ವಿಜ್ಞಾನನೌಕಾಸ್ತುತಿ - (ಶ್ರೀಶಂಕರಾಚಾರ್ಯರವರ ಕೃತಿ)


ತಪೋಯಜ್ಞದಾನಾದಿಭಿಃ ಶುದ್ಧ ಬುದ್ಧಿ-
ರ್ವಿರಕ್ತೋ ನೃಪಾದೌ ಪದೇ ತುಚ್ಛಬುದ್ಧ್ಯಾ |
ಪರಿತ್ಯಜ್ಯ ಸರ್ವಂ ಯದಾಪ್ನೋತಿ ತತ್ತ್ವಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||1||

ತಪಸ್ಸು, ಯಜ್ಞ, ದಾನ- ಮುಂತಾದವುಗಳಿಂದ ಚಿತ್ತಶುದ್ಧಿಯನ್ನು ಪಡೆದು ದೊರೆತನವೇ ಮುಂತಾದ ಪದವಿಯಲ್ಲಿ ಕೂಡ ತುಚ್ಛಬುದ್ಧಿಯುಳ್ಳವರಾಗಿ ವೈರಾಗ್ಯದಿಂದ ಎಲ್ಲವನ್ನೂ ಬಿಟ್ಟು ಯಾವ ತತ್ತ್ವವನ್ನು ಪಡೆಯುವರೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.

ದಯಾಲುಂ ಗುರುಂ ಬ್ರಹ್ಮನಿಷ್ಠಂ ಪ್ರಶಾನ್ತಂ
ಸಮಾರಾಧ್ಯ ಮತ್ಯಾ ವಿಚಾರ್ಯ ಸ್ವರೂಪಮ್ |
ಯದಾಪ್ನೋತಿ ತತ್ತ್ವಂ ನಿದಿಧ್ಯಾಸ್ಯ ವಿದ್ವಾನ್
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||2||

ಕರುಣಾಳುವೂ ಪರಮಶಾಂತಿಯುಳ್ಳಾತನೂ ಆಗಿರುವ ಬ್ರಹ್ಮನಿಷ್ಠನಾದ ಗುರುವನ್ನು ಸೇವಿಸಿ ಮಾಡಿದ ಮನನದಿಂದ ತನ್ನ ಸ್ವರೂಪವನ್ನು ಕುರಿತು ವಿಚಾರಮಾಡಿ ನಿದಿಧ್ಯಾಸನದಿಂದ ಜ್ಞಾನಿಯಾಗಿ ಯಾವ ತತ್ತ್ವವನ್ನು ಪಡೆದುಕೊಳ್ಳುತ್ತಾನೋ ಆ ನಿತ್ಯವಾದ ಪರಬ್ರಹ್ಮನೇ ನಾನಾಗಿರುವೆನು.

ಯದಾನನ್ದರೂಪಂ ಪ್ರಕಾಶಸ್ವರೂಪಂ
ನಿರಸ್ತಪ್ರಪಞ್ಚಂ ಪರಿಚ್ಛೇದಶೂನ್ಯಮ್ |
ಅಹಂಬ್ರಹ್ಮವೃತ್ತ್ಯೈಕಗಮ್ಯಂ ತುರೀಯಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||3||

ಯಾವದು ಅನಂದಸ್ವರೂಪವಾಗಿಯೂ ಪ್ರಕಾಶರೂಪವಾಗಿಯೂ ಪ್ರಪಂಚರಹಿತವಾಗಿ ಯಾವ ಎಲ್ಲೆಕಟ್ಟೂ ಇಲ್ಲದೆ 'ನಾನು ಬ್ರಹ್ಮವು' ಎಂಬ ವ್ಯಕ್ತಿಯಿಂದಲೇ ಅರಿಯುವದಕ್ಕೆ ತಕ್ಕದ್ದಾಗಿರುವದೋ ಅವಸ್ಥಾತ್ರಯವನ್ನು ಮಿರಿದ ನಾಲ್ಕನೆಯದಾದ ನಿತ್ಯವಾದ ಆ ಪರಬ್ರಹ್ಮನೇ ನಾನಾಗಿರುವೆನು.

ಯದಜ್ಞಾನತೋ ಭಾತಿ ವಿಶ್ವಂ ಸಮಸ್ತಂ
ವಿನಷ್ಟಂ ಚ ಸದ್ಯೋ ಯದಾತ್ಮಪ್ರಬೋಧೇ |
ಮನೋವಾಗತೀತಂ ವಿಶುದ್ಧಂ ವಿಮುಕ್ತಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||4||

ಯಾವದರ ಮರವೆಯಿಂದ ಪ್ರಪಂಚವೆಲ್ಲವೂ ತೋರುತ್ತಿರುವದೋ, ಯಾವದರ ಸ್ವರೂಪದ ಅರಿವು ಉಂಟಾದಕೂಡಲೆ ಅದು ಮರೆಯಾಗುವದೋ ಮನಸ್ಸಿಗೂ ವಾಕ್ಕಿಗೂ ಆಚೆಯಿರುವ ನಿತ್ಯಶುದ್ಧವಾಗಿಯೂ ನಿತ್ಯಮುಕ್ತವಾಗಿಯೂ ಇರುವ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.

ನಿಷೇಧೇ ಕೃತೇ ನೇತಿ ನೇತೀತಿ ವಾಕ್ಯೈಃ
ಸಮಾಧಿಸ್ಥಿತಾನಾಂ ಯದಾಭಾತಿ ಪೂರ್ಣಮ್
ಅವಸ್ಥಾತ್ರಯಾತೀತಮೇಕಂ ತುರೀಯಂ
ಪರಂ ಬ್ರಹ್ಮನಿತ್ಯಂ ತದೇವಾಹಮಸ್ಮಿ  ||5||

'ಇದಲ್ಲ', 'ಇದಲ್ಲ' - ಎಂಬ ವೇದಾಂತವಾಕ್ಯಗಳು ಅಲ್ಲಗಳೆಯಲಾಗಿ ಸಮಾಧಿಯಲ್ಲಿರುವವರಿಗೆ ಯಾವ ಪೂರ್ಣವಸ್ತುವು ತೋರುವದೋ, ಅವಸ್ಥಾತ್ರಯವನ್ನೂ ಮಿರಿ ನಾಲ್ಕನೆಯದೆನಿಸಿರುವ ಆ ಅದ್ವಿತೀಯವಾದ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.

ಯದಾನನ್ದಲೇಶೈಸ್ತದಾನನ್ದಿ ವಿಶ್ವಂ
ಯದಾಭಾನಸತ್ತ್ವೇ ತದಾ ಭಾತಿ ಸರ್ವಮ್ |
ಯದಾಲೋಚನಾರೂಪಮನ್ಯತ್ಸಮಸ್ತಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||6||

ಯಾವದರ ಆನಂದದ ಕಣಗಳಿಂದ ಈ ಪ್ರಪಂಚವೆಲ್ಲವೂ ಸುಖಿಯೆನಿಸುವದೋ, ಯಾವದರ ಬೆಳಕಿನಿಂದಲೇ ಇದೆಲ್ಲವೂ ಬೆಳಗುವದೋ, ಮಿಕ್ಕದ್ದೆಲ್ಲವೂ ಯಾವದರ ಸಂಕಲ್ಪರೂಪವಾಗಿರುವದೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.

ಅನನ್ತಂ ವಿಭುಂ ಸರ್ವಯೋನಿಂ ನಿರೀಹಂ
ಶಿವಂ ಸಙ್ಗಹೀನಂ ಯದೋಂಕಾರಗಮ್ಯಮ್ |
ನಿರಾಕಾರಮತ್ಯುಜ್ಜ್ವಲಂ ಮೃತ್ಯಹೀನಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||7||

ಅಂತವಿಲ್ಲದೆ, ವ್ಯಾಪಕವಾಗಿ, ಎಲ್ಲಕ್ಕೂ ಕಾರಣವಾಗಿ, ಯಾವ ಕ್ರಿಯೆಯೂ ಇಲ್ಲದೆ, ಮಂಗಳಕರವಾಗಿ, ನಿಸ್ಸಂಗವಾಗಿ, ಓಂಕಾರಕ್ಕೆ ಲಕ್ಷ್ಯನಾಗಿ ಯಾವ ಆಕಾರವೂ ಇಲ್ಲದೆ ಅತ್ಯಂತ ಪ್ರಕಾಶವಾಗಿರುವ ಮರಣರಹಿತವಾಗಿರುವ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.

ಯದಾನನ್ದಸಿನ್ಧೌ ನಿಮಗ್ನಃ ಪುಮಾನ್ ಸ್ಯಾ-
ದವಿದ್ಯಾವಿಲಾಸಃ ಸಮಸ್ತಃ ಪ್ರಪಞ್ಚಃ |
ಯದಾ ನ ಸ್ಫುರತ್ಯದ್ಭುತಂ ಯನ್ನಿಮಿತ್ತಂ
ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||8||

ಯಾವನ ಆನಂದದ ಸಾಗರದಲ್ಲಿ ಮುಳುಗಿದಾತನೇ ಪುರುಷನೆನಿಸುವನೋ ಅವಿದ್ಯೆಯ ಕಾರ್ಯವಾದ ಸಮಸ್ತ ಪ್ರಪಂಚವೂ ಯಾವ ಮುಳುಗುವಿಕೆಯಿಂದ ಅತ್ಯಾಶ್ಚರ್ಯಕರವಾಗಿ ಕಾಣದೆ ಹೋಗುವದೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.

ಸ್ವರೂಪಾನುಸನ್ಧಾನರೂಪಾಂ ಸ್ತುತಿಂ ಯಃ
ಪಠೇದಾದರಾದ್ಭಕ್ತಿಭಾವೋ ಮನುಷ್ಯಃ |
ಶೃಣೋತೀಹ ವಾ ನಿತ್ಯಮುದ್ಯುಕ್ತಚಿತ್ತೋ
ಭವೇದ್ವಿಷ್ಣುರತ್ರೈವ ವೇದಪ್ರಮಾಣಾತ್   ||9||

ಸ್ವರೂಪವನ್ನು ಮನಸ್ಸಿಗೆ ತಂದುಕೊಳ್ಳುವ ರೂಪದಲ್ಲಿರುವ ಈ ಸ್ತೋತ್ರವನ್ನು ಯಾವ ಮನುಷ್ಯನು ಭಕ್ತಿಭಾವದಿಂದ ಪಠಿಸುತ್ತಾನೋ, ಅಥವಾ ನಿತ್ಯವೂ ಅದರಲ್ಲಿಯೇ ಮನಸ್ಸಿಟ್ಟು ಕೇಳುವನೋ ಅವನು ಇಲ್ಲಿಯೇ ವಿಷ್ಣುವಾಗುವನು ಇದಕ್ಕೆ ವೇದವೇ ಪ್ರಮಾಣವು.

ವಿಜ್ಞಾನನಾವಂ ಪರಿಗೃಹ್ಯ ಕಶ್ಚಿತ್
ತರೇದ್ಯದಜ್ಞಾನಮಯಂ ಭವಾಬ್ಧಿಮ್ |
ಜ್ಞಾನಾಸಿನಾ ಯೋ ಹಿ ವಿಚ್ಛಿದ್ಯ ತೃಷ್ಣಾಂ
ವಿಷ್ಣೋಃ ಪದಂ ಯಾತಿ ಸ ಏವ ಧನ್ಯಃ ||10||

ಯಾವನೇ ಆಗಲಿ, ವಿಜ್ಞಾನವೆಂಬ ದೋಣಿಯನ್ನು ಸ್ವೀಕರಿಸಿ ಅಜ್ಞಾನಮಯವಾದ ಸಂಸಾರಸಾಗರವನ್ನು ದಾಟಿದರೆ, ಜ್ಞಾನವೆಂಬ ಕತ್ತಿಯಿಂದ ಆಶೆಯನ್ನು ಕತ್ತರಿಸಿ ವಿಷ್ಣುವಿನ ಪದವನ್ನು ಸೇರಿದರೆ ಅವನೇ ಧನ್ಯನು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ