ನಮಗೇಕೆ ವೇದಾಂತ?

    


ಲೋಕದಲ್ಲಿ ಬಹಳಷ್ಟು ಜನರಿಗೆ ವೇದಾಂತಶಾಸ್ತ್ರದ ವಿಷಯದಲ್ಲಿ ಒಂದು ವಿಲಕ್ಷಣವಾದ ಅಭಿಪ್ರಾಯವಿದೆ. ಅದೇನೆಂದರೆ, ಮನುಷ್ಯರೆಲ್ಲರಿಗೂ ವೇದಾಂತದ ಅವಶ್ಯಕತೆ ಏನು? ಅದರಿಂದ ಆಗುವ ವಿಶೇಷ ಲಾಭವಾದರೂ ಏನು? ಜನಸಾಮಾನ್ಯರ ದೈನಂದಿನಜೀವನವು ವೇದಾಂತವಿಲ್ಲದೆ ಸಾಗುತ್ತಿಲ್ಲವೆ? ಪ್ರಪಂಚದಲ್ಲಿ ವೇದಾಂತದ ಗಂಧವೇ ಇಲ್ಲದ ಜನತೆ ನೂರಕೆಕ ತೊಂಭತ್ತು ಭಾಗದಷ್ಟು ಇದ್ದು ಎಲ್ಲರಂತೆಯೇ ಅವರೂ ಸಹ ಸುಖವಾಗಿಯೇ ಜೀವನವನ್ನು ನಡೆಸುತ್ತಿದ್ದಾರೆ. ಅವರಿಗೆ ತಮ್ಮ ಜೀವನದಲ್ಲಿ ವೇದಾಂತವಿಲ್ಲದ್ದರಿಂದ ಕುಂದುಕೊರತೆಗಳು ಕಂಡುಬಂದಿಲ್ಲ. ಆರ್ಥಿಕ, ಬೌದ್ಧಿಕ, ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವೇದಾಂತಿಗಳಿಗಿಂತಲೂ ಅವರುಗಳು ಚೆನ್ನಾಗಿಯೇ ಇದ್ದಾರೆ. ಹೀಗಿರುವಲ್ಲಿ ಎಲ್ಲರಿಗೂ ವೇದಾಂತದ ಅವಶ್ಯಕತೆ ಏನು?
   
    ಲೋಕದಲ್ಲಿ ಬಹಳ ಜನರಿಗೆ ವೇದಾಂತದ ಗಂಧವಿಲ್ಲ- ಎಂಬ ದೃಷ್ಟಿಯಿಂದ ವೇದಾಂತವು ಅನವಶ್ಯಕ - ಎಂದು ಹೇಳಲಾಗುವದಿಲ್ಲ. ಏಕೆಂದರೆ ಎಷ್ಟೋ ಅಮೂಲ್ಯವಾದ ಶಾಸ್ತ್ರವಿಶೇಷಗಳು ಅವುಗಳನ್ನು ಬಲ್ಲ ದೊಡ್ಡ ವಿದ್ವಾಂಸರುಗಳಿಗೇ ಸೀಮಿತವಾಗಿರುತ್ತವೆ. ಉದಾಹರಣೆಗೆ (1) ಪರಮಾಣುಸಿದ್ದಾಂತ (2) ಖಗೋಳಶಾಸ್ತ್ರ (3) ಅಂತರಿಕ್ಷವಿಜ್ಞಾನ - ಇತ್ಯಾದಿ. ಹೀಗೆಂದಮಾತ್ರಕ್ಕೆ ಈ ಶಾಸ್ತ್ರಗಳು ವ್ಯರ್ಥವೆಂದು ಹೇಳುವದಕ್ಕಾದೀತೆ? ಇದಲ್ಲದೆ ವೇದಾಂತದ ಅರಿವೇ ಇಲ್ಲದೆ ಜನರು ಜೀವಿಸುತ್ತಿದ್ದಾರೆ ಎಂಬುದು ಅದರ ಅವಶ್ಯಕತೆ ಇಲ್ಲ ಎಂದಾಗುವದಿಲ್ಲ ಏಕೆಂದರೆ ಪಶು-ಪಕ್ಷಿಗಳು ಮುಂತಾದ ಎಷ್ಟೋ ಜೀವಿಗಳು ಯಾವ ವಿದ್ಯೆಯನ್ನೂ ಅರಿಯದೆ ಬದುಕಿರುವವು - ಎಂಬುದು ಲೋಕದಲ್ಲಿರುವ ಉಳಿದ ವಿದ್ಯೆಗಳು ವ್ಯರ್ಥವೆಂಬುದಕ್ಕೆ ಕಾರಣವಾದೀತೆ? ಎಂದಿಗೂ ಇಲ್ಲ. ಇನ್ನೂ ಒಂದು ಮಾತು. ಬಹುಮತದ ತೀರ್ಮಾನದ ಮೇಲೆ ವಿದ್ಯೆಯ ಸ್ಥಾನಮಾನಗಳು ನಿರ್ಣಯವಾಗುವದೇ ಇಲ್ಲ. ಪ್ರತಿಯೊಂದು ವಿದ್ಯೆಗೂ ಅದರದೇ ಆದ ವೈಶಿಷ್ಟ್ಯವಿದ್ದೇ ಇರುತ್ತದೆ. ಇದನ್ನು ನಾವು ಚೆನ್ನಾಗಿ ತಿಳಿಯಬೇಕು. ಇನ್ನು ವೇದಾಂತಿಗಳಿಗಿಂತ ಲೌಕಿಕರೇ ಮಾತ್ರವೇ ಯಾವದೇ ಕುಂದುಕೊರತೆಗಳಿಲ್ಲದೆ ಚೆನ್ನಾಗಿಯೇ ಇದ್ದಾರೆ ಎಂಬುದೂ ಬರಿಯ ಭ್ರಮೆಯಾಗಿರುತ್ತದೆ. ಏಕೆಂದರೆ ಲೌಕಿಕರಿಗೆ ಅವರ ಜೀವನದಲ್ಲಿ ಎಷ್ಟೇ ಐಶ್ವರ್ಯ ವಿದ್ಯೆ, ಬಲ, ಅಧಿಕಾರಗಳಿದ್ದರೂ ತೃಪ್ತಿ, ಶಾಂತಿ, ಸಮಾಧಾನಗಳು ಖಂಡಿತವಾಗಿಯೂ ಇರುವದಿಲ್ಲ. ಏಕೆಂದರೆ ಅವರು ಪ್ರತಿದಿನವೂ ಆ ಐಶ್ವರ್ಯಾದಿಗಳ ಅಭಿವೃದ್ಧಿಗೂ ಉಳಿಕೆಗೂ ಶ್ರಮಪಡುತ್ತಿರುತ್ತಾರೆ. ಈ ನಡುವೆ ಅವರ ವ್ಯವಹಾರದಿಗಳಲ್ಲಿ ಏನಾದರೂ ಹೆಚ್ಚು ಏರುಪೇರುಗಳಾದರೆ ಅವರ ಮನಃಸ್ಥಿತಿಯು ವರ್ಣಿಸಲಸಾಧ್ಯವಾದಷ್ಟು ಚಿಂತಾಕ್ರಾಂತವಾಗುತ್ತದೆ ಆದರೆ ನಿಜವಾದ ವೇದಾಂತಿಯು ಇಂಥ ಸ್ಥಿತಿಯಲ್ಲಿಯೂ ತನ್ನ ಸ್ವರೂಫವನ್ನು ಯಥಾಶಾಸ್ತ್ರವಾಗಿ ಬಲ್ಲವನಾಗಿ ಸ್ವಲ್ಪವೂ ತಳಮಳಗೊಳ್ಳದೆ ಶಾಂತಚಿತ್ತವುಳ್ಳವನಾಗಿರುತ್ತಾನೆ. ಏಕೆಂದರೆ ವೇದಾಂತವು ಅವನಿಗೆ ಸಹಾಯಕವಾಗುತ್ತದೆ. ಅದು ಸತ್ಯವನ್ನೇ ತಿಳಿಸುವದರಿಂದ ತಳಮಳಕ್ಕೆ ಅವಕಾಶವಿರುವದಿಲ್ಲ. ಹೀಗೆ ತೋರುತ್ತಿರುವ ಜಗತ್ತಿಗೂ ನಮ್ಮ ನಿಜವಾದ ಸ್ವರೂಪಕ್ಕೂ ಸರಿಯಾದ ತಿಳಿವಳಿಕೆಯನ್ನು ತಿಳಿಸಿಕೊಡುವದೇ ವೇದಾಂತವು ಇದು ಮನದಟ್ಟಾದರೆ ಶಾಂತಿಸುಖಗಳು ಎಂದೆಂದಿಗೂ ನಮ್ಮೊಡನೆ ಇರುವವು ಇಷ್ಟೇ ಅಲ್ಲದೆ ಸುಖಶಾಂತಿಗಳನ್ನು ನಾವು ಮತ್ತೊಬ್ಬರಿಗೂ ಧಾರೆಯರೆಯಲೂಬಹುದು. ಇಂಥ ಸ್ವಾರ್ಥ-ಪರಾರ್ಥಗಳೆರಡನ್ನೂಸಾಧಿಸಿಕೊಡುವ ವೇದಾಂತ(ಆಧ್ಯಾತ್ಮ) ವಿದ್ಯೆ ಯಾರಿಗೆ ಶಾನೆ ಬೇಡವಾದೀತು? ವೇದಾಂತಜ್ಞಾನವಿಲ್ಲದೆ ಯಾವನೂ ಸುಖಿಯಾಗಿರುವದು ಸಾಧ್ಯವೇ ಇಲ್ಲ. ಇದನ್ನು ನಮ್ಮ ದೇಶದ ಋಷಿವರ್ಯರು ಕಂಡುಹಿಡಿದು ಅನುಷ್ಠಾನಮಾಡಿ ಜಗತ್ತಿಗೆಲ್ಲ ಬೋಧಿಸಿರುತ್ತಾರೆ. ಮನುಸ್ಮೃತಿಕಾರರು ಹೇಳಿರುವ ಶ್ಲೋಕವೊಂದನ್ನು ಅನುಸಂಧಾನಮಾಡೋಣ.
    ಏತದ್ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ |
    ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ ||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ