ಭಗವತ್ಸಾಕ್ಷಾತ್ಕಾರಕ್ಕೆ ಸುಲಭವಾದ ಮಾರ್ಗವನ್ನು ತೋರಿಸಿದ ಶ್ರೀ ಶಂಕರರು.

    ಅದ್ವೈತಮತ ಪ್ರತಿಷ್ಠಾಪಕರಾದ, ಶ್ರೀಶಂಕರ ಭಗವತ್ಪಾದಾಚಾರ್ಯರನ್ನು, ಕೇವಲ 'ಜ್ಞಾನ ಯೋಗ'ಸಂಸ್ಥಾಪಕರು ಎಂದು ಭಾವಿಸುವುದು, ಅವರ ಬಗ್ಗೆ ಮಾಡುವ ಅಪಚಾರವಾದೀತು. "ಅದ್ವೈತವಾದ" ಜ್ಞಾನಯೋಗದ ಕೊನೆಯ ಹಂತವೆಂಬುದು ಸತ್ಯವಾದ ಸಂಗತಿಯಾದರೂ, ಆಚಾರ್ಯವರ್ಯರ ಉಪದೇಶ, ಇದೊಂದಕ್ಕೇ ಸೀಮಿತವಾಗಿರದೆ, ಕರ್ಮ, ಭಕ್ತಿಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ಯೋಗತ್ರಯಗಳಲ್ಲಿ ಒಂದಾಗಿ, ಈ ಕಲಿಯುಗಕ್ಕೆ ಸುಲಭಸಾಧ್ಯವಾದ ಭಕ್ತಿಯೋಗದ ಪ್ರಭಾವ ಅವರ ಜೀವನದಲ್ಲಿ ಬಹುಮುಖವಾಗಿ, ಕಾಣಿಸಿಕೊಂಡಿರುವುದರಿಂದ "ಭಕ್ತ ಶಂಕರ" ಎಂಬ ಅಂಕಿತಕ್ಕೆ ಆ ಪೂಜ್ಯರು ಸರ್ವಥಾ ಅರ್ಹರಾಗಿದ್ದಾರೆ.
    ಶಂಕರ ಬಾಲ್ಯ ಮಾತಾಪಿತೃಗಳ ಭಕ್ತಿಯಿಂದ ಆರಂಭವಾಯಿತು ಎಂಬುದನ್ನು ಅವರ ಜೀವನ ಚರಿತ್ರೆಯಿಂದ ಅರಿಯಬಹುದು. ತಾಯಿಯಾದ "ಆರ್ಯಂಬೆ"ಯ ಅನುಮತಿಯಿಲ್ಲದೇ, ತಮಗೆ ಪ್ರಿಯವಾದ ಸಂನ್ಯಾದೀಕ್ಷೆಯನ್ನು ತೆಗೆದುಕೊಳ್ಳಲು ಸಿದ್ದರಾಗದಿರುವುದು, ಅವರ ಮಾತೃ ಭಕ್ತಿಯ ದ್ಯೋತಕವಾದಂತಯೇ, ಸಂನ್ಯಾಸಿಯಾಗಿದ್ದರೂ, ಆಕೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ತನ್ನ ಕರ್ತವ್ಯವನ್ನು ನಿರ್ವಹಿಸಿರುವುದೂ, ಆ ಭಕ್ತಿಯ ಸ್ಪಷ್ಟಪ್ರತಿಪಾದಕವಾಗಿದೆ.
    'ಪ್ರಶ್ನೋತ್ತರಮಾಲಿಕೆ' ಎಂಬ ಅವರ ಗ್ರಂಥದಲ್ಲಿ, "ಪ್ರತ್ಯಕ್ಷ ದೇವತಾ ಕಾ? - ಮಾತಾ, ಪೂಜ್ಯೋ ಗುರುಶ್ಚ ಕಃ? -ತಾತಃ" ಎಂಬ ಪ್ರಶ್ನೋತ್ತರಗಳು, ಜಗತ್ತಿನಲ್ಲಿ ಮಾನವನಿಗೆ, ಮಾತಾಪಿತೃ ಭಕ್ತಿಯನ್ನುಪದೇಶಿಸುವ ಪವಿತ್ರ ವಾಕ್ಯಗಳಾಗಿವೆ.
    ತಮ್ಮ ದೀಕ್ಷಾಚಾರ್ಯರಾದ, ಗೋವಿಂದ ಭಗತ್ಪಾದರಲ್ಲಿ ಇವರಿಟ್ಟ ಭಕ್ತಿ ಅಪಾರವಾಗಿತ್ತು, ಪ್ರವಾಹದಿಂದ ಉಕ್ಕಿ, ಗುರುವಿನ ಗುಹಾಪ್ರವೇಶ ಮಾಡುತ್ತಿದ್ದ, ನದಿಯ ಜಲರಾಶಿಯನ್ನು ತಮ್ಮ ತಪಃಶಕ್ತಿಯಿಂದ ತಡೆದು, ತಮ್ಮ ಗುರು ಗೌರವವನ್ನು ಪ್ರದರ್ಶಿಸಿದವರು, ಈ ಭಗವತ್ಪಾದರು. "ವೈರಾಗ್ಯಮಾತ್ಮ ಬೋಧೋ ಭಕ್ತಿಶ್ಚೇತಿ ತ್ರಯಂ ಗದಿತಂ | ಮುಕ್ತೇಃ ಸಾಧಾನಮಾದೌ" ಎಂದು ಮುಕ್ತಿಗೆ, 'ವೈರಾಗ್ಯ, ಆತ್ಮಜ್ಞಾನ, ಭಕ್ತಿ' ಈ ಮೂರನ್ನು ಕಾರಣಗಳೆಂದು ಸಾಮಾನ್ಯವಾಗಿ ಹೇಳಿದ್ದರೂ "ಮೋಕ್ಷಕಾರಣಸಾಮ ಗ್ರ್ಯಾಂ ಭಕ್ತಿರೇವ ಗರೀಯಸೀ" ಎಂದಿದ್ದಾರೆ.
    ವಿವೇಕ ಚೂಡಾಮಣಿಯಲ್ಲಿ "ಸ್ವಸ್ವರೂಪಾನು ಸಂಧಾನಂ ಭಕ್ತಿರಿತ್ಯುಚ್ಯತೇ" ಎಂದು ಭಕ್ತಿಯೆಂಬುದು 'ಸ್ವಸ್ವರೂಪಾನುಸಂಧಾನು' ಎಂದು ಅದರ ಲಕ್ಷಣವನ್ನು ಹೇಳಿದ್ದಾರೆ.
   
"ಅಂಕೋಲಂ ನಿಜಬೀಜಸಂತತಿರ ಯಸ್ಕಾಂತೋಪಲಂ ಸೂಚಿಕಾ
 ಸಾಧ್ವೀನೈಜವಿಭುಂ ಲತಾಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಂ |
 ಪ್ರಾಪ್ನೋತೀಹ ಯಧಾ ತಥಾ ಪಶುಪತೇಃ ಪಾದಾರವಿಂದದ್ವಯಂ
 ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ "
ಎಂಬ ಶಿವಾನಂದಲಹರಿಯ ಶ್ಲೋಕ, 'ಭಕ್ತಿ'ಯನ್ನು ವಿಸ್ತಾರವಾಗಿ ವಿಶ್ಲೇಷಿಸಿದೆ. ಅಂಕೋಲದ ಬೀಜಗಳು ಮರವನ್ನೂ, ಸೂಚಿಯು ಅಯಸ್ಕಾಂತಶಿಲೆಯನ್ನು, ಪತಿವ್ರತೆಯು ತನ್ನ ಪತಿಯನ್ನು, ಬಳ್ಳಿಯು ಮರವನ್ನು, ನದಿಯು ಸಾಗರವನ್ನೂ ಹೇಗೆ ಹೊಂದಿಕೊಳ್ಳುತ್ತವೆಯೋ, ಅಂತೆಯೇ ಮನೋವೃತ್ತಿ ಭಗವಂತನ ಪಾದಾರವಿಂದಗಳಲ್ಲಿ ನೆಲೆಯಾಗಿ ನಿಲ್ಲುವುದು 'ಭಕ್ತಿ'.
    ಚಾಂಚಲ್ಯತೆಯ ಪರಿಣಾಮವಾಗಿ, ನಿಗ್ರಹಿಸಲಿ ಅಸಮರ್ಥವಾದ 'ಮನೋವೇಗ'ವನ್ನು ತಡೆಯಲು ಭಗವದ್ಭಕ್ತಿ ಅತ್ಯಗತ್ಯ ಎಂಬುದನ್ನು "ಹರಿಚರಣ ಭಕ್ತಿಯೋಗಾನ್ಮನಃ ಸ್ವವೇಗಂ ಜಹಾಂತಿ ಶನೈಃ"ಎಂಬ ವಾಕ್ಯದಿಂದ ಹೇಳಲಾಗಿದೆ.
    ಭಗವದ್ಭಕ್ತಿಯ ಫಲವು ಯಾವುದು? ಎಂದು ಪ್ರಶ್ನಿಸುತ್ತ, "ತಲ್ಲೋಕ ಸ್ವರೂಪ ಸಾಕ್ಷಾತ್ತ್ವಂ" ಎಂದು ಶ್ರೀ ಶಂಕರರು ಉತ್ತರಿಸಿದ್ದಾರೆ. ಭಗವದ್ಭಕ್ತಿಯಿಂದ ಸಾಲೋಕ್ಯ, ಸಾಮೀಪ್ಯ ಮತ್ತು ಸಾಯುಜ್ಯ ಪ್ರಾಪ್ತಿಯಾಗುತ್ತದೆ.
"ವಿನಾಯಸ್ಯ ಧ್ಯಾನಂ ವ್ರಜತಿ ಪಶುತಾಂ ಸೂಕರಮುಖತಾಂ
ವಿನಾಯಸ್ಯ ಜ್ಞಾನಂ ಜನಮೃತಿಭಯಂ ಯಾತಿ ಜನತಾ |
ವಿನಾಯಸ್ಯ ಸ್ಮೈತ್ಯಾ ಕ್ರಿಮಿಶತಚಿನಿಂ ಯಾತಿ ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿ ವಿಷಯಃ ||
ಯಾವ ಶ್ರೀಕೃಷ್ಣನ ಧ್ಯಾನವಿಲ್ಲದೇ, ಹಂದಿಯೇ ಮೊದಲಾದ ಪಶುವಿನ ಜನ್ಮವನ್ನು ಪಡೆಯಲಾಗುವುದೋ, ಯಾವಾತನ ಸ್ಮರಣೆಯಿಲ್ಲದೇ, ಕ್ರಿಮಿಗಳ ಜನ್ಮವನ್ನು ಹೊಂದಲಾಗುವುದೋ, ಅಂತಹು ಶರಣನೂ, ಲೋಕೇಶನೂ ಆದ ಶ್ರೀಕೃಷ್ಣನು ದೃಗ್ಗೋಚರನಾಗಲಿ ಎಂದು ಭಕ್ತಿಯಿಂದ ಬೇಡಿಕೊಂಡ, ಶ್ರೀಶಂಕರರು, ಕೇವಲ ಕೃಷ್ಣೋಪಾಸಾಕರು ಎಂದು ಹೇಳುವುದು ತಪ್ಪಾದೀತು. ಷ್ಣತಸ್ಥಾಪನಾಚಾತ್ಯರೆಂದು, ಪ್ರಸಿದ್ದರಾದ ಅವರ ಭಕ್ತಿ ಬೇರೆ ಬೇರೆ ದೇವತೆಯನ್ನು ಕುರಿತು ಅವರು ರಚಿಸಿದ ಸ್ತೋತ್ರಗಳಲ್ಲಿ ಕಾಣಬಹುದು.
"ನತೇತರಾತಿಭೀಕರಂ, ನವೋದಿತಾರ್ಕ ಭಾಸ್ವರಂ |
ನಮತ್ಸುರಾರಿ ನಿರ್ಜರಂ ನತಾಧಿಕಾಪ ದುದ್ಧರಮ್ "
ಎಂದು ಗಣೇಶ ಪಂಚರತ್ನ ಸ್ತೋತ್ರದಲ್ಲಿ ಸ್ತುತಿಸಿದಂತೆಯೇ ಸುಬ್ರಹ್ಮಣ್ಯಭುಜಂಗ ಸ್ತೋತ್ರದಲ್ಲಿ "ಪುಲಿಂದಾತ್ಮಜಾಕಾಂತ ಭಕ್ತಾರ್ತಿಹಾರನ್, ಪ್ರಭೋ ತಾರಕಾರೇ ಸದಾ ರಕ್ಷಮಾಂ ತ್ವಂ" ಎಂದು ಪ್ರಾರ್ಥಿಸಿದ್ದಾರೆ.
    ಶಿವನಂದಲಹರೀ, ಶಿವಭುಜಂಗ, ಪಾದಾದಿಕೇಶಾಂತ ವರ್ಣನ ಸ್ತೋತ್ರಂಗಳು, ಆಚಾರ್ಯರ ಶಿವಭಕ್ತಿ ಪ್ರಕಾಶಕಗಳು, ಸೌಂದರ್ಯಲಹರೀ, ವೇದಪಾದಸ್ತೋತ್ರ, ತ್ರಿಪುರಸುಂದರೀ ಮಾನಸ ಪೂಜಾಸ್ತೋತ್ರಾದಿಗಳು ದೇವೀಭಕ್ತಿಪ್ರಕಾಶಕಗಳು. ಹರಿಸ್ತುತಿ, ಲಕ್ಷ್ಮೀನೃಸಿಂಹಸ್ತೋತ್ರ, ವಿಷ್ಣುಪಾದಾದಿ ಕೇಶಾಂತ ಸ್ತೋತ್ರಾದಿಗಳು ವಿಷ್ಣುಭಕ್ತಿ ಪ್ರಕಾಶಕಗಳು.
"ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ|
 ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಂ "
ಎಂಬಂತೆ, ಶ್ರವಣಾದಿ ನಮವಿಧವಾದ ಭಕ್ತಿಯ ಪರಿಚಯವನ್ನು, ಶ್ರೀ ಶಂಕರ ಭಗವತ್ಪಾದಾಚಾರ್ಯರು, ತಮ್ಮ ಸ್ತೋತ್ರಶ್ರೇಣಿಯಲ್ಲಿ ಸೇರಿಸಿದ್ದಾರೆಂಬುದನ್ನು, ಆ ಸ್ತೋತ್ರಗಳ ಪಾರಕರು ಅರಿಯಬಹುದು. ಅಂತೆಯೇ "ಚತುರ್ವಿಧಂ ಭಜಂತೇ ಮಾಂ ಜನಾಃ ಸುಕೃತಿನೋರ್ಜನ | ಅರ್ತೋ ಜಿಜ್ಞಾಸುರರ್ಥಾರ್ಥಿ ಜ್ಞಾನೀ ಚ ಭರತರ್ಷಭ" ಎಂಬ ವಾಕ್ಯದಲ್ಲಿ ಹೇಳಿದ, ಚತುರ್ವಿಧ ಭಕ್ತರ ಕಳಕಳಿಯ ಪ್ರಾರ್ಥನೆಯೂ, ಶ್ರೀಮದಾಚಾರ್ಯರ ಸ್ತೋತ್ರಗಳಲ್ಲಿ ಪ್ರಕಟವಾಗಿವೆ.
    'ಭಕ್ತಿ' ಎಂಬ ಪದ 'ಭಜ್ ಸೇವಾಯಾಂ' ಎಂಬ ಧಾತುವಿನಿಂದ ಜನಿಸಿದೆ. "ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಢಮತೇ ಸಂಪ್ರಾಪ್ತೇ ಸನ್ನಿಹಿತೇಕಾಲೇ..." ಎಂಬ ಶ್ರೀಶಂಕರರ ನಿರ್ದೇಶ, ಸಾರ್ವಕಾಲಿಕ, ಹಾಗೂ ಸಾರ್ವದೇಶಿಕವಾಗಿ, ಮಾನವಜೀವನದಲ್ಲಿ 'ಭಕ್ತಿ'ಯ ಪ್ರಥಮೋಪಾಸನೆಯನ್ನು ಘೋಷಿಸಿದೆ.
    ಭಗವದ್ಭಕ್ತಿಯನ್ನು ಆಶ್ರಯಿಸಿದ ವ್ಯಕ್ತಿಯು, ತನ್ನ ಅವಯವಗಳೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ, ಭಗವಂತನ ಸೇವೆಗಾಗಿ ಮುಡುಪಾಗಿಟ್ಟಿರುತ್ತಾನೆ.
"ಮನಸ್ತೇಪಾದಾಭ್ಯೇ ನಿವಸತು ವಚಃ ಸ್ತೋತ್ರಫಣಿತೌ
ಕೌಂ ಚಾಭ್ಯಚಾಯಾಂ ಶ್ರುತಿರಪಿ ಕಥಾಕರ್ಣಾನ ವಿಧೌ |
ತವಧ್ಯಾನೇ ಬುದ್ಧಿರ್ನಯನಯಯುಗಳಂ ಮೂರ್ತಿವಿಭವೇ"
ಮನಸ್ಸು ಭಗವಂತನ ಪಾದಕಮಲದಲ್ಲಿ ನೆಲಸಲಿ, ವಾಕ್ಕು ಸ್ತೋತ್ರ ಪಾಠದಲ್ಲಿ ನಿರತವಾಗಲಿ, ಕೈಗಳು ಅರ್ಚಿಸಲಿ, ಕಿವಿಗಳು ಕಥೆಯನ್ನು ಕೇಳಲಿ, ಬುದ್ಧಿಯು ಭಗವತ್ ಧ್ಯಾನದಲ್ಲಿ ನಿಲ್ಲಲಿ, ಕಣ್ಣುಗಳು ವಿಗ್ರಹ ವೈಭವವನ್ನು ಕಾಣಲಿ" ಎಂಬ ಭಾವನೆಯನ್ನು ಭಕ್ತೋತ್ತಮ ಬೆಳೆಸಿರುತ್ತಾನೆ. ಭಕ್ತನ ಬಯಕೆ ಭಗವಂತನ ಸಾಕ್ಷಾತ್ಕಾರ ಎಂಬುದನ್ನು "ವೀಕ್ಷಾಂ ಮೆ ದಿಶ ಚಾಕ್ಷಪೀಂ ಸಕರುಣಾಂ ದಿವ್ಯೈಶ್ಚಿರಂ ಪ್ರಾರ್ಧಿರಾಂ" ಎಂಬ ವಾಕ್ಯದಿಂದ ಆಚಾರ್ಯರು ವಿವರಿಸಿದ್ದಾರೆ.
    ಭಕ್ತನು, ನಿತ್ಯದಲ್ಲಿ ಎಸಗುವ ಕ್ರಿಯೆಗಳೆಲ್ಲವೂ ಒಂದಲ್ಲ ಒಂದು ರೀತಿಯಿಂದ ಭಗವದುಪಾಸನೆಯಾಗಬೇಕೆಂಬ ನಂಬುಗೆಯನ್ನು "ಜಪೋ ಜಲ್ಪಃ | ಶಿಲ್ಪಂ ಸಕಲಮಪಿ ಮುದ್ರಾವಿರಾಚನಾ ಗತಿಃ ಪ್ರಾದಕ್ಷಿಣ್ಯಕ್ರಮಣಮಶನಾದ್ಯಾಹುತಿ ವಿಧಿಃ ಪ್ರಾಣಾಮಃ ಸಂವೇಶಃ ಸುಖಮಖಿಲಮಾತ್ಮಾರ್ಪಣಧಿಯಾ ಸಪರ್ಯಾಪರ್ಯಾಯಸ್ತವ ಭವತು ಯನ್ನೇವಿಲಸಿತಂ" ಎಂಬ ಸೌಂದರ್ಯಲಹರಿಯ ಶ್ಲೋಕವೊಂದರಲ್ಲಿ ತಿಳಿಸಿದ್ದಾರೆ.
    ಆತ್ಮಾರ್ಪಣಬುದ್ದಿಯಿಂದ, ನನ್ನ ವ್ಯವಹಾರ ನಡೆಯಲಿ, ಮಾತು, ಮಂತ್ರವಾಗಲಿ, ಅಂಗ ವಿನ್ಯಾಸವು ಮುದ್ರಾಪ್ರದರ್ಶನವಾಗಲಿ, ಗಮನವು ಪ್ರದಕ್ಷಿಣಕ್ರಿಯಯಾಗಲಿ, ಭೋಜನವು ಅಹುತಿಯಾಗಲಿ, ಮಲಗೆಇ ಹೊರಳಾಡುವುದು ಸಾಷ್ಟಾಂಗ ಪ್ರಣಾಮವಾಗಲಿ, ಒಟ್ಟಿನಲ್ಲಿ ನನ್ನ ಸಕಲೇಂದ್ರಿಯ ವ್ಯಾಪಾರಗಳೂ, ನಿನ್ನ ಷೋಡಶೋಪಚಾರವಾಗಲಿ.
    "ಭಕ್ತೋತ್ತಮನಾದವನು, ಭಗವಂತನನ್ನು ಮತ್ತೆ ಮತ್ತೆ ಬೇಡುವುದೂ ಆ ಭಕ್ತಿಯನ್ನೇ, ಇದರ ಮುಂದೆ ಆತನಿಗೆ, ಐಹಿಕಾಮುಷ್ಮಿಕಸುಖಗಳಲ್ಲವೂ ತುಚ್ಛವೇ." ಈ ಭಾವನೆಯನ್ನು ಅಲಂಕಾರಿಕವಾಗಿ ತೋರಗೊಟ್ಟ ಪ್ರಾರ್ಥನೆಯಿದು.
ಆಶನಂ ಗರಳಂ ಫಣೀ ಕಲಾವೋ
ವಸನಂ ಚರ್ಮಂ ಚ ವಾಹನಂ ಮಹೋಕ್ಷಃ
ಮಮದಾಸ್ಯಸಿ ಕಿಂ ಕಿಮಾಸ್ತಿ ಶಂಭೋ
ತವ ಪಾದಾಂಬುಜ ಭಕ್ತಿಮೇವ ದೇಹಿ ||
ಇದು ಪರಶಿವನ ಪ್ರಾರ್ಥನೆ "ಶಂಭುವೇ! ವಿಷವೇ ನಿನ್ನ ಆಹಾರ, ಸರ್ಪವೇ ಒಡವೆ, ಚರ್ಮವೇ ಬಟ್ಟೆ, ಎತ್ತೇ ವಾಹನ, ಹೀಗಿರುವಾಗ, ನಾನು ನಿನ್ನನ್ನು, ನನಗೆ ಅಗತ್ಯವಾದ ಆಹಾರಾದಿ ಸುಖ ಭೋಗಗಳನ್ನು ಪ್ರಾರ್ಥಿಸಿಕೊಳ್ಳುವಂತಿಲ್ಲ. ಅದುದರಿಂದ ನಿನ್ನ ಪಾದಕಮಲದ ಭಕ್ತಿಯನ್ನೇ ಕರುಣಿಸು"
    ಹೀಗೆ, ಶ್ರೀ ಶಂಕರಭಗವತ್ಪಾದರು, ತಮ್ಮ ಸ್ತೋತ್ರ ರಚನೆಗಳಲ್ಲಿ, ಭಕ್ತಿಯ ವೈಶಿಷ್ಟ್ಯವನ್ನು ಬಹುವಾಗಿ ಬಣ್ಣಿಸಿ, ಕಲಿಯುಗದ ದುಷ್ಕರ್ಮಿಗಳಾದ ನಮಗೆ, ಭಗವತ್ಸಾಕ್ಷಾತ್ಕಾರಕ್ಕೆ ಸುಲಭವಾದ ಮಾರ್ಗವನ್ನು ತೋರಿದ್ದಾರೆ.

Comments

  1. DushKarmigalada Namage" please remove this sentence. How can any one say we are all " Dushkarmis" !!!!!!!!!!!!

    ReplyDelete
  2. DushKarmigalada Namage" please remove this sentence. How can any one say we are all " Dushkarmis" !!!!!!!!!!!!

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ