ಶಾಕ್ತ ತಂತ್ರಗಳು


ಭಾರತೀಯ ಸಂಸ್ಕೃತಿಗೆ ತಂತ್ರವು ಕೊಡುಗೆ ನೀಡಿರುವುದು ಅನೇಕ ಮುಖಗಳಲ್ಲಿ ಆದರೆ ವಿಶೇಷವಾಗಿ ಶಾಕ್ತಮತಕ್ಕೂ ತಂತ್ರಕ್ಕೂ ಇರುವ ಸಂಬಂಧ ತೀವ್ರ ಸ್ವರೂಪದ್ದು. ಭಾರತದಲ್ಲಿ ಶಕ್ತಿಪೂಜೆ ವೈದಿಕ (ವೇದ ಮೂಲ)ವೋ ಅಲ್ಲವೋ ಎಂಬದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನ ಮತಗಳಿವೆ. “ಭಾರತೀಯ ತಾಂತ್ರಿಕ ಗ್ರಂಥಗಳೆಲ್ಲವೂ ವೇದ ಪ್ರಾಮಾಣ್ಯವನ್ನು ಅಂಗೀಕರಿಸಿವೆ’’ ಎಂಬ ಶ್ರೀಕಂಠಶಾಸ್ತ್ರೀಯವರ ಮಾತು ಚಚ್‌ಪದ (೧೯೭೫, ಪುಟ ೧೭೦).
ಭಾರತದಂತೆ ವಿದೇಶದ ಸಂಸ್ಕೃತಿಗಳಲ್ಲೂ ಶಕ್ತಿಯನ್ನು ತಾಯಿ ಎಂದು ಸ್ವೀಕರಿಸಿ ಪೂಜಿಸುವ ಪದ್ಧತಿಯಿದೆ. ಸುಮೇರಿಯ, ಅಸ್ಸೀರಿಯ, ಫ್ರಿಜಿಯ, ಈಜಿಪ್ಟ್, ಸಿರಿಯಾ ದೇಶಗಳಲ್ಲಿನ ಶಕ್ತಿಪೂಜೆಯಲ್ಲಿ ದ್ವೈತಭಾವ ಮತ್ತು ದೇಹದ ಪುನರುತ್ಥಾನ ತತ್ವಗಳಿಗೆ ಸ್ಥಾನವಿದೆ. ಭಾರತದ ಶಾಕ್ತಮತದಲ್ಲಿ ಮುಖ್ಯವಾಗಿ ಕರ್ಮಷ ಪುನರ್ಜನ್ಮಗಳಿಗೆ ಹೆಚ್ಚಿನ ಸ್ಥಾನವಿದೆ (ಅದೇ, ೧೯೭೫, ಪುಟ ೧೭೦-೭೧).
ವೈದಿಕ ಮತದಲ್ಲಿ ಶಕ್ತಿಪೂಜೆ ಮತ್ತು ತಂತ್ರ ಸಾಹಿತ್ಯ ಮುಖ್ಯವಾಗಿ ಬೆಳೆದಿರುವುದು ಶ್ರೀ ಚಕ್ರ ಪೂಜೆ ಮತ್ತು ದೇವಾಲಯ ನಿರ್ಮಾಣ, ಶಿಲ್ಪಶಾಸ್ತ್ರದ ಸಂದಭಲ್‌ಲಿ. ವೈದಿಕ ವಾಙ್ಮಯದಲ್ಲಿ ಮಂತ್ರ, ಯಂತ್ರ, ನ್ಯಾಸ, ದೀಕ್ಷೆ, ಶ್ರೀ ಚಕ್ರ ಮೊದಲಾದ ಅಂಶಗಳಿಗೆ ಮಹತ್ವ ಹೆಚ್ಚು. ಬೌದ್ಧ ಮತ್ತು ವೈದಿಕರಲ್ಲಿ ಮಂಡಲಗಳಿಗೆ ಸಾಧನೆಯಲ್ಲಿ ಮತ್ತು ಚಿತ್ರಕಲೆಯಲ್ಲಿ ವಿಶೇಷ ಸ್ಥಾನವಿದೆ.
ಶ್ರೀ ಚಕ್ರ ಒಂದು ಯಂತ್ರವಾಗಿದ್ದು ಅದರ ಮಧ್ಯದಲ್ಲಿರುವ ಬಿಂದುವಿನ ಮಂಡಲ/ವೃತ್ತಕ್ಕೆ ಓಡ್ಯಾಣ ಪೀಠ ಎಂದು ಹೆಸರು. ತ್ರಿಕೋಟಾಗಳ ತುದಿಯಲ್ಲಿರುವ ಜಾಗಗಳಿಗೆ ಪೂರ್ಣಗಿರಿ, ಜಾಲಂಧರ ಮತ್ತು ಕಾಮೇಶ್ವರಿ ಪೀಠಗಳೆಂದು ಹೆಸರಿದೆ. ಭಾರತದ ಉದ್ದಗಲಕ್ಕೂ ತಂತ್ರ ಆಚರಣೆಯಲ್ಲಿದ್ದ ಕಾರಣದಿಂದಲೋ ಏನೋ ಈ ಮೂರು ಜಾಗಗಳನ್ನು ಭೌಗೋಳಿಕ ಕ್ಷೇತ್ರಗಳಲ್ಲಿ ಗುರುತಿಸುವ ಪ್ರಯತ್ನ ನಡೆದಿದೆ. ವಾಯುವ್ಯ ಪ್ರಾಂತ್ಯದ ಉದ್ಯಾನ ಎಂಬ ಸ್ಥಳವೇ ಓಡ್ಯಾಣ. ಉತ್ತರ ಬದರಿಯೇ ಪೂರ್ಣಗಿರಿ ಮತ್ತು ಜಲಂಧರ ಜಿಲ್ಲೆಯೇ (ಪಂಜಾಬ್ ರಾಜ್ಯ) ಜಾಲಂಧರ (೧೯೭೫, ಪು. ೭೫). ಭಾರತದ ಪಶ್ಚಿಮದ ಮತ್ತು ವಾಯುವ್ಯ ಭಾಗಗಳಲ್ಲಿ ಬೇರೆ ಬೇರೆ ಐತಿಹಾಸಿಕ ಕಾಲಗಳಲ್ಲಿ ಅನೇಕ ತಾಂತ್ರಿಕಶಾಕ್ತರು ಇದ್ದರೆಂಬುದಕ್ಕೆ ಶ್ರೀ ಚಕ್ರದ ಈ ಭಾಗಗಳು ಸಂಕೇತವಿರಬಹುದು. ಇಂದಿಗೂ ಅಸ್ಸಾಂ ರಾಜ್ಯದ ಕಾಮಾಖ್ಯವನ್ನು ಸತಿಯ ದೇಹವನ್ನು ಶಿವನು ಹೊತ್ತು ತಿರುಗುತ್ತಿದ್ದಾಗ ಆ ದೇಹವನ್ನು ವಿಷ್ಣು  ಕತ್ತರಿಸಿದ ಐತಿಹ್ಯದೊಡನೆ ವಿಶೇಷವಾಗಿ ಸಮೀಕರಿಸಲಾಗುತ್ತದೆ. ಸತಿಯ ದೇಹದ ವಿವಿಧ ಭಾಗಗಳು ಭಾರತದ ವಿವಿಧ ಭಾಗಗಳಲ್ಲಿ ಬಿದ್ದು ಶಕ್ತಿಪೀಠಗಳು ಹುಟ್ಟಿಕೊಂಡವು. ಸತಿಯ ಯೋನಿ ಬಿದ್ಧ ಸ್ಥಳವೇ ಕಾಮಾಖ್ಯ ಎಂಬ ನಂಬಿಕೆಯಿದೆ.
ಯೋಗಶಾಸ್ತ್ರದಲ್ಲಿ ಇಳಾ, ಪಿಂಗಳಾ, ಸುಷುಮ್ನಾ ಎಂಬ ನಾಡಿಗಳಿಗೆ ಸಂಕೇತವಾಗಿ ಗಂಗಾ, ಯಮುನಾ, ಸರಸ್ವತಿ ನದಿಗಳನ್ನು ಇಟ್ಟುಕೊಂಡರೆ ಪ್ರಾಚೀನ ಆರ್ಯಾವರ್ತವೇ ತಂತ್ರಗಳ ಮುಖ್ಯ ಭೂಮಿ ಎನಿಸುತ್ತದೆ. ಈ ಭೂಪ್ರದೇಶಧ ಒಂದು ಮೂಲಗೆ ಇಂದಿನ ಅಫಘಾನಿಸ್ತಾನ, ಮತ್ತೊಂದು ತುದಿಗೆ ಬದರಿಯಾದರೆ, ಮಗದೊಂದು ಅಂಚೇ ಕಾಮಾಖ್ಯ. ಹೀಗೆ ಈ ಭೂಭಾಗವು ಎಷ್ಟೋ ಪುರಾಣದೇವತೆಗಳ ಉಗಮ ಭೂಮಿಯಾದಂತೆ, ತಾಂತ್ರಿಕ ಆಚರಣೆಯ ಪೀಠವೂ ಆಗಿದೆ. ಇಂದಿಗೂ ತಂತ್ರದ ಪ್ರಬಾವವನ್ನು ಬಂಗಾಳ, ಅಸ್ಸಾಂ, ಒರಿಸ್ಸಾ ಮತ್ತು ಹಿಮಾಲಯದ ಪ್ರದೇಶದಲ್ಲಿ ನೋಡಬಹುದು.
ತಂತ್ರದಲ್ಲಿ ಮುಖ್ಯವಾಗಿ ಶ್ರೀವಿದ್ಯಾ ಉಪಾಸನೆ(ಪೂಜೆ)ಯಲ್ಲಿ ಎರಡು ಸಂಪ್ರದಾಯಗಳಿವೆ. ವೇದ-ಪುರಾಣಗಳಲ್ಲಿ ಬರುವ ಋಷಿಗಳಾದ ಅಗಸ್ತ್ಯ ಮತ್ತು ಅವನ ಹೆಂಡತಿ ಲೋಪಾಮುದ್ರೆಯ ಹೆಸರಿನಲ್ಲಿ ಈ ಮಾರ್ಗಗಳನ್ನು ಕ್ರಮವಾಗಿ ಕಾದಿ ಮತ್ತು ಹಾದಿ ಎಂದು ಗುರುತಿಸಲಾಗಿದೆ. ಇವೆರಡರ ಮಿಶ್ರಣವನ್ನು ಕಹಾದಿ ಎನ್ನಲಾಗಿದೆ. ಕಾದಿದೆ ಸಮಯಾಚಾರವೆಂದೂ, ಹಾದಿಗೆ ಕೌಲಮಾರ್ಗವೆಂದೂ, ಕಹಾದಿಗೆ ವಾಮಾಚಾರವೆಂದೂ ಹೆಸರು. ಸಾಮಾನ್ಯವಾಗಿ ಆಧುನಿಕ ಶಿಕ್ಷಿತರಲ್ಲಿ ‘ವಾಮ’ದ ಬಗ್ಗೆ ಭಯ, ದೂರವಿದ್ದರೆ ಒಳ್ಳೆಯದು ಎಂಬ ಭಾವನೆಯಿದೆ. ಇದಕ್ಕೆ ಹಲವು ಕಾರಣಗಳಿವೆ. ಇದರಲ್ಲಿ ಕೆಲವು ವ್ಯಾಖ್ಯಾನಕ್ಕೆ ಸಿಗುವಂತವೂ ಇವೆ. ಉದಾಹರಣೆಗೆ ಈ ಕುರಿತಂತೆ ಸ್ವಾತಂತ್ರ್ಯಪೂರ್ವ ಭಾರತದ ಮವದ ಚಿಂತಕರಲ್ಲೊಬ್ಬರಾದ ಅರವಿಂದರ ವ್ಯಾಖ್ಯೆಯನ್ನು ನೋಡಬಹುದು:
೧. ತಂತ್ರ-ಪುರಾಣಯುಗದಲ್ಲಿ ತ್ರಿಮೂರ್ತಿಗಳಿಗಿಂತ ಭಿನ್ನರಾದ ಹೊಸ ದೇವತೆಗಳು ಹುಟ್ಟಿಕೊಂಡರು, ಹೊಸ ಕಲ್ಪನೆ ಚಿಗುರಿತು.
೨. ವೈದಿಕ ಯಜ್ಞ ವ್ಯವಸ್ಥೆ ಹದ ತಪ್ಪಿತು. ಆಗ ಯಜ್ಞ ಶಾಲೆಗಳ ಬದಲಾಗಿ ದೇವಾಲಯಗಳು ತಲೆಯೆತ್ತಿದ್ದವು.
೩. ಪೂರ್ವಮೀಮಾಂಸೆಯ ಹಿಡಿತದಲ್ಲಿದ್ದ ಯಜ್ಞದ ವ್ಯವಸ್ಥೆಯ ಕರ್ಮಕಾಂಡದ ಸ್ಥಾನವನ್ನು ಭಕ್ತಿ ಪ್ರಧಾನವಾದ ಭಕ್ತಿಕಾಂಡ ಆವರಿಸಿತು.
೪. ಮುಖ್ಯವಾಗಿ ತ್ರಿಮೂರ್ತಿಗಳ ಸ್ವರೂಪಗಳು ಪರಿವರ್ತಿತವಾಗಿ, ಜೊತೆಗೆ ಹಲವು ‘ಜೀರ್ಣ’ಗೊಂಡ ದೇವತೆಗಳ ಶಕ್ತಿಗಳು ಸೇರಿ ಹೊಸದಾದ ಶಕ್ತಿದೇವತೆಯು ಹುಟ್ಟು ಪಡೆಯಿತು.
೫. ಹೊಸದಾಗಿ ಹುಟ್ಟಿದ ಈ ಶಾಕ್ತತಂತ್ರವು ಎರಡು ರೀತಿಯ ಆರಾಧನೆಯನ್ನು ರೂಪಿಸಿತು: ೧) ಅಂತರಂಗದ ಆರಾಧನೆ ಮತ್ತು ೨. ಬಹಿರಂಗದ ಅರ್ಚನೆ, (ಇದರಿಂದಾಗಿ ಏಕಕಾಲದಲ್ಲಿ ಧ್ಯಾನ, ಯೋಗದಂಥ ಆರಾಧನೆಗಳೂ ಪೂಜೆ, ಹಾಡು, ನೃತ್ಯ, ದೇವಾಲಯ ನಿರ್ಮಾಣದಂಥ ಅರ್ಚನೆಗಳೂ ತಲೆಯೆತ್ತಿದವು.)
೬. ಒಟ್ಟಿನಲ್ಲಿ ವೇದ, ಉಪನಿಷತ್ತು, ಜೈನ – ಬೌದ್ಧಗಳ ನಂತರದ ಕಾಲದಲ್ಲಿ ಪುರಾಣ, ತಂತ್ರ ಮತ್ತು ಯೋಗಗಳು ಮಿಶ್ರಗೊಂಡವು. ಪರಸ್ಪರ ಕೊಳುಕೊಡೆ ನಡೆಸಿದವು. ಎಷ್ಟನ್ನೋ ಕಳಕೊಂಡವೋ, ಎಷ್ಟೋ ಹೊಸತನ್ನು ಪಡೆದುಕೊಂಡವು. (ಪುನರುಜ್ಜೀವನದತ್ತ ಹಿಂದೂ ಧಮ೪ – ಅರವಿಂದರು ಅನು: ಡಾ. ಜಿ.ಬಿ. ಹರೀಶ, ೨೦೦೨, ಪುಟ ೫೫-೫೬).
“ವೈದಿಕ ಮತಕ್ಕೂ ತಾಂತ್ರಿಕ ಮತಕ್ಕೂ ಉಪಾಸನಾಕ್ರಮದಲ್ಲಿ ವ್ಯತ್ಯಾಸವೇ ವಿನಾ ಮೂಲತತ್ವವು ಒಂದೇ’’ (ಶ್ರೀಕಂಠಶಾಸ್ತ್ರಿ, ೧೯೭೫, ಪುಟ ೧೭೩) ಎಂಬ ಅರಾಯದಂತೆಯೇ “ಶೂದ್ರ ಮತ್ತು ಸ್ತ್ರೀಯರನ್ನು ಧಾರ್ಮಿಕ ಸ್ಥಾನಮಾನದಿಂದ ಬಹಿಷ್ಕರಿಸಿದ್ದ ಆಸ್ತಿಕ ಮತ್ತು ನಾಸ್ತಿಕ ಗುಪ್ತ ಸಮಾಜಗಳು ತಮ್ಮ ಹೊರ ಆಕೃತಿಯನ್ನು ಬದಲಿಸಿಕೊಂಡವು ಎಂಬ ಒಳನೋಟವೂ ಲಭ್ಯವಿದೆ (ನಾಗರಾಜಪ್ಪ. ಕೆ.ಜಿ. ೧೯೯೮). ಉದಾಹರಣೆಗೆ ಮಿಥಿಲಾ ಪ್ರದೇಶದಲ್ಲಿ (ಇಂದಿನ ಬಿಹಾರ್)’’ ಅಂತಃಶಾಕ್ತ ಬಹಿಃ ಶೈವಾ| ಸಭಾ ಮಧ್ಸೇತು ವೈಷ್ಣವಾ’’ ಎಂಬ ಮಾತು ಪ್ರಚಲಿತವಿದೆ. ಅಂದರೆ ಒಳಗೆ ಶಾಕ್ತ, ಹೊರಗೆ ಶೈವ ಸಭೆಯಲ್ಲಿದ್ದಾಗ ವೈಷ್ಣವ. ಒಂದು ಕೇಂದ್ರದಿಂದ ಹೊರಟ ಮೂರು ವೃತ್ತಗಳನ್ನು ಕಲ್ಪಿಸಿಕೊಂಡರೇ ಕೇಂದ್ರವೇ ತಂತ್ರ ಪದ್ಧತಿ, ಅದಕ್ಕೆ ಅಂಟಿಕೊಂಡಿರುವ ತೀರಾ ಒಳಗಿನ ವೃತ್ತ ಶಾಕ್ತ, ಮಧ್ಯದ್ದು ಶವ, ತೀರಾ ಹೊರ ವೃತ್ತ ವೈಷ್ಣವ. ಇದೇ ಕೇಂದ್ರ ತ್ರಿವೃತ್ತ ಪರಿಕಲ್ಪನೆಯನ್ನು ವೈಷ್ಣವ ಪಥಕ್ಕೂ ಅನ್ವಯಿಸಬಹುದು. ಲಕ್ಷ್ಮಿಯು ಪುರಾಣಗಳಲ್ಲಿ ವಿಷ್ಣು ಪತ್ನಿಯಾಗಿ ದೊಡ್ಡ ಸ್ಥಾನ ಹೊಂದಿರುವ ವೈಷ್ಣವ ದೇವತೆಯಾದರೂ ಕೊಲ್ಲೂರಿನ ಮಹಾಲಕ್ಷ್ಮಿ ಮತ್ತು ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮಿರಲ್ಲಿ ಒಂದು ವಿಶೇಷವಿದೆ. ಈ ಲಕ್ಷ್ಮಿಯರ ದೇವಾಲಯಕ್ಕೆ ಜಯ-ವಿಜಯರಾಗಲಿ, ಗರುಡ, ಹನುಮರಾಗಲಿ ದ್ವಾರಪಾಲಕರಾಗಿರದೆ ಭೈರವ ದ್ವಾರಪಾಲಕನಾಗಿದ್ದಾನೆ. ಮೂಲತಃ ಶಾಕ್ತಪೀಠಗಳಾದ ಈ ಕೇಂದ್ರಗಳು ಅಂತರಂಗದಲ್ಲಿ ಶಾಕ್ತಪೀಠಗಳು, ಬಹಿರಂಗದಲ್ಲಿ ವೈಷ್ಣವ ಸ್ಥಾನಗಳು.
ಶಾಕ್ತ ಸಾಹಿತ್ಯಗಳಲ್ಲಿ ಒಂದಾದ ಲಲಿತಾ ಸಹಸ್ರನಾಮದಲ್ಲಿ ಲಕ್ಷ್ಮಿಯ ಪ್ರಸ್ತಾಪವಿದೆ. ಭಾರತದ ಎಷ್ಟೋ ಪಂಥಗಳು ತಂತ್ರದಿಂದ ಸ್ಫೂರ್ತಿ ಹೊಂದಿದರೂ ಅದರ ಬಗ್ಗೆ ಭಯ ಮಿಶ್ರಿತ ಗೌರವ, ದೂರದಿಂದಲೇ ಅನುಕರಿಸಲು ಹೋಗಿ ತೀರಾ ಹತ್ತಿರಕ್ಕೆ ಬಂದು ಬಿಡುವ ಸ್ಥಿತಿಯನ್ನು ಹೊಂದಿಬಿಟ್ಟವು. ತಂತ್ರದ ಆಕರ್ಷಣೆ-ವಿಕರ್ಷಣೆಯಲ್ಲಿ ವೈಷ್ಣವ, ಜೈನ, ಶಾಕ್ತ, ಗಣಪತಿ, ಕುಮಾರಸ್ವಾಮಿ, ಸೂರ್ಯ ಆರಾಧನೆಯ ಪಂಥಗಳಿಗೆ ವಿಶೇಷವಾದ ರೂಪ, ಸಂಕೀರ್ಣತೆಗಳು ಒದಗಿವೆ.

(ಸಂಗ್ರಹ : ಕಣಜ)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ