಳನ್ನು ಬೆಳ್ಳಿಯದಾನದಿಂದ ನಯನ ಮನೋಹರ ರೂಪವನ್ನು ಹೊಂದುತ್ತಾನೆ.

ವಾಸೋದಶ್ಚಂದ್ರಸಾಲೋಕ್ಯಮಶ್ವಿಸಾಲೋಕ್ಯಮಶ್ವದಃ |
ಅನಡುದ್ದಃ ಶ್ರಿಯಂ ಪುಷ್ಟಾಂ ಗೋದೋ ಬ್ರಧ್ನಸ್ಯ ವಿಷ್ಟಷಮ್ || (4-231)
ವಸ್ತ್ರದಾನ ಮಾಡಿದವನು ಚಂದ್ರಲೋಕದಲ್ಲಿ ಚಂದ್ರನ ಸಮನಾದ ಸಂಪತ್ತಿನೊಂದಿಗೂ ಕುದುರೆಯನ್ನು ಕೊಟ್ಟವನು ಅಶ್ವಿನಿ ದೇವತೆಗಳ ಲೋಕದಲ್ಲಿ ಅವರ ಸಮಾನವಾದ ವಿಭೂತಿಯೊಂದಿಗೂ ವಾಸಿಸುತ್ತಾನೆ. ಹಾಗೆಯೇ ಹೋರಿಯನ್ನು ದಾನ ಮಾಡಿದವನು ಹೆಚ್ಚಿನ ಸಂಪತ್ತನ್ನೂ, ಗೋದಾನ ಮಾಡಿದವನು ಸೂರ್ಯಲೋಕವನ್ನು ಹೊಂದುತ್ತಾನೆ.

ಯಾನಶಯ್ಯಾಪ್ರದೋ ಭಾರ್ಯಾಮೈಶ್ವರ್ಯಮಭಯಪ್ರದಃ |
ಧಾನ್ಯದಃ ಶಾಶ್ವತಂ ಸೌಖ್ಯಂ ಬ್ರಹ್ಮದೋ ಬ್ರಹ್ಮಸಾರ್ಷ್ಟಿತಾಮ್ || (4-232)
ರಥವೇ ಮುಂತಾದ ಯಾನಗಳ ಹಾಗೂ ಹಾಸಿಗೆಯ ದಾನದಿಂದ (ಒಳ್ಳೆಯ) ಹೆಂಡತಿಯನ್ನು ಅಭಯವನ್ನು ನೀಡಿದವನು ಪ್ರಭುತ್ವವನ್ನು, ಧಾನ್ಯದಾನ ಮಾಡಿದವನು ಶಾಶ್ವತ ಸುಖವನ್ನು ವೇದಾಧ್ಯಾಪನ ಮತ್ತು ವೇದವ್ಯಾಖ್ಯಾನದ ಮೂಲಕ ಬ್ರಹ್ಮವನ್ನು ಕೊಡುವವನು ಬ್ರಹ್ಮನಿಗೆ ಸಮಾನವಾದ ಸ್ಥಾನವನ್ನು ಹೊಂದುತ್ತಾನೆ.

ಸರ್ವೇಷಾಮೇವ ದಾನಾನಾಂ ಬ್ರಹ್ಮದಾನಂ ವಿಶಿಷ್ಟ್ಯತೇ |
ವಾರ್ಯನ್ನಗೋಮಹೀವಾಸಸ್ತಿಲಕಾಂಚನಸರ್ಪಿಷಾಮ್ || (4-233)
ಮೇಲೆ ಹೇಳಿದ ನೀರು ಅನ್ನ, ಹಸು, ಭೂಮಿ, ಬಟ್ಟೆ, ಎಳ್ಳು, ಸುವರ್ಣ, ತುಪ್ಪ, ಮುಂತಾದ ಎಲ್ಲಾ ದಾನಗಳಿಗಿಂತ ಬ್ರಹ್ಮದಾನವು ವಿಷೇಷಫಲವನ್ನು ಕೊಡುತ್ತದೆ. ಇದುವರೆಗೆ ಇಂತಿಂತಹ ವಸ್ತುಗಳ ದಾನದಿಂದ ಇಂತಿಂಥ ಫಲಗಳನ್ನು ಪಡಿಯುತ್ತಾನೆಂದು ಹೇಳಿದೆ. ಆದರೆ ಮುಂದಿನ ಶ್ಲೋಕವು ವಿಶೇಷ ವಿಷಯವನ್ನು ತಿಳಿಸುತ್ತದೆ.

ಯೇನ ಯೇನ ತು ಭಾವೇನ ಯದ್ಯದ್ದಾನಂ ಪ್ರಯಚ್ಛತಿ |
ತತ್ತತ್ತೇನೈವ ಭಾವೇನ ಪ್ರಾಪ್ನೋತಿ ಪ್ರತಿಪೂಜಿತಃ || (4-234)
ಯಾವ ಯಾವ ಕಾಮನೆಯಿಂದ ಯಾವ ಯಾವ ದಾನವನ್ನು ಮಾಡುವನೋ ಆ ದಾನದ ಫಲದಿಂದ ಅವನು ಬಯಸಿದ ಫಲವನ್ನು ಹೊಂದುತ್ತಾನೆ. ಉಪನಿಷತ್ತಿನಲ್ಲಿಶ್ರದ್ಧಯಾ, ಹ್ರಿಯಾ, ಭಿಯಾ, ಸಂವಿದಾ ಎಂಬುದಾಗಿ ದಾನವನ್ನು ಕೊಡಬೇಕೆಂದು ಹೇಳಿದೆ. ಅದೆಲ್ಲವನ್ನು ಸೇರಿಸಿ ಒಂದೇ ಮಾತಿನಿಂದ ದಾನವನ್ನು ಹೇಗೆ ಕೊಡಬೇಕೆಂದು ಮುಂದಿನ ಶ್ಲೋಕದಲ್ಲಿ ತಿಳಿಸಿದೆ.

ಯೋರ್ಚಿತಂ ಪ್ರತಿಗೃಹ್ಣಾತಿ ದದಾತ್ಯರ್ಚಿತಮೇವ ಚ |
ತಾವುಭೌ ಗಚ್ಚತಃ ಸ್ವರ್ಗಂ ನರಕಂ ತು ವಿಪರ್ಯಯೇ || (4-235)
ಪೂಜ್ಯಭಾವದಿಂದ ದಾನವನ್ನು ಸ್ವೀಕರಿಸಿದವನು, ಪೂಜ್ಯಭಾವನೆಯಿಂದ ಕೊಟ್ಟವನು, ಇಬ್ಬರೂ ಸ್ವರ್ಗವನ್ನು ಹೊಂದುತ್ತಾರೆ. ಇದಕ್ಕೆ ವಿರುದ್ದವಾಗಿ ತಿರಸ್ಕಾರದಿಂದ ಸ್ವೀಕರಿಸಿದರೆ ಅಥವಾ ಕೊಟ್ಟರೆ ನರಕವನ್ನು ಸೇರುತ್ತಾರೆ.
    ನಮ್ಮೆಲ್ಲಾ ವೈದಿಕ ಕ್ರಿಯಾ-ಕಲಾಪಗಳ ಅಂಗವಾಗಿ ದಾನಗಳನ್ನು ಮಾಡುವ ವಿಧಿಯಿದೆ. ಅದರ ಹಿಂದಿನ ಉದ್ದೇಶ ಹಾಗೂ ರಹಸ್ಯವನ್ನು ತಿಳಿದು ಮಾಡುವುದರಿಂದ ಹೆಚ್ಚಿನ ಫಲಪ್ರಾಪ್ತಿ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ