ದಕ್ಷಿಣಾಮೂರ್ತಿಸ್ತೋತ್ರ - 8. ಜಗತ್ತಿನಲ್ಲಿ ದೃಶ್ಯಗಳಿಗಿರುವ ವಿಥ್ಯಾಸಂಬಂಧ

ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬನ್ಧತಃ
ಶಿಷ್ಯಾಚಾರ್ಯತಯಾ ತಥೈವ ಪಿತೃಪುತ್ರಾದ್ಯಾತ್ಮನಾ ಭೇದತಃ |
ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತ-
ಸ್ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||

    'ಕಾರ್ಯಕಾರಣಸಂಬಂಧವುಳ್ಳದ್ದು, ನಾನುನನ್ನದೆಂಬ ಸಂಬಂಧವುಳ್ಳದ್ದು, ಶಿಷ್ಯ, ಆಚಾರ್ಯ - ಎಂಬ ಸಂಬಂಧವುಳ್ಳದ್ದು - ಹೀಗೆ ಕನಸಿನಲ್ಲಾಗಲಿ ಎಚ್ಚರದಲ್ಲಾಗಲಿ ಮಾಯೆಯಿಂದ ಭ್ರಾಂತಿಗೊಳಿಸಲ್ಪಟ್ಟು ಈ ಯಾವ ಪುರುಷನು ವಿಶ್ವವನ್ನು ಭಿನ್ನಭಿನ್ನಸಂಬಂಧದಿಂದ ಕೂಡಿದ್ದನ್ನಾಗಿ ಕಾಣುತ್ತಿರುವನೋ ಆ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮುರ್ತಿಗೆ ಈ ನಮಸ್ಕಾರವು!' ಎಂದು ಶ್ಲೋಕಾರ್ಥ.


    ಹಿಂದಿನ ಏಳು ಶ್ಲೋಕಗಳಲ್ಲಿ ಆತ್ಮನು ಒಬ್ಬನೇ ಪರಮಾರ್ಥಸತ್ಯ ಸ್ವರೂಪನಾದವನು; ಅವನಲ್ಲಿ ಹುಸಿತೋರಿಕೆಯ ಪ್ರಪಂಚವು ಕಲ್ಪತವಾಗಿರುತ್ತದೆ ನಿಜವಾಗಿ ಅವನಿಗಿಂತ ಬೇರೆಯಾಗಿರುವ ಎರಡನೆಯ ವಸ್ತುವೇ ಇಲ್ಲ. ಈ ತತ್ತ್ವವನ್ನು ಗುರುಮೂರ್ತಿಯ ರೂಪದಲ್ಲಿರುವ ಶ್ರೀದಕ್ಷಿಣಾಮೂರ್ತಿ ಪರಮೇಶ್ವರನ ಅನುಗ್ರಹದಿಂದ ಮನಗಾಣಬೇಕು ಎಂದು ಬಗೆಬಗೆಯ ವಿಚಾರಗಳಿಂದ ತಿಳಿಸಿ ಕೊಟ್ಟದ್ದಾಯಿತು: ಈ ತತ್ತ್ವವನ್ನು ನಾವು ಮನಗಾಣುವದಾದರೂ ಹೇಗೆ? ಎಲ್ಲವೂ ಅದ್ವಿತೀಯಬ್ರಹ್ಮವೇ ಆದರೆ ಯಾರಿಗೆ ಯಾರಿಂದ ಉಪದೇಶ? ಯಾರು ಅಜ್ಞರು, ಯಾರು ತಜ್ಞರು? ಯಾರಿಗೆ ಬಂಧ, ಯಾರಿಗೆ ಮೋಕ್ಷ? ಎಲ್ಲವೂ ಅದ್ವೈತವಾದ ಆತ್ಮತತ್ತ್ವವೊಂದೇ ಎಂದಾದರೆ ಜಗತ್ತಿನ ವ್ಯವಹಾರವೆಲ್ಲ ಸಾಗುವದು ಹೇಗೆ? ಅಥವಾ ವ್ಯವಹಾರದಲ್ಲಿ ನಮಗಿರುವ ಅನುಭವಕ್ಕೆ ವಿರುದ್ಧವಾಗಿರುವದರಿಂದ ಈ ಸಿದ್ಧಾಂತವೇ ಸಟೆಯೆಂದೇಕೆ ಹೇಳಬಾರದು? ಎಂಬುದೇ ಮುಂತಾದ ಶಂಕೆಗಳಿಗೆ ಈಗ ಪರಿಹಾರವನ್ನು ಹೇಳುವದಕ್ಕೆ ಹೊರಟಿದೆ.
    ನಮಗೆ ಕಾಣುವ ಈ ವಿಶ್ವವು ಚಿತ್ರ ವಿಚಿತ್ರವಾಗಿ, ಗೊತ್ತಾದ ದೇಶಕಾಲ ನಿಮಿತ್ತಗಳಿಂದಾಗುವ ಕ್ರಿಯಾಕಾರಕಫಲಗಳ ಗುಂಪಾಗಿದೆ; ಕಾಲದಲ್ಲಿ ಹೊಸ ಹೊಸದಾದ ರೂಪಗಳನ್ನು ತಳೆಯುತ್ತಿದೆ - ಇಂಥ ಈ ಪ್ರಪಂಚವು ನಿಜವಲ್ಲವೆ? ಇದರಲ್ಲಿ ಕಾಣಬರುವ ನಾನಾತ್ವವು ಸರಿಯೆ? ಇದು ನಿಜವಾದರೆ ಅದ್ವೈತವೆಂಬುದೆಲ್ಲಿಂದ ಬರುತ್ತದೆ? - ಹೀಗೆಂಬುದು ಸಾಮಾನ್ಯರ ಮನಸ್ಸಿನಲ್ಲಿ ಆಗಾಗ್ಗೆ ಎದ್ದುಕೊಳ್ಳುವ ಶಂಕೆ ಈ ಶಂಕೆಗೆ ಪರಿಹಾರವನ್ನು ಆಗಲೆ ಹೇಳಿಯೇ ಇದೆಯಾದರೂ ಈಗ ಇನ್ನೊಂದು ದೃಷ್ಟಿಕೋನದಿಂದ ಅದನ್ನೇ ಮತ್ತೆ ಇಲ್ಲಿ ಹೇಳಲಾಗುತ್ತದೆ.
    ಸತ್ಯ, ಮಿಥ್ಯೆ - ಎಂಬ ಶಾಸ್ತ್ರದ ಮಾತುಗಳ ಅರ್ಥವನ್ನು ಮೊದಲು ನಾವು ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲಿಸಿಕೊಳ್ಳಬೇಕು. ಏಕೆಂದರೆ ಅದನ್ನು ಅರಿಯದ್ದರಿಂದಲೇ ಈ ಬಗೆಬಗೆಯ ಸಂಶಯಗಳು ಮನಸ್ಸಿನಲ್ಲಿ ಮೊಳಕೆಯಾಗುತ್ತಿರುವವು ವ್ಯವಹಾರದಲ್ಲಿ ಯಾವದು ಎಲ್ಲರಿಗೂ ನಿಜವೆಂದು ತೋರುವದೋ ಅದನ್ನು 'ಸತ್ಯ'ವೆಂದು ಕರೆಯುತ್ತೇವೆ. ಮಿಕ್ಕೆಲ್ಲರಿಗೂ ತೋರದೆ ಒಬ್ಬನಿಗೆ ಮಾತ್ರ ಕೆಲವರು ಮನುಷ್ಯರು, ಪ್ರಾಣಿಗಳು, ಗಿಡಮರಗಳು ಅಥವಾ ಜಡವಸ್ತುಗಳು ಕಾಣಿಸಿಕೊಂಡರೆ ಅವನ್ನು ಸತ್ಯವೆನ್ನುವದಕ್ಕಿಲ್ಲ ಕನಸಿನಲ್ಲಿ ಕಂಡದ್ದು ಎಚ್ಚರವಾಗುತ್ತಲೂ ತನಗೇ ಮಿಥ್ಯೆ ಹುಸಿ ಎಂದಾಗಿಬಿಡುವದು ಎಲ್ಲರ ಅನುಭವದಲ್ಲಿಯೂ ಇದೆ. ಇದರಂತೆ ಎಚ್ಚರದಲ್ಲಿಯೇ ದೂರಕ್ಕೆ ಒಂದು ಹಗ್ಬವು ಹಾವಿನಂತೆ ತೋರಿಕೊಂಡರೆ ಒಂದು ಕಪ್ಪೆಯಚಿಪ್ಪು ಥಳಗುಟ್ಟಿ ಬೆಳ್ಳಿಯೆಂಬ ನಂಬಿಕೆಯನ್ನುಂಟುಮಾಡಿದರೆ ಅಥವಾ ದೂರದಲ್ಲಿರುವ ಮರಳುಕಾಡಿನಲ್ಲಿ ನೀರಿರುವಂತೆ ತೋರಿದರೆ ಆ ಕಾಲಕ್ಕೆ ಇಂಥ ದೃಶ್ಯಗಳು ನಿಜವೆಂದು ನಮಗೆ ತೋರಿದರೂ ಸ್ವಲ್ಪ ಪರೀಕ್ಷೆಮಾಡಿದಮೇಲೆ ಅವು ದಿಟವಲ್ಲ ಎಂದು ಗೊತ್ತಾಗುವದು ಕನಸಿನಲ್ಲಿ ಕಂಡ ರೂಪಾಯಿ ಎಚ್ಚರದಲ್ಲಿ ವ್ಯವಹಾರಕ್ಕೆ ಬರುವದಿಲ್ಲ ದೂರದಲ್ಲಿ ಬೆಳ್ಳಿಯೆಂದು ಕಂಡುಬಂದ ಕಪ್ಪೆಚಿಪ್ಪಿನ ಬೆಳ್ಳಿಯಿಂದ ಯಾವ ಒಡವೆಯನ್ನೂ ಮಾಡಿಸಿಕೊಳ್ಳುವದಕ್ಕಾಗುವದಿಲ್ಲ ಹೀಗೆಯೇ ದೂರದಲ್ಲಿ ಕಂಡುಬಂದ ಬಯಲಿನ ಬಿಸಿಲುಕುದುರೆಯ ನೀರು ಬಾಯಾರಿಕೆಯನ್ನು ಹಿಂಗಿಸುವದಿಲ್ಲ ಆದ್ದರಿಂದ ಅವು ಯಾವವೂ ಸತ್ಯವಲ್ಲ ಎಂಬುದು ನಮ್ಮೆಲ್ಲರ ತೀರ್ಪು ಹೀಗೆ ವ್ಯವಹಾರದಲ್ಲಿ ಯಾವ ವಸ್ತುವಿನಿಂದ ಯಾವ ನಿರೀಕ್ಷಿತವಾದ ಅರ್ಥಕ್ರಿಯೆ ಪ್ರಯೋಜನವನ್ನುಂಟುಮಾಡುವ ಕೆಲಸ ಆಗುವದಿಲ್ಲವೋ ಅದು ಮಿಥ್ಯೆ, ಹುಸಿ, ಯಾವದು ಎಂದೆಂದಿಗೂ ಎಲ್ಲರಿಗೂ ಈ ಅರ್ಥಕ್ರಿಯೆಯನ್ನು ಮಾಡುತ್ತಿರುವದೋ ಅದು ಸತ್ಯ ಎನ್ನುತ್ತೇವೆ ಈ ಸತ್ಯತ್ವವನ್ನು ನಿರ್ಧರಿಸುವದಕ್ಕೆ ನಮಗೆ ಪ್ರತ್ಯಕ್ಷವೇ ಪ್ರಮಾಣವು; ದೋಷದಿಂದ ಮಿಥ್ಯಾವಸ್ತುವನ್ನೇ ನಾವು ಸತ್ಯವೆಂದು ಭಾವಿಸಿಕೊಂಡರೂ ಅದನ್ನು ಚೆನ್ನಾಗಿ ಪರೀಕ್ಷಿಸಿದ ಮೇಲೆ ಅರ್ಥಕ್ರಿಯೆಯನ್ನುಂಟುಮಾಡುವದಿಲ್ಲವಾದ್ದರಿಂದ ಅದು ಸತ್ಯವಲ್ಲವೆಂದು ನಿಶ್ಚಯವಾಗಿಬಿಡುತ್ತದೆ. ಕೈಯನ್ನು ಸುಡದಿರುವ ತೋರಿಕೆಯ ಬೆಂಕಿ ನಿಜವಾದ ಬೆಂಕಿಯಲ್ಲ ಬಾಯಾರಿಕೆಯನ್ನು ನೀಗಿಸದ ನೀರು ನಿಜವಾದ ನೀರಲ್ಲ ಇತ್ಯಾದಿ ಹೀಗೆ ವ್ಯವಹಾರದಲ್ಲಿ ಸತ್ಯಮಿತ್ಯಾವಿಭಾಗವನ್ನು ಜನರು ಮಾಡಿಕೊಂಡಿರುವರು.
    ಆದರೆ ಜಗತ್ತು ಸತ್ಯವೋ ಅಥವಾ ಮಿಥ್ಯೆಯೋ? ಎಂಬುದನ್ನು ಹೀಗೆ ನಿರ್ಣಯಿಸಿಕೊಳ್ಳುವದಕ್ಕೆ ಬರುವಂತಿಲ್ಲವೆಂದು ಸ್ಪಷ್ಟ ಏಕೆಂದರೆ ನಮಗೆ ಕಾಣುವ ಜಗತ್ತೆಲ್ಲವನ್ನೂ ಉಂಡೆಯಾಗಿ ಮಾಡಿಟ್ಟರೆ ಅದರೊಳಗೇ ಹೊರಗಿನ ಜನರು ಪ್ರಾಣಿಗಳು, ಸಸ್ಯಗಳು, ಜಡವಸ್ತುಗಳು ಮುಂತಾದವುಗಳಲ್ಲದೆ ನಮ್ಮೊಳಗಿನ ಶರೀರ, ಪ್ರಾಣ, ಮನಸ್ಸು, ಬುದ್ಧಿ, ಅಹಂಕಾರ ಎಲ್ಲವೂ ಸೇರಿಬಿಡುವದರಿಂದ ಈ ಜಗತ್ತು ಸತ್ಯವೆಂದು ಎಲ್ಲರೂ ಒಪ್ಪುತ್ತಾರಾದ್ದರಿಂದ ಸತ್ಯವೆಂದಾಗಲಿ ಇದು ಅರ್ಥಕ್ರಿಯೆಯನ್ನುಂಟುಮಾಡುವದರಿಂದ ಸತ್ಯವೆಂದಾಗಲಿ, ನಿಶ್ಚಯಿಸುವದು ಸಾಧ್ಯವಿಲ್ಲ ಏಕೆಂದರೆ 'ಎಲ್ಲರೂ' ಜಗತ್ತಿನಲ್ಲಿಯೇ ಸೇರಿರುತ್ತಾರೆ. ಅರ್ಥ ಕ್ರಿಯೆಯೂ ಮತ್ತು ಅದು ಯಾರಿಗೆ ಆಗಬೇಕೋ ಅವರ ಆ ಸ್ವರೂಪವೂ ಜಗತ್ತಿನಲ್ಲಿಯೇ ಸೇರಿಬಿಟ್ಟಿರುತ್ತದೆ ಆದ್ದರಿಂದ ಹಿಂದೆ ಹೇಳಿದ ವ್ಯಾವಹಾರಿಕಸತ್ಯದ ಲಕ್ಷಣವನ್ನು ಇಲ್ಲಿ ಉಪಯೋಗಿಸಿಕೊಳ್ಳುವದಕ್ಕೆ ಬರುವದಿಲ್ಲ ನಿಜವಾಗಿಯೂ ಸತ್ಯವಾದದ್ದಕ್ಕೆ ಪರಮಾರ್ಥಸತ್ಯವೆಂದು ಹೆಸರು ಯಾವದು ಯಾವ ರೂಪದಲ್ಲಿರುವದೆಂದು ಗೊತ್ತಾಗಿರುವದೋ ಆ ತನ್ನ ರೂಪವನ್ನು ಯಾವಾಗಲೂ ಮಾರ್ಪಡಿಸದೆ ಒಂದೇ ರೂಪದಲ್ಲಿದ್ದರೆ ಅದು ನಿಜವಾಗಿ ಸತ್ಯವೆಂದು ಹೇಳಬಹುದು ಭ್ರಾಂತಿಯಲ್ಲಿ ಕಾಣುವ ಹಗ್ಗವು ಹಾವು ಬಯಲ್ದೊರೆಯ ನೀರು ಕಪ್ಪೆಯಚಿಪ್ಪನ ಬೆಳ್ಳಿ ಇವೆಲ್ಲ ಆಯಾ ಕಾಲಕ್ಕೆ ಹಾಗೆ ತೋರಿದರೂ ಕಾಲಾಂತರದಲ್ಲಿ ಇದು ಹಾವಲ್ಲ ಹಗ್ಗ; ನೀರಲ್ಲ ಬರಿಯ ಮರಳುನೆಲ; ಬೆಳ್ಳಿಯಲ್ಲ ಕಪ್ಪೆಯಚಿಪ್ಪೇ ಎಂಬ ರೂಪದಲ್ಲಿ ಮಾರ್ಪಟ್ಟುಬಿಡುತ್ತವೆಯಲ್ಲವೆ? ಆದ್ದರಿಂದ ಆ ಹಾವು ಮುಂತಾದವು ಬರಿಯ ಹುಸಿತೋರಿಕೆ ಅಥವಾ ಅವು ತೋರಿಕೆಯೆಂಬುದಕ್ಕಿಂತಲೂ ಹಾಗೆಂದು ಆ ಕಾಲಕ್ಕೆ ನಾವು ಸುಮ್ಮನೆ ಕಲ್ಪಿಸಿಕೊಂಡೆವೆಂಬುದೇ ಯುಕ್ತವಾದದ್ದು ಈ ಲಕ್ಷಣವನ್ನು ಜಗತ್ತಿಗೆ ಹೊಂದಿಸಿನೋಡಿದರೆ ಜಗತ್ತು ಈಗ ನಮಗೆ ಕಾಣುವ ರೂಪದಲ್ಲಿ ಕನಸಿನಲ್ಲಿರುವದಿಲ್ಲ ಅಥವಾ ಈ ರೂಪದಲ್ಲಿರುವದಿಲ್ಲವೆನ್ನುವದೇಕೆ, ಇದು ಆಗ ಇರುವದೇ ಇಲ್ಲವೆನ್ನುವದೇ ಯುಕ್ತ ಕನಸಿನಲ್ಲಿ ಮತ್ತೊಂದು ತೋರಿಕೆಯ ಜಗತ್ತು ಆಗ್ಗೆ ಕಾಣಿಸಿಕೊಳ್ಳುತ್ತಿರುತ್ತದೆ ಅಲ್ಲವೆ? ಆದ್ದರಿಂದ ಈ ದೃಷ್ಟಿಯಿಂದಿ ನೋಡಿದಾಗ ಈ ಜಗತ್ತು ಈಗ ತೋರುವ ರೂಪದಿಂದ ಮಿಥ್ಯೆಯೇ? ಹುಸಿತೋರಿಕೆಯೇ, ನಿಜವೆಂಬುದು ನಾವು ಭ್ರಾಂತಿಯಿಂದ ತಿಳಿದುಕೊಂಡಿರುವದೇ ಎನ್ನಬಹುದಾಗಿದೆ.
    ಈಗ ಒಂದು ಶಂಕೆ ಒಬ್ಬ ಮನುಷ್ಯನು ತನ್ನ ಮನೆಯನ್ನು ಬಿಟ್ಟು ಬೇರೊಂದು ಕಡೆಗೆ ಹೋಗಿರುವಾಗ, ಊರಿನವರಿಗೆ ಮನೆಯಲ್ಲಿ ಕಾಣಿಸುವದಿಲ್ಲ ಅಷ್ಟುಮಾತ್ರದಿಂದ ಅವನನ್ನು ಮಿಥ್ಯೆ ಅವನು ಇಲ್ಲವೇ ಇಲ್ಲ ಹುಸಿತೋರಿಕೆ ಎನ್ನಬಹುದೆ? ಈ ಶಂಕೆಯು ಸರಿಯಲ್ಲ ಏಕೆಂದರೆ ಮನೆಯನ್ನು ಬಿಟ್ಟು ಬೇರೊಂದೂರಿಗೆ ಹೋದವನು ಎಲ್ಲಿಯೂ ಇಲ್ಲವೆಂದೇನೂ ನಾವು ತಿಳಿಯುವದಿಲ್ಲ ಅವನು ಈಗ ಇಲ್ಲಿಲ್ಲ ನಾಳೆ ಬರುತ್ತಾನೆ ಎನ್ನುತ್ತೇವೆ ಅಷ್ಟೆ ಇದರಂತೆ ಕೆಲವು ದಿನ ಇದ್ದು ಆ ಬಳಿಕ ಸತ್ತವನನ್ನು ಆಗ ಇದ್ದನು ಈಚೆಗೆ ಸತ್ತನು ಕೆಲವು ದಿನ ಇದ್ದು ಆ ಬಳಿಕ ಸತ್ತವನನ್ನು ಆಗ ಇದ್ದನು ಈಚೆಗೆ ಸತ್ತನು ಎನ್ನುತ್ತೇವೆ ಅಲ್ಲವೆ? ಆದ್ದರಿಂದ ಈ ದೃಷ್ಟಾಂತರಗಳನ್ನು ಮಿಥ್ಯೆಗೆ ಕೊಡುವದಕ್ಕೆ ಬರುವದಿಲ್ಲ ನಮಗೆ ಎಚ್ಚರದಲ್ಲಿ ಕಾಣಬರುವ ಈ ಜಗತ್ತು ಕನಸಿನಲ್ಲಿ ಕಾಣುವದಿಲ್ಲವೆಂಬುದಿಷ್ಟೇ ಅಲ್ಲ ಅದು ಈಗ ಇಲ್ಲಿಲ್ಲ ಅಲ್ಲಿದೆ ಅಥವಾ ಅದು ಈಗ ಇಲ್ಲ ಅಮೇಲೆ ಬರುತ್ತದೆ ಅಥವಾ ಹಿಂದೆ ಇತ್ತು ಈಗ ಹಾಳಾಯಿತು ಎಂದೇನೂ ನಾವು ಎಣಿಸುವದಿಲ್ಲ ಅದರ ಅರಿವಾಗಲಿ ನೆನಪಾಗಲಿ ನಮಗೆ ಆಗ್ಗೆ ಬರುವದೇ ಇಲ್ಲ ಆಗ ಇದು ಎಲ್ಲಿಯೋ ಇರಬೇಕು ಎಂದು ಕಲ್ಪಿಸುವದೂ ಸರಿಯೆಂದಾಗುವದು ಹಾಗೆಂದು ನಾವು ಯಾರೂ ಭಾವಿಸುವದಿಲ್ಲ ಆದ್ದರಿಂದ ಎಚ್ಚರದ ಪ್ರಪಂಚವು ಕನಸಿನಲ್ಲಿ ಎಲ್ಲಿಯೂ ಇಲ್ಲವೇ ಇಲ್ಲ ಎನ್ನುವದೇ ಯುಕ್ತ ಈಗ ಯಾರಾದರೂ ಹೀಗೆಂದು ಕೇಳಬಹುದು ನಮ್ಮ ಕನಸಿನಲ್ಲಿ ನಮಗೆ ಎಚ್ಚರದ ಪ್ರಪಂಚವು ಕಾಣಿಸುವದಿಲ್ಲವೆಂಬುದು ಸರಿಯೆ ಆದರೆ ಮಿಕ್ಕವರಿಗೆ ಯಾರಿಗೂ ಅದು ಅನುಭವಗೋಚರವಾಗುತ್ತಿರುವದಿಲ್ಲವೆ? ಈ ಶಂಕೆಯೂ ಸರಿಯಲ್ಲ ಏಕೆಂದರೆ ಕನಸನ್ನು ನಾವು ಬಿಟ್ಟುಬಂದಾಗ ಕನಸಿನಲ್ಲಿದ್ದ ಅನೇಕ ಜನರೊಳಗೆ ಯಾವನಾದರೊಬ್ಬನು ಈಗ ಅದನ್ನು ಕಾಣುತ್ತಿರಬಹದು' ಎಂದೇನು ನಾವು ಯಾರೂ ಶಂಕಿಸುವದಿಲ್ಲ ಹೀಗಿದ್ದರೂ ಎಚ್ಚರದ ಪ್ರಪಂಚದ ವಿಷಯಕ್ಕೆ ಮಾತ್ರ ಹಾಗೆಂದು ಏತಕ್ಕೆ ಶಂಕಿಸಬೇಕು? ಕನಸಿನ ಪ್ರಪಂಚವೆಲ್ಲವೂ ಅದರಲ್ಲಿ ತೋರುವ ಜನರು ಪ್ರಾಣಿಗಳು ಮುಂತಾದವುಗಳ ಸಹಿತವಾಗಿ ಕನಸಿಗೇ ಗಂಟುಬಿದ್ದಿರುತ್ತದೆ ಕನಸು ಹೋದಬಳಿಕ ಅದು ಎಲ್ಲಿಯೂ ಇರುವದೇ ಇಲ್ಲ ಎಂದು ನಾವು ಗಟ್ಟಿಯಾಗಿ ನಂಬಿರುವಂತೆಯೇ ಎಚ್ಚರದ ಪ್ರಪಂಚವು ಎಚ್ಚರಕ್ಕೇ ಗಂಟುಬಿದ್ದಿರುತ್ತದೆ ಅದು ಕನಸಿನಲ್ಲಿ ಎಲ್ಲಿಯೂ ಇರುವದೇ ಇಲ್ಲ ಎನ್ನುವದೇ ಯುಕ್ತ.
    ಎಚ್ಚರಕನಸುಗಳೆರಡೂ ಆಯಾ ಅವಸ್ಥೆಯ ದೃಷ್ಟಿಯಿಂದ ನೋಡಿದಾಗ ಯಾವ ತಾರತಮ್ಯವೂ ಇಲ್ಲದೆ ಒಂದೇ ಬಗೆಯ ಅವಸ್ಥೆಗಳಾಗಿ ಕಾಣುತ್ತಿರುವವು ಅವುಗಳಲ್ಲಿ ಒಂದೊಂದು ನಮಗೆ ಆಗ್ಗೆ ಎಚ್ಚರವೆಂದೇ ಕಾಣುತ್ತಿರುತ್ತದೆ ಕಾಲ, ದೇಶ, ನಿಮಿತ್ತ ಇವುಗಳಿಗೆ ಅನುಸಾರವಾಗಿ ಘಟನೆಗಳು ಆಗುತ್ತಿರುವೆಂದೇ ನಮ್ಮ ಆಗಿನ ಭಾವನೆ ಇದು ಕಾರ್ಯ ಇದು ಕಾರಣ ನಾನು ಒಡೆಯನು ಇದು ನನ್ನದು ನಾನು ಶಿಷ್ಯನು ಇವನು ಗುರು ನಾನು ತಂದೆ ಇವನು ಮಗನು ಇವನು ಅಣ್ಣ ಇವನು ತಮ್ಮ ಇವಳು ತಾಯಿ ಇವಳು ಮಗಳು ಇವನು ಮಾವ ಇವನು ಅಳಿಯ ಇವನು ಕಳ್ಳ ಇವನು ಪ್ರಮಾಣಿಕ ಇವನು ವಿಷಯಿ ಇವನು ವಿರಕ್ತ ಇವನು ಬ್ರಾಹ್ಮಣನು ಇವನು ಚಾಣ್ಡಾಲನು ಇವನು ಬ್ರಹ್ಮಚಾರಿ ಇವನು ಗೃಹಸ್ಥ ಇವನು ವಾನಪ್ರಸ್ಥ ಇವನು ಯತಿ ಎಂದು ಬಗೆಬಗೆಯಾದ ಭೇದವೂ ಸಂಬಂವೂ ಉಳ್ಳ ಜನರೂ ಇದು ಬೆಟ್ಟ ಇದು ಸಮುದ್ರ ಇದು ನದಿ ಇದು ನೆಲ ಇದು ಹಡಗು ಇದು ವಿಮಾನ ಎಂದು ವಸ್ತುಗಳೂ ಇದು ಹುಲಿ ಇದು ಕರಡಿ ಇದು ಎಮ್ಮೆ ಇದು ಎತ್ತು ಎಂದು ಮುಂತಾಗಿ ಪ್ರಾಣಿಗಳೂ ಬಗೆಬಗೆಯಿಂದ ಸಲಕ್ಷಣವಾಗಿಯೂ ವಿಲಕ್ಷಣವಾಗಿಯೂ ಕಾಣುತ್ತಿರುವವು ಹೀಗಿದ್ದರೂ ಒಂದು ಅವಸ್ಥೆಯು ಹೋಗಿ ಮತ್ತೊಂದು ಅವಸ್ಥೆ ತಲೆದೋರಿತೆಂದರೆ ಹಿಂದಿನ ಅವಸ್ಥೆಯು ಹೋಗಿ ಮತ್ತೊಂದು ಅವಸ್ಥೆ ತಲೆದೋರಿತೆಂದರೆ ಹಿಂದಿನ ಅವಸ್ಥೆಯೂ ಅದರಲ್ಲಿ ಕಾಣಿಸಿಕೊಂಡ ದೃಶ್ಯಗಳೂ ಹೇಳಹೆಸರಿಲ್ಲದಂತೆ ಒರಸಿ ಹೋಗಿಬಿಡುವವು ಯಾವದಾದರೊಂದು ಕಾಗದದ ಮೇಲೆ ಚಿತ್ರವನ್ನು ಬರೆದು ಅದನ್ನು ಅಳಿಸಿಹಾಕಿದಮೇಲೂ ಆ ಚಿತ್ರದ ಕಲೆಯು ಒಂದಿಷ್ಟು ಉಳಿದೇ ಇರುತ್ತದೆ ಪಾತ್ರೆಗಳಲ್ಲಿ ಹಾಕಿದ್ದ ಇಂಗು, ಬೆಳ್ಳುಳ್ಳಿ ಮುಂತಾದ ವಸ್ತುಗಳು ಪಾತ್ರೆಯನ್ನು ಉಜ್ಜಿದಮೇಲೂ ಒಂದಿಷ್ಟು ವಾಸನೆಯು ಉಳಿದುಕೊಂಡಿರುತ್ತದೆ ಆದರೆ ನಮ್ಮ ಸ್ವರೂಪದಲ್ಲಿಯೇ ನಮ್ಮ ಆತ್ಮನನ್ನು ಆಶ್ರಯಿಸಿಕೊಂಡೇ ತೋರಿಬರುತ್ತಿದ್ದ ಎಚ್ಚರದ ಅಥವಾ ಕನಸಿನ ಪ್ರಮಾತೃಪ್ರಮಾಣಪ್ರಮೇಯಪ್ರಮಿತಿಗಳು ಅರಿಯುವವನು ಅರಿಯುವದಕ್ಕೆ ಸಾಧನವಾಗಿರುವ ಜ್ಞಾನಸಾಧನ ಅರಿಯಲ್ಪಡ ಬೇಕಾಗಿರುವ ವಸ್ತು ಕೊನೆಗೆ ಉಂಟಾದ ಅರಿವೆಂಬ ಫಲ ಇವುಗಳೊಳಗೆ ಯಾವದೊಂದರ ಗಂಧವೂ ಆತ್ಮನಿಗೆ ಅಂಟಿಕೊಂಡೇ ಇರುವದಿಲ್ಲವಲ್ಲ ಎಂಥ ಮಾಯೆಯಿದು!
    ನಮ್ಮ ಆತ್ಮನಲ್ಲಿ ಈ ಯಾವ ಸ್ವರೂಪವಾಗಲಿ ಧರ್ಮವಾಗಲಿ ಇರುವದಿಲ್ಲ; ನಾವು ಅರಿಯುವವರಲ್ಲ ಮಾಡುವವರಲ್ಲ ಅನುಭವಿಸುವವರು ಅಲ್ಲ ಇಲ್ಲಿ ನಮಗೆ ತೋರುವ ಮನುಷ್ಯರಿಗೂ ಪ್ರಾಣಿಗಳಿಗೂ ವಸ್ತುಗಳಿಗೂ ಇರುವ ಕಾರ್ಯಕಾರಣ ಸ್ವಸ್ವಾಮಿಭಾವ ಪಿತಾಪುತ್ರತ್ವ ಶಿಷ್ಯಾಚಾರ್ಯತ್ವ ಮುಂತಾದ ಯಾವದೊಂದರ ಸೋಂಕೂ ನಮ್ಮ ಆತ್ಮನಿಗೆ ಇರುವದಿಲ್ಲ ಆದರೂ ಆಯಾ ಅವಸ್ಥೆಯ ಕಲಕ್ಕೆ ನಾವು ನಿಜವಾಗಿಯೇ ಆಯಾ ಮನಷ್ಯರಿಗೂ ಪ್ರಾಣಿಗಳಿಗೂ ವಸ್ತುವಿಗೂ ಆಯಾ ಸಂಬಂಧದಿಂದ ಸೇರಿಕೊಮಡಿರುವವೆಂದೇ ಆಯಾ ದೃಶ್ಯಗಳಿಂದ ನಮಗೆ ಸುಖದುಃಖಾದಿಗಳಾಗುವವೆಂದೇ ಆದ್ದರಿಂದ ಅವುಗಳನ್ನು ಪಡೆದುಕೊಳ್ಳಬೇಕು ಅಥವಾ ದೂರವಾಗಿರಿಸಬೇಕು ಎಂದೇ ಗಟ್ಟಿಯಾಗಿ ನಂಬಿರುವೆವು ಇದೆಂಥ ಮಾಯೆ!
    ನಿಜ ಇದೆಲ್ಲ ಮಾಯೆಯೇ ಹೀಗೆಂದು ತಿಳಿಸಿಕೊಡುವದಕ್ಕೆ ನಮಗೆ ಮತ್ತೊಂದು ಅವಸ್ಥೆಯ ಅನುಭವವೂ ಇದೆ ಅದೇ ಸುಷುಪ್ತಿ ಅಥವಾ ತನಿನಿದ್ರೆ ಆ ಅವಸ್ಥೆಯಲ್ಲಿ ಯಾವದೊಂದು ದೃಶ್ಯದ ಅರಿವೂ ನನ್ಮಲ್ಲಿರುವದಿಲ್ಲ ನಮ್ಮ ಅರಿವೂ ನಮಗಿರುವದಿಲ್ಲ ನಮಲ್ಲಿ ಕರ್ತೃತ್ವವಾಗಲಿ ಭೋಕ್ತತ್ವವಾಗಲಿ ಇರುವದೇ ಇಲ್ಲ ಆ ಅವಸ್ಥೆಯನ್ನು ಶ್ರುತಿಯು ಹೀಗೆಂದು ಬಣ್ಣಿಸುತ್ತಿರುವದು;
   
ಅತ್ರ ಪಿತಾಪಿತಾ ಭವತಿ ಮಾತಾಮಾತಾ ಲೋಕಾ ಅಲೋಕಾ ದೇವಾ ಅದೇವಾ
ವೇದಾ ಅವೇದಾಃ ಅತ್ರ ಸ್ತೇನೋಸ್ತೇನೋ ಭವತಿ ಭ್ರೂಣಹಾಭ್ರೂಣಹಾ
ಚಾಣ್ಡಾಲೋಚಾಣ್ಡಾಲೋ ಪೌಲ್ಕಸೋಪೌಲ್ಕಸಃ ಶ್ರವಣೋಶ್ರವಣ-
ಸ್ತಾಪಸೋತಾಪಸೋನನ್ವಾಗತಂ ಪುಣ್ಯೇನಾನನ್ವಾಗತಂ ಪಾಪೇನ ತೀರ್ಣೋಹಿ
ತದಾ ಸರ್ವಾಞ್ಛೋಕಾನ್ ಹೃದಯಸ್ಯ ಭವತಿ ||ಬೃ - 4-3-22
    ಗಾಢನಿದ್ರೆಯಲ್ಲಿ ನಾವುಗಳೆಲ್ಲರೂ ಪರಮಾತ್ಮನಲ್ಲಿ ಒಂದಾಗಿಬಿಟ್ಟಿರುವೆವು. ಅಲ್ಲಿ ತಂದೆ ತಂದೆಯಾಗಿ ಇರುವದಿಲ್ಲ; ಏಕೆಂದರೆ ಆಗ ಅವನಿಗೆ "ಇವನು ನನ್ನ ಮಗನು" ಎಂಬ ಅರಿವಾಗಲಿ, ಆ ಅರಿವಿಗೆ ವಿಷಯವಾಗಿರುವ ಮಗನಾಗಲಿ ಇರುವದಿಲ್ಲ; ಯಾವ ಕರ್ಮದಿಂದ ಇವನು ಎಚ್ಚರದಲ್ಲಿ ತಂದೆಯೆನಿಸಿದ್ದನೋ ಆ ಕರ್ಮವೂ ಆಗ ಇರುವದಿಲ್ಲ ಇದರಂತೆ ಮಗನೂ ಮಗನೆನಿಸಿರುವದಿಲ್ಲ ಪಿತಾಪುತ್ರರುಗಳಿಗೆ ಸಂಬಂಧಕ್ಕೆ ಕಾರಣವಾಗಿರುವದು ಕರ್ಮವಲ್ಲವೆ? ಆಗ ಇವನು ಅದನ್ನು ದಾಟಿರುತ್ತಾನೆ ಇದರಂತೆ ತಾಯಿ ತಾಯಿಯಾಗಿರುವದಿಲ್ಲ ಏಕೆಂದರೆ ತಾಯಿತನಕ್ಕೆ ಬೇಕಾದ ಕರ್ಮವೂ ಆಗ ಇರುವದಿಲ್ಲ ಕರ್ಮದಿಂದ ಜಯಿಸಬೇಕಾದ ಲೋಕಗಳೂ ಆಗ ಇರುವದಿಲ್ಲ ಲೋಕಗಳಿಗೂ ಅವುಗಳನ್ನು ಗೆದ್ದುಕೊಂಡವನಿಗೂ ಇರಬೇಕಾದ ಕರ್ಮವೂ ಆಗ ಇರುವುದಿಲ್ಲ ಇದರಂತೆ ಯಾರಿಗಾಗಿ ಹೋಮಾದಿಕರ್ಮಗಳನ್ನು ಮಾಡುವರೋ ಅಂಥ ದೇವತೆಗಳೂ ಆಗ ಇರುವದಿಲ್ಲ ಹೀಗೆಯೇ ಇದು ಸಾಧ್ಯವಾದ ಲೋಕ ಇದು ಸಾಧನವಾದ ಕರ್ಮ ಅಥವಾ ಉಪಾಸನೆ ಎಂದು ತಿಳಿಸಿಕೊಡುವ ವೇದಗಳೂ ಆಗ ಇರುವದಿಲ್ಲ ಮಂತ್ರಗಳನ್ನುಪಯೋಗಿಸಿಯಲ್ಲವೆ ಕರ್ಮವನ್ನು ಮಾಡುವದು? ಆಗ ಕರ್ಮವೂ ಇಲ್ಲ ಅವಕ್ಕೆ ಅಂಗವಾಗಿರುವ ವೇದಮಂತ್ರಗಳೂ ಇಲ್ಲ ಇವೆಲ್ಲ ಪುಣ್ಯಕರ್ಮಗಳ ಸಂಬಂಧವನ್ನು ಕುರಿತು ಹೇಳಿದ ಮಾತಾಯಿತು ಪುಣ್ಯಕರ್ಮವನ್ನು ಮಾಡಿದವನಿಗೆ ಈ ಅವಸ್ಥೆಯಲ್ಲಿ ಯಾವ ಕರ್ಮಾಂಗಪದಾರ್ಥವೂ ಇರುವದಿಲ್ಲವೆಂದು ತಿಳಿಸಿದ್ದಾಯಿತು ಹೀಗೆಯೇ ಪಾಪಕರ್ಮವಾಗಲಿ ಅದಕ್ಕೆ ಅಂಗವಾಗಿರುವ ಪದಾರ್ಥಗಳಾಗಲಿ ಅಲ್ಲಿ ಇರುವದಿಲ್ಲ ಸ್ವರ್ಣಾಪಹಾರಿಯಾದ ಕಳ್ಳನು ಕೂಡ ಅಲ್ಲಿ ಕಳ್ಳನಾಗಿರುವದಿಲ್ಲ ಭ್ರೂಣಹತ್ಯೆಯನ್ನು ಮಾಡಿದವನಿಗೂ ಅಲ್ಲಿ ಅದರ ಸಂಬಂಧವಿರುವದಿಲ್ಲ ಪುಲ್ಕಸನು ಎಂದರೆ ಶೂದ್ರನಿಂದ ಕ್ಷತ್ರಿಯಳಲ್ಲಿ ಹುಟ್ಟಿದ ಜಾತಿಯವನು ಅವನೂ ಆಗ ಪುಲ್ಕಸನಾಗಿ ಉಳಿದಿರುವದಿಲ್ಲ ಸಂನ್ಯಾಸಿಯು ಸಂನ್ಯಾಸಿಯಾಗಿರುವದಿಲ್ಲ ತಾಪಸನು ತಾಪಸನಾಗಿರುವದಿಲ್ಲ ಹೆಚ್ಚು ಹೇಳಿದ್ದರಿಂದೇನು? ಪುಣ್ಯವು ಅವನ ಹಿಂದೆ ಬಂದು ಉಳಿದುಕೊಂಡಿರುವದಿಲ್ಲ ಪಾಪವು ಬೆನ್ನಟ್ಟಿಕೊಂಡಿರುವದಿಲ್ಲ ಹೃದಯದ ಕಾಮಗಳನ್ನೆಲ್ಲ ದಾಟಿರುತ್ತಾನೆ ಎಂಬ ಶ್ರುತಿಯಲ್ಲಿ ವಿವರಿಸಿದೆ.
    ನಮಗೆ ಕಾಣುತ್ತಿರುವ ಪ್ರಪಂಚವು ಬರಿಯ ಪಿತಾಪುತ್ರಾದಿ ಸಂಬಂಧ ಮಾತ್ರದಿಂದಲೇ ಕೂಡಿಕೊಂಡಿರುವದಿಲ್ಲ. 'ಇದು ಕಾರಣ, ಇದು ಕಾರ್ಯ; ಕಾರಣವು ಗೊತ್ತಾಗಿ ಕಾರ್ಯದ ಹಿಂದಿನ ಕಾಲದಲ್ಲಿಯೇ ಇರುತ್ತದೆ. ಕಾರಣವಿದ್ದರೆ ಕಾರ್ಯವುಂಟಾಗುತ್ತದೆ; ಇಲ್ಲದಿದ್ದರೆ ಇಲ್ಲ' - ಎಂದಿಂತು ಕಾರ್ಯಕಾರಣ ಸಂಬಂಧವೂ ಇಲ್ಲಿ ಗೊತ್ತಾಗಿ ಕಾಣಿಸುತ್ತಿರುತ್ತದೆ ಇದರಂತೆ 'ಇದು ನನ್ನದು ನಾನು ಇದರ ಒಡೆಯನು' ಎಂದು ಸ್ವಸ್ವಾಮಿಸಂಬಂಧದಿಂದಲೂ ಕುಡಿಕೊಂಡಿರುತ್ತದೆ ಹೀಗೆಯೇ ಈ ಪ್ರಪಂಚವು ಇವನು ಶಿಷ್ಯನು ಇವನು ಆಚಾರ್ಯನು ಎಂದು ಶಿಷ್ಯಾಚಾರ್ಯಸಂಬಂದದಿಂದಲೂ ಕೂಡಿಕೊಂಡಿರುತ್ತದೆ ಹೀಗೆ ಒಂದಕ್ಕೊಂದು ಗೊತ್ತಾದ ಸಂಬಂಧದಿಂದ ಸೇರಿಕೊಂಡೇ ಇರುವದರಿಂದ ಈ ದೃಶ್ಯಗಳೆಲ್ಲವೂ ಸತ್ಯವೇ' - ಎಂಬ ಭ್ರಾಂತಿಯು ನಮಗೆ ಆಗುತ್ತಿರುವದು ಆದರೆ ಇಂಥ ಪ್ರಪಂಚವು ತನ್ನ ಸುಳಿವೂ ಇಲ್ಲದಂತೆ ಗಾಢನಿದ್ರೆಯಲ್ಲಿ ಎಲ್ಲಿ ಅಡಗಿತ್ತು?  ನಾವು ನಿದ್ರಿಸುತ್ತಿರುವಾಗ ಈ ಪ್ರಪಂಚವು ನಮ್ಮ ಹೊರಗೆ ಹಾಗೇ ಇದ್ದುಕೊಂಡಿರುತ್ತದೆ ಎಂಬ ಬಯಲಭ್ರಾಂತಿಯೊಂದು ನಮಗೆ ಅಂಟಿಕೊಂಡು ಬಿಟ್ಟಿರುತ್ತದೆ ಆದರೆ ಇದೂ ತಪ್ಪುತಿಳಿವಳಿಕೆಯೇ ಎಂದು ಆಗಲೇ ತೋರಿಸಿಕೊಟ್ಟದ್ದಾಗಿರುತ್ತದೆ ನಾವು ನೋಡುವ ಕನಸಾಗಲಿ ಆ ಕನಸಿನಲ್ಲಿ ಕಾಣುವ ಪ್ರಪಂಚವಾಗಲಿ ಎಚ್ಚರದಲ್ಲಿ ಅಥವಾ ಗಾಢನಿದ್ರಾವಸ್ಥೆಯಲ್ಲಿ ನಮ್ಮ ಹೊರಗೆ ಮತ್ತೆಲ್ಲಿಯಾದರೂ ಇದ್ದೀತೆಂದು ನಾವು ಯಾರೂ ಶಂಕಿಸುವದಿಲ್ಲವಲ್ಲವೆ? ಆದರೂ ಆ ಕನಸಿನಲ್ಲಿ ಪ್ರಪಂಚವೂ ಈ ಎಚ್ಚರದ ಪ್ರಪಂಚದಂತೆಯೇ ಕಾಣಿಸುತ್ತಿರುತ್ತದೆ ಆಗ್ಗೆ ಸತ್ಯವೆಂದೇ ತೋರುತ್ತಿರುತ್ತದೆ ಆದರಲ್ಲಿಯೂ ಎಚ್ಚರದ ಪ್ರಪಂಚದ ದೃಶ್ಯಗಳಿಗೆ ಒಂದಕ್ಕೊಂದಕ್ಕೆ ಕಾಣುವ ಸಂಬಂಧಗಳೇ ಇದ್ದುಕೊಂಡಿರುವಂತೆ ಕಾಣುತ್ತಿರುತ್ತದೆ ಅಲ್ಲವೆ? ಹಾಗಿದ್ದರೂ ಕನಸಿನ ಅವಸ್ಥೆಯು ಮುಗಿದೊಡನೆ ಅವುಗಳು ಯಾವುವೂ ಎಲ್ಲಿಯೂ ಉಳಿದಿರುವದಿಲ್ಲವೆಂಬುದು ನಿಶ್ಚಿತ ಆದ್ದರಿಮದ ಎಚ್ಚ, ಕನಸು ಈ ಅವಸ್ಥೆಗಳಲ್ಲಿ ತೋರುವ ಪ್ರಪಮಚವೆಲ್ಲವೂ ಮಾಯೆಯೇ ಹುಸಿತೋರಿಕೆಯೇ ಮಾಯಾವಿಯು ಮಾಯೆಯಿಂದ ಮಾಡಿ ತೋರಿಸುವ ಪದಾರ್ಥಗಳಿಗೂ ಇದಕ್ಕೂ ಯಾವ ಹೆಚ್ಚು ಕಡಿಮೆಯೂ ಇರುವದಿಲ್ಲ ಅರ್ಥಕ್ರಿಯೆಯನ್ನುಂಟುಮಾಡಿದ ಮಾತ್ರದಿಂದ ಇದನ್ನು ಸತ್ಯವೆಂದು ಹೇಳಲಾಗದು ಎಂದು ನಿಶ್ಚಿತವಾಯಿತು.
    ನಮ್ಮ ಸ್ವರೂಪವು ಗಾಢನಿದ್ರೆಯಲ್ಲಿ ಹೇಗಿದೆಯೋ ಈಗಲೂ ಹಾಗೆಯೇ ಇದೆ ಎಚ್ಚರ, ಕನಸು, ಗಾಢನಿದ್ರೆ - ಈ ಮೂರು ಅವಸ್ಥೆಗಳನ್ನೂ ಬೆಳಗುತ್ತ ನಾನು ನನ್ನ ಚೈತನ್ಯಸ್ವರೂಪದಿಂದಲೇ ಇರುತ್ತೆನೆ ಎಚ್ಚರಕನಸುಗಳಲ್ಲಿ ಬಗೆಬಗೆಯ ದೃಶ್ಯಗಳನ್ನು ಕಾಣುವ ಮಾಯಾಸ್ವರೂಪವೊಂದು ನಮಗೆ ಆಗ್ಗೆ ತೋರಬಹುದು ಆದರೆ ಅದು ನಿಜವಾಗಿ ನನ್ನ ಸ್ವರೂಪವಲ್ಲ ನಾನು ಯಾವಾಗಲೂ ಈ ಮೂರು ಅವಸ್ಥೆಗಳನ್ನೂ ಬೆಳಗುತ್ತಿರುವ ಸಾಕ್ಷಿಚೈತನ್ಯಸ್ವರೂಪನು ಅದ್ವಿತೀಯನು ನಿರ್ಗುಣನು ಎಂಬ ಅರಿವನ್ನು ಸದ್ಗುರುವಿನ ಬೋಧೆಯಿಂದ ಪಡೆದುಕೊಳ್ಳ ಬೇಕು ಅಂಥ ಗುರುವಿನ ಉಪದೇಶವನ್ನು ಕರುಣಿಸಲೆಂದು ಪರಮೇಶ್ವರನನ್ನು ನಿರಂತರವೂ ಪ್ರಾರ್ಥಿಸುತ್ತಿರಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ