ಹೋಳಿ ಮತ್ತು ಬಣ್ಣದ ಮಾತು

ಇಂದಿನ(1-8-16) ‪#‎ವಿಶ್ವವಾಣಿ‬ ಕಥಾಕಾಲಂನಲ್ಲಿ "ಹೋಳಿ ಮತ್ತು ಬಣ್ಣದ ಮಾತು"
ಧನ್ಯವಾದಗಳು Phaneesh Basavani ‪#‎ವಿ‬+
ಅಂದು ಕಾಮನಹಬ್ಬದ ಸಂಭ್ರಮ, ಹುಡುಗರೂ, ಮುದುಕರೂ, ಕೆಲವು ಜನ ಹೆಣ್ಣು ಮಕ್ಕಳೂ ಕೂಡ ಕಾಮಣ್ಣನ ಮೇಲಣ ಭಂಡಭಂಡಪದಗಳನ್ನು ಹೇಳುತ್ತಾ, ಮನೆಮನೆಗೆ ನುಗ್ಗಿ ಸೌದೆಬೆರಣಿಗಳನ್ನು ಕದಿಯುತ್ತಾ ಅಲೆದಾಡುವುದೇ ರೂಡಿ. ದೊಡ್ಡವರೇ ಅವಕಾಶಕೊಟ್ಟ ಮೇಲೆ ಹುಡುಗರ ಕೋತಿಚೇಷ್ಟೆಗಳಿಗೆ ಕೊನೆಯೆಲ್ಲಿ ?
ಆ ಹುಡುಗರು ಅಲ್ಲಲ್ಲಿ ಚೇಷ್ಟೆಗಳನ್ನು ಮಾಡುತ್ತಾ ಊರ ಮುಂದಕ್ಕೆ ಬಂದರು ಅಲ್ಲಿ ಅರಳಿಕಟ್ಟೆಯ ಮೇಲೆ ನೆಶ್ಯತಿಕ್ಕುತ್ತಾ ಕುಳಿತಿದ್ದ ಸರಗೂರಿನ ಸಂಗಣ್ಣನನ್ನು ಕಂಡರು. ಸಂಗಣ್ಣ ಸ್ವಲ್ಪ ಪೆದ್ದು, ಸ್ವಂತಬುದ್ಧಿಯಿಲ್ಲ. ಅವನನ್ನು ನೋಡಿದೊಡನೆಯೆ ಗುರು "ಎಲೋ ಪ್ರಸಾದ, ಸಿಕ್ಕಿದನಪ್ಪ ಎಳೆನಿಂಬೆಕಾಯಿ! ಏನಾದರೂ ಒಂದು ತಮಾಷೆಮಾಡಬೇಕಲ್ಲಾ! ಅದಕ್ಕೆಲ್ಲಾ ನೀನೇ ಸರಿ, ನಿನ್ನ ಬುದ್ಧಿಕಲಾಕೌಶಲ ಪ್ರಾರಂಭವಾಗಲಿ! ಹೂ, ಜಾಗ್ರತೆ!"ಎಂದ.
ಹನುಮಂತದೇವರನ್ನು ಹೊಗಳಿದಷ್ಟೂ ಅವನಿಗೆ ಶೌರ್ಯ ಹೆಚ್ಚುತ್ತಿತಂತೆ; ನಮ್ಮ ಗುರುಗೂ ಅಷ್ಟೆ! ಪ್ರಸಾದ ಹೊಗಳುತ್ತಲೂ ಹುಡುಗರೆಲ್ಲ ಅವನನ್ನು ಮತ್ತಷ್ಟು ಉಬ್ಬಿಸಿ ಅಟ್ಟಕ್ಕೇರಿಸಿದರು. ಗುರುನೂ ಸ್ವಲ್ಪ ಯೋಚಿಸಿ "ನೀವೆಲ್ಲಾ ನಾನು ಮಾಡಿದ ಹಾಗೆ ಮಾಡಬೇಕು. ಎಲ್ಲರೂ ಗಂಭೀರವಾಗಿ ನನ್ನ ಹಿಂದೆ ಬನ್ನಿ, ತಿಳಿಯಿತೋ? ಎಂದು ಹೇಳುತ್ತಾ ಮೆಲ್ಲ ಮೆಲ್ಲಗೆ ಮಹದೇವನ ಹತ್ತಿರ ಅಳುಮುಖಹಾಕಿಕೊಂಡು ಹೋಗಿ "ಸಂಗಣ್ಣ, ಸಂಗಣ್ಣ" ಎಂದು ಗದ್ಗದಧ್ವನಿಯಿಂದ ಕೂಗಿದ.
"ಗುರೂ, ಇದೇನೋ ಹೀಗೆ ಮಾಡುತ್ತೀ? ಏನಾಯಿತೋ" ಎಂದ ಸಂಗಣ್ಣ, " ಏನು ಹೇಳಲೋ ಸಂಗಣ್ಣ! ಎಂಥಾ ಕೆಲಸಾಯಿತಪ್ಪ ನಿಮ್ಮ ಮನೇಲಿ! ಹೇಳೋಕೇ ಬಾಯಿಬರೋದಿಲ್ಲವಲ್ಲಾ! ಅಯ್ಯಯ್ಯೋ!" ಎಂದು ಗುರೂ ಅಳತೊಡಗಿದನು. ಸಂಗಣ್ಣನಿಗೆ ಘಾಬರಿಯಾಗಿ ನೆಶ್ಯವನ್ನು ಕೈಯಲ್ಲಿ ಹಾಗೆಯೇ ಹಿಡಿದುಕೊಂಡು "ಗುರೂ, ಬೇಗ ಹೇಳೊ, ಮನೇಲಿ ಅವಳಿಗೆ ಏನಾದರೂ ಆಯಿತೇನೋ?" ಎಂದ. "ಕಾಯಿಲೆ ಏನೂ ಇಲ್ಲ. ಅಯ್ಯೋ! ಎಂಥ ಗೌರಮ್ಮನಂಥ ಮುತ್ತೈದೆಯಲ್ಲೋ! ಅಂಥಾಕೆಗೆ ಇಂಥಾ ವಿಪತ್ತು ಬರಬಹುದೇ? ಭಗವಂತ!"
"ಎನೋ ಅದು? ಏನಾಯಿತೋ? ಬೇಗ ಹೇಳಬಿಡಬಾರದೆ?"
"ನಿಮ್ಮಕೆಗೆ, ಬಂಗಾರದಂಥ ಮುತ್ತೈದೆತನ ಹೋಯಿತಲ್ಲಪ್ಪ! ವಿಧವೆಯಾಗಿಬಿಟ್ಟಳು! ಅಯ್ಯೋ! ಆ ದೇವರಿಗೆ ಕಣ್ಣು ಇದ್ದರೆ ಹೀಗೆ ಮಾಡುತ್ತಿದ್ದನೆ?"
"ಏನು! ಏನು! ವಿಧವೆಯೆ! ಅದು ಯಾರು ಹೇಳಿದರೋ?"
"ನಾನೇ-ಇದೇ ಕಣ್ಣಲ್ಲಿ-ನೋಡಿದೆನಲ್ಲಪ್ಪ ಅಬ್ಬಬ್ಬ! ನನ್ನ ಕಣ್ಣು ಹಾಳಾಗಬಾರದೆ? ಸಂಗಣ್ಣ, ನಾನೇನು ಸುಳ್ಳುಹೇಳೋನೆ? ಅದರಲ್ಲೂ ನಿನ್ನ ವಿಷಯದಲ್ಲಿ? ನಿನಗೇನು ಗೊತ್ತಿಲ್ಲವೆ?" ಎಂದು ಗುರೂನೂ ಗಟ್ಟಿಯಾಗಿ ಅತ್ತುಬಿಟ್ಟನು. ಸಂಗಣ್ಣ ದುಃಖದಿಂದ ಕೈಲಿದ್ದ ನೆಶ್ಯವನ್ನು ಕೊಡವಿಬಿಟ್ಟ ಅವನ ಕಣ್ಣಿಗೂ ಬಿತ್ತು, ಹುಡುಗರ ಕಣ್ಣಿಗೂ ಬಿತ್ತು, ಎಲ್ಲರೂ ಕಣ್ಣು ತಿಕ್ಕುತ್ತ ಅಳತೊಡಗಿದರು. ಸಂಗಣ್ಣನಿಗೆ ದಿಕ್ಕೇ ತೋಚಲಿಲ್ಲ "ಅಯ್ಯೋ ಹೆಂಡತಿಯೇ! ನಿನಗೆ ಇಂಥ ವಿಪತ್ತು ಬರಬಹುದೆ! ಮುತ್ತೈದೆಯಾಗಿದ್ದ ನಿನ್ನನ್ನು ನೋಡಿದ ಈ ಕಣ್ಣುಗಳು ಈಗ ನೀನು ವಿಧವೆಯಾಗಿರುವದನ್ನು ನೋಡಬೇಕಾಯಿತೆ!" ಎಂದು ಬಿದ್ದು ಬಿದ್ದು ಅಳುತ್ತಿದ್ದನು.
ಹುಡುಗರ ಸಂತೋಷಕ್ಕೆ ಪಾರವುಂಟೆ! ಎಲ್ಲರೂ ದೂರ ಹೋಗಿ ಕೇಕೆಹಾಕುತ್ತಾ ಕುಣಿಯುತ್ತಿದ್ದೆವು. ಜನರ ಗುಂಪೂ ಹೆಚ್ಚಾಯಿತು ಅವರಲ್ಲಿ ರಾಯರು ಮಾತ್ರ ಸುಮ್ಮನಿರಲಿಲ್ಲ. "ಅಪ್ಪಾ, ಏಕೋ ಹೀಗಳುತ್ತೀಯ?" ಎಂದರು. "ಏನು ಹೇಳಲಿ ರಾಯರೆ, ನನ್ನ ಹೆಂಡತಿ ವಿಧವೆಯಾಗಿಬಿಟ್ಟಳು. ಏನು ಮಾಡಲಿ! ಅದನ್ನು ನಾನು ಹೇಗೆ ತಡೆದುಕೊಂಡು ಸುಮ್ಮನಿರಲಿ!" ಎನ್ನುತ್ತಾ ಮಹದೇವನು ಇನ್ನೂ ಬಿಕ್ಕಿಬಿಕ್ಕಿ ಅಳತೊಡಗಿದನು.
ರಾಯರು ಇದನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕು "ಎಲಾ ಇದೇನೋ! ನೀನು ಅವಳ ಗಂಡನು ಬದುಕಿದ್ದ ಮೇಲೆ ನಿನ್ನ ಹೆಂಡತಿ ವಿಧವೆಯೆಂದರೇನೋ? ಅದೆಲ್ಲಾದರೂ ಉಂಟೆ?" ಎಂದರು.
"ಕೇಳಿ ಸ್ವಾಮಿ ಇಲ್ಲಿ; ಇವನು, ಈ ಗುರು, ನನ್ನ ಪ್ರಾಣಸ್ನೇಹಿತ, ಕಣ್ಣಾರ ಕಂಡುಬಂದಿದ್ದಾನೆ ಸ್ವಾಮಿ. ಇವನು ಎಂದಿಗೂ ಸುಳ್ಳುನುಡಿಯೋನಲ್ಲ ನೀವೇನಾದರೂ ಹೇಳಿ. ನಮ್ಮ ಗುರು ಹೇಳಿದ ಮೇಲೆ ಅದೇ ನಿಜ" ಎಂದು ಅಳುತ್ತ ಬಿದ್ದು ಹೊರಳಾಡುತ್ತಿದ್ದನು.
"ಹೋಗೋ ಹುಚ್ಚ, ಇವರೆಲ್ಲಾ ಅನ್ನೋದು ನಿಜ; ನೀನು ಶುದ್ಧ ಎಳೆನಿಂಬೆಕಾಯಿ" ಎನ್ನುತ್ತಾ ರಾಯರು ಹೊರಟುಹೋದರು. ಹುಡುಗರೆಲ್ಲಾ ಕುಣಿದು ಕುಪ್ಪಳಿಸುತ್ತಾ ಅಂದಿನ ಹೋಳಿಹಬ್ಬ ಮುಗಿಸಿದರು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ