ಶ್ರೀ ಧನ್ವಂತರಿ ಸ್ತೋತ್ರಮ್


ನಮಾಮಿ ಧನ್ವಂತರಿಮಾದಿದೇವಂ
ಸುರಾಸುರೈರ್ವಂದಿತ ಪಾದಪದ್ಮಮ್ |
ಲೋಕೇ ಜರಾರುಗ್ಭಯಮೃತ್ಯು ನಾಶಂ
ದಾತಾರಮೀಶಂ ವಿವಿಧೌಷಧೀನಾಂ ||೧||
    ಯಾವಾತನ ಪಾದಾರವಿಂದಗಳಿಗೆ ದೇವಾದಿದೇವತೆಗಳೂ,ಅಸುರರೂ ನಮಸ್ಕರಿಸುವರೋ ಅಂತಹಾ ಆದಿದೇವನಾಗಿರುವ ಹಾಗೂ ಜಗತ್ತಿನಲ್ಲಿ ರೋಗ,ಮುಪ್ಪುಗಳ ಭಯವನ್ನು ಮತ್ತು ಮರಣ ಭೀತಿಯನ್ನು ದೂರೀಕರಿಸುವ ಅಂತೆಯೇ ವಿವಿಧ ತೆರನಾದ ಔಷಧಿಗಳನ್ನು ಕರುಣಿಸುವ ಸ್ವಾಮಿಯಾಗಿರುವ ಧನ್ವಂತರಿಗೆ ನನ್ನ ಪ್ರಣಾಮಗಳು.

ಅರಿ ಜಲಜ ಜಲೂಕಾ ರತ್ನ ಪೀಯೂಷ ಕುಂಭ-
ಪ್ರಕಟಿತ ಕರಕಾಂತ: ಕಾಂತ ಪೀತಾಂಬರಾಢ್ಯ: |
ಸಿತವಸನ ವಿರಾಜನ್ಮೌಲಿರಾರೋಗ್ಯದಾಯೀ
ಶತಮುಖ ಮಣಿವರ್ಣ: ಪಾತು ಧನ್ವಂತರಿರ್ನ: ||೨||
    ಹಸ್ತಗಳಲ್ಲಿ ಅಮೃತಕಲಶದೊಡನೆ ಜಿಗಣೆ,ಚಕ್ರ,ಶಂಖಗಳನ್ನು ಧರಿಸಿ ಕಾಂತಿಯುತ ಪೀತಾಂಬರವನ್ನುಟ್ಟು, ಶ್ವೇತವಸನದ ರುಮಾಲಿನಿಂದ ಶೋಭಿಸುವ ಶಿರಸ್ಸು ಉಳ್ಳವನಾದ ಶರೀರವು ಇಂದ್ರನೀಲಮಣಿಯ ಬಣ್ಣ ಹೊಂದಿರುವ ಆರೋಗ್ಯದಾಯಿಯಾಗಿರುವ ಧನ್ವಂತರಿ ಸ್ವಾಮಿಯು ನಮ್ಮನ್ನು ರಕ್ಷಿಸಲಿ.

ಚಂದ್ರೌಘಕಾಂತಿಂ ಅಮೃತೋರು ಕರೈರ್ಜಗಂತಿ
ಸಂಜೀವಯಂತಂ ಅಮಿತಾತ್ಮ ಸುಖಂ ಪರೇಶಮ್ |
ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ
ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||೩||
    ಬಹು ಚಂದ್ರರ ಸೌಂದರ್ಯವುಳ್ಳ,ತನ್ನ ಮೋಕ್ಷದಾಯಕವಾಗಿರುವ ಕಿರಣಗಳಿಂದ ಜಗತ್ತನ್ನು ಪುನರ್ಜ್ಜೀವನಗೊಳಿಸುತ್ತಲಿರುವ,ವಿಶಾಲವಾದ ಆತ್ಮಾನುಭೂತಿಯುಳ್ಳ,ಉನ್ನತ ಸ್ವಾಮಿಯಾಗಿರುವ,ಜ್ಞಾನಮುದ್ರೆಯನ್ನು ಮತ್ತು ಮೋಕ್ಷಕುಂಭವನ್ನು ಧರಿಸಿ,ಚಂದ್ರಮಂಡಲದೊಳಗಿರುವ ದೇವನಾದ ಧನ್ವಂತರಿಯು ನಮ್ಮ ಶರೀರದಲ್ಲಿ ನೆಲೆಯಾಗಿರುವನೆಂದು ಸ್ಮರಿಸೋಣ.

ಶಂಖಂ ಚಕ್ರಂ ಜಲೂಕಾಂ ದಧದಮೃತಘಟಂ ಚಾಪಿ ದೋರ್ಭಿಶ್ಚತುರ್ಭಿ:
ಸೂಕ್ಷ್ಮಸ್ವಚ್ಛಂ ಚ ಹೃದ್ಯಾಂಶುಕಪರಿವಿಲಸನ್ಮೌಲಿಂ ಅಂಭೋಜ ನೇತ್ರಮ್ |
ಕಾಲಾಂಭೋದೋಜ್ವಲಾಂಗಂ ಕಟಿತಟಿ ವಿಲಸಚ್ಚಾರು ಪೀತಾಂಬರಾಢ್ಯಂ
ವಂದೇ ಧನ್ವಂತರೀಂ ತಂ ನಿಖಿಲ ಗದವನ ಪ್ರೌಢದಾವಾಗ್ನಿ ಲೀಲಮ್ ||೪||
    ಅಮೃತಕಲಶದೊಡನೆ ಶಂಕ,ಚಕ್ರ,ಜಿಗಣೆಗಳನ್ನು ತನ್ನ ನಾಲ್ಕುಕೈಗಳಲ್ಲಿ ಹಿಡಿದು ಸಾಮಾನ್ಯರಿಗೆ ಅಗೋಚರನಾಗಿ,ತಾನು ಇಚ್ಛಿಸಿದ ಭಕ್ತರಿಗೆ ಪ್ರತ್ಯಕ್ಷನಾಗುವ ಮನಮೋಹಕವಾಗಿರುವ ಬಟ್ಟೆಯ ರುಮಾಲನ್ನು ಶಿರದಲ್ಲಿ ಧರಿಸಿ,ವಿಸ್ತಾರವಾದ ನೇತ್ರಗಳನ್ನು ಹೊಂದಿದ ಮಳೆಗಾಲದ ಕಾರ್ಮುಗಿಲ ಬಣ್ಣದ ದೇಹವುಳ್ಳವನಾದ ಮೋಹಕವಾದ ಪೀತಾಂಬರವನ್ನು ಸೊಂಟಕ್ಕೆ ಸುತ್ತಿಕೊಂಡು,ಸಮಸ್ತ ರೋಗಗಳೆಂಬ ಕಾಡ್ಗಿಚ್ಚನ್ನು ಅಳಿಸಿಹಾಕುವ ದೇವನಾದ ಧನ್ವಂತರಿಗೆ ನನ್ನ ಪ್ರಣಾಮಗಳು.

ಶಂಖಂ ಚಕ್ರಮುಪರ್ಯಧಶ್ಚಕರಯೋರ್ದಿವ್ಯೌಷಧಂ ದಕ್ಷಿಣೇ
ವಾಮೇನಾನ್ಯ ಕರೇಣ ನಿರ್ಮಲ ಸುಧಾಕುಂಭಂ ಜಲೂಕಾವಲಿಮ್ |
ಬಿಭ್ರಾಣ: ಕರುಣಾಕರ: ಶುಭಕರ: ಸರ್ವಾಮಯ ಧ್ವಂಸಕ:
ಸರ್ವಂ ಮೇ ದುರಿತಂ ಛಿನತ್ತು ಭಗವಾನ್ ಧನ್ವಂತರಿ: ಸಂತತಮ್ ||೫||
    ತನ್ನ ದೇಹದ ಮೇಲ್ಭಾಗದ ಎರಡು ಹಸ್ತಗಳಲ್ಲಿ ಶಂಖ ಚಕ್ರಗಳನ್ನು ಧರಿಸಿ,ಕೆಳಬದಿಯ ಬಲಗೈಯಲ್ಲಿ ದಿವ್ಯೌಷಧವಾಗಿರುವ ಅಮೃತಕುಂಭವನ್ನು ಧರಿಸಿ,ಎಡಗೈಯಲ್ಲಿ ಜಿಗಣೆಗಳ ಗುಂಪನ್ನು ಹಿಡಿದಿರುವ,ಕರುಣಾಸಾಗರನಾಗಿರುವ,ಸರ್ವ ರೋಗ ನಿವಾರಕನಾಗಿರುವ,ಪ್ರಪಂಚಕ್ಕೆ ಒಳಿತನ್ನು ದಯಪಾಲಿಸುವ ಸಾಕ್ಷಾತ್ ಭಗವದ್ಸ್ವರೂಪಿ ಧನ್ವಂತರಿ ಸ್ವಾಮಿಯು ಸಮಸ್ತಕ್ಕೆ ರೋಗಗಳಿಗೆ ಮೂಲವಾಗಿರುವ ನನ್ನ ಸರ್ವ ಪಾಪಗಳನ್ನು ಅನುದಿನವೂ ನಿವಾರಿಸಲಿ.ಆತನಿಗೆ ಪ್ರಣಾಮಗಳು.
|| ಇತಿ ಶ್ರೀ ಧನ್ವಂತರಿ ಸ್ತೋತ್ರಮ್ ||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ