ದಕ್ಷಿಣಾಮೂರ್ತಿಸ್ತೋತ್ರ - 6 - ಆತ್ಮನು ಅದ್ವಿತೀಯಕೂಟಸ್ಥನಿರ್ವಿಶೇಷ ಚೈತನ್ಯಸ್ವರೂಪನು

ರಾಹುಗ್ರಸ್ತದಿವಾಕರೇಂದುಸದೃಶೋ ಮಾಯಾಸಮಾಚ್ಛಾದನಾತ್
ಸನ್ಮಾತ್ರಃ ಕರಣೋಪಸಂಹರಣತೋ ಯೋಭೂತ್ಸುಷುಪ್ತಃ ಪುವಾನ್ |
ಪ್ರಾಗಸ್ವಾಪ್ಸಮಿತಿ ಪ್ರಬೋಧಸಮಯೇ ಯಃ ಪ್ರತ್ಯಭಿಜ್ಞಾಯತೇ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||

    ರಾಹುವು ನುಂಗಿದ ಸೂರ್ಯಚಂದ್ರರಂತೆ, ಮಾಯೆಯ ಮುಸುಕಿನಿಂದ, ಕರಣಗಳು ಉಪಸಂಹಾರವಾದದ್ದರಿಂದ ಯಾವನು ಸನ್ಮಾತ್ರನಾಗಿ ಸುಪ್ತನಾಗಿರುವನೋ ಎಚ್ಚತ್ತಾಗ 'ಹಿಂದೆ ನಿದ್ರೆಮಾಡಿದೆನು' ಎಂದು ಗುರುತಿಸಲ್ಪಡುವನೋ ಅಂಥ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಗೆ ನಮಸ್ಕಾರ!' ಎಂಬುದು ಅಕ್ಷರಾರ್ಥ.

    ದೇಹ, ಪ್ರಾಣ, ಇಂದ್ರಿಯಗಳು, ಬುದ್ಧಿ - ಇವುಗಳ ಸಂಬಂಧದಿಂದ ಸಾಮಾನ್ಯಜನರಿಗೆ ತಾವೇ ಆ ದೇಹಾದಿಗಳೆಂಬ ಭ್ರಾಮತಿಯುಂಟಾಗುತ್ತದೆ; ಸುಷುಪ್ತಿಯೇ ಮುಂತಾದ ಅವಸ್ಥೆಗಳಲ್ಲಿ ಏತರ ಅರಿವೂ ಆಗದೆ ಇರುವದರಿಂದ ಅಲ್ಲಿ ಶೂನ್ಯಸ್ವರೂಪವೇ ಆಗಿರುವೆವೆಂದುಕೊಡ ಅತ್ಯಂತಮೂಢರು ತಿಳಿದುಕೊಳ್ಳುತ್ತಾರೆ ಇವೆಲ್ಲ ಮಾಯಾಶಕ್ತಿಯ ವಿಲಾಸವೇ ಹೊರತು ನಿಜವಲ್ಲ; ಆತ್ಮನು ಎಂದೆಂದಿಗೂ ನಿರ್ವಿಶೇಷಸಚ್ಛಿತ್ಸುಖಾತ್ಮಕನಾಗಿಯೇ ಇರುತ್ತಾನೆ - ಎಂದು ಹಿಂದಿನ ಶ್ಲೋಕದಲ್ಲಿ ತಿಳಿಸಿದ್ದಾಯಿತು. ಈಗ ವಿಶೇಷವಾಗಿ "ಸುಷುಪ್ತಿ" (ಗಾಢನಿದ್ರೆ) ಎಂಬ ಅವಸ್ಥೆಯನ್ನು ಕುರಿತು ವಿಚಾರಿಸಲಾಗುತ್ತದೆ.

    ಸುಷುಪ್ತನಾಗುವದು ಎಂದರೇನು? ಎಚ್ಚರದಲ್ಲಿಯೂ ಕನಸಿನಲ್ಲಿ ನಮ್ಮ ಹೊರಗೆ ಒಂದು ಪ್ರಪಂಚವು ಇರುವಂತೆ ಕಾಣಿಸುತ್ತಿರುವದು; ಒಳಗೆ ನಾವು ಇದ್ದುಕೊಂಡು ಎಲ್ಲವನ್ನೂ ಅರಿಯುತ್ತಿರುತ್ತೇವೆಂಬ ಅರಿವು ಇರುತ್ತದೆ. ಆದರೆ ತನಿ ನಿದ್ರೆಯಲ್ಲಿ ಯಾವದೊಂದರ ಅರಿವೂ ನಮಗೆ ಇರುವದಿಲ್ಲ ಆದರೂ ಆಗ ನಾವು ಅಲ್ಲಿ ಕಲ್ಲು, ಮಣ್ಣು ಮುಂತಾದವುಗಳಂತೆ ಯಾವ ಅರಿವೂ ಇಲ್ಲದೆ ಇರುವೆವೆ ಎಂಬುದನ್ನು ವಿಚಾರಿಸುವದು ಅವಶ್ಯ ಏಕೆಂದರೆ ಕಲ್ಲಿಗೆ ಯಾವ ಅರಿವೂ ಇರುವದಿಲ್ಲ; ಅದಕ್ಕೆ ಹಿಂದೆ ಯಾವಾಗಲಾದರೂ ಅರಿವು ಬರಬಹುದೆಂದಾಗಲಿ ಯಾರೊಬ್ಬರೂ ಕಲ್ಪಿಸಿಲ್ಲ ಕಲ್ಪಿಸುವದಕ್ಕೆ ಆಗುವಂತೆಯೂ ಇಲ್ಲ ಇದರಂತೆ ಚೇತನರಾದ ನಮ್ಮ ಗಳಿಗೆ ಯಾವಾಗಲಾದರೂ ಅರಿವು ಇರಲಿಲ್ಲವೆಂದಾಗಲಿ ಅಥವಾ ಮುಂದೆ ಆ ಅರಿವು ಇಲ್ಲವಾಗಬಹುದೆಂದಾಗಲಿ ನಾವು ಯಾರೂ ಕಲ್ಪಿಸುವದಿಲ್ಲ ಕಲ್ಪಿಸಿಕೊಳ್ಳುವದಕ್ಕೆ ಬರುವದೂ ಇಲ್ಲ ಆದ್ದರಿಂದ ಗಾಢನಿದ್ರೆಯಲ್ಲಿ ನಮಗೆ ಅರಿವು ಹೋಗಿದ್ದು ಎಚ್ಚರಕನಸುಗಳಲ್ಲಿ ಮತ್ತೆ ಬಂದು ಸೇರಿಕೊಳ್ಳುವದೆಂದು ಕಲ್ಪಿಸುವದೂ ಸರ್ವಥಾ ಆಯುಕ್ತವಗಿರುತ್ತದೆ ನಮಗೆ ಯಾವಾಗಲಾದರೂ ಅರಿವು ಇರಲಿಲ್ಲ ಅಥವಾ ಇರುವದಿಲ್ಲ ಎಂದು ಕಲ್ಪಿಸುವದಕ್ಕೆ ಆಗುವದಿಲ್ಲ ಏಕೆಂದರೆ ಹಾಗೆ ಕಲ್ಪಿಸಿಕೊಳ್ಳುವದಕ್ಕೆ ನಮ್ಮ ಚೈತನ್ಯವು ಬೇಕೇ ಬೇಕಲ್ಲವೆ?

    ಹಾಗಾದರೆ 'ಗಾಢನಿದ್ರೆಯಲ್ಲಿ ನಮಗೆ ಅರಿವೇ ಇರುವದಿಲ್ಲ, ನಾವು ಆಗ ಶೂನ್ಯಪ್ರಾಯರಾಗಿರುವೆವು' ಎಂಬ ಸಾಮಾನ್ಯಜನರ ಭಾವನೆಗೇನು ಗತಿ? ಎಂದು ನೀವು ಕೇಳಬಹುದು ಅದಕ್ಕೆ ಉತ್ತರವೇನೆಂದರೆ: ಆಗ ಕರಣಗಳೆಲ್ಲ ಉಪಸಂಹಾರವಾಗಿ ಆತ್ಮನಲ್ಲಿ ಸೇರಿಬಿಟ್ಟಿರುತ್ತವೆ. ಉಪನಿಷತ್ತಿನಲ್ಲಿ ಇದನ್ನು ಹೀಗೆಂದು ವರ್ಣಿಸಿರುತ್ತದೆ. "ಹಕ್ಕಿಗಳು ಸಾಯಂಕಾಲದಲ್ಲಿ ತಮ್ಮ ವಾಸದ ಮರವನ್ನು ಸೇರಿಕೊಳ್ಳುವಂತೆಯೇ, ಪೃಥಿವಿ ಮತ್ತು ಪೃಥಿವೀತನ್ಮಾತ್ರೆ, ಅಪ್ಪು ಮತ್ತು ಅಪ್ಪಿನ ತನ್ಮಾತ್ರೆ ತೇಜಸ್ಸು ಮತ್ತು ತೇಜಸ್ಸಿನ ತನ್ಮಾತ್ರೆ, ವಾಯು ಮತ್ತು ವಾಯುವಿನ ತನ್ಮಾತ್ರೆ ಆಕಾಶ ಮತ್ತು ಆಕಾಶದ ತನ್ಮಾತ್ರೆ, ಚಕ್ಷುರಿಂದ್ರಿಯ ಮತ್ತು ನೋಡತಕ್ಕ ವಿಷಯ, ಶ್ರೋತ್ರ ಮತ್ತು ಕೇಳತಕ್ಕ ಶಬ್ದ, ಘ್ರಾಣ ಮತ್ತು ಮೂಸತಕ್ಕ ವಾಸನೆ, ರಸನೇಂದ್ರಿಯ ಮತ್ತು ಸವಿಯತಕ್ಕ ರುಚಿ, ತ್ವಗಿಂದ್ರಿಯ ಮತ್ತು ಮುಟ್ಟಬೇಕಾದ ಸ್ಪರ್ಶ, ವಾಗಿಂದ್ರಿಯ ಮತ್ತು ಹೇಳುವ ಮಾತು, ಹಸ್ತೇಂದ್ರಿಯ ಮತ್ತು ತೆಗೆದುಕೊಳ್ಳಬೇಕಾಗಿರುವ ವಿಷಯ, ಉಪಸ್ಥೇಂದ್ರಿಯ ಮತ್ತು ಪಡತಕ್ಕ ಸುಖ, ಪಾಯ್ವಿಂದ್ರಿಯ ಮತ್ತು ಬಿಡಬೇಕಾಗಿರುವ ಮಲ, ಪಾದಗಳು ಮತ್ತು ಗಂತವ್ಯ ವಿಷಯ, ಮನಸ್ಸು ಮತ್ತು ಮನನಮಾಡಬೇಕಾದ ವಿಷಯ, ಬುದ್ಧಿ ಮತ್ತು ಅರಿತುಕೊಳ್ಳಬೇಕಾಗಿರುವ ವಿಷಯ, ಅಹಂಕಾರ ಮತ್ತು ಅಭಿಮಾನಪಡಬೇಕಾದ ವಿಷಯ, ಚಿತ್ತ ಮತ್ತು ಅರಿತುಕೊಳ್ಳಬೇಕಾಗಿರುವ ವಿಷಯ ತೇಜಸ್ಸು ಮತ್ತು ಬೆಳಗಬೇಕಾಗಿರುವ ವಿಷಯ, ಪ್ರಾಣ ಮತ್ತು ಒಟ್ಟುಕೊಡಿಸಬೇಕಾಗಿರುವ ವಿಷಯ ಈ ಎಲ್ಲ ಕಾರ್ಯಕರಣಗಳೂ ಪರಮಾತ್ಮನಲ್ಲಿ ಸೇರಿಹೋಗಿರುತ್ತವೆ" (ಪ್ರಶ್ನ 4-7,8). ಇಂದ್ರಿಯಗಳು ಆತ್ಮನಿಗಿಂತ ಬೇರೆಯಾಗಿದ್ದರಲ್ಲವೆ, ನೋಡುತ್ತೇನೆ, ಕೇಳುತ್ತೇನೆ- ಮುಂತಾದ ಅರಿವು ಆಗಬೇಕು? ಯಾವಾಗ ಎಲ್ಲವೂ ಆತ್ಮನಲ್ಲಿ ಸೇರಿ ಹೋಗಿರುವವೋ ಆಗ ಯಾವನು ಏನನ್ನು ಏತರಿಂದ ಹೇಗೆ ಅರಿಯಬೇಕು? ಹೀಗಿರುವದರಿಂದ ಸುಷುಪ್ತಿಯಲ್ಲಿ ನಾವು ಏನನ್ನೂ ಅರಿಯದೆ ಇರುವದು ಅಲ್ಲಿ ನಾವು ಅಚೇತನರಾಗಿರುವದರಿಂದಲ್ಲ ಮತ್ತೇನೆಂದರೆ ಚೈತನ್ಯದ ಗಟ್ಟಿಯೇ ಆಗಿದ್ದು ಬಿಡಿಯರಿವಿಗೆ ಬೇಕಾಗಿರುವ ಇಂದ್ರಿಯಾದಿಗಳು ಇಲ್ಲದ್ದರಿಂದ ಎಂದು ನಿಶ್ಚಯಿಸ ಬೇಕು.

    ಸುಷುಪ್ತಿಯಲ್ಲಿ ನಮಗೆ ಯಾವ ಅರಿವೂ ಆಗುವದಿಲ್ಲ ಎಂಬುದನ್ನೂ ಎರಡು ದೃಷ್ಟಿಗಳಿಂದ ನೋಡಿ, ತಕ್ಕಂತೆ ಯುಕ್ತಿಯನ್ನೂ ಹೊಮದಿಸಿಕೊಳ್ಳಬೇಕಾಗುವದು. ಹೇಗೆಂದರೆ, ಎಚ್ಚರಕನಸುಗಳಲ್ಲಿ ನಮಗೆ ಇಂದ್ರಿಯಗಳು ಬೆಳಕು ಇರುತ್ತದೆ : ಆದ್ದರಿಂದ ಅವುಗಳ ಬೆಳಕಿನಿಂದ ಎಲ್ಲವನ್ನೂ ಅರಿಯುತ್ತಿರುತ್ತೇವೆ ಆದರೆ ಗಾಢನಿದ್ರೆಯಲ್ಲಿ ನಮಗೆ ಮಾಯೆಯು ಕವಿದುಕೊಂಡುಬಿಟ್ಟಿರುತ್ತದೆ ಮಾಯೆ ಎಂದರೆ ನಾಮರೂಪಕರ್ಮಗಳು; ನಾಮರೂಪಕರ್ಮಗಳು ಎಚ್ಚರಕನಸುಗಳಲ್ಲಿ ಬಿಡಿಬಿಡಿಯಾಗಿದ್ದುಕೊಂಡಿರುವದರಿಂದ ಇಂದ್ರಿಯಗಳೆಂಬ ಬೆಳಕುಗಳಿಂದ ವಿಷಯಗಳನ್ನು ನಾವು ಅರಿಯುತ್ತಿರುವೆವು ಆದರೆ ತನಿನಿದ್ರೆಯಲ್ಲಿ ನಾಮರೂಪ ಕರ್ಮಗಳೆಲ್ಲವೂ ಆತ್ಮನಲ್ಲಿ ಒಂದಾಗಿ ಬೆರೆತು ಅವ್ಯಕ್ತವಾಗಿದ್ದುಕೊಂಡು ಬಿಟ್ಟಿರುತ್ತವೆ. ಆ ಮಾಯೆಯು ನಮ್ಮನ್ನು ಮುಚ್ಚಿಕೊಂಡುಬಿಟ್ಟಿರುತ್ತದೆ ಆದ್ದರಿಂದ ಕಣ್ಣುಕಟ್ಟಿಸಿ ಕೊಂಡವರಿಗೆ ಏನೂ ಕಾಣಿಸದೆ ಇರುವಂತೆ ನಮಗ ಏತರ ಅರಿವೂ ಆಗದೆ ಇರುತ್ತದೆ ಸುಷುಪ್ತಿಯ ಅನುಭವವು ಮಾತ್ರ ಹೇಗೋ ನಮಗೆ ಆಗುತ್ತಿರುತ್ತದೆ ಇದಕ್ಕೊಂದು ದೃಷ್ಟಾಂತ : ಸೂರ್ಯನಿಗಾಗಲಿ ಚಂದ್ರನಿಗಾಗಲಿ ರಾಹುಗ್ರಹಣವಾದಾಗ ಆ ಗ್ರಹಣದಿಂದ ಸೂರ್ಯಚಂದ್ರರು ಮುಸುಕುಮುಸುಕಾಗಿ ಕಾಣುತ್ತಿರುತ್ತಾರೆ ಆಗಲೂ ಸೂರ್ಯಚಂದ್ರರ ಪ್ರಕಾಶವೇನೂ ಕಡಿಮೆಯಾಗಿರುವದಿಲ್ಲ; ಜನರ ಕಣ್ಣಿಗೆ ರಾಹುವು ಮರೆಯಾಗಿರುವದರಿಂದ ಅವರಿಗೆ ಸೂರ್ಯನ ಬೆಳಕು ಚೆನ್ನಾಗಿ ಮನವರಿಕೆಯಾಗುವದಿಲ್ಲ. ಇದರಂತೆ ನಮ್ಮ ಆತ್ಮನು ಗಾಢನಿದ್ರೆಯಲ್ಲಿಯೂ ಚೈತನ್ಯಸ್ವರೂಪನೇ ಆಗಿದ್ದರೂ ಕರಣಾದಿಗಳೆಲ್ಲವೂ ಲಯವಾಗಿ ಅವ್ಯಕ್ತವಾಗಿದ್ದುಕೊಮಡು ಆತ್ಮಚೈತನ್ಯಕ್ಕೆ ಮರೆಯಾಗಿದ್ದಂತೆ ಇರುವದರಿಂದ ನಮಗೆ ಅರಿವೇ ಇಲ್ಲ ಎಂಬ ಭ್ರಾಂತಿಯಾಗುತ್ತಿರುವದು ಇದೆಲ್ಲ ಎಚ್ಚರದೃಷ್ಟಿಯಿಮದ ಹೇಳಿದ್ದು ಈ ದೃಷ್ಟಿಯಿಮದ ನೋಡುವವರಿಗೆ ಅನುಕೂಲಿಸುವಂತೆ ಶ್ಲೋಕಕ್ಕೆ ಅರ್ಥವನ್ನು ಮೇಲೆ ಬರೆದಿರುತ್ತೇವೆ.

    ಆದರೆ ಪ್ರತಿಯೊಂದು ಅವಸ್ಥೆಯನ್ನೂ ಆಯಾ ಅವಸ್ಥೆಯ ದೃಷ್ಟಿಯಿಂದ ನೋಡಿ ಅದರ ತತ್ತ್ವವನ್ನು ನಿರ್ಣಯಿಸುವದೇ ಹೆಚ್ಚು ಯುಕ್ತವಾದದ್ದು. ಈ ದೃಷ್ಟಿಯಿಂದ ನೋಡುವವರಿಗೆ' ಅನುಕೂಲವಾಗುವಂತೆಯೇ ಶ್ಲೋಕದ ಪೂರ್ವಾರ್ಧಕ್ಕೆ ಅರ್ಥವನ್ನು ಮಾಡಬಹುದು. ಹೇಗೆಂದರೆ : 'ಮಾಯೆಯ ಮುಸುಕಿನಿಂದ ಯಾವ ಪುರುಷನು ರಾಹುಗ್ರಸ್ತರಾದ ಸೂರ್ಯಚಂದ್ರರಂತೆ ಇರುವನೋ ಸನ್ಮಾತ್ರನಾಗಿದ್ದು ಕರಣಗಳ ಉಪಸಂಹಾರದಿಂದ ಯಾವನು ಸುಷುಪ್ತನೆನಿಸುವನೋ' ಎಂದು ಆ ದೃಷ್ಟಿಯಿಂದ ಅರ್ಥ ಇದರ ಅಭಿಪ್ರಾಯವನ್ನು ಈಗ ವಿವರಿಸುವೆವು.

    ನಮ್ಮ ಆತ್ಮನು ನಿಜವಾಗಿ ಯಾವಾಗಲೂ ಸನ್ಮಾತ್ರನೇ ಆಗಿರುತ್ತಾನೆ. ಅವನ ಸಚ್ಚಿದಾನಂದರೂಪಕ್ಕೆ ಯಾವಾಗಲೂ ಹೆಚ್ಚು ಕುಂದುಗಳಿರುವದಿಲ್ಲ ಹೀಗಿದ್ದರೂ ರಾಹುಗ್ರಸ್ತರಾದ ಚಂದ್ರಸೂರ್ಯರಿಗೆ ಅವರಲ್ಲಿಲ್ಲದ ಅಶುಕ್ಲರೂಪವು ತೋರುವಂತೆ ಆತ್ಮನಿಗೆ ಎಚ್ಚರಕನಸುಗಳಲ್ಲಿ ಅವನಲ್ಲಿಲ್ಲದ ವಿಶೇಷರೂಪವು ಕಾಣಿಸುತ್ತಿರುವದು, ರಾಹುವು ಛಾಯಾಗ್ರಹವಾಗಿರುವದರಿಮದ ನಿಜವಾಗಿ ಸೂರ್ಯಚಂದ್ರರಿಗೆ ಅವನಿಂದ ಯಾವಾಗಲೂ ಯಾವ ಕಲಂಕವೂ ಆಗಿರುವದಿಲ್ಲ; ಇದಲ್ಲದೆ ಛಾಯೆಯು ಎಂದರೆ ನೆರಳು ಆ ಸೂರ್ಯಚಂದ್ರರನ್ನು ಮುಟ್ಟದೆ ಅವರಿಗಿಂತ ಎಷ್ಟೋ ದೂರದಲ್ಲಿದ್ದು ಭೂಮಿಯ ಮೇಲೆ ನಿಂತು ನೋಡುವವರಿಗೆ ಸೂರ್ಯನು ಅಥವಾ ಚಂದ್ರನು ರಾಹುಗ್ರಸ್ತವಾಗಿರುತ್ತಾನೆ ಎಂಬ ಭಾವನೆಯನ್ನುಂಟುಮಾಡುತ್ತಿರುವಂತೆ ಶರೀರೇಂದ್ರಿಯಗಳ ಸಂಘಾತವು ಎಚ್ಚರದಲ್ಲಿಯೂ ಶರೀರೇಂದ್ರಿಯಗಳ ಸಂಘತದ ವಾಸನೆಯಿಂದಾದ ರೂಪವೂ ಮಾತ್ರ ಕನಸಿನಲ್ಲಿಯೂ ಆತ್ಮನಿಗೆ ಸೇರಿಕೊಂಡಿರುವಂತೆ ಅಜ್ಞರಿಗೆ ತೋರುತ್ತಿರುತ್ತದೆ. ನಿಜವಾಗಿ ನೋಡಿದರೆ ರಾಹುವೆಂಬ ನೆರಳು ಹುಸಿತೋರಿಕೆಯಾಗಿರುವದರಿಂದಲೂ ಚಂದ್ರಸೂರ್ಯರನ್ನು ಯಾವಾಗಲೂ ಮುಟ್ಟದೆ ಇರುವದರಿಂದಲೂ ಅವರ ಸ್ವರೂಪಪ್ರಕಾಶಕ್ಕೆ ಯಾವ ಅಡ್ಡಿಯೂ ಎಂದಿಗೂ ಅಗಿರುವದೇ ಇಲ್ಲ ಅಲ್ಲವೆ? ಇದರಂತೆ ಆತ್ಮನಿಗೂ ಸನ್ಮಾತ್ರರೂಪವೂ ಯಾವಾಗಲೂ ಇದ್ದುಕೊಂಡೇ ಇರುತ್ತದೆ; ಆವಿದ್ಯೆಯಿಮದ ಕಲ್ಪಿತವಾಗಿರುವ ನಾಮರೂಪಗಳಿಂದಾಗಿರುವ ದೇಹೇಂದ್ರಿಯಸಂಘಾತದ ಅಥವಾ ಅದರ ವಾಸನೆಯ ಪ್ರಭಾವದಿಂದ ಎಚ್ಚರಕನಸುಗಳಲ್ಲಿ ಆತ್ಮನಿಗೆ ಸಶರೀರತ್ವವೂ ಬಿಡಬಿಡಿಯ ಜ್ಞಾನಗಳೂ ಅವುಗಳ ವಿಷಯಗಳೂ ಸಂಬಂದಿಸಿರುವಂತೆ ಅಜ್ಞರಿಗೆ ತೋರುತ್ತಿರುವದು ಹೀಗೆ ಅವಿವೇಕದಿಂದ ಆಗಿರುವ ಮತ್ತೊಂದು ವಿಶೇಷ ರೂಪವು ಸುಷುಪ್ತಿಯಲ್ಲಿ ಸ್ವಲ್ಪವೂ ಉಳಿಯದಂತೆ ಅಳಿಸಿ ಹೋಗಿರುತ್ತದೆ ಏಕೆಂದರೆ ವಿಶೇಷರೂಪಕ್ಕೂ ದ್ವೈತಕ್ಕೂ ಅವಿದ್ಯೆಯೇ ಕಾರಣ; ಆ ಅವಿದ್ಯೆಯು ಗಾಢನಿದ್ರೆಯಲ್ಲಿ ಇಲ್ಲದೆ ಇರುವದರಿಂದ ಆ ದ್ವೈತವೆಲ್ಲವೂ ಆತ್ಮನಲ್ಲಿಯೇ ಒಂದಾಗಿಬಿಟ್ಟಿರುತ್ತದೆ. ಆದ್ದರಿಂದಲೇ ನಿದ್ರೆಯಲ್ಲಿ ಯಾವ ವಿಶೇಷವಾದ ಅರಿವೂ ಇರುವದಿಲ್ಲ ಎಂದು ಶ್ರುತಿಯು ಹೇಳುತ್ತದೆ : 'ಸತಿ ಸಂಪದ್ಯ ನ ವಿದುಃ ಸತಿ ಸಂಪದ್ಯಾಮಹೇ ಇತಿ' ಸದ್ರೂಪವಾದ ಬ್ರಹ್ಮದಲ್ಲಿ ಬೆರೆತುಹೋಗಿದ್ದರೂ ಹಾಗೆ ಬೆರೆತುಹೋಗಿದ್ದೇವೆ ಎಂದು ಅರಿಯದೆ ಇರುವರು ಎಂದು ಶ್ರುತಿಯ ಅರ್ಥ ಆದ್ದರಿಂದಲೇ ಸೂತ್ರಭಾಷ್ಯದಲ್ಲಿ ಸತಿ ಸಂಪನ್ನಸ್ತಾವದೇಕತ್ವಾನ್ನ ವಿಜಾನಾತೀತಿ ಯುಕ್ತಮ್ (ಸತ್ತಿನಲ್ಲಿ ಬೆರೆತ ಜೀವನಾದರೂ ಆ ಬ್ರಹ್ಮದೊಡನೆ ಬೆರೆತು ಒಂದಾಗಿರುವದರಿಂದ ತಿಳಿಯುವದಿಲ್ಲ ಎಂಬುದು ಯುಕ್ತ) ಎಂದು ಬರೆದಿರುತ್ತಾರೆ. ಜ್ಞಾನಕ್ಕೆ ದ್ವೈತವು ಬೇಕು; ಇಲ್ಲಿ ಆತ್ಮನು ಸನ್ಮಾತ್ರನಾಗಿರುವದರಿಂದ ಅರಿಯುವದಿಲ್ಲ ಎಂಬುದು ಭಾಷ್ಯದ ಅರ್ಥ.

    ನಿಜವಾಗಿ ಆತ್ಮನು ಯಾವಾಗಲೂ ಸಚ್ಚಿದ್ರೂಪನೇ ಆಗಿದ್ದು ಯಾವಾಗಲೂ ಅದೇ ರೂಪದಿಂದ ಇರುತ್ತಾನಾದರೆ 'ಈಗ ಎಚ್ಚರವಾಗಿರುತ್ತಾನೆ, ಆಗ ಗಾಢನಿದ್ರೆಯಲ್ಲಿದ್ದನು' ಎಂದು ಅವಸ್ಥಾಭೇದವಿರುವದಕ್ಕೇನು ಕಾರಣ? ಎಂಬ ಶಂಕೆಗೆ ಈಗ ಪರಿಹಾರವು ಸಿಕ್ಕುತ್ತದೆ: ಎಚ್ಚರಕನಸುಗಳಲ್ಲಿ ಅನೃತವಾದ ಕಾರ್ಯಕರಣಗಳ ಸಂಬಂಧವಿರುತ್ತದೆ; ಕರಣಗಳಿಂದ ವಿಷಯಗಳನ್ನು ಅರಿಯುತ್ತಿರುವದರಿಂದಲೇ ಎಚ್ಚೆತ್ತಿದ್ದಾನೆ ಎಂಬ ವ್ಯವಹಾರವಾಗಿರುತ್ತದೆ. ಆದರೆ ತನಿನಿದ್ರೆಯಲ್ಲಿ ಆ ಕರಣಗಳೆಲ್ಲ ಆತ್ಮನಲ್ಲಿ ಉಪಸಂಹಾರವಾಗಿ ಬೆರೆತುಹೋಗಿಬಿಟ್ಟಿರುವದರಿಂದ ಏನನ್ನೂ ಅರಿಯುವದಿಲ್ಲ ಎಚ್ಚರದಂತೆ ಅಲ್ಲಿ ವಿಶೇಷವಾದ ಅರಿವಿಲ್ಲ ಎಂಬ ಕಾರಣದಿಂದ ಅವನು ಸುಷುಪ್ತನಾಗಿದಾನೆ ಎಂಬ ವ್ಯವಹಾರವಾಗುತ್ತದೆ. ಅಷ್ಟೆ.

    ಹಾಗಾದರೆ ಸುಷುಪ್ತಿಯಲ್ಲಿ ಅವನ ಚೈತನ್ಯವು ಇರುತ್ತದೆಯೆ? ಇದ್ದರೆ ಏಕೆ ಅರಿಯುವದಿಲ್ಲ? ಅದು ಇದೆ ಎಂಬುದಕ್ಕೆ ಏನು ಗುರುತು? ಎಂದು ಯಾರಾದರೂ ಕೇಳಬಹುದು 'ನಾನು ಈವರೆಗೆ ನಿದ್ರಿಸುತ್ತಿದ್ದೆನು' ಎಂಬ ಪರಾಮರ್ಶವು ಎಚ್ಚತ್ತವರಿಗೆ ಆಗುತ್ತದೆಯಲ್ಲವೆ? ಅದು ಏತರ ಬಲದಿಂದ ಆಗುತ್ತದೆ; ಎಚ್ಚರ, ಕನಸು, ತನಿನಿದ್ರೆ- ಈ ಅವಸ್ಥೆಗಳು ಏತರ ಬಲದಿಂದ ಆತ್ಮನಿಗೆ ಆಗುತ್ತವೆ? ಇದನ್ನು ಅಲೋಚಿಸಿದವರಿಗೆ ಇದೆಲ್ಲಕ್ಕೂ ಆತ್ಮನ ಸ್ವರೂಪವೇ ಆಗಿರುವ ಚೈತನ್ಯವೇ ಸಾಧನವೆಂಬುದು ಗೊತ್ತಾಗುತ್ತದೆ. 'ನಾನು ಅವಸ್ಥೆಗಳನ್ನೆಲ್ಲ ನೋಡುತ್ತಿರುವೆನು' ಎಂಬ ಅರಿವು ಈ ಚೈತನ್ಯಬಲದಿಂದಲೇ ಆಗುತ್ತದೆ ಹಾಗಿಲ್ಲದಿದ್ದರೆ 'ಸುಷುಪ್ತಿಯಲ್ಲಿ ನಾನಿರಲಿಲ್ಲ' ಎಂದು ಅರಿವಾಗಬೇಕಾಗಿತ್ತು. ಹಾಗೆ ಆಗಲು ಯಾರಿಗೂ ಶಕ್ಯವಿಲ್ಲ ಆತ್ಮನು ಸ್ವತಂತ್ರನಾಗಿರುತ್ತಾನೆ ಸ್ವತಂತ್ರನಾಗಿ ಅವಸ್ಥೆಗಳನ್ನೆಲ್ಲ ತನ್ನ ಸ್ವರೂಪಚೈತನ್ಯದಿಂದ ಅರಿಯುತ್ತಿರುತ್ತಾನೆ, ಸ್ವತಂತ್ರನಾಗಿ ಅವಸ್ಥೆಗಳನ್ನೆಲ್ಲ ತನ್ನ ಸ್ವರೂಪಚೈತನ್ಯದಿಂದ ಅರಿಯುತ್ತಿರುತ್ತಾನೆ. ಸುಷುಪ್ತಿಯಲ್ಲಿಯೂ ಆ ಚೈತನ್ಯವು ಇದ್ದೇ ಇರುತ್ತದೆ; ಆದರೆ ಅರಿವಿಗೆ ವಿಷಯವಾದ ಮತ್ತೊಂದು ಪದಾರ್ಥವಿರುವದಿಲ್ಲ ಆದ್ದರಿಂದಲೇ 'ನ ತು ತದ್ದ್ವಿತೀಯಮಸ್ತಿ ತತೋನ್ಯದ್ವಿಭಕ್ತಂ ಯತ್ಪಶ್ಯೇತ್' (ಬೃ. 4-3-23) ಅವನಿಗಿಂತ ಬೇರೆಯಾದ ವಸ್ತುವು ವಿಂಗಡವಾಗಿರುವದಿಲ್ಲ; ಹಾಗಿದ್ದಿದ್ದರೆ ಅರಿಯಬಹುದಾಗಿದ್ದಿತು ಎಂದು ಶ್ರುತಿಯೇ ಸಾರುತ್ತಿದೆ.

    ಈಗ ಇನ್ನೊಂದು ವಿಷಯವನ್ನು ತಿಳಿಸಿ ಶ್ಲೋಕದ ವಿವರಣೆಯನ್ನು ಮುಗಿಸಬೇಕಾಗಿದೆ ಆತ್ಮನು ತನಗೆ ತಾನು ಯಾವ ದೇಶದಿಂದಾಗಲಿ ಕಾಲದಿಂದಾಗಲಿ ವಸ್ತುವಿನಿಂದಾಗಲಿ ಮರೆಯಾಗಿರುವದಿಲ್ಲ ಆದ್ದರಿಂದ ಅವನಿಗೆ ತನ್ನ ವಿಷಯದಲ್ಲಿ 'ಅಲ್ಲಿ ಆಗ ಹಾಗಿದ್ದವನು ಇಲ್ಲಿ ಈಗ ಹೀಗಿರುತ್ತೇನೆ ಎಂಬ ರೂಪದ ಪ್ರತ್ಯಭಿಜ್ಞೆಯಾಗುವ ಸಂಭವವಿಲ್ಲ 'ಅಲ್ಲಿ ಆಗ ನೋಡಿದ ದೇವದತ್ತನೇ ಇವನು' ಎಂಬ ರೂಪದ ಅರಿವಿಗೆ ಪ್ರತ್ಯಭಿಜ್ಞೆ ಎಂದು ಹೆಸರು; ಇದು ದೇಶಕಾಲಗಳಲ್ಲಿ ವ್ಯವಹಿತವಾಗಿರುವ - ಮತ್ತೊಂದರಿಂದ ಮರೆಯಾಗಿರುವ ವಸ್ತುವಿನ ವಿಷಯಕ್ಕೆ ಆಗುವ ಜ್ಞಾನ ಆದರೆ ಆತ್ಮನು ನಿತ್ಯಚೈತನ್ಯರೂಪನಾದ್ದರಿಂದ ಅವನಲ್ಲಿ ಯಾಔ ವಿಕಾರವೂ ಆಗುವಂತಿಲ್ಲ ಆಯಿತೆಂದು ಕಲ್ಪಿಸುವದಕ್ಕೂ ಬರುವಂತಿಲ್ಲ ದೇಶ, ಕಾಲ, ಅವಸ್ಥೆಗಳು - ಎಲ್ಲವನ್ನೂ ವ್ಯಾಪಿಸಿಕೊಂಡಿರುವದು ಅವನ ಚೈತನ್ಯ 'ಯೇನ ಸರ್ವಮಿದಂ ತತಮ್' (ಗೀ2-17) ಎಂಬ ಗೀತಾವಚನಕ್ಕೆ ಇದೇ ಅಭಿಪ್ರಾಯ ಹೀಗೆ ಅದ್ವಿತೀಯನಾದ ಆತ್ಮನ ವಿಷಯದಲ್ಲಿ ಪ್ರತ್ಯಕ್ಷವಾಗಿ ಆಗುವ ಅಭಿಜ್ಞೆಯೂ ಇಲ್ಲ ಕಾಲಾಂತರದಲ್ಲಿ ಆಗುವ ಪ್ರತ್ಯಭಿಜ್ಞೆಯೂ ಇಲ್ಲ ಹೀಗಿದ್ದರೂ ಎಚ್ಚರದ ದೃಷ್ಟಿಯಿಮದ ಮೂರು ಅವಸ್ಥೆಗಳುಂಟೆಂದೂ ಅವು ಒಂದಾಗುತ್ತಲೊಂದು ಬರುತ್ತಿರುವವೆಂದೂ ಇಟ್ಟುಕೊಂಡು 'ಹಿಂದೆ ನಿದ್ರಿಸುತ್ತಿದ್ದೆನು' ಎಂದು ಎಚ್ಚರದ ಕಾಲದಲ್ಲಿ ಆತ್ಮನನ್ನು ಗುರುತಿಸುತ್ತಾರೆ ಎಂದು ಶ್ಲೋಕದಲ್ಲಿ ಹೇಳಿದೆ ಈ ಗುರುತಿಸುವ ಜ್ಞಾನದಿಂದಲೂ ಸುಷುಪ್ತಿಯಲ್ಲಿ ಆತ್ಮನು ಚೈತನ್ಯರೂಪದಿಂದ ಇದ್ದೇ ಇರುವನೆಂತಲೂ ಅದೇ ರೂಪವೇ ಈಗ ಅವನಿಗೆ ಅಚ್ಚಳಿಯದೆ ಇರುವದೆಂತಲೂ ಸಿದ್ಧವಾಗುತ್ತದೆ.

    ಒಟ್ಟಿನಲ್ಲಿ ನಮ್ಮಗಳೆಲ್ಲರ ಆತ್ಮನು ನಿತ್ಯಶುದ್ಧಬುದ್ಧಮುಕ್ತಸ್ವಭಾವನಾಗಿ ಯಾವಾಗಲೂ ಒಂದೇ ರೂಪದಿಂದ ಇರುತ್ತಿರುವನಾದರೂ ಎಚ್ಚರದಲ್ಲಿ ಅವಿದ್ಯಾ ಕಲ್ಪಿತನಾಮರೂಪಗಳಿಂದ ಪರಿಚ್ಛಿನ್ನಜ್ಙಾಶಕ್ತಿಗಳುಳ್ಳವನಂತೆ ತೋರುತ್ತಿರುತ್ತಾನೆ. ಸುಷುಪ್ತಿಯ ಅವಸ್ಥೆಯನ್ನು ಚೆನ್ನಾಗಿ ಪರೀಕ್ಷಿಸಿ ವಿಚಾರಮಾಡಿದರೆ ಅಲ್ಲಿಯೂ ಮಿಕ್ಕ ಅವಸ್ಥೆಗಳಲ್ಲಿಯೂ ನಮ್ಮ ಆತ್ಮನು ನಿರ್ವಿಶೇಷನಾದ ಸಚ್ಚಿದ್ಬ್ರಹ್ಮರೂಪನೇ ಆಗಿರುತ್ತಾನೆ ಎಲ್ಲಾ ಅವಸ್ಥೆಗಳನ್ನೂ ತನ್ನ ಚೈತನ್ಯದಿಂದ ವ್ಯಾಪಿಸಿಕೊಂಡಿರುವ ಅವನಿಗೆ ನಿಜವಾಗಿಯೂ ಹೆಚ್ಚಾಗಲಿ ಕುಂದಾಗಲಿ ಎಂದಿಗೂ ಇರುವದಿಲ್ಲ ಎಂಬುದು ಗುರುಮೂರ್ತಿಯಾದ ಆ ದಕ್ಷಿಣಾಮೂರ್ತಿಯಿಂದಲೇ ತಿಳಿದು ಬರುವದು ಎಂದು ಶ್ಲೋಕದ ಅಭಿಪ್ರಾಯ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ