ಜೀವನ್ಮುಕ್ತಾನಂದ ಲಹರಿ

ಪುರೇ ಪೌರಾನ್ ಪಶ್ಯನ್ನರಯುವತಿನಾಮಾಕೃತಿಮಯಾನ್
ಸುವೇಷಾನ್ ಸ್ವರ್ಣಾಲಂಕರಣಕಲಿತಾಂಶ್ಚಿತ್ರಸದೃಶಾನ್ |
ಸ್ವಯಂ ಸಾಕ್ಷೀ ದ್ರಷ್ಟೇತ್ಯಪಿ ಚ ಕಲಯಂಸ್ತೈಃ ಸಹ ರಮನ್
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||1||
ಪುರದಲ್ಲಿ ಸ್ತ್ರೀಪುರುಷರೆಂಬ ನಾಮರೂಪಗಳಿಂದೊಡಗೂಡಿ ಉತ್ತಮ ವೇಷಗಳಿಂದಲೂ ಚಿನ್ನದ ಭೂಷಣಗಳಿಂದಲೂ ಕೂಡಿರುವ ಚಿತ್ರದಂತೆ ಕಾಣುತ್ತಿರುವ ಪುರಜನರನ್ನು ಕಾಣುತ್ತಾ, ತಾನು ಸಾಕ್ಷಿಯಾದ ದ್ರಷ್ಟೃವೆಂದು ತಿಳಿದುಕೊಂಡು ಅವರೊಡನೆ ಆಡುತ್ತಿರುವ, ಗುರುರೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ವನೇ ವೃಕ್ಷಾನ್ ಪಶ್ಯನ್ ದಲಫಲಭರಾನ್ನಮ್ರಸುಶಿಖಾನ್
ಘನಚ್ಛಾಯಾಚ್ಛನ್ನಾನ್ ಬಹುಲಕಲಕೂಜದ್ದ್ವಿಜಗಣಾನ್ |
ಭಜನ್ ಘಸ್ರೇ ರಾತ್ರಾವವನಿತಲತಲ್ಪೈಕಶಯನೋ
ಮುನಿರ್ವ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||2||
ಅರಣ್ಯದಲ್ಲಿ ಎಲೆ, ಹಣ್ಣು - ಇವುಗಳಿಂದ ತುಂಬಿ, ಬಾಗಿರುವ ಕೊಂಬೆಗಳುಳ್ಳವಾಗಿ, ದಟ್ಟವಾದ ನೆರಳಿನಿಂದ ಮರೆಯಾಗಿರುವ, ಮರಗಳನ್ನು ಕಾಣುತ್ತಾ ಬಹಳ ಇಂಪಾಗಿ ದನಿಗೈಯುತ್ತಿರುವ ಪಕ್ಷಿಗಳ ಗುಂಪುಗಳನ್ನು ಸೇವಿಸುತ್ತಾ, ಹಗಲಲ್ಲೂ ರಾತ್ರೆಯಲ್ಲಿಯೂ ಭೂತಲವೆಂಬ ಒಂದೇ ಹಾಸಿಗೆಯಲ್ಲಿ ಮಲಗುತ್ತಿರುವನಾಗಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಚಿತ್ ಪ್ರಾಸಾದೇ ಕ್ವಚಿದಪಿ ಚ ಸೌಧೇಷು ಧನಿನಾಂ
ಕದಾ ಕಾಲೇ ಶೈಲೇ ಕ್ವಚಿದಪಿ ಚ ಕೂಲೇಷು ಸರಿತಾಮ್
ಕುಟೀರೇ ದಾನ್ತಾನಾಂ ಮುನಿಜನವರಾಣಾಮಪಿ ವಸನ್
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||3||
ಒಂದೊಂದು ವೇಳೆ ಅರಮನೆಯಲ್ಲಿಯೂ ಒಂದೊಂದು ವೇಳೆ ಧನವಂತರ ಮಹಡಿಯಮನೆಗಳಲ್ಲಿಯೂ ಒಂದೊಂದು ವೇಳೆ ಬೆಟ್ಟದಮೇಲೂ ಒಂದೊಂದು ವೇಳೆ ನದಿಗಳ ದಂಡೆಗಳ ಮೇಲೂ (ಒಂದೊಂದು ವೇಳೆ) ದಾಂತರಾದ ಮುನಿಜನಶ್ರೇಷ್ಥರುಗಳ ಗುಡಿಸಲಲ್ಲಿಯೂ ವಾಸಮಾಡುತ್ತಿದ್ದ್ರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕ್ವಚಿದ್ಬಾಲೈಃ ಸಾರ್ಧಂ ಕ್ರತಲಗತಾಲೈಃ ಸಹಸಿತೈಃ
ಕ್ವಚಿತ್ತಾರುಣ್ಯಾಲಙ್ಕೃತನರವಧೂಭಿಃ ಸಹ ರಮನ್ |
ಕ್ವಚಿದ್ವೃದ್ಧೈಶ್ಚಿನ್ತಾಕುಲಿತಹೃದಯೈಶ್ಚಾಪಿ ವಿಲಪನ್
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||4||
ಒಂದೊಂದು ವೇಳೆ ಕೈಚಪ್ಪಾಳೆ ಹಾಕಿಕೊಂಡು ನಗುತ್ತಿರುವ ಹುಡುಗರೊಡನೆ, ಒಂದೊಂದು ವೇಳೆ ಯೌವನದಿಂದ ಅಲಂಕೃತರಾಗಿರುವ ಸ್ತ್ರೀಪುರುಷರೊಡನೆ ಆಡುತ್ತಲೂ ಒಂದೊಂದು ವೇಳೆ ಚಿಂತಾಕ್ರಾಂತವಾದ ಹೃದಯವುಳ್ಳ ಮುದುಕರೊಡನೆ ಅಳುತ್ತಲೂ ಇದ್ದ್ರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಚಿದ್ ವಿದ್ವದ್ಭಿರ್ವಿವಿದಿಷುಭಿರತ್ಯನ್ತವಿರತೈ
ಕದಾಚಿತ್ಕಾವ್ಯಾಲಙ್ಕೃತಿರಸರಸಾಲೈಃ ಕವಿವರೈಃ |
ಕದಾಚಿತ್ಸತ್ತರ್ಕೈರನುಮಿತಿಪರೈಸ್ತಾರ್ಕಿಕವರೈ
ರ್ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||5||
ಒಂದೊಂದು ವೇಳೆ ಜ್ಞಾನಿಗಳೊಡನೆ, (ಒಂದೊಂದು ವೇಳೆ) ಅತ್ಯಂತ ವಿರಕ್ತರಾದ ಜಿಜ್ಞಾಸುಗಳೊಡನೆ ಒಂದೊಂದು ವೇಳೆ ಕಾವ್ಯ, ಅಲಂಕಾರ, ರಸ ಇವುಗಳಲ್ಲಿ ರಸಿಕರಾದ ಕವಿವರರೊಡನೆ, ಒಂದೊಂದು ವೇಳೆ ಸತ್ತರ್ಕಗಳಿಂದ ಅನುಮಾನಮಾಡುತ್ತಿರುವ ತಾರ್ಕಿಕಶ್ರೇಷ್ಠರೊಡನೆ - ಹೀಗೆಲ್ಲ ಇರುತ್ತಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾ ಧ್ಯಾನಾಭ್ಯಾಸೈಃ ಕ್ವಚಿದಪಿ ಸಪರ್ಯಾಂ ವಿಕಸಿತೈಃ
ಸುಗನ್ಧೈಃ ಸತ್ಪುಷ್ಟೈಃ ಕ್ವಚಿದಪಿ ದಲೈರೇವ ವಿಮಲೈಃ |
ಪ್ರಕುರ್ವನ್ ದೇವಸ್ಯ ಪ್ರಮುದಿತಮನಾಃ ಸಂಸ್ತುತಿಪರೋ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||6||
ಒಂದು ವೇಳೆ ಧ್ಯಾನಾಭ್ಯಾಸಗಳಿಂದಲೂ ಒಂದೊಂದು ವೇಳೆ ಅರಳಿದ ಸುವಾಸನೆಯ ಒಳ್ಳೆಯ ಹೂಗಳಿಂದಲೂ ಒಂದೊಂದು ವೇಳೆ ನಿರ್ಮಲವಾದ ಬರಿಯ ಪತ್ರೆಗಳಿಂದಲೂ ದೇವನ ಅರ್ಚನೆಯನ್ನು ಮಾಡುತ್ತಾ ಸ್ತೋತ್ರ ಪರನಾಗಿ ಸಂತುಷ್ಟಮನಸ್ಕನಾಗಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿ ಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಶಿವಾಯಾಃ ಶಮ್ಭೋರ್ವಾ ಕ್ವಚಿದಪಿ ಚ ವಿಷ್ಣೋರಪಿ ಕದಾ
ಗಣಾಧ್ಯಕ್ಷಸ್ಯಾಪಿ ಪ್ರಕಟತಪನಸ್ಯಾಪಿ ಚ ಕದಾ
ಪಠನ್ ವೈ ನಾಮಾಲಿಂ ನಯನರಚಿತಾನನ್ದಸಲಿಲೋ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||7||
ಒಮ್ಮೆ ಶಕ್ತಿಯ, ಒಮ್ಮೆ ಶಂಭುವಿನ, ಇನ್ನೊಮ್ಮೆ ವಿಷ್ಣುವಿನ, ಮತ್ತೊಮ್ಮೆ ಗಣಪತಿಯ ಇನ್ನೂ ಒಂದು ಸಲ ಉದಯವಾದ ಸೂರ್ಯನ ನಾಮಾವಳಿಯನ್ನು ಪಠಿಸುತ್ತಾ ಕಣ್ಣುಗಳಲ್ಲಿ ಆನಂದಬಾಷ್ಪವನ್ನು ಸುರಿಸುತ್ತಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾ ಗಙ್ಗಾಮ್ಭೋಭಿಃ ಕ್ವಚಿದಪಿ ಚ ಕೊಪೋತ್ಥಸಲಿಲೈಃ
ಕ್ವಚಿತ್ಕಾಸಾರೋತ್ಥೈಃ ಕ್ವಚಿದಪಿ ಸದುಷ್ಣೈಶ್ಚ ಶಿಶಿರೈಃ
ಭಜನ್ ಸ್ನಾನಂ ಭೂತ್ಯಾ ಕ್ವಚಿದಪಿ ಚ ಕರ್ಪೂರನಿಭಯಾ
ಮೂರ್ತಿ ವ್ಯಾಮೋಹಂ ಭಜತಿ ರುರುದೀಕ್ಷಾಕ್ವತತಮಾಃ ||8||
ಒಮ್ಮೆ ಗಂಗೆಯ ನೀರಿನಲ್ಲಿ, ಇನ್ನೊಮ್ಮೆ ಭಾವಿಯ ನೀರಿನಲ್ಲಿ, ಮತ್ತೊಮ್ಮೆ ಕೆರೆಯ ನೀರಿನಲ್ಲಿ ಒಮ್ಮೆ ಬಿಸಿನೀರಿನಲ್ಲಿ ಮತ್ತೊಮ್ಮೆ
ತಣ್ಣೀರಿನಲ್ಲಿ, ಕೆಲವು ವೇಳೆ ಕರ್ಪೂರದಂತೆ ಬೆಳ್ಳಗಿರುವ ವಿಭೂತಿಯಿಂದ, ಸ್ನಾನವನ್ನು ಮಾಡುತ್ತಿದ್ದ್ರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ. 

ಕದಾಚಿಜ್ಜಾಗರ್ತ್ಯಾಂ ವಿಷಯಕರಣೈಃ ಸಂವ್ಯವಹರನ್
ಕದಾಚಿತ್ಸ್ವಪ್ನಸ್ಥಾನಪಿ ಚ ವಿಷಯಾನೇವ ಚ ಭಜನ್ |
ಕದಾಚಿತ್ಸೌಷುಪ್ತಂ ಸುಖಮನುಭವನ್ನೇವ ಸತತಂ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||9||
ಒಮ್ಮೆ ಎಚ್ಚರದಲ್ಲಿ ಇಂದ್ರಿಯವಿಷಯಗಳಿಂದ ವ್ಯವಹರಿಸುತ್ತಲೂ ಇನ್ನೊಮ್ಮೆ ಸ್ವಪ್ನದಲ್ಲಿರುವ ವಿಷಯಗಳನ್ನೇ ಸೇವಿಸುತ್ತಲೂ ಮತ್ತೊಮ್ಮೆ ಸುಷುಪ್ತಿಯ ಸುಖವನ್ನೇ ಅನುಭವಿಸುತ್ತಲೂ ಇದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಪ್ಯಾಶಾವಾಸಾಃ ಕ್ವಚಿದಪಿ ಚ ದಿವ್ಯಾಮ್ಬರಧರಃ
ಕ್ವಚಿತ್ಪಞ್ಚಾಸ್ಯೋತ್ಥಾಂ ತ್ವಚಮಪಿ ದಧಾನಃ ಕಟತಟೇ
ಮನಸ್ವೀ ನಿಃಸಙ್ಗಃ ಸುಜನಹೃದಯಾನನ್ದಜನಕೋ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||10||
ಒಂದುಬಾರಿ ದಿಗಂಬರನಾಗಿ ಮತ್ತೊಂದು ಬಾರಿ ದಿವ್ಯವಸ್ತ್ರವನ್ನು ಧರಿಸಿದವನಾಗಿ, ಇನ್ನೊಂದು ಬಾರಿ ಸಿಂಹದಿಂದ ತೆಗೆದ ಚರ್ಮವನ್ನು ಸೊಂಟಕ್ಕೆ ಸುತ್ತಿಕೊಂಡವನಾಗಿ - ಹೀಗಿದ್ದರೂ ಸ್ವತಂತ್ರೇಚ್ಛನಾಗಿ ನಿಃಸಂಗನಾಗಿ ಸಜ್ಜನರ ಹೃದಯಕ್ಕೆ ಆನಂದವನ್ನುಂಟುಮಾಡುತ್ತಾ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಚಿತ್ಸತ್ತ್ವಸ್ಥಃ ಕ್ವಚಿದಪಿ ರಜೋವೃತ್ತಿಷು ಗತ-
ಸ್ತಮೋವೃತ್ತಿಃ ಕ್ವಾಪಿ ತ್ರಿತಯರಹಿತಃ ಕ್ವಾಪಿ ಚ ಪುನಃ |
ಕದಾಚಿತ್ಸಂಸಾರೀ ಶ್ರುತಿಪಥವಿಹಾರೀ  ಕ್ವಚಿದಹೋ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||11||
ಒಂದುವೇಳೆ ಸತ್ತ್ವಗುಣದಲ್ಲಿದ್ದು ಕೊಂಡವನಾಗಿ, ಇನ್ನೊಂದು ವೇಳೆ ರಜೋಗುಣದ ವೃತ್ತಿಗಳಲದಲಿರುತ್ತಾ, ಯಾವಾಗಲೋ ಒಮ್ಮೆ ತಮೋವೃತ್ತಿಯಲ್ಲಿಯೂ ಇರುತ್ತಾ ಮತ್ತೂ ಕೆಲವು ವೇಳೆಗಳಲ್ಲಿ ಈ ಮೂರು ಗುಣಗಳೂ ಇಲ್ಲದವನಾಗಿ ಕೆಲವು ವೇಳೆ ಸಂಸಾರಿಯಾಗಿದ್ದುಕೊಂಡು, ಕೆಲವು ವೇಳೆ ವೇದಾಂತಮಾರ್ಗದಲ್ಲಿ ವಿಹರಿಸುತ್ತಿರುವವನಾಗಿ, ಆಹಾ! ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಚಿನ್ಮೌನಸ್ಥಃ ಕ್ವಚಿದಪಿ ಚ ವಾಗ್ವಾದನಿರತಃ
ಕದಾಚಿತ್ಸಾನನ್ದಂ ಹಸಿತರಭಸಸ್ತ್ಯಕ್ತವಚನಃ |
ಕದಾಚಿಲ್ಲೋಕಾನಾಂ ವ್ಯವಹೃತಿಸಮಾಲೋಕನಪರೋ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||12||
ಒಂದೊಂದು ವೇಳೆ ಮೌನಿಯಾಗಿರುತ್ತಾ ಒಂದೊಂದು ವೇಳೆ ವಾಗ್ವಾದದಲ್ಲಿ ನಿರತನಾಗಿದ್ದುಕೊಂಡು ಒಂದೊಂದು ವೇಳೆ ಮಾತನ್ನು ಬಿಟ್ಟು, ಆನಂದದಿಂದ ಗಟ್ಟಿಯಾಗಿ ನಗುತ್ತಾ, ಒಂದೊಂದು ವೇಳೆ ಜನರ ವ್ಯವಹಾರವನ್ನು ನೋಡುತ್ತಾ ಹೀಗೆಲ್ಲ ಇದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಚಿಚ್ಚ ಸ್ತ್ರೀಣಾಂ ವಿಕಚಮುಖಪದ್ಮೇಷು ಕಮಲಂ
ಕ್ಷಿಪಂಸ್ತಾಸಾಂ ಕ್ವಾಪಿ ಸ್ವಯಮಪಿ ಚ ಗೃಹ್ಣನ್ ಸ್ವಮುಖತಃ |
ತದದ್ವೈತಂ ರೂಪಂ ನಿಜಪ್ರವಿಹೀನಂ ಪ್ರಕಟಯನ್
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||13||
ಒಂದೊಂದು ವೇಳೆ ಸ್ತ್ರೀಯರ ಅರಳಿದ ಮುಖಕಮಲಗಳಲ್ಲಿ ಅನ್ನದ ತುತ್ತನ್ನಿಡುತ್ತಾ, ಒಂದೊಂದು ವೇಳೆ ಅವರು ಕೊಟ್ಟ ತುತ್ತನ್ನು ತನ್ನ ಬಾಯಿಯಿಂದಲೇ ಗ್ರಹಿಸುತ್ತಾ ತಾನು, ಮತ್ತೊಬ್ಬರು - ಎಂಬ ಭೇದವಿಲ್ಲದ ಆ ಅದ್ವೈತ ರೂಪವನ್ನು ಪ್ರಕಟಿಸುತ್ತಾ ಇದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕ್ವಚಿಚ್ಛೈವೈಃ ಸಾರ್ಧಂ ಕ್ವಚಿದಪಿ ಚ ಶಾಕ್ತೈಃ ಸಹ ರಮನ್
ಕದಾ ವಿಷ್ಣೋರ್ಭಕ್ತೈಃ ಕ್ವಚಿದಪಿ ಚ ಸೌರೈಃ ಸಹ ವಸನ್ |
ಕದಾಚಿದ್ಗಾಣೇಶೈರ್ಗತಸಕಲಭೇದೋsದ್ವಯತಯಾ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||14||
ಕೆಲವು ವೇಳೆಗಳಲ್ಲಿ ಶೈವರೊಡನೆ, ಕೆಲವು ವೇಳೆಗಳಲ್ಲಿ ಶಾಕ್ತರೊಡನೆ ಇದ್ದು ಸಂತಸಪಡುತ್ತಾ, ಕೆಲವು ವೇಳೆಗಳಲ್ಲಿ ವಿಷ್ಣುವಿನ ಭಕ್ತರೊಡನೆಯೂ ಕೆಲವು ವೇಳೆಗಳಲ್ಲಿ ಸೂರ್ಯೋಪಾಸಕರೊಡನೆಯೂ ವಾಸಮಾಡುತ್ತಾ, ಕೆಲವು ವೇಳೆಗಳಲ್ಲಿ ಗಾಣಾಪತ್ಯರೊಡನೆಯೂ ಇರುತ್ತ ಅದ್ವಯನಾಗಿರುವದರಿಂದ ಯಾವದೊಂದು ಭೇದವೂ ಇಲ್ಲದವನಾಗಿ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ನಿರಾಕಾರಂ ಕ್ವಾಪಿ ಕ್ವಚಿದಪಿ ಚ ಸಾಕಾರಮಮಲಂ
ನಿಜಂ ಶೈವಂ ರೂಪಂ ವಿವಿಧಗುಣಭೇದೇನ ಬಹುಧಾ |
ಕದಾಶ್ಚರ್ಯಂ ಪಶ್ಯನ್ ಕಿಮಿದಮಿತಿ ಹೃಷ್ಯನ್ನಪಿ ಕದಾ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||15||
ಒಮ್ಮೆ ನಿರಾಕಾರವಾದ, ಮತ್ತೊಮ್ಮೆ ನಿರ್ಮಲವಾದ ಸಾಕಾರವಾದ ತನ್ನ ಶಿವರೂಪವನ್ನು ಬಗೆಬಗೆಯ ಗುಣಭೇದಗಳಿಂದ ಬಲುಬಗೆಯಾಗಿರುವದನ್ನು ಕಾಣುತ್ತಾ ಒಮ್ಮೆ ಇದೇನು? ಎಂದು ಆಶ್ಚರ್ಯವನ್ನು ಕಾಣುತ್ತಾ ಒಮ್ಮೊಮ್ಮೆ ಆನಂದವನ್ನು ಪಡೆಯುತ್ತಾ ಇದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾದ್ವೈತಂ ಪಶ್ಯನ್ನಖಿಲಮಪಿ ಸತ್ಯಂ ಶಿವಮಯಂ
ಮಹಾವಾಕ್ಯಾರ್ಥಾನಾಮವಗತಿಸಮಭ್ಯಾಸವಶತಃ |
ಗತದ್ವೈತಾಭಾಸಃ ಶಿವ ಶಿವ ಶಿವೇತ್ಯೇವ ವಿಲಪನ್
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||16||
ಕೆಲವು ವೇಳೆಗಳಲ್ಲಿ (ಈ ಪ್ರಪಂಚ)ವೆಲ್ಲವನ್ನು ಸತ್ಯವೂ ಶಿವಮಯವೂ ಆದ ಅದ್ವೈತವೇ ಎಂಬುದನ್ನು ಮಹಾವಾಕ್ಯಗಳ ಅರ್ಥದ ಜ್ಞಾನದ ಅಭ್ಯಾಸದ ವಶದಿಂದ ಕಂಡುಕೊಂಡು ದ್ವೈತಾಭಾಸವನ್ನು ತೊಲಗಿಸಿಕೊಂಡು ಶಿವ, ಶಿವ, ಶಿವ, ಎಂದೇ ಹೇಳಿಕೊಳ್ಳುತ್ತಿರುವವನಾಗಿ ಗುರುದೀಕ್ಷೆಯಿಂದ ಆ ಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಇಮಾಂ ಮುಕ್ತಾವಸ್ಥಾಂ ಪರಮಶಿವಸಂಸ್ಥಾಂ ಗುರುಕೃಪಾ
ಸುಧಾಪಾಙ್ಗವಾಪ್ಯಾಂ ಸಹಜಸುಖವಾಪ್ಯಾಮನುದಿನಮ್ |
ಮುಹುರ್ಮಜ್ಜನ್ ಮಜ್ಜನ್ಭಜತಿ ಸುಕೃತೀ ಚೇನ್ನರವರ
ಸ್ತದಾ ಯೋಗೀ ತ್ಯಾಗೀ ಕವಿರಿತ ವದನ್ತೀಹ ಕವಯಃ ||17||
ಗುರುಕೃಪೆಯ ಅಮೃತಕಟಾಕ್ಷದಿಂದ ಪಡೆದುಕೊಳ್ಳಬೇಕಾಗಿರುವ ಈ ಮುಕ್ತಾವಸ್ಥೆಯಾದ ಪರಮಶಿವನಿಷ್ಠೆಯನ್ನು ಸಹಜಾನಂದವಾಪಿಯಲ್ಲಿ ದಿನದಿನವೂ ಮುಳುಮುಳುಗಿ ಸುಕೃತಿಯಾದ ಮನುಷ್ಯಶ್ರೇಷ್ಠನು ಪಡೆದುಕೊಳ್ಳುತ್ತಾನಾದರೆ, ಆಗ ಅವನೇ ಯೋಗಿಯು, ತ್ಯಾಗಿಯೂ, ಕವಿಯೂ ಎಂದು ಬಲ್ಲವ್ರು ಹೇಳುವರು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ