ಪುರುಷಸೂಕ್ತ

||ಸಹಸ್ರಶೀರ್ಷಾ ನಾರಾಯಣೋ ಋಷಿಃ ಪುರುಷೋ ದೇವತಾ
 ಅನುಷ್ಟುಪ್ ಛಂದಃ ಅಂತ್ಯಾ ತ್ರಿಷ್ಟುಪ್ ಮಹಾಭಿಷೇಕೇ ವಿನಿಯೋಗಃ ||

ಓಂ ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರ ಪಾತ್ |
ಸಃ ಭೂಮಿಂ ವಿಶ್ವತೋ ವೃತ್ತ್ವಾsತ್ಯತಿಷ್ಟದ್ದಶಾಂಗುಲಮ್ ||1||
    ಪುರುಷ ಶಬ್ದದಿಂದ ಮುಖ್ಯತಃ ವಾಚ್ಯನಾದ ನಾರಾಯಣನ ಶಿರಸ್ಸುಗಳು, ಕಣ್ಣುಗಳು, ಪಾದಗಳು, ಉಪಲಕ್ಷಣಯಾ ತೊಡೆ ಮೊದಲಾದ ಎಲ್ಲ ಅಂಗಗಳೂ ಅನಂತವಾಗಿವೆ. ಇಲ್ಲಿ ಸಹಸ್ರ ಶಬ್ದವು ಅನಂತವನ್ನು ಹೇಳುತ್ತದೆ. ಈ ಪುರಷನು ಭೂಮಿ ಶಬ್ದದಿಂದ ವಾಚ್ಯವಾದ ಬ್ರಹ್ಮಾಂಡದೊಳಗಿನ ಸಮಸ್ತ ಜಗತ್ತನ್ನು ಬಹಳವಾಗಿ ವ್ಯಾಪಿಸಿದ್ದರೂ ಅಂಗುಷ್ಟ ಗಾತ್ರದ ಹೃದಯದಲ್ಲಿಯೂ ಇರುತ್ತಾನೆ. ಅಂದರೆ ಅಲ್ಪವಾದ ಹೃದಯದಲ್ಲಿದ್ದು ಅಚಿಂತ್ಯ ಶಕ್ತಿಯಿಂದ ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿರುತ್ತಾನೆ.

ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಮ್ |
ಉತಾಮೃತತ್ವಾಸ್ಯೇಶಾನೋ ಯದನ್ನೇನಾತಿರೋಹತಿ ||2||
    ಹಿಂದೆ ಆಗಿಹೋದ, ಈಗಿರುವ ಮತ್ತು ಮುಂದೆ ಬರಲಿರುವ ಸಕಲ ಜಗತ್ತು ಸದಾ ಕಾಲದಲ್ಲಿಯೂ ಈ ಪುರುಷನ ಅಧೀನವೇ ಆಗಿರುವುದು. ಆತನೇ ಮುಕ್ತರಿಗೂ ಅಮುಕ್ತರಿಗೂ ಮತ್ತು ಮುಕ್ತಿಗೂ ಸ್ವಾಮಿಯು. ಅಂದರೆ ಮುಕ್ತರಿಗೂ ಅಮುಕ್ತರಿಗೂ ಆಶ್ರಯನು. ಈ ಪುರುಷನು ಅನ್ನ ಶಬ್ದದಿಂದ ವಾಚ್ಯಳಾದ ಶ್ರೀರಮಾದೇವಿಯನ್ನೂ ಮೀರಿನಿಂತಿರುವನು.

ಏತಾವಾನಸ್ಯ ಮಹಿಮಾsತೋ ಜ್ಯಾಯಾಂಶ್ಚ ಪೂರುಷಃ |
ಪಾದೋsಸ್ಯ ವಿಶ್ವಾಭೂತಾನಿ ತ್ರಿಪಾದಸ್ಯಾಮೃತಂ ದಿವಿ ||3||
    "ಸಹಸ್ರಶೀರ್ಷಾ ಪುರುಷಃ" ಇತ್ಯಾದಿ ಹಿಂದೆ ಹೇಳಿದ್ದಕ್ಕಿಂತಲೂ ಅತ್ಯಧಿಕವಾಗಿದೆ ಈತನ ಮಹಿಮೆ. ಸಮಸ್ತ ಭೂತಗಳೂ ಇವನ ಒಂದು ಭಿನ್ನಾಂಶ ಮಾತ್ರ. ಇವನ ಸ್ವರೂಪಭೂತವಾದ ಮೂರು ಅಂಶಗಳು "ದಿವಿ" ಎನಿಸಿಕೊಳ್ಳುತ್ತದೆ. "ಭುರ್ಭುವ ಸ್ವಃ" ಎಂಬ ಮೂರು ಲೋಕಗಳಿಂದ ಬಹಳ ಎತ್ತರದಲ್ಲಿರುವ ಅಂತರಿಕ್ಷದ ಮೇಲಿರುವ ಶ್ವೇತದ್ವೀಪ ಅನಂತಾಸನ ಮೈಕುಂಠಗಳ "ದ್ಯು" ಎಂದು ಕರೆಸಿಕೊಳ್ಳುವುದರಿಂದ ತದ್ಗತವಾದ ರೂಪವು "ದಿವಿ" ಎಂದು ಪ್ರಸಿದ್ಧವಾಗಿದೆ.

ತ್ರಿಪಾದೂರ್ಧ್ವ ಉದೈತ್ಪುರುಷಃ ಪಾದೋಸ್ಯೇಹಾ ಭವತ್ಪುನಃ |
ತತೋ ವಿಶ್ವಙ್ ವ್ಯಕ್ರಾಮತ್ಸಾಶನಾನಶನೇ ಅಭಿ ||4||
    ಈ ಪುರುಷನು ದ್ಯುಲೋಕದಿಂದ ಉಪಕ್ಷಿತವಾದ ಮೂರು ಲೋಕಗಳಿಂದ ಹೊರಗಿರುವ ಉತ್ತಮವಾದ ಶ್ವೇತದ್ವೀಪಾದಿ ಮೂರು ಧಾಮಗಳಲ್ಲಿರುವವನಾಗಿ ಉತ್ಕೃಷ್ಠನಾಗಿದ್ದಾನೆ. ಹೀಗಿದ್ದರೂ ಈ ಪರಮಾತ್ಮನ ಭಿನ್ನವಾದ ಪಾದವು ನಿಯಮ್ಯವಾದ ಜಗತ್ತಿನಲ್ಲಿ ಪುನಃ ಇದ್ದೇ ಇರುವುದು. "ವಿಷ್ವಕ್" ಶಬ್ದದಿಂದ ಕರೆಸಿಕೊಳ್ಳುವ "ತ್ರಿಪಾತ್" ಪುರುಷನು ನಾನಾವಿಧವಾದ ದೇವಮಾನುಷ ತಿರ್ಯಗಾದಿ ಪ್ರಾಣಿಗಳಲ್ಲಿ ವ್ಯಾಪ್ತನಾಗಿದ್ದಾನೆ. ಅಲ್ಲದೆ ದೇವತೆಗಳನ್ನು (ಅನಶನರು) ಮತ್ತು ತದಿತರ ವಿದ್ವಜ್ಜನರಾದ ಋಷಿಗಳನ್ನು (ಸಾಶನರು) ವಿಶೇಷವಾಗಿ ಆಕ್ರಮಿಸಿ ಇದ್ದಾನೆ.

ತಸ್ಮಾದ್ವಿರಾಳಜಾಯತ ವಿರಾಜೋ ಅಧಿ ಪೂರುಷಃ |
ಸಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿಮಥೋ ಪುರಃ ||5||
    ಪುರುಷರೂಪಿ ನಾರಾಯಣನಿಂದ ವಿಶೇಷವಾಗಿ ಪ್ರಕಾಶಿಸುತ್ತದೆ ಎಂಬ ಕಾರಣದಿಂದ ವಿರಾಟ್ ಎಂದು ಹೇಳಲ್ಪಡುವ ಬ್ರಹ್ಮಾಂಡವು ಹುಟ್ಟಿತು. ಬ್ರಹ್ಮಾಂಡದಿಂದ ವಿರಾಣ್‌ಣಾಮ ಚತುರ್ಮುಖ ಬ್ರಹ್ಮ ದೇವರು ಹುಟ್ಟಿದರು. ಹೀಗೆ ಹುಟ್ಟಿದ ಬ್ರಹ್ಮದೇವರು ಅನಂತರ ಹುಟ್ಟಿದ ರುದ್ರಾದಿ ಸಮಸ್ತ ಜಗತ್ತನ್ನು (ಭೂಮಿಂ) ಹಾಗೂ ತಮಗಿಂತ
ಮೊದಲು ಹುಟ್ಟಿದ ಬ್ರಹ್ಮಾಂಡವನ್ನು ಸಹ ಅತಿಕ್ರಮಿಸಿರುವರು. ಚತುರ್ಮುಖ ಬ್ರಹ್ಮದೇವರು ರುದ್ರಾದಿ ಜಗತ್ತಿಗಿಂತ ಅಧಿಕರು. ಇವರೆಲ್ಲರಿಗಿಂತ ಪುರುಷರೂಪಿ ನಾರಾಯಣನು ಅಧಿಕ.

ಯತ್ಪುರುಷೇನ ಹವಿಷಾ ದೇವಾ ಯಜ್ಞಮತನ್ವತ |
ವಸಂತೋ ಅಸ್ಯಾಸಿದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿಃ ||6||
    ಹೀಗೆ ಮೊದಲನೆಯ ವರ್ಗದ ಐದು ಋಕ್ಕುಗಳಿಂದ ವಿಷ್ಣುವಿನ ಸರ್ವೋತ್ತಮತ್ವವನ್ನು ಹೇಳಿ, ಎರಡನೆಯ ವರ್ಗದ ಋಕ್ಕುಗಳಿಂದ ದೇವತೆಗಳು ಮಾನಸ ಯಜ್ಞದಿಂದ ಸರ್ವೋತ್ತಮನಾದ ಆ ಪುರುಷನನ್ನು ಆರಾಧಿಸಿದರೆಂದು ಹೇಳುತ್ತಾರೆ. ಮನಸ್ಸಿನಲ್ಲಿ ಸಂಕಲ್ಪಿತ ಚತುರ್ಮುಖಾಖ್ಯ ಪಶುರೂಪಿ ಹವಿಸ್ಸಿನಿಂದ ವಿಷ್ಣುವನ್ನು ಉದ್ದೇಶ ಮಾಡಿಕೊಂಡು ಯಜ್ಞವನ್ನು ಮಾಡಿದರು. ಈ ಮಾನಸ ಯಜ್ಞಕ್ಕೆ ವಸಂತ ಮಾಸಾಭಿಮಾನಿ ದೇವತೆಯೇ ತುಪ್ಪ, ಗ್ರೀಷ್ಮಾಭಿಮಾನಿಯೇ ಕಟ್ಟಗೆ, ಶರದಭಿಮಾನಿಯೇ ಹವಿಸ್ಸು. ಹೀಗೆ ವಿಷ್ಟುವಿನ ಅಂಗಗಳಿಂದ ಹುಟ್ಟಿದ ಹವಿರಾದಿ ಪದಾರ್ಥಗಳಿಂದ ದೇವತೆಗಳು ಮಾನಸಯಜ್ಞ ಮಾಡಿದರು.

ತ್ವಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ |
ತೇನ ದೇವಾಃ ಅಯಜಂತ ಸಾಧ್ಯಾ ಋಷಯಶ್ಚ ಯೇ ||7||
    ಬ್ರಹ್ಮಾದಿ ದೇವತೆಗಳು, ಸಾಧ್ಯರು, ಋಷಿಗಳು, ಎಲ್ಲರೂ ರುದ್ರಾದಿ ಸಮಸ್ತ ದೇವತೆಗಳನ್ನು ಮನಸ್ಸಿನಿಂದ (ಬರ್ಹಿಷಾ) ಪಶುತ್ವೇನ ಕಲ್ಪಿಸಿ ಪ್ರೋಕ್ಷಿಸಿ ವಿಷ್ಣುವನ್ನು ಆರಾಧಿಸಿದರು.

ತಸ್ಮಾದ್ಯಜ್ಞಾತ್ಸರ್ವಹುತಃ ಸಂಭೃತಂ ಪೃಷದಾಜ್ಯಮ್ |
ಪಶೂನ್ ತಾಂಶ್ಚಕ್ರೇ ವಾಯವ್ಯಾನಾರಣ್ಯಾನ್ ಗ್ರಾಮ್ಯಾಶ್ಚಯೇ ||8||
    ಈ ಮಾನಸಯಜ್ಞದಿಂದ ಪ್ರಸನ್ನನಾದ ಭಗವಂತನಿಂದ ಹೊರಗಿನ ಯಜ್ಞಸಾಧನ ಪದಾರ್ಥಗಳು ಹುಟ್ಟಿದವೆಂದು ಹೇಳುತ್ತಾರೆ. ಈ ಪುರುಷನಿಂದ ಪ್ರಧಾನ ಹೋಮಗಳು ಹುಟ್ಟಿದವು. ವೊಸರು ಕಲೆತ ತುಪ್ಪವು ಹುಟ್ಟಿತು. ಅಂತರಿಕ್ಷಲೋಕದಲ್ಲಿ ಹುಟ್ಟಿದ ಶ್ವೇತ ಪಶುಗಳನ್ನು ಅರಣ್ಯದಲ್ಲಿ ಹುಟ್ಟಿದ ಜಿಂಕೆ, ಗ್ರಾಮಗಳಲ್ಲಿ ಹುಟ್ಟಿದ ಆಡು ಮುಂತಾದವನ್ನು ಪುರಷನು ಉಂಟುಮಾಡಿದನು.

ತಸ್ಮಾದ್ಯಜ್ಞಾತ್ಸರ್ವಹುತಃ ಋಚಃ ಸಾಮಾನಿ ಜಜ್ಞಿರೇ |
ಛಂದಾಂಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ ||9||
    ಸರ್ವಹುತನಾದ ವಿಷ್ಣುವಿನಿಂದ ಅಪ್ರಧಾನವಾದ ಎಲ್ಲ ಹೋಮಗಳು, ಋಕ್ ಸಾಮಾಭಿಮಾನಿ ದೇವತೆಗಳು ಹಾಗೂ ತತ್ತನ್ನಾಮಕ ವೇದಗಳು ಹುಟ್ಟಿದವು. ಅವನಿಂದಲೇ ಗಾಯತ್ರ್ಯಾದಿ ಛಂದಸ್ಸುಗಳು ಹುಟ್ಟಿದವು. ಯಜುವು ಹುಟ್ಟಿತು.

ತಸ್ಮಾದಶ್ವಾ ಅಜಾಯಂತ ಯೇ ಕೇ ಜೋ ಭಯಾದತಃ |
ಗಾವೋ ಹ ಜಜ್ಞಿರೇ ತಸ್ಮಾತ್ತಸ್ಮಾಜ್ಜಾತಾ ಅಜಾವಯಃ ||10||
    ವಿಷ್ಣುವಿನಿಂದ ಕುದುರೆಗಳು ಹುಟ್ಟಿದವು. ಮೇಲೆ, ಕೆಳಗೆ ಚೆನ್ನಾಗಿ ಹಲ್ಲುಗಳಿರುವ ಹೇಸರಕತ್ತೆ ಮೊದಲಾದವು. ಗೋವುಗಳು, ಆಡು ಮೊದಲಾದವು ಸಹ ಹುಟ್ಟಿದವು.
   
ಯತ್ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್ |
ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾದಾ ಉಚ್ಯೇತೇ ||11||
    ಇದು ದ್ವಿತೀಯ ವರ್ಗದ ಮೊದಲು ಋಕ್ಕು. ಇಲ್ಲಿ ತತ್ತ್ವವನ್ನು ತಿಳಿಯಲು ಶಿಷ್ಯನು ಪ್ರಶ್ನಿಸುತ್ತಾನೆ. ಬ್ರಹ್ಮಾದಿ ದೇವತೆಗಳು ಪುರುಷನನ್ನು ಎಷ್ಟು ವಿಧವಾಗಿ ಚಿಂತಿಸಿದರು, ಯಜ್ಞದಲ್ಲಿ ಇದ್ದರೂ ವಿಶೇಷವಾಗಿ ಮನಸ್ಸಿನಿಂದ ನಾನಾರೀತಿಯಿಂದ ಹೇಗೆ ಕಲ್ಪಿಸಿದರು ಎಂಬುದನ್ನೇ ಪ್ರಶ್ನೆಯ ರೂಪದಲ್ಲಿ ವಿಶದಪಡಿಸುತ್ತಾರೆ. ಮುಖವು ಯಾವುದಕ್ಕೆ ಜನಕವಾಯಿತು(ಕಾರಣವಾಯಿತು)? ಬಾಹುಗಳು ಯಾವುದಕ್ಕೆ ಜನಕವಾದವು? ತೊಡೆಗಳು ಹಾಗೂ ಪಾದಗಳು ಯಾವುದಕ್ಕೆ ಜನಕವಾದವು?

ಬ್ರಾಹ್ಮಣೋಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ |
ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ ||12||
    ಹಿಂದಿನ ಪ್ರಶ್ನೆಗೆ ಇಲ್ಲಿ ಉತ್ತ ಕೊಡುತ್ತಾರೆ. ವಿಷ್ಣುವಿನ ಮುಖದಿಂದ ಬ್ರಾಹ್ಮಣ ಹಾಗೂ ಬ್ರಾಹ್ಮಣ ಜಾತಿಯ ಅಭಿಮಾನಿ ಬ್ರಹ್ಮನೂ, ಬಾಹುಗಳಿಂದ ಕ್ಷತ್ರಿಯ ಹಾಗೂ ಕ್ಷತ್ರಾಭಿಮಾನಿ ವಾಯುವೂ, ತೊಡೆಗಳಿಂದ ವೈಶ್ಯ ಹಾಗೂ ತದಭಿಮಾನಿ ನಾಸಿಕ್ಯ ವಾಯುವೂ, ಪಾದಗಳಿಂದ ಶೂದ್ರ ಹಾಗೂ ತದಭಿಮಾನಿ ನಿಋತಿಯೂ ಹುಟ್ಟಿದರು.

ಚಂದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ |
ಮುಖಾದಿಂದ್ರಶ್ಚಾಗ್ನಿಶ್ಚ ಪ್ರಣಾದ್ವಾಯುರಜಾಯತ ||13||
    ಈ ವಿರಾಟ್ ಪುರುಷನ ಮನಸ್ಸಿನಿಂದ ಚಂದ್ರನು ಹುಟ್ಟಿದನು ಮತ್ತು ಅದನ್ನು ಆಶ್ರಯಿಸಿರುವನು. ಕಣ್ಣುಗಳಿಂದ ಸೂರ್ಯನು ಹುಟ್ಟಿ ಅದನ್ನೇ ಆಶ್ರಯಿಸಿರುವನು. ಮುಖದಿಂದ ಇಂದ್ರ ಮತ್ತು ಅಗ್ನಿ, ಪ್ರಾಣದಿಂದ ಮುಖ್ಯವಾಯು, ನಾಸಿಕ್ಯವಾಯು ಇವರುಗಳು ಹುಟ್ಟಿ ಆಯಾ ಅಂಗಗಳನ್ನೇ ಆಶ್ರಯಿಸಿರುವರು.

ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮವರ್ತತ |
ಪದ್ಭ್ಯಾಂ ಭೂಮಿರ್ದಿಶಃಶ್ರೋತ್ರಾತ್ತಥಾ ಲೋಕಾನಕಲ್ಪಯನ್ ||14||
    ವಿಷ್ಣುವಿನ ನಾಭಿಯಿಂದ ಅಂತರಿಕ್ಷವು ಹುಟ್ಟಿ ಅದನ್ನೇ ಆಶ್ರಯಿಸಿತು. ಶಿರಸ್ಸಿನಿಂದ ದ್ಯು ಲೋಕ, ಪಾದಗಳಿಂದ ಭೂಮಿ, ಕಿವಿಗಳಿಂದ ದಿಕ್ಕುಗಳು ಮತ್ತು ಪಾತಾಳಾದಿ ಲೋಕಗಳು ಹುಟ್ಟಿದವು. ಅವುಗಳು ತಮ್ಮ ಉತ್ಪತ್ತಿಗೆ ಕಾರಣವಾದ ಅಂಗಗಳನ್ನೇ ಆಶ್ರಯಿಸಿದವು. ಇಲ್ಲಿನ ಉತ್ಪತ್ತಿಯ ಕ್ರಮದಲ್ಲಿ ಆಯಾ ಅಭಿಮಾನಿ ದೇವತೆಗಳನ್ನೂ ಇಟ್ಟುಕೊಳ್ಳಬೇಕು.

ಸಪ್ತಾಸ್ಯಾಸನ್ಪರಿಧಯಸ್ತ್ರಿಃ ಸಪ್ತ ಸಮಿಧಃ ಕೃತಾಃ |
ದೇವಾ ಯದ್ಯಜ್ಞಂ ತನ್ವಾನಾ ಅಬಧ್ನನ್ ಪುರುಷಂ ಪಶುಮ್ ||15||
    "ತಂ ಯಜ್ಞಂ" ಎಂದು ಹಿಂದೆ ಹೇಳಿದ ಮಾನಸ ಯಜ್ಞವನ್ನು ಇಲ್ಲಿ ಸ್ವಲ್ಪ ವಿವರಿಸಿ ಹೇಳುವರು. ಬ್ರಹ್ಮಾದಿ ದೇವತೆಗಳು, ಸಾಧ್ಯರು, ಋಷಿಗಳು ಮಾಡಿದ ಮಾನಸಯಜ್ಞದಲ್ಲಿ ಗಾಯತ್ರ್ಯಾದಿ ಏಳು ಛಂದಸ್ಸುಗಳನ್ನು ಪರಿಧಿಗಳೆಂದೂ (ದರ್ಭವಿಶೇಷಗಳು), ಹನ್ನೆರಡು ತಿಂಗಳುಗಳು, ಐದು ಋತುಗಳು, ಮೂರು ಲೋಕಗಳು ಮತ್ತು ಸೂರ್ಯ ಇವುಗಳನ್ನು ಇಪ್ಪತ್ತೊಂದು ಸಮಿತ್ತುಗಳಾಗಿಯೂ ಭಾವಿಸಿ ಮಾನಸ ಯಜ್ಞವನ್ನು ಮಾಡಿದರು.

ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿಧರ್ಮಾಣಿ ಪ್ರಥಮಾ ನ್ಯಾಸನ್ |
ತೇ ಹ ನಾಕಂ ಮಹಿಮಾನಃ ಸಚಂಚ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ||16||
    ಹೀಗೆ ದೇವತೆಗಳು ಮಾಡಿದ ಯಜ್ಞಕ್ಕೆ ಫಲವನ್ನು ಹೇಳುತ್ತಾರೆ. ಬ್ರಹ್ಮಾದಿಗಳು ದ್ರವ್ಯ ಮತ್ತು ಮಾನಸ ಯಜ್ಞದಿಂದ ವಿಷ್ಣುವನ್ನು ಕುರಿತು ಯಜ್ಞ ಮಾಡಿದ್ದರಿಂದ ತಮಗೆ ಯೋಗ್ಯವಾದ ಪದವಿಗಳನ್ನು ಹೊಂದಿದರು ಹಾಗೂ ಆಯಾ ಲೋಕಗಳಿಗೆ ಮುಖ್ಯ ಧಾರಕರಾದರು. ಮಹಾತ್ಮರಾದ ಅವರು ತಮ್ಮ ಸಾಧನೆ ಪೂರ್ತಿಯಾದ ಬಳಿಕ ಪೂರ್ಣಸುಖಾತ್ಮಕವಾದ ಮೋಕ್ಷವನ್ನು ಹೊಂದಿದರು. ದೇವತೆಗಳು ಭಗವತ್ಪೂಜೆಯ ಫಲವಾಗಿ ಮೋಕ್ಷಾದಿ ಪುರಷಾರ್ಥವನ್ನು ಗಳಿಸಿದರು. ಆದ್ದರಿಂದ ಎಲ್ಲರೂ ಅವಶ್ಯವಾಗಿ ದ್ರವ್ಯ ಮತ್ತು ಮಾನಸ ಸಾಧನಗಳಿಂದ ಸರ್ವೋತ್ತಮನಾದ ವಿಷ್ಣುವನ್ನು ಆರಾಧಿಸಬೇಕು. 
(ಇತಿ ಪುರುಷಸೂಕ್ತಮ್)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ