ದಕ್ಷಿಣಾಮೂರ್ತಿಸ್ತೋತ್ರ - 10 - ಸರ್ವಾತ್ಮಭಾವ

ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿಂಸ್ತವೇ
ತೇನಾಸ್ಯ ಶ್ರವಣಾತ್ತದರ್ಥಮನನಾದ್ಧ್ಯಾನಾಚ್ಛಸಂಕೀರ್ತನಾತ್ |
ಸರ್ವಾತ್ಮತ್ವಮಹಾವಿಭೂತಿಸಹಿತಂ ಸ್ಯಾದೀಶ್ವರತ್ವಂ ಸ್ವತಃ
ಸಿಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯಮವ್ಯಾಹತಮ್ ||10||

    ಸ್ತೋತ್ರದ ಅರ್ಥವನ್ನು ಅನುಭವಕ್ಕೆ ತಂದುಕೊಂಡವನಿಗೆ ಆಗುವ ಫಲವನ್ನು ಇಲ್ಲಿ ಹೇಳಿರುತ್ತದೆ. "ಈ ಸ್ತೋತ್ರದಲ್ಲಿ ಸರ್ವಾತ್ಮಕತ್ವವನ್ನು ಹೀಗೆ ಸ್ಫುಟಗೊಳಿಸಲಾಗಿರುವದಷ್ಟೆ? ಆದ್ದರಿಂದ ಇದನ್ನು ಶ್ರವಣಮಾಡಿ, ಇದೇ ಅರ್ಥವನ್ನು ಮನನಮಾಡಿಕೊಂಡು, ಅದನ್ನೇ ಧ್ಯಾನಮಾಡುತ್ತಾ, ಸಂಕೀರ್ತನ ಮಾಡುವದರಿಂದ 'ಸರ್ವಾತ್ಮತ್ವ'ವೆಂಬ ಮಹಾವಿಭೂತಿಯಿಂದೊಡಗೂಡಿ ಈಶ್ವರತ್ವವು ಉಂಟಾಗುವದು. ಎಂಟು ಬಗೆಯಾಗಿ ಪರಿಣಮಿಸುವ ಯಾವ ಅಡ್ಡಿಯೂ ಇಲ್ಲದ ಐಶ್ವರ್ಯವೂ ತಾನೇ ಸಿದ್ಧಿಸುವದು" ಎಂಬುದು ಶ್ಲೋಕದ ಅಕ್ಷರಾರ್ಥವು.


    ಪರಮಾತ್ಮನೇ ಪರಮಾರ್ಥತತ್ತ್ವವು, ಅವನಿಗಿಂತ ಬೇರೆಯಾಗಿರುವದು ಮತ್ತೆ ಯಾವದೂ ಇರುವದೇ ಇಲ್ಲ; ಈ ಜಗತ್ತೆಲ್ಲವೂ ಆತನ ಮಹಿಮೆಯೇ ಎಂಬುದು ಈ ಸ್ತೋತ್ರದ ಒಟ್ಟರ್ಥವಷ್ಟೆ? ಈ ಅರ್ಥವನ್ನು ಅರಿತುಕೊಂಡ ಪ್ರತಿಯೊಬ್ಬನಿಗೂ 'ನನ್ನ ಆತ್ಮನು ಆ ಪರಮಾತ್ಮನೇ' ಎಂಬ ಅನುಭವವು ಉಂಟಾಗಿ ಬಿಡುತ್ತದೆಯಾದ್ದರಿಂದ ಅವನಿಗೆ ಬೇಕಾದ ಪುರುಷಾರ್ಥವು ಮತ್ತೆ ಯಾವದೂ ಉಳಿಯುವದಿಲ್ಲವೆಂಬುದು ಸ್ಪಷ್ಟವಾಗಿದೆ ಆದರೆ ಈ ಸ್ತೋತ್ರವನ್ನು ಸುಮ್ಮನೆ ಓದಿದ ಮಾತ್ರದಿಂದ ಇಂಥ ಅನುಭವವು ಬರಲಾರದೆಂಬುದನ್ನು ಹೇಳಬೇಕಾದದ್ದೇ ಇಲ್ಲ ಅದಕ್ಕಾಗಿ ಏನುಮಾಡಬೇಕೆಂಬುದನ್ನು ಇಲ್ಲಿ ತಿಳಿಸಿ ಕೊಟ್ಟಿರುತ್ತದೆ.
    ಈ ಸ್ತೋತ್ರದ ಅಭಿಪ್ರಾಯವನ್ನು ಸದ್ಗುರುವಿನ ಮುಖದಿಂದ ಶ್ರವಣ ಮಾಡಬೇಕು ಅಧಿಕಾರಿಯಾದ ಸಾದಕನು ಸದ್ಗುರುವಿನ ಬಳಿಗೆ ವಿನಯದಿಂದ ಹೋಗಿ ಆತನನ್ನು ತತ್ತ್ವದ ವಿಷಯವಾಗಿ ಸಮಯವರಿತು ಪ್ರಶ್ನಿಸಬೇಕು ದಯಾಘನನಾದ ಆ ಗುರುವು ಉಪದೇಶಿಸುವದನ್ನು ಮನಸ್ಸಿಟ್ಟು ಕೇಳಿ ಅರ್ಥವನ್ನು ಗ್ರಹಿಸಬೇಕು ಉತ್ತಮಾಧಿಕಾರಿಯಾಗಿದ್ದರೆ ಸದ್ಗುರುವು ಒಮ್ಮೆ ತಿಳಿಸಿಕೊಟ್ಟ ಮಾತ್ರದಿಂದಲೇ ವಿಷಯವು ಮನವರಿಕೆಯಾಗಿಬಿಡಬಹುದು ಆದರೆ ಚಿತ್ತದಲ್ಲಿ ಕಲ್ಮಷವಿರುವವರಿಗೆ ಗುರುಭೋಧೆಯ ವಾಕ್ಯದಲ್ಲಿರುವ ಪದಾರ್ಥಗಳ ಅರಿವು ಆಗಲಾರದು ಆ ವಿಷಯಕ್ಕೆ ಅವರಿಗೆ ಸಂಶಯವೂ ತಪ್ಪುತಿಳಿವಳಿಕೆಯೂ ಉಂಟಾಗಬಹುದು ಆದ್ದರಿಂದ ಅದೇ ವಿಷಯವನ್ನು ತರ್ಕಕ್ಕೆ ಹೊಂದಿಸಿ ಸಂಶಯವನ್ನೂ ತಪ್ಪುತಿಳಿವಳಿಕೆಯನ್ನೂ ಹೋಗಲಾಡಿಸಿಕೊಳ್ಳಬೇಕು. ತರ್ಕವೆಂದರೆ ಅನುಮಾನಾದಿ ಪ್ರಮಾಣಗಳಿಂದ ವಿಷಯವನ್ನು ಪರೀಕ್ಷಿಸುವದೆಂದೇನೂ ಅರ್ಥವಲ್ಲ; ಏಕೆಂದರೆ ಎಲ್ಲರಿಗೂ ಆತ್ಮನಾಗಿರುವ ಪರಮೇಶ್ವರನು ಯಾವ ಪ್ರಮಾಣಕ್ಕೂ ವಿಷಯನಲ್ಲ ಪ್ರಮಾಣಕ್ಕೆ ವಿಷಯನಾಗಿರುವದು ಹೊರಗಿನ ಜ್ಞೇಯಪದಾರ್ಥವು ಪರಮೇಶ್ವರನು ಪ್ರಮಾತೃವಾದ ಜಿಜ್ಞಾಸುವಿಗೆ ಆತ್ಮನೇ ಆಗಿರುತ್ತಾನೆ. ಆ ಆತ್ಮನ ಬೆಳಕಿನಿಂದಲೇ ಪ್ರಮಾತೃ, ಪ್ರಮಾಣ, ಪ್ರಮೇಯ - ಈ ಮೂರೂ ಬೆಳಗುತ್ತಿರುವವೆಂದು ಆಗಲೇ ತಿಳಿಸಿದ್ದಾಗಿದೆ ಹೀಗೆ ಸ್ವತಃ ಚೈತನ್ಯಪ್ರಕಾಶಸ್ವರೂಪವೇ ಆಗಿದ್ದರೂ ಆ ಆತ್ಮನು ಅಂತಃಕರಣದಲ್ಲಿ ಮಲವಿಕ್ಷೇಪಗಳೆಂಬ ಮಂಕು, ಹರಿದಾಟ  ಎಂಬ ದೋಷವಿರುವವರಿಗೆ ತಿಳಿಯದೆ ಇರುತ್ತಾನೆ. ತನ್ನ ನಿಜವಾದ ಸ್ವರೂಪದಿಂದ ಕಾಣದೆ ಬೇರೆಯ ರೂಪದಿಂದಲೇ ಕಾಣಿಸುತ್ತಿರುತ್ತಾನೆ ಆದ್ದರಿಂದ ಶಾಸ್ತ್ರದಲ್ಲಿ ಹೇಳಿರುವ ರೀತಿಯಿಂದ ಮತ್ತು ಸದ್ಗುರುವು ತಿಳಿಸಿಕೊಡುವ ಯುಕ್ತಿಗಳಿಂದ ಅಜ್ಞರು ಆತ್ಮನಲ್ಲಿ ಹುಟ್ಟುಗಟ್ಟಿ ಕೊಂಡಿರುವ ಕಲ್ಪಿತರೂಪಗಳನ್ನು ಕಳೆದುಹಾಕಬೇಕು ಈ ಕ್ರಮಕ್ಕೆ ಮನನವೆಂದು ಹೆಸರು ಆಗ ಆತ್ಮನು ತನ್ನ ಸ್ವರೂಪದಿಂದ ತಾನೆ ಬೆಳಗುತ್ತಾನೆ.
    ಯಾರು ಮನಸ್ಸು ಹೊರಗಡೆಗೇ ಹರಿಯುತ್ತಿರುವದೋ ಅವರಿಗೆ ತಮ್ಮಳಗೆ ಇರುವ ಸರ್ವಸಾಕ್ಷಿಯಾಗಿರುವ ಆತ್ಮನು ಎಂದಿಗೂ ಕಾಣಿಸಲಾರನೆಂಬುದು ಸ್ಪಷ್ಟವಾಗಿರುತ್ತದೆ ಅಂಥವರು ಮೊಟ್ಟಮೊದಲು ಪರಾಗ್ ದೃಷ್ಟಿಯನ್ನು ಹೊರಕ್ಕೆ ನೋಡುವ ಇಂದ್ರಿಯಗಳ ನೋಟವನ್ನು ಹಿಮ್ಮೆಟ್ಟಿಸಿಕೊಂಡು ತಮ್ಮೊಳಗೇ ನೋಡುವ ಅಭ್ಯಾಸವನ್ನು ಮೊದಲು ಮಾಡಿಕೊಳ್ಳಬೇಕು ಶ್ರವಣಕ್ಕೆ ಅನುಗುಣವಾಗಿ ಮನನವನ್ನು ಮಾಡಿಕೊಂಡರೂ ಯಾರಿಗೆ ಆತ್ಮತತ್ತ್ವದ ಅನುಭವವು ಉಂಟಾಗುವದಿಲ್ಲವೋ ಅಂಥವರು ನಿದಿಧ್ಯಾಸನವನ್ನು ಮಾಡಬೇಕು ಒಳನೋಟದಿಂದ ಆತ್ಮನನ್ನು ಧ್ಯಾನಿಸಬೇಕು.
    ಧ್ಯಾನವೆಂಬ ಮಾತಿಗೆ ಎರಡು ಅರ್ಥಗಳಿರುತ್ತವೆ ಶಾಸ್ತ್ರದಲ್ಲಿ ಹೇಳಿರುವ ವಸ್ತುವನ್ನು ಹಾಗೆಯೇ ಆಯಾ ಗುಣ, ಆಕಾರ - ಮುಂತಾದವುಗಳಿಂದ ಕೂಡಿಕೊಂಡಿರುವಂತೆ ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಭಾವನೆಮಾಡುವದು ಒಂದು ಬಗೆಯ ಧ್ಯಾನವು ಯಾವದಾದರೊಂದು ಮಂತ್ರವನ್ನು ಜಪಿಸುವವರಿಗೆ ಆಯಾ ದೇವತೆಯನ್ನು ಹೀಗೆ ಹೀಗೆ ಧ್ಯಾನಿಸಬೇಕೆಂದು ಶಾಸ್ತ್ರದಲ್ಲಿ ಹೇಳಿರುತ್ತದೆ ಅದರಂತೆಯೇ ಭಾವನೆಮಾಡುವ ಕ್ರಮವು ಈ ಬಗೆಯ ಧ್ಯಾನವಾಗಿರುತ್ತದೆ ಇದನ್ನು ಉಪಾಸನೆ ಎಂದು ಕರೆಯುವದು ವಾಡಿಕೆ ಇದು ಪುರುಷಪ್ರಯತ್ನದಿಂದ ಆಗಬೇಕಾಗಿರುತ್ತದೆ. ಧ್ಯೇಯವಸ್ತು ಹೇಗಿದೆ ಎಂಬುದು ಶಾಸ್ತ್ರಸಮರ್ಪಿತವಾಗಿರುತ್ತದೆಯೇ ಹೊರತು ಮೊದಲೇ ಧ್ಯಾತೃವಿಗೆ ಗೋಚರವಾಗಿರುವದಿಲ್ಲ ಆದ್ದರಿಂದ ಶಾಸ್ತ್ರದಲ್ಲಿ ಹೇಳಿದಂತೆ ಕಲ್ಪಿಸಿಕೊಳ್ಳುವದು ಮಾತ್ರ ಅಲ್ಲಿ ಸಾಕಾಗಿರುತ್ತದೆ ನಮ್ಮೆಲ್ಲರ ಆತ್ಮನನ್ನು ಧ್ಯಾನಿಸುವದೆಂದರೆ ಹೀಗಲ್ಲ ಪರಮೇಶ್ವರನು ದೇಹ, ಪ್ರಾಣ,... ಇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಕಾರ- ಮುಂತಾದವುಗಳೆಲ್ಲಕ್ಕಿಂತಲೂ ಒಳಗಿದ್ದು ಅವುಗಳೆಲ್ಲಕ್ಕಿಂತಲೂ ಸೂಕ್ಷ್ಮನಾಗಿರುತ್ತಾನೆ ಅವನ ಚೈತನ್ಯಪ್ರಕಾಶವೇ ಇವುಗಳೆಲ್ಲವನ್ನೂ ಬೆಳಗುತ್ತಿರುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸಿರುತ್ತದೆಯಷ್ಟೆ? ಹೊರಗೆ ಇಂದ್ರಿಯಗಳಿಂದ ವಿಷಯಗಳನ್ನು ನೋಡುವ ಹವ್ಯಾಸವನ್ನು ತೊರೆದು ಮನಸ್ಸನ್ನು ಮೆಲ್ಲಮೆಲ್ಲಗೆ ಒಳಸರಿಯಿಸಿಕೊಂಡು ಸಾಧನದಿಂದ ಅದನ್ನು ಸೂಕ್ಷ್ಮವಾಗಿ ಮಾಡಿಕೊಂಡು ನಮ್ಮೊಳಗೇ ಇರುವ ಆತ್ಮಸ್ವರೂಪವನ್ನು ಕಂಡುಕೊಳ್ಳುವದಕ್ಕೆ ಪ್ರಯತ್ನಿಸುತ್ತಿರುವ ಶ್ರದ್ಧಾಳುವಾದ ಸಾಧಕನಿಗೆ ಮನಸ್ಸು ಅಮನಸ್ಸಾಗಿ ಆತ್ಮನಲ್ಲಿ ಕರಗಿಹೋಗಿಬಿಡುತ್ತದೆ; ಆಗ ಆತ್ಮನೊಬ್ಬನೇ ಉಳಿದುಕೊಳ್ಳುತ್ತಾನೆ ಆ ಆತ್ಮನನ್ನು ಸಾಧಕನು ಆತ್ಮರೂಪದಿಂದಲೇ ನೋಡಿ ಅನುಭವಕ್ಕೆ ತಂದುಕೊಳ್ಳುತ್ತಾನೆ ಬಹಳ ಸೂಕ್ಷ್ಮವಾಗಿರುವ ವಸ್ತುಗಳನ್ನು ಕಂಡುಹಿಡಿಯುವದಕ್ಕೆ ದೃಷ್ಟಿಯನ್ನು ಸೂಕ್ಷ್ಮವಾಗಿ ಮಾಡುವಂತೆ ಉದಾಹರಣೆಗೆ ರತ್ನಪರೀಕ್ಷಕನಾಗಿರುವವನು ಅದನ್ನೇ ನಿಟ್ಟಿಸಿನೋಡಿ ಪರೀಕ್ಷಿಸಿ ಇದು ಇಂಥ ರತ್ನವು ಎಂದು ನಿರ್ಣಯಿಸುವಂತೆ ಆತ್ಮನ ಕಡೆಗೇ ಮನಸ್ಸನ್ನು ಏಕಾಗ್ರತೆಯಿಂದ ಹರಿಯಿಸಿ ಆತ್ಮನನ್ನು ಕಂಡುಕೊಳ್ಳುವ ಧ್ಯಾನವು ನಿಧಿಧ್ಯಾಸನ ವೆನಿಸುವದು.
    ಹೀಗೆ ಆತ್ಮನನ್ನೇ ಶ್ರವಣಮಾಡಿ, ಆತ್ಮತತ್ತ್ವವನ್ನು ಶ್ರವಣಕ್ಕನುಗುಣವಾಗಿ ಮನನಮಾಡಿ, ಅದಕ್ಕೆ ಅನುಸಾರವಾಗಿ ನಿದಿಧ್ಯಾಸನಮಾಡಿದರೆ ಆ ತತ್ತ್ವದ ಅನುಭವವುಂಟಾಗುತ್ತದೆ. ಈ ಸಾಧನಗಳು ಅಳವಡದೆ ಇರುವವರು ಈ ಸ್ತೋತ್ರವನ್ನು ದೊಡ್ಡವರಿಂದ ಹೇಳಿಸಿಕೊಂಡು ಇದರ ಅರ್ಥವನ್ನು ಮನಸ್ಸಿನಲ್ಲಿ ಹೊರಳಾಡಿಸುತ್ತಾ, ಇದನ್ನು ಗಟ್ಟಿಯಾಗಿ ಹೇಳಿಕೊಳ್ಳುತ್ತಿರಬೇಕು; ಶಾಂತಿದಾಂತ್ಯಾದಿ ಸಾಧನಗಳನ್ನೂ ಅಳವಡಿಸಿಕೊಳ್ಳುವದಕ್ಕೆ ಪ್ರಯತ್ನಿಸುತ್ತಿರುಬೇಕು; ಸದ್ಗುರುವಿನ ದರ್ಶನವನ್ನು ಅನುಗ್ರಹಿಸೆಂದು ಪರಮೇಶ್ವರನನ್ನು ಪ್ರಾರ್ಥಿಸುತ್ತಿರಬೇಕು ಅಂಥವರಿಗೂ ಕಾಲಕ್ರಮದಲ್ಲಿ ಸದ್ಗುರುವಿನ ಅನುಗ್ರಹವು ದೊರೆತು ಶ್ರವಣಾದಿಗಳಿಂದ ಈ ಸ್ತೋತ್ರದ ಅಭಿಪ್ರಾಯವು ಮನದಟ್ಟಾಗುವದು.
    ಈ ಸ್ತೋತ್ರಕ್ಕೆ ಸರ್ವಾತ್ಮತ್ವವೇ ಫಲವು ಸರ್ವಾತ್ಮತ್ವವೆಂದರೆ ಇದೆಲ್ಲವೂ ತಾನೇ ಎಂಬ ಅನುಭವವು ಈ ಅನುಭವವು ಹೇಗೆ ಬರುವದೆಂಬುದನ್ನು ಉಪನಿಷತ್ತಿನಲ್ಲಿ ಹೀಗೆಂದು ತಿಳಿಸಿರುತ್ತದೆ :
ಬ್ರಹ್ಮ ವಾ ಇದಮಗ್ರ ಆಸೀತ್ತದಾತ್ಮಾನಮೇವಾವೇತ್ | ಅಹಂ
ಬ್ರಹ್ಮಾಸ್ಮೀತಿ ತಸ್ಮಾತ್ತತ್ಸರ್ವಮಭವತ್ ತದ್ಯೋ ಯೋ ದೇವಾ
ನಾಂ ಪ್ರತ್ಯಬುಧ್ಯತ ಸ ಏವ ತದಬವತ್ತಥರ್ಷೀಣಾಂ ತಥಾ
ಮನುಷ್ಯಾಣಾಂ ತದ್ಧೈತತ್ಪನ್ನೃಷಿರ್ವಾಮದೇವಃ ಪ್ರತಿ
ಪೇದೇಹಂ ಮನುರಭವಂ ಸೂರ್ಯಶ್ಚೇತಿ ತದಿದಮಪ್ಯೇತರ್ಹಿ
ಯ ಏವಂ ವೇದಾಹಂ ಬ್ರಹ್ಮಾಸ್ಮೀತಿ ಸ ಇದಂ ಸರ್ವಂ ಭವತಿ ||

    ಇದು ಮೊದಲು ಬ್ರಹ್ಮವೇ ಆಗಿತ್ತು; ಅದು ತನ್ನನ್ನೇ 'ನಾನು ಬ್ರಹ್ಮವಾಗಿರುವೆನು' ಎಂದು ಅರಿತುಕೊಂಡಿತು ಅದರಿಂದ ಅದು ಎಲ್ಲವೂ ಆಯಿತು ಇದನ್ನು ದೇವತೆಗಳಲ್ಲಿ ಯಾವಯಾವನು ಅರಿತುಕೊಂಡನೇ ಅವನೇ ಅದಾದನು; ಋಷಿಗಳೊಳಗೂ ಹಾಗೆಯೇ ಮನುಷ್ಯರೊಳಗೂ ಹಾಗೆಯೇ ಆ ಇದನ್ನು ಅರಿತು ಕೊಂಡು ವಾಮದೇವಋಷಿಯು 'ನಾನೇ ಮನುವಾದೆನು' ಸೂರ್ಯನೂ ಅದೆನು ಎಂದು ಅದನ್ನು ಪಡೆದುಕೊಂಡನು ಆ ಇದನ್ನು ಈಗಲೂ ಯಾವನು ನಾನು ಬ್ರಹ್ಮವಾಗಿರುವೆನು ಎಂದು ಅರಿತುಕೊಳ್ಳುವನೋ ಅವನು ಇದೆಲ್ಲವೂ ಆಗುವನು ಎಂಬುದು ವಾಕ್ಯದ ಅಕ್ಷರಾರ್ಥ.
    ಜ್ಞಾನವಾಗುವ ಮುಂಚೆಯೂ ದೇವತೆಗಳು, ಋಷಿಗಳು, ಮನುಷ್ಯರು ಎಲ್ಲರೂ ಬ್ರಹ್ಮವೇ ಪರಮಾತ್ಮನೇ ಆಗಿರುತ್ತಾರೆ ಆದರೆ ಅಷ್ಟುಮಾತ್ರದಿಂದ ಅವರಿಗೆ ಯಾವ ಪ್ರಯೋಜನವೂ ಇಲ್ಲ ಯಾವನು ಆ ಬ್ರಹ್ಮವೇ ನಾನು ಎಂಬ ಜ್ಞಾನವನ್ನು ಸಂಪಾದಿಸಿಕೊಳ್ಳುತ್ತಾನೋ ಅವನಿಗೆ ಮಾತ್ರ ನಾನೇ ಇದೆಲ್ಲವೂ ನನಗಿಂತ ಬೇರೆಯಾಗಿ ಯಾವದೊಂದೂ ಇಲ್ಲ ಎಂಬ ಸರ್ವಾತ್ಮಭಾವವು ಪ್ರಾಪ್ತಿಯಾಗುವದು ದೇವತೆಗಳಿಗೆ ಋಷಿಗಳಿಗೆ ಇಂಥ ಮಹಾತ್ಮರಿಗೆ ಮಾತ್ರ ಈ ಸರ್ವಾತ್ಮತ್ವವು ಬರುವದೆಂದೂ ನಮ್ಮಂಥವರಿಗೆ ದಕ್ಕಲಾರೆಂದೂ ನಿರಾಶೆಯಾಗಬಾರದು ಯಾರು ಯಾರು ಈ ಜ್ಞಾನವನ್ನು ಸಂಪಾದಿಸಿಕೊಳ್ಳುವರೋ ಅವರವರಿಗೆ ಈ ಸರ್ವಾತ್ಮಭಾವವು ಬರುತ್ತದೆ ಎಂಬುದು ವಾಕ್ಯಾರ್ಥ.
    ಇದರಿಂದ ಏನು ಸಿದ್ಧವಾಯಿತೆಂದರೆ ನಮ್ಮಲ್ಲಿ ಪ್ರತಿಯೊಬ್ಬನೂ ನಿಜವಾಗಿ ಆ ಪರಮಾತ್ಮನೇ ಆಗಿರುತ್ತಾನೆ ಆದರೆ ಹಾಗೆಂಬ ತಿಳಿವಳಿಕೆ ಅವನಿಗೆ ಇಲ್ಲ ನಾನು ಜೀವನು ದ್ರಷ್ಟೃ (ನೋಡುವವನು), ಶ್ರೋತೃ (ಕೇಳುವವನು) ಮನ್ತೃ (ಯೋಚಿಸುವವನು) ಎಂದು ಮುಂತಾಗಿ ಇಂದ್ರಿಯಗಳ ಧರ್ಮವನ್ನು ತಪ್ಪು ತಿಳಿವಳಿಕೆಯಿಂದ ತನ್ನ ಮೇಲೆ ಹಾಕಿಕೊಂಡಿರುತ್ತಾನೆ ಈ ತಪ್ಪುತಿಳಿವು ಹೋಯಿತೆಂದರೆ ಸಾಕು, 'ಆ ಕೂಡಲೇ ನಾನು ಹಿಂದೆಯೂ ಬ್ರಹ್ಮವೇ ಆಗಿದ್ದೆ, ಈಗಲೂ ಆಗಿರುತ್ತೇನೆ, ಮುಂದೂ ಆಗಿರುವೆನು; ನಾನು ಎಂದಿಗೂ ಜೀವನಲ್ಲ' ಎಂಬ ತಿಳಿವಳಿಕೆ ಆಗಿಬಿಡುತ್ತದೆ ಆ ಬ್ರಹ್ಮಜ್ಞಾನವು ಬಂದಿತೆಂದರೆ ಈ ಜಗತ್ತಿನಲ್ಲಿರುವ ಆತ್ಮನೂ ನಾನೇ ಎಂಬ ಅರಿವು ಉಂಟಾಗಿಬಿಡುತ್ತದೆ. ಇದೇ ಸರ್ವಾತ್ಮಭಾವವೆಂಬ ಮಹಾವಿಭೂತಿಯ ಪ್ರಾಪ್ತಿ.
    ಆ ಬ್ರಹ್ಮತ್ವವೂ ಅಸರ್ವತ್ವವೂ ನಮಗೆ ಅನಾದಿಯಾದ ಅವಿದ್ಯೆಯಿಂದ ತಪ್ಪು ತಿಳಿವಳಿಕೆಯಿಂದ ಇದ್ದುಕೊಂಡಿದೆ ಇದು ವಿದ್ಯೆಯಿಂದ ನಿಜವಾದ ಆತ್ಮಾನುಭವವನ್ನು ಕೊಡುವ ತಿಳಿವಳಿಕೆಯಿಂದ ಹೋದರೆ ಕೂಡಲೆ ಬ್ರಹ್ಮತ್ವವೂ ಸರ್ವಾತ್ಮತ್ವವೂ ಬಂದುಬಿಡುತ್ತದೆ ಈ ಮಹಾವಿಭೂತಿಯ ಪ್ರಾಪ್ತಿಗೆ ಅಡ್ಡಲಾಗಿರುವದು ಮತ್ತೇನೂ ಅಲ್ಲ, ಅವಿದ್ಯೆ (ತಪ್ಪುತಿಳಿವಳಿಕೆ)ಯೊಂದೇ ಅಡ್ಡಿ.
    ಸರ್ವಾತ್ವವೆಂಬ ಈ ಮಹಾವಿಭೂತಿಯು ದೊರಕಿದರೆ ಕೂಡಲೆ ಅಷ್ಟೈಶ್ವರ್ಯಗಳೂ ಪ್ರಾಪ್ತವಾಗುವವು ಎಂದು ಈ ಸ್ತೋತ್ರದಲ್ಲಿ ಫಲಶ್ರುತಿಯಿದೆ ಇದರ ಅರ್ಥವನ್ನು ಈಗ ವಿಚಾರಮಾಡೋಣ.
    ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ವಶಿತ್ವ - ಎಂಬ ಅಷ್ಟಸಿದ್ಧಿಗಳು ದೇವತೆಗಳಿಗೂ ಋಷಿಗಳಿಗೂ ಇರುವವೆಂದು ಶಾಸ್ತ್ರಗಳಲ್ಲಿ ಹೇಳಿದೆ ಯೋಗಾಭ್ಯಾಸದಿಂದ ಸಿದ್ಧನಾದವನಿಗೆ ಈ ಸಿದ್ಧಿಗಳು ದೊರಕುವವೆಂದು ಯೋಗಶಾಸ್ತ್ರಗಳಲ್ಲಿ ಹೇಳಿರುತ್ತದೆ ಅತ್ಯಂತ ಸಣ್ಣವಾದ ವಸ್ತುಗಳಿಗೂ ಆತ್ಮನಾಗುವದು ಅಣಿಮಾ ಎಂಬ ಸಿದ್ಧಿ ಬ್ರಹ್ಮಾಂಡವನ್ನೆಲ್ಲಾ ವ್ಯಾಪಿಸಿ ಅದಕ್ಕಿಂತಲೂ ವ್ಯಾಪಕನಾಗುವದು ಮಹಿಮಾ ಎಂಬ ಸಿದ್ಧಿ ಅತ್ಯಂತವಾಗಿ ಭಾರವಾಗುವದು ಗರಿಮಾ ಅತ್ಯಂತ ದೂರದಲ್ಲಿರುವ ವಸ್ತುಗಳನ್ನು ಇದ್ದಲ್ಲಿಂದಲೇ ಪಡದುಕೊಳ್ಳುವದು ಪ್ರಾಪ್ತಿ ಆಕಾಶದಲ್ಲಿ ಅಥವಾ ನೀರಿನ ಮೇಲೆ ನಡೆಯುವದು ಮುಂತಾದ ತನಗೆ ಇಷ್ಟವಾದ ಸಿದ್ಧಿಗಳನ್ನೆಲ್ಲ ಪಡೆದುಕೊಳ್ಳುವದು ಪ್ರಾಕಾಮ್ಯ ಜಗತ್ತೆಲ್ಲವನ್ನೂ ಸೃಷ್ಟಿಸ್ಥಿತಿ ಮಾಡಬಲ್ಲ ಶಕ್ತಿಯು ಈಶಿತ್ವವು ವಿಶ್ವದಲ್ಲಿರುವವರೆಲ್ಲರನ್ನೂ ವಶದಲ್ಲಿಟ್ಟುಕೊಳ್ಳಬಲ್ಲ ಸಾಮರ್ತ್ಯವು ವಶಿತ್ವವು ಈ ಎಂಟು ಬಗೆಯ ಸಿದ್ಧಿಗಳು ಮಹಾಮಹಿಮರಾದ ದೇವತೆಗಳಿಗೂ ತಪಸ್ವಿಗಳಾದ ಋಷಿಗಳಲ್ಲಿ ಕೆಲವರಿಗೂ ಮಹಾಯೋಗಿಗಳಿಗೂ ದೊರಕುವವಂತೆ ಆದರೆ ಸರ್ವಾತ್ಮಭಾವವನ್ನು ಪಡೆದುಕೊಂಡಿರುವ ಮಹಾನುಭಾವರಿಗೆ ಬ್ರಹ್ಮಜ್ಞಾನವು ಉಂಟಾದಮಾತ್ರದಿಂದ ತಾನೇ ಮತ್ತೆ ಯಾವ ಪ್ರಯತ್ನವೂ ಇಲ್ಲದೆ ಇವು ಉಂಟಾಗಿರುವವೆಂದು ಇಲ್ಲಿ ಜ್ಞಾನವನ್ನು ಹೊಗಳಿರುತ್ತದೆ ಜ್ಞಾನಿಯಾದವನು ಎಲ್ಲರಿಗೂ ಆತ್ಮನೇ ಆಗಿರುವದರಿಂದ ದೇವತೆಗಳ ಋಷಿಗಳ ಯೋಗಿಗಳ ಮತ್ತು ಮನುಷ್ಯರಲ್ಲಿ ಚಕ್ರವರ್ತಿಗಳೇ ಮುಂತಾದವರ ಮಹಿಮೆಯೆಲ್ಲವೂ ಜ್ಞಾನಿಯದೇ ಎಂಬುದು ಯುಕ್ತವೂ ಆಗಿದೆ.
    ಹೀಗಿರುವದರಿಂದ ಜ್ಞಾನಿಗಳಾದವರಿಗೆ ಅಣಿಮಾದಿಸಿದ್ಧಿಗಳು ಕಾಣಿಸಿಕೊಳ್ಳುವದೇ ಗುರುತೆಂದು ಭ್ರಮಿಸಬಾರದು ಪರಮಾತ್ಮನಲ್ಲಿ ತಾದಾತ್ಮ್ಯವನ್ನು ಹೊಂದಿರುವ ಜ್ಞಾನಿಗೆ ಇಂಥ ಐಶ್ವರ್ಯಸಿದ್ಧಿಯಲ್ಲಿ ಯಾವ ಆಸೆಯೂ ಇರುವದಿಲ್ಲ ಏಕೆಂದರೆ ನಿತ್ಯಸಿದ್ಧನಾದ ಪರಮೇಶ್ವರನೇ ಅವನ ಆತ್ಮನಾಗಿರುತ್ತಾನೆ.
    ಶ್ರೀದಕ್ಷಿಣಾಮೂರ್ತಿಯ ಅನುಗ್ರಹದಿಂದ ಜಿಜ್ಞಾಸುಗಳಿಗೆ ಇಂಥ ಸರ್ವಾತ್ಮ ಭಾವವನ್ನು ಪಡೆಯುವ ಜ್ಞಾನವು ಲಭಿಸುವದು.
ಹರಿಃ ಓಮ್.......

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ