ವೈಕುಂಠದವರೂ ಕೈಲಾಸದವರೂ

#ವೇದಾಂತ_ಸಣ್ಣ_ಕಥೆ

ಪರೋಕ್ಷಾಸತ್ಫಲಂ ಕರ್ಮ ಜ್ಞಾನಂ ಪ್ರತ್ಯಕ್ಷಸತ್ಫಲಮ್ |
ಜ್ಞಾನಮೇವಾಭ್ಯಸೇತ್ತಸ್ಮಾದಿತಿ ವೇದಾನ್ತಡಿಣ್ಡಿಮಃ ||
ಹಿಂದೆ ನಗರವೆಂಬ ರಾಜ್ಯದಲ್ಲಿ ಶಿವಪ್ಪನಾಯಕನೆಂಬ ಒಬ್ಬ ಅರಸ ಆಳುತ್ತಿದ್ದನು. ಆತನ ರಾಜ್ಯದಲ್ಲಿ ವೀರಶೈವರಿಗೆ ಹೆಚ್ಚಿನ ಆಶ್ರಯವಿರುತ್ತಿದ್ದದ್ದರಿಂದ ಕೆಲವು ಜನ ಮೂಢರು ವೈಷ್ಣವಮತನಿಂದೆಯನ್ನು ಮಾಡುವದು ಅರಸನ ಮೆಚ್ಚುಗೆಗೆ ಕಾರಣವೆಂದು ಭಾವಿಸಿದ್ದರು.
ಒಂದು ದಿನ ಒಬ್ಬ ಜಂಗಮಯ್ಯನ ಸಭೆಯಲ್ಲಿ ದೊರೆಯನ್ನು ಏಕವಚನದಿಂದಲೇ ಸಂಬೋಧಿಸುವದಕ್ಕೆ ಪ್ರಾರಂಭಿಸಿ "ಶಿವಗಾ, ಕೈಲಾಸದ ವರ್ಣನೆಯನ್ನು ಹೇಳುತ್ತೇನೆ, ಕೇಳು - ಅಲ್ಲಿ ಶ್ರೀಮಹಾದೇವನ ಪಾದಗಳನ್ನು ವಿಷ್ಣುವೇ ಒತ್ತುತ್ತಿರುವನು; ಲಕ್ಷ್ಮಿಯೇ ಆತನಿಗೆ ಬೀಸಣಿಗೆ ಹಾಕುತ್ತಿರುವಳು; ಬ್ರಹ್ಮಾದಿಗಳು 'ನಮಗೇನಾದರೂ ಊಳಿಗವು ಸಿಕ್ಕೀತೇ?' ಎಂದು ಕಾದುಕೊಂಡಿರುವರು. ಸಣ್ಣ ಪುಣ್ಣ ದೇವತೆಗಳ ಪಾಡಂತೂ ಹೇಳತೀರದು, ಅವರೆಲ್ಲ ಅಲ್ಲಿ ಅಡಿಯಾಳುಗಳಾಗಿ ಮಹಾದ್ವಾರದ ಹೊರಗೆ ಇರುವರು. ಇನ್ನು ವಿಷ್ಣುವನ್ನು ನಂಬಿಕೊಂಡಿರುವ ಹಾರುವರಿಗೆ ಆ ಲೋಕಕ್ಕೆ ಪ್ರವೇಶವೇ ಇಲ್ಲವೆಂಬುದನ್ನು ಮತ್ತೆ ಹೇಳಬೇಕೆ?" ಎಂದು ವೀರಾವೇಷದಿಂದ ಹೇಳುತ್ತಿದ್ದನು. ದೊರೆಯು ನಿಜವಾಗಿ ಶಿವಭಕ್ತನಾದರೂ ದುರಭಿಮಾನಿಯಲ್ಲವಾದ್ದರಿಂದ ಇದನ್ನು ಕೇಳುವದಕ್ಕೂ ಮನಸ್ಸೊಪ್ಪದೆ, ಅಯ್ಯನ ಶಿವಭಕ್ತನೆಂಬುದರ ಮೇಲೆ ಇಂಥ ಮಾತನಡಬೇಡವೆಂದು ಹೇಳುವದಕ್ಕೂ ನಾಲಗೆ ಬರದೆ ಚಿಂತಿಸುತ್ತಿದ್ದನು.
ಆ ಸಮಯಕ್ಕೆ ವೀರವೈಷ್ಣವನಾದ ಬ್ರಾಹ್ಮಣನೊಬ್ಬನು ಅಲ್ಲಿ ಬಂದು "ಮಹಾಪ್ರಭೋ, ನನಗೆ ಪುರಾಣಗಳಲ್ಲಿ ಮಹಾಪರಿಶ್ರಮವದು. ಮುಖ್ಯವಾಗಿ ವಿಷ್ಣುಪುರಾಣಗಳನ್ನು ಚೆನ್ನಾಗಿ ಓದಿದ್ದೇನೆ. ಅವುಗಳಲ್ಲಿ ವೈಕುಂಠವರ್ಣನೆಯನ್ನು ಮಾಡಿರುವ ಬಗೆಯನ್ನು ಸ್ವಲ್ಪಮಟ್ಟಿಗೆ ವಿವರಿಸುತ್ತೇನೆ. ಅದನ್ನು ಕೇಳುವವರಿಂದ ವಿಷ್ಣುಭಕ್ತರಿಗಾಗುವ ಉತ್ತಮ ಗತಿಯು ಪ್ರಭುಚಿತ್ತಕ್ಕೆ ವೇದ್ಯವಾಗುವದು. ಆ ಮಹಾಲೊಕದಲ್ಲಿ ಶ್ರೀಮಹಾವಿಷ್ಣುವು ಉಚ್ಚಾಸನದಲ್ಲಿ ಕುಳಿತರುವನು. ರುದ್ರದೇವರೇ ಕಾಲೊತ್ತುತ್ತಿರುವರು ಪಾರ್ವತಿಯೇ ಬೀಸಣಿಗೆ ಹಾಕುತ್ತಿರುವಳು ಎಂದುಮೊದಲಾಗಿ ಹೇಳುತ್ತಿರುವಷ್ಟರಲ್ಲಿ ಜಂಗಮಯ್ಯನ ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು 'ಏನೆಲೇ ಹಾರುವ! ಎಂದಾದರೂ ಶಾಸ್ತ್ರವನ್ನು ಓದಿದ್ದೀಯೋ ಇಲ್ಲವೋ ?ಶ್ರೀಪರಮೇಶ್ವರನಿಗ ವಿಷ್ಣುವು ಭಕ್ತನಾಗಿರುವನೆಂಬ ಉತ್ತಮತತ್ತ್ವವನ್ನರಿಯದೆ ತಲಹರಣೆ ಹರಟುವುದಕ್ಕೆ ಪ್ರಾರಂಭಿಸಿದೆಯೋ? ಶಿವಗಾ, ಶಿವನಿಂದೆಯನ್ನು ಹೇಳಬಾರದು. ಇವನಿಗೆ ತಕ್ಕ ಶಿಕ್ಷೆಯನ್ನು ಈಗಲೇ ಮಾಡಿಸಬೇಕು!' ಎಂದನು.
ಆಗ ಶಿವಪ್ಪನಾಯಕನು 'ಬುದ್ಧೀ, ಇದೆಲ್ಲ ವೈಕುಂಠದವರೂ ಕೈಲಾಸದವರೂ ನಿರ್ಣಯಿಸುವ ವಿಷಯ. ಈ ದೀನನು ವೈಕುಂಠವನ್ನೂ ನೋಡಿಲ್ಲ ಕೈಲಾಸವನ್ನೂ ನೋಡಿಲ್ಲ, ಹೀಗಿರುವಲ್ಲಿ ಹಾರುವಯ್ಯನು ಹೇಳುವದನ್ನು ತಪ್ಪೆಂದು ಹೇಗೆತಾನೆ ನಿರ್ಣಯಿಸಿಯಾನು ?' ಎಂದು ವಿನಯದಿಂದ ಉತ್ತರಕೊಟ್ಟನಂತೆ.
ವೇದಾಂತಕ್ಕೂ ಉಳಿದ ಮತಗಳಿಗೂ ಆಗುವ ಫಲದ ವಿಷಯದಲ್ಲಿ ಒಂದು ಮುಖ್ಯ ಹೆಚ್ಚುಕಡಿಮೆಯಿರುವದು. ಮಿಕ್ಕ ಎಲ್ಲಾ ದರ್ಶನಕಾರರೂ ತಮ್ಮ ಮತವನ್ನು ನಂಬಿ ನಡೆಯುವವರಿಗೆ ಸತ್ತಮೇಲೆ ಇಂಥಿಂಥ ಫಲವು ಸಿಕ್ಕುವದು - ಎಂದು ಬಣ್ಣಿಸಿ ನುಡಿಯುತ್ತಿರುವರು. ಒಂದು ಮತದವರು ಮತ್ತೊಂದು ಮತದಲ್ಲಿ ಹೇಳಿದ ಫಲವನ್ನು ಅಲ್ಲಗಳೆದು ತಮ್ಮದೇ ಸರಿಯಾದ ಮತವೆಂದು ಹೇಳುತ್ತಿರುವರು. ಇವರೆಲ್ಲರೂ ಸತ್ತಮೇಲೆ ಆಗುವ ಫಲವನ್ನೇ ಹೇಳುತ್ತಿರುವದರಿಂದ ಯಾವ ಮತವೂ ಸರಿಯೆಂಬುದನ್ನು ಈಗಲೇ ನಿರ್ಣಯಮಾಡುವದಕ್ಕೆ ಆಗುವಂತಿಲ್ಲ. ವೇದಾಂತದ ಮಟ್ಟಿಗೆ ಜ್ಞಾನವಾದ ಕೂಡಲೆ, ಈ ಲೋಕದಲ್ಲಿಯೇ, ಮೋಕ್ಷವು ದೊರೆಯುವದೆಂಬ ಪ್ರತ್ಯಕ್ಷಫಲವನ್ನು ಹೇಳಿರುತ್ತದೆ. ಊಟಮಾಡಿದರೆ ತೃಪ್ತಿಯು ಹೇಗೆ ಎಲ್ಲರಿಗೂ ಪ್ರತ್ಯಕ್ಷವಾಗಿ ಅನುಭವಕ್ಕೆ ಬರುವದೋ ಹಾಗೆ ಜ್ಞಾನದಿಂದ ಆಗುವ ಮೋಕ್ಷವು ನಿಶ್ಚಿತವಾಗಿ ಅನುಭವಕ್ಕೆ ಬರುವದು. ಇಂಥ ಅನುಭವಕ್ಕೆ ಅಪರೋಕ್ಷಾನುಭವವೆಂದು ಹೆಸರು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ