ತ್ಯಾಗರಾಜರು ಆಡುವ ತೀಕ್ಷ್ಣ ನುಡಿ - ಪರಸ್ತ್ರೀ ವ್ಯಾಮೋಹ

    ಸಾಧಾರಣವಾಗಿ ಪುರುಷರು ರಕ್ತಮಾಂಸಾದಿ ಮಾಲಿನ್ಯದಿಂದ ಕೂಡಿದ ಸ್ತ್ರೀ ಶರೀರದಿಂದ ಮೋಹಿತರಾಗುತ್ತಾರೆ. ಸ್ತ್ರೀಯರು ತಮ್ಮ ಹಾವಭಾವ ಮಾಯಾವಿಲಾಸದಿಂದ, ಕಣ್ಣೋಟವೆಂಬ ಬಾಣದಿಂದ ಪುರುಷನನ್ನು ಗೆದ್ದು ಎಷ್ಟೋ ಅಕೃತ್ಯಗಳಿಗೆ ಕಾರಣರಾಗುತ್ತಾರೆ. ಆದ್ದರಿಂದ 'ಎಲೈ ಮನಸ್ಸೇ, ಸ್ತ್ರೀಯರ ಶರೀರ ಕಂಡು ಮೋಸಹೋಗಬೇಡ' - ಇದು ಸ್ತ್ರೀಯರ ಅಪಾಯಕಾರೀ ಸ್ವಭಾವದ ಬಗೆಗೆ ತ್ಯಾಗರಾಜರು ಆಡುವ ತೀಕ್ಷ್ಣ ನುಡಿ.

ಮೇನು ಜೂಚಿ ಮೋಸಪೋಕುಮೀ ಮನಸಾ
ಲೋನಿ ಜಾಡ ಲೀಲಾಗು ಗಾದಾ
ಹೀನಮೈನ ಮಲಮೂತ್ರ ರಕ್ತಮುಲ
ಕಿರವಂಚು ಮಾಯಾಮಯಮೈನ ಚಾನ
ಕನಲನೇಟಿ ಯಂಪಕೋಲ ಚೇತ ಗುಚ್ಚ
ಚನುಲನೆಡಿ ಗಿರುಲ ಶಿರಮುನುಂಚಿ
ಪನುಲ ಚೇತುರಟ .......
        (ಮೇನುಜೂಚಿ)

    ಮೇಲಿನ ಈ ಸಾಲುಗಳು ಪುರುಷನನ್ನು ಆಕರ್ಷಿಸುವಲ್ಲಿ ಸ್ತ್ರೀಗಿರುವ ಶಕ್ತಿಯನ್ನು ಮನದಟ್ಟು ಮಾಡುತ್ತದೆ. ಪುರುಷನ ಬದುಕನ್ನು ವ್ಯರ್ಥಗೊಳಿಸುವಲ್ಲಿ ಸ್ತ್ರೀಶಕ್ತಿ ಅದ್ಭುತವಾದು್ಉ. ಆಧ್ಯಾತ್ಮ ಸಾಧನೆಗೆ ಹೊರಟವನನ್ನೂ ದಾರಿತಪ್ಪಿಸಿ ಪ್ರಾಪಂಚಿಕ ಸ್ಥಿತಿಯಲ್ಲೇ ಓಲಾಡುವಂತೆ ಮಾಡುವ ಮೋಹವಿದು ಇಂತಹ ಮೋಹದಿಂದ ಪುರುಷನು ಔನ್ನತ್ಯಕ್ಕೆ ಏರುವ ಬದಲು ಅಧೋಗತಿಗೆ ಇಳಿಯುತ್ತಾನೆ. ಹೀಗೆಂದೇ ತ್ಯಾಗರಾಜರು ಸ್ತ್ರೀವ್ಯಾಮೋಹವನ್ನು ತುಚ್ಛೀಕರಿಸುತ್ತಾರೆ.

    ತ್ಯಾಗರಾಜರಂತಹ ಅನುಭಾವಿಗಳ ಗುರಿ ಎಂದಿಗೂ ಅಧ್ಯಾತ್ಮವಾಗಿರುತ್ತದೆ. ಈ ಧ್ಯೇಯಸಾಧನೆಗೆ ಅಡ್ಡಿಬರುವ ಯಾವುದೇ ವಸ್ತುವನ್ನೂ ಅವರು ಮೊದಲು ಹಂತಗಳಲ್ಲೇ ಹೀಗಳೆಯುತ್ತಾರೆ. ಇದು ಸ್ತ್ರೀಯಾಗಿರಬಹದು ಅಥವಾ ಪುರುಷನಾಗಿರ ಬಹುದು ಅಥವಾ ಪ್ರಾಪಂಚಿಕರು ಪ್ರಿಯವೆಂದು ಭಾವಿಸುವ ಮತ್ತಾವುದೇ ಅಂಶವೂ ಆಗಿರಬಹುದು ಇಲ್ಲಿ ಭಕ್ತರು ಸ್ತ್ರೀಯಾಗಿದ್ದರೆ ಆಕೆ ತನ್ನ ಸಾಧನೆಗೆ ಪುರುಷನೇ ಅಡ್ಡಿಯೆಂದು ಭಾವಿಸುತ್ತಾಳೆ.

    ಭಕ್ತೆಯಾಗಲೀ ಅಥವಾ ಭಕ್ತನಾಗಲೀ ಮಾಡುವ ಈ ರೀತಿಯ ಖಂಡನೆ ತತ್ಕಾಲಿಕವೇ ಹೊರತು ಅದೇ ಅಂತಿಮವಲ್ಲ ಇಲ್ಲಿ ಸಾಧನೆಯ ಹಂತದಲ್ಲಿರುವ ಭಕ್ತರು ತಮ್ಮೊಳಗೇ ಇದ್ದಿರಬಹುದಾದ ಆಸೆ ಅಥವಾ ಚಿತ್ತಚಾಂಚಲ್ಯದಿಂದ ಕೀಳುಕಾಮಕ್ಕೆ ಒಳಗಾಗಬಾರದೆಂದೇ ತಾತ್ಕಾಲಿಕವಾಗಿ ಇಂತಹ ತಂತ್ರವನ್ನು ಅಳವಡಿಸಿಕೊಳ್ಳುತ್ತಾರೆ. ಇಲ್ಲಿ ಭಕ್ತ ತನ್ನಲ್ಲಿನ ದೋಷವನ್ನು ತನ್ನ ಸನಿಹವಿರುವವರ ಮೇಲೆ ಅರೋಪಿಸುತ್ತಾನೆ ಏಕೆಂದರೆ ಆತ್ಮ ನಿಗ್ರಹವೆಂಬುದು ಸುಲಭಸಾಧ್ಯವಲ್ಲ ಯೋಗಕ್ಕೆ ಭಂಗತರುವ ಅಲೋಚನೆಗಳನ್ನು ತಡೆಯುವುದನ್ನೇ ಯೋಗಸೂತ್ರವು 'ಪ್ರತಿಪಕ್ಷಭಾವನ' ಎನ್ನುತ್ತದೆ.

    ಸಾಧಕನು ತನ್ನ ಪಥದಲ್ಲಿ ಮುನ್ನಡೆದಂತೆ ಆತ್ಮನಿಗ್ರಹ ಸಾಧ್ಯವಾಗಿ ಸ್ತ್ರೀಗೆ ಪುರುಷನಾಗಲೀ ಪುರುಷನಿಗೆ ಸ್ತ್ರೀಯಾಗಲೀ ಅಡ್ಡಿ ಎನಿಸುವುದಿಲ್ಲ. ಇದೇ ಪ್ರೀತಿಯಾಗಿ ಮಾರ್ಪಟ್ಟು ಸಾಧಕನು ಕಾರ್ಲೈಲನು ಹೇಳುವಂತೆ "ಜಗತ್ತಿನ ಎಲ್ಲ ವಸ್ತುಗಳಲ್ಲೂ, ಸಂದುಗೊಂದುಗಳಲ್ಲೂ ದೇವರನ್ನೇ ಕಾಣುತ್ತಾನೆ." ಈ ದೃಷ್ಟಿಯಿಂದ ಮೇಲಿನ ಹೇಳಿಕೆಯನ್ನು ಅರ್ಥೈಸಿದರೆ ತ್ಯಾಗರಾಜರು ಸ್ತ್ರೀದ್ವೇಷಿಯಾಗಿರಲಿಲ್ಲವೆಂಬುದು ಮನದಟ್ಟಾಗುತ್ತದೆ.

    ಆದರೆ ಕಾಮಿನಿಯ ಆಸೆಯಿಲ್ಲದ ಸಂಸಾರಿಯನ್ನು ಸ್ವಪ್ನದಲ್ಲಾದರೂ ಕಾಣಲು ಸಾಧ್ಯವೇ? ಅಂಗನೆಯ ಮುಂಗುರುಳನ್ನೂ ಅಲಂಕಾರಗಳನ್ನೂ ಕಂಡು (ಬಾಹ್ಯದಲ್ಲಲ್ಲದಿದ್ದರೂ) ಅಂತರಂಗದಲ್ಲಾದರೂ ಆಶಿಸದೆ ಬದುಕಲಾದರೂ ಸಾಧ್ಯವೇ ಎಂದು ತ್ಯಾಗರಾಜರು ಮತ್ತೊಂದೆಡೆ ಹೇಳುತ್ತಾರೆ.
ತರುಣುಲಾಸಲೇನಿ ಸಂಸಾರುಲು
ಕಲನೈನ ಗಲರಾ ? .........
    (ರಾಮರಾಮರಾಮ ನಾಪೈನೀದಯ)
ನಂಗನಾಚುಲ ಮಾನಗು ಯಂಗ ವಸ್ತ್ರಮುಲ ಬಾಗುಗ
ಮುಂಗುರುಲನು ಗನಿ ಯಂತರಂಗ ಮುನನು ಯಾಶಿಂಚಕ
        (ತಪ್ಪಿಬ್ರತಿಕಿಪೋವ ತರಮಾ )
    ಇಲ್ಲಿ ಮುಖ್ಯವಾಗಿ ತ್ಯಾಗರಾಜರ ಉದ್ದೇಶ ಪರಸ್ತೀಯರಲ್ಲಿ ಆಸಕ್ತಿಗೊಳ್ಳಬಾರದೆಂಬುದಲ್ಲದೆ ಬೇರಲ್ಲ ಅವರು ಹೀಗೆನ್ನಲು ಕಾರಣವುಂಟು ಅವರ ಆರಾಧ್ಯದೇವರು ಏಕಪತ್ನೀವ್ರತಸ್ಥನೆಂದೇ ಪ್ರಖ್ಯಾತನು ಆತನ ಕಾಂತಿಯುತ ಮುಖವನ್ನು ಕಂಡು ಪರಸ್ತ್ರೀಯರೆಲ್ಲ ಮೋಹಿಸಿ ಬರಲು ಆತನು ಅವರೆಲ್ಲರಲ್ಲೂ ತಾಯ್ತನವನ್ನು ಕಂಡನೆಂಬುದು ತ್ಯಾಗರಾಜರ ಮಾತು.
ಕಲಕಲಮನು ಮುಖ ಕಳಗನಿ ಪುರಭಾ
ಮಲು ವಲಚಗ ತಲ್ಲುಲವಲೆ ಜೂಚೆ
        (ನಾಥಾ ಬ್ರೋವವೆ)
    ಏಕ ಪತ್ನಿತ್ವವು ನೈತಿಕವಾಗಿಯಷ್ಟೇ ಅಲ್ಲ, ವ್ಯಾವಹಾರಿಕ ದೃಷ್ಟಿಕೋನದಿಂದಲೂ ಒಳ್ಳೆಯದು ದ್ವಿಪತ್ನಿತ್ವದಲ್ಲಿ ಎರಡು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಒಂದು ಸತಿಯರೆನಿಸುವ ಆ ಇಬ್ಬರು ಸ್ತ್ರೀಯರ ನಡುವೆ ಸಾಮರಸ್ಯ ಕಾಪಾಡುವುದು ಪತಿಗೆ ಒದಗುವ ಮೊದಲ ಕಷ್ಟ ಎರಡು ತನಗೂ ಮತ್ತು ಪತ್ನಿಯರಿಗೂ ನಡುವೆ ಸಾಮರಸ್ಯ ಕಾಯ್ದುಕೊಳ್ಳುವುದು ಎರಡನೆಯ ಕಷ್ಟ ಪುರಂದರರು ಬಲು ಸ್ವಾರಸ್ಯವಾಗಿ 'ಇಬ್ಬರು ಹೆಂಡಿರ ಸುಖವ' ಎಂಬ ರಚನೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ವ್ಯಾವಹಾರಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ ಅವರು ಇದನ್ನು ಪುರುಷನ ದೃಷ್ಟಿಯಿಂದ ಮಾತ್ರ ಕಂಡಿದ್ದಾರಾಗಲೀ ಸ್ತ್ರೀ ದೃಷ್ಟಿಯಿಂದಲ್ಲ ತ್ಯಾಗರಾಜರಾದರೋ ದ್ವಿಪತ್ನಿತ್ವ ಎಂಬ ಮಾತನ್ನೇ ಎತ್ತದೆ ಪತ್ನಿಯೊಬ್ಬಳನ್ನುಳಿದು ಇತರ ಎಲ್ಲ ಸ್ತ್ರೀಯರನ್ನೂ ಮಾತೃ ಅಥವ ಸಹೋದರಿಯರಂತೆ ಪರಿಗಣಿಸಬೇಕೆಂಬ ನೈತಿಕ ಅಂಶವನ್ನು ಶ್ರೀರಾಮನ ಆದರ್ಶದೊಂದಿಗೆ ಪದೇಪದೇ ನುಡಿಯುತ್ತಾರೆ ಅದೇನೇ ಇರಲಿ ಎಲ್ಲಿ ದ್ವಿಪತ್ನಿತ್ವ ಅಥವ ಬಹುಪತ್ನಿತ್ವವಿರುತ್ತದೋ ಅಲ್ಲಿ ಪುರುಷನಿಗೂ ಸುಖವಿಲ್ಲ ಸ್ತ್ರೀಗೂ ಸುಖವಿಲ್ಲ ಈ ಭಾವದಲ್ಲೇ ಪುರಂದರರೂ ತ್ಯಾಗರಾಜರೂ ಪರೋಕ್ಷವಾಗಿ ಏಕಪತ್ನಿತ್ವವನ್ನೇ ಅನುಮೋದಿಸುತ್ತಾರೆಂಬುದಿಲ್ಲಿ ಗಮನಾರ್ಹ.

    ಈ ಆಧಾರದಲ್ಲೇ ಪರಸ್ತ್ರೀವ್ಯಾಮೋಹವನ್ನು ಅವರು ಅನೇಕ ಕೃತಿಗಳಲ್ಲಿ ಖಂಡಿಸುತ್ತಾರೆ. ಅವುಗಳಲ್ಲಿ ಕೆಲವೆಂದರೆ 'ಸರಸೀರುಹಾನನ ರಾಮಯ್ಯ'; 'ಎಟುಲೈನ ಭಕ್ತಿ ವಚ್ಚುಟಕೇ'; 'ನಳಿನಲೋಚನ'; 'ಎವರು ತೆಲಿಯಕ'; 'ಎಂದುಕೋ ಬಾಗತೆಲಿಯದು'; 'ಎಂತನೇರ್ಚಿನ'.

    'ಸ್ತ್ರೀಯರ ಹಿಂದೆ ನಾಯಿಮರಿಗಳಂತೆ ತಿರುಗುವ' ಎಂದು ತ್ಯಾಗರಾಜರು ಹೇಳುವ ಕಟುಮಾತುಗಳು ಕಿವಿಯನ್ನು ಇರಿಯುತ್ತದೆ (ಎಂದುಕೋ ಬಾಗತೆಲಿಯದು) ಪರ ಭಮೆಯರನ್ನು ಆಶಿಸಿ ಅವರೊಂದಿಗೆ ರಾತ್ರೀಹಗಲೂ ಸರಸವಾಡುವವರ ಅಸಾಧು ತನವನ್ನು ಖಂಡಿಸುವ ಮೂಲಕ ಸ್ತ್ರೀವ್ಯಾಮೋಹ ಸಲ್ಲ ಎಂಬುದನ್ನು ಮನವರಿಕೆ ಮಾಡುತ್ತಾರೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ