ದಕ್ಷಿಣಾಮೂರ್ತಿಸ್ತೋತ್ರ - 1. ಅದ್ವಯಜ್ಞಾನ

ವಿಶ್ವಂ ದರ್ಪಣದೃಶ್ಯಮಾನನಗರೀತುಲ್ಯಂ ನಿಜಾನ್ತರ್ಗತಂ
ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾ ನಿದ್ರಯಾ |
ಯಃ ಸಾಕ್ಷಾತ್ಕುರುತೇ ಪ್ರಬೋಧಸಮಯೇ ಸ್ವಾತ್ಮಾನಮೇವಾದ್ವಯಂ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||

    ಶ್ರೀಮಚ್ಛಂಕರಭಗವತ್ಪಾದಾಚಾರ್ಯರವರು ಅನುಗ್ರಹಿಸಿರುವರೆಂದು ಪ್ರಸಿದ್ಧವಾಗಿರುವ ಪ್ರಕರಣಗಳಲ್ಲಿ ಶ್ರೀದಕ್ಷಿಣಾಮೂರ್ತಿಸ್ತೋತ್ರವೂ ಒಂದು. ಇದಕ್ಕೆ ಮಾನಸೋಲ್ಲಾಸವೆಂಬ ವಾರ್ತಿಕವೊಂದು ಇದೆ; ಅದನ್ನು ಶ್ರೀಶಂಕರಾಚಾರ್ಯರವರ ಸಾಕ್ಷಾಚ್ಛಿಷ್ಯರಾದ ಸುರೇಶ್ವರಾಚಾರ್ಯರೇ ಬರೆದಿರುತ್ತಾರೆಂದು ಪ್ರಸಿದ್ಧಿ. ಆಚಾರ್ಯರಲ್ಲಿ ಭಕ್ತಿಯುಳ್ಳವರನೇಕರು ಈ ಸ್ತೋತ್ರವನ್ನು ನಿತ್ಯವೂ ಪಠಿಸುತ್ತಾರೆ. ಈಗ್ಗೆ ಪ್ರಸ್ಥಾನತ್ರಯಭಾಷ್ಯಗಳನ್ನು ಪಾರಾಯಣಮಾಡುವವರೂ ಗುರುಗಳ ಮೂಲಕ ಹೇಳಿಸಿಕೊಳ್ಳುವವರೂ ಶಾಂತಿಮಂತ್ರಗಳ ಜೊತೆಗೆ ಈ ಸ್ತೋತ್ರವನ್ನೂ ಹೇಳಿಕೊಳ್ಳುವವರೂ ಶಾಂತಿಮಂತ್ರಗಳ ಜೊತೆಗೆ ಈ ಸ್ತೋತ್ರವನ್ನೂ ಹೇಳಿಕೊಳ್ಳುವವರೂ ಶಾಂತಿಮಂತ್ರಗಳ ಜೊತೆಗೆ ಈ ಸ್ತೋತ್ರವನ್ನೂ ಹೇಳಿಕೊಳ್ಳುವ ವಾಡಿಕೆಯಿದೆ ಈ ಕಾರಣದಿಂದಲೂ ಈ ಸ್ತೋತ್ರಕ್ಕೆ ಪ್ರಾಧಾನ್ಯವಿದೆ ಇವೆರಡರ ಜೊತೆಗೆ ಈ ಸ್ತೋತ್ರದ ಅರ್ಥವನ್ನು ಅನುಸಂಧಾನಮಾಡಿಕೊಂಡರೆ ಆಗುವ ಹೆಚ್ಚಿನ ಪ್ರಯೋಜನವು ಒಂದಿದೆ ಅದೇನೆಂದರೆ ಈ ಪ್ರಕರಣದಲ್ಲಿ ಸರ್ವಾತ್ಮತ್ವವನ್ನು ಸ್ಫುಟಗೊಳಿಸಿರುತ್ತದೆ ಸರ್ವಾತ್ಮತ್ವವೆಂಬ ಮಾತಿಗೆ ಎರಡರ್ಥವಿದೆ ನಮಗೆ ಏನೇನು ಕಾಣುತ್ತಿದೆಯೋ ಯಾವಯಾವದು ಇಂದ್ರಿಯಗಳಿಗೂ ಮನಸ್ಸಿಗೂ ಗೋಚರವಾಗಿದೆಯೋ ಅದೆಲ್ಲವೂ ನಮ್ಮ ಒಳಗಿರುವ ಶರೀರೇಂದ್ರಿಯಮನಾದಿಗಳೂ ಎಲ್ಲವೂ ನಿಜವಾಗಿ ಆತ್ಮನೇ ಎಂಬುದು ಒಂದು ಸರ್ವಾತ್ಮತ್ವ ಪರಮಾತ್ಮನು ಒಬ್ಬನೇ ಆಗಿದ್ದುಕೊಂಡು ವ್ಯವಹಾರದಲ್ಲಿ ನಮಗೆ ತೋರುವದೆಲ್ಲವೂ ಆಗಿ ಕಾಣಿಸಿಕೊಳ್ಳುತ್ತಿದ್ದಾನೆ; ಪರಮಾತ್ಮನಿಗಿಂತ ಬೇರೆಯಾಗಿ ಯಾವದೊಂದು ಇಲ್ಲವೇ ಇಲ್ಲ ಇದೂ ಒಂದು ಬಗೆಯ ಸರ್ವಾತ್ಮತ್ವ ಇದನ್ನು ಯಾವನು ಮನದಟ್ಟುಮಾಡಿಕೊಳ್ಳುವನೋ ಅವನಿಗೆ ಸರ್ವಾತ್ಮತ್ವವೇ ಬರುತ್ತದೆ ಎಂದು ಈ ಗ್ರಂಥದ ಕೊನೆಯ ಶ್ಲೋಕದಲ್ಲಿ ಹೇಳಿರುತ್ತದೆ ಇದೇ ಆಚಾರ್ಯರು ಬೋಧಿಸಿರುವ ವೇದಾಂತದ ಪರಮಸಿದ್ಧಾಂತವಾದ್ದರಿಂದ ಇದನ್ನು ಭಾಷ್ಯಚಿಂತನದ ಕಾಲಕ್ಕೆ ಪಠಿಸುವದು ಯೋಗ್ಯವೇ ಆಗಿರುತ್ತದೆ ಈ ಎಲ್ಲಾ ಕಾರಣಗಳಿಂದ ಜಿಜ್ಞಾಸುಗಳ ಪ್ರಯೋಜನಕ್ಕಾಗಿ ಈ ಗ್ರಂಥದ ಶ್ಲೋಕಗಳನ್ನು ಒಂದೊಂದಾಗಿ ವಿವರಿಸುವದಕ್ಕೆ ಪ್ರಯತ್ನಿಸುವೆವು.

    ಯಾವಾತನು ತನ್ನೊಳಗೆ ಅಡಕವಾಗಿರುವ ಕನ್ನಡಿಯಲ್ಲಿ ಕಾಣುವ ನಗರಿಗೆ ಸಮಾನವಾದ ವಿಶ್ವವನ್ನು ತನ್ನಲ್ಲಿರುವ ಮಾಯೆಯಿಂದ ನಿದ್ರೆಯಿಂದ (ಕಾಣುವಂತೆ) ಹೊರಗೆ ಹುಟ್ಟಿದಂತೆ ಕಾಣುತ್ತಾ ಪ್ರಬೋಧಸಮಯದಲ್ಲಿ ಅದ್ವಯನಾದ ತನ್ನ ಆತ್ಮನನ್ನೇ ಸಾಕ್ಷಾತ್ಕರಿಸಿಕೊಳ್ಳುವನೋ ಆ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಗೆ ಈ ನಮಸ್ಕಾರವು ಎಂಬುದು ಶ್ಲೋಕದ ಅಕ್ಷರಾರ್ಥವು.

    ಈಗ ಇಲ್ಲಿರುವ ಪದಗಳ ಅರ್ಥವನ್ನು ಒಂದೊಂದಾಗಿ ಬಿಡಿಸಿ ನೋಡೋಣ ದಕ್ಷಿಣಾಮೂರ್ತಿ ಎಂಬುದು ಪರಮಶಿವನ ಹೆಸರು. ಸನಕಾದಿಗಳಿಗೆ ಶ್ರೀಪರಮಶಿವನು ಮೌನದಿಂದಲೇ ಪರಬ್ರಹ್ಮತತ್ತ್ವವನ್ನುಪದೇಶಿಸಿದನೆಂದು ಅಷ್ಟರಿಂದಲೇ ಶಿಷ್ಯರಾದ ಋಷಿಗಣಕ್ಕೆಲ್ಲ ಸಂಶಯಗಳು ಕತ್ತರಿಸಿಹೋದವೆಂದೂ ಆಗ್ಗೆ ಆತನು ಒಂದು ಆಲದಮರದ ಕೆಳಗೆ ದಕ್ಷಿಣದಿಕ್ಕಿಗೆ ಅಭಿಮುಖವಾಗಿ ಕುಳಿತಿದ್ದನೆಂದೂ ಪೌರಾಣಿಕರ ಹೇಳಿಕೆ ಆದ್ದರಿಂದ ಆಗ ಪರಮಶಿವನು ಧರಿಸಿದ್ದ ಪರಮಸುಂದರವಾಗಿದ್ದ ಹರೆಯದ ಆಕೃತಿಗೆ ದಕ್ಷಿಣಾಮೂರ್ತಿ ಎಂದು ಹೆಸರಾಯಿತು ಈಗಲೂ ಕೆಲವರು ಉಪಾಸಕರು ಆ ಹೆಸರಿನಿಂದಲೇ ಆ ಆಕೃತಿಯನ್ನೇ ಧ್ಯಾನಮಾಡುತ್ತಿರುತ್ತಾರೆ. 'ಪರಮೇಶ್ವರನಿಗೆ ನಿಜವಾದ ಗೊತ್ತಾದ ಯಾವದೊಂದು ಆಕೃತಿಯೂ ಇರುವದಿಲ್ಲವಾದರೂ ಭಕ್ತರ ಅನುಗ್ರಕ್ಕಾಗಿ ತನ್ನ ಇಚ್ಛಾಮಾತ್ರದಿಂದ ಧರಿಸಿದ ಮಾಯಾಮಯವಾದ ರೂಪವೂ ಇರಬಹುದು' (ಸ್ಯಾತ್ ಪರಮೇಶ್ವರಸ್ಯಾಪಿ ಇಚ್ಛಾವತ್ ಮಾಯಾಮಯಂ ರೂಪಂ ಸಾಧಕಾನುಗ್ರಹಾರ್ಥಮ್) ಎಂದು ಆಚಾರ್ಯರು ಸೂತ್ರಭಾಷ್ಯದಲ್ಲಿ(1-1-20) ಬರೆದಿರುತ್ತಾರೆ.

    ಆ ದಕ್ಷಿಣಾಮೂರ್ತಿಯಾದ ಪರಮೇಶ್ವರನು ಶ್ರೀಗುರುಮೂರ್ತಿಯೂ ಆಗಿರಬಹುದೆಂದು ಇದರಿಂದಲೇ ಸಿದ್ಧವಾಗುತ್ತದೆ ಆತನು ದಕ್ಷಿಣಾಮೂರ್ತಿಯ ರೂಪದಿಂದ ಋಷಿಗಳಿಗೆ ಉಪದೇಶವನ್ನು ಮಾಡಿದಂತೆಯೇ ಈಗಲೂ ತತ್ತ್ವ ಜಿಜ್ಞಾಸುಗಳಿಗೆ ಶ್ರೀಗುರುಮೂರ್ತಿಯ ರೂಪದಿಂದಲೂ ಉಪದೇಶವನ್ನು ಮಾಡಿ ಅನುಗ್ರಹಿಸುತ್ತಿರುತ್ತಾನೆ. ಶ್ರೀ ಎಂದರೆ ಬ್ರಹ್ಮವಿದ್ಯಾರೂಪವಾದ ಕಾಂತಿಯು ಪರಮಶಿವನು ಬ್ರಹ್ಮವಿದ್ಯಾಸ್ವರೂಪವಾದ ತನ್ನ ಕಾಂತಿಯಿಂದ ನಿತ್ಯವೂ ಕೂಡಿದವನಾಗಿರುತ್ತಾನೆ;  ತನ್ನ ಸಂಕಲ್ಪಮಾತ್ರದಿಂದ ಜಗತ್ತಿನ ಸೃಷ್ಟಿಸ್ಥಿತಿಲಯಗಳನ್ನು ಮಾಡಲು ದಕ್ಷನಾಗಿರುತ್ತಾನೆ; ಆದರೂ ತನ್ನಲ್ಲಿ ವಿಕಾರವನ್ನು ಹೊಂದುವ ಯಾವ ಮೂರ್ತಿಯೂ ಇಲ್ಲವಾದ್ದರಿಂದ ಅಮೂರ್ತಿಯೂ ಆಗಿರುತ್ತಾನೆ ಈ ಅರ್ಥದಲ್ಲಿ ಸ್ವರೂಪದಲ್ಲಿರುವ ಪರಮಾತ್ಮನನ್ನೂ 'ಶ್ರೀದಕ್ಷಿಣಾಮೂರ್ತಿ' ಎನ್ನಬಹುದಾಗಿದೆ ಅದೇ ಪರಮೇಶ್ವರನೇ 'ದಕ್ಷಿಣಾಮೂರ್ತಿ' ಎಂಬ ಹೆಸರಿನ ಮೂರ್ತಿಯನ್ನು ಹೊಂದಿದಾಗಲೂ ಅದರಲ್ಲಿದ್ದ ಬ್ರಹ್ಮವರ್ಚಸರೂಪವಾದ ಶ್ರೀಯೂ ಆತನ ಉಪದೇಶರೂಪವಾದ ದಕ್ಷತೆಯೂ ಇದ್ದದ್ದರಿಂದ ಆತನು ದಕ್ಷಿಣಾಮೂರ್ತಿಯ ರೂಪದಿಂದಲೂ ತೋರಿಕೊಂಡನೆಂದು ಕಲ್ಪಿಸುವದರಲ್ಲೇನೂ ತಪ್ಪಿಲ್ಲ ಆ ಪರಮೇಶ್ವರನೇ ಈಗಲೂ ಸಾಧಕರಿಗೆ ಬ್ರಹ್ಮವಿದ್ಯಾವರ್ಚಸ್ಸಿನಿಂದಲೂ ಉಪದೇಶ ದಕ್ಷತೆಯಿಂದಲೂ ಕೂಡಿ ಹಿತವನ್ನು 'ಗೃಣಾತಿ' ಎಂದರೆ ಹೇಳಿಕೊಡುತ್ತಾನಾದ್ದರಿಂದಲೂ ಶಿಷ್ಯಾನುಗ್ರಹಾರ್ಥವಾಗಿ ಮಾನವಮೂರ್ತಿಯನ್ನು ಧರಿಸಿರುತ್ತಾನಾದ್ದರಿಂದಲೂ ಶ್ರೀಗುರುಮುರ್ತಿಯೂ ಆಗಿರುತ್ತಾನೆ. ಹೀಗೆ ಪರಮಾತ್ಮನು ಯಾವ ಮೂರ್ತಿಯೂ ಇಲ್ಲದೆ ಸರ್ವವ್ಯಾಪಕನಾಗಿದ್ದರೂ ಶ್ರೀದಕ್ಷಿಣಾಮೂರ್ತಿ ಶ್ರೀಗುರುಮೂರ್ತಿ, ಶಿಷ್ಯಮೂರ್ತಿ ಎಂಬ ಮೂರು ಮೂರ್ತಿಗಳ ರೂಪದಿಂದ ಕಾಣಿಸಿಕೊಂಡು ವಿದ್ಯಾಸಂಪ್ರದಾಯಪ್ರವರ್ತಕದೇವತೆ, ವಿದ್ಯೋಪದೇಶಕಗುರು, ವಿದ್ಯೆಯನ್ನು ಗ್ರಹಿಸುವ ಶಿಷ್ಯ - ಎಂಬ ಮೂರು ಮುರ್ತಿಗಳಿಂದ ತನ್ನ ಲೀಲೆಯನ್ನು ತೋರ್ಪಡಿಸಿಕೊಳ್ಳುತ್ತಿರುತ್ತಾನೆ - ಎಂದು ವೇದಾಂತಾಜ್ಞರು ಹೇಳುತ್ತಿರುವರು. 'ಇಂಥ ಅದ್ವೈತಜ್ಞಾನವು ನನಗೆ ಲಭಿಸಲಿ' ಎಂಬ  ಆಭಿಸಂಧಿಯಿಂದ ಜಿಜ್ಞಾಸುವು 'ತಸ್ಮೈಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ' ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಗೆ ನಮಸ್ಕಾರವು ಎಂದು ಭಕ್ತಿಪೂರ್ವಕವಾಗಿ ನಮಸ್ಕಾರಿಸಬೇಕು.

    ಈಗ ಈ ಪ್ರಕರಣದಲ್ಲಿ ಪ್ರತಿಪಾದ್ಯವಾಗಿರುವ ಮುಖ್ಯವಿಷಯವನ್ನು ತಿಳಿಸುವ ವಿಶೇಷಣಗಳ ಕಡೆಗೆ ಚಿತ್ತವನು ಹೊರಳಿಸೋಣ. ವಿಶ್ವವೆಂದರೆ ನಮಗೆ ಏನೇನು ಇಂದ್ರಿಯಗಳಿಗೆ ಗೋಚರವಾಗಿರುವದೋ ಏನೇನು ಮನಸ್ಸಿಗೆ ತಿಳಿಯ ಬರುವದೋ ಅದೆಲ್ಲವೂ ಎಂದರ್ಥ ಆಧ್ಯಾತ್ಮಿಕವಾದ ಇಂದ್ರಿಯ, ಮನಸ್ಸು, ಬುದ್ಧಿ, ಅಹಂಕಾರ ಇವೆಲ್ಲವೂ ಈ ವಿಶ್ವದಲ್ಲಿಯೇ ಸೇರಿರುತ್ತವೆ. ಈ ವಿಶ್ವವು ಎಲ್ಲಿರುತ್ತದೆ? ಎಂದರೆ ಇದೆಲ್ಲ ಆತ್ಮನ ಸ್ವರೂಪದಲ್ಲಿಯೇ ಇರುತ್ತದೆ. ಆತ್ಮನೆಂದರೆ ವ್ಯಾಪಿಸಿಕೊಂಡಿರುವಾತನು. ಮಣ್ಣು, ಮಡಕೆ, ಕುಡಿಕೆ - ಮುಂತಾದವುಗಳನ್ನೂ, ಹಗ್ಗವು ತನ್ನಲ್ಲಿ ಕಲ್ಪಿತವಾಗುವ ಹಾವು, ನೆಲದ ಬಿರುಕು, ನೀರಿನ ಕೋಡಿ ಮುಂತಾದವುಗಳನ್ನೂ ಪೂರ್ಣವಾಗಿ ವ್ಯಾಪಿಸಿಕೊಂಡಿರುವಂತೆ ಪರಮಾತ್ಮನು ಈ ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ- ಎಂದು ವಿಭಕ್ತವಾಗಿ ಕಾಣುತ್ತಿರುವ ವಿಶ್ವವನ್ನು ಪೂರ್ತಿಯಾಗಿ ತುಂಬಿಕೊಂಡಿರುತ್ತಾನೆ. ವಿಶ್ವಕ್ಕೆ ಆತ್ಮನ ಆಧಾರದಿಂದಲೇ ಇರವು ಆತ್ಮನ ಆಧಾರದಿಂದಲೇ ತೋರಿಕೆ; ಅದರ ತಿರುಳೆಲ್ಲ ಆತ್ಮನೇ. 'ಐತದಾತ್ಮೈಮಿದಂ ಸರ್ವಂ ತತ್ಸತ್ಯಂ ಸ ಆತ್ಮಾ' (ಛಾಂ. 6-8-2) ಎಂಬ ಶ್ರುತಿವಚನದಂತೆ ಇದೆಲ್ಲಕ್ಕೂ ತಿರಳು ಈ ಆತ್ಮನೇ; ಆತ್ಮನೇ ಇದರ ಪರಮಾರ್ಥವು ಅವನೇ ಇದರ ಸಾರವು.

    ಹೀಗಿದ್ದರೂ ಈ ವಿಶ್ವವು ತನ್ನ ತೋರಿಕೆಯ ರೂಪದಿಂದ ಆತ್ಮನೆಂದಾಗಲಿ ಆತ್ಮನಲ್ಲವೆಂದಾಗಲಿ ಹೇಳುವದಕ್ಕೆ ಬಾರದ್ದಾಗಿರುವದು. ಈ ತೋರಿಕೆಯ ರೂಪವೂ ಅದರ ಹೆಸರೂ ವ್ಯವಹಾರದಲ್ಲಿ ಸತ್ಯವೆಂದೇ ತೋರುತ್ತಿರುವವು ನೊರೆಯು ತಾನು ತೋರಿಕೊಳ್ಳುವ ಮುಂಚೆಯೂ ತೋರಿಕೊಂಡು ಬಳಿಕವೂ ನಿಜವಾಗಿ ನೀರೇ ಆಗಿದ್ದರೂ ಅದನ್ನು ಬರಿಯ ನೀರೇ ಎಂದಾಗಲಿ ನೀರಿನ ಪಕ್ಕದಲ್ಲಿರುವ ಸ್ವತಂತ್ರವಾದ ವಸ್ತ್ವಂತರವೆಂದಾಗಲಿ ಹೇಗೆ ಹೇಳುವದಕ್ಕೆ ಬಾರದಿರುವದೋ ಹಾಗೆಯೇ ಈ ವಿಶ್ವವೂ ತನ್ನ ತೋರಿಕೆಯ ರೂಪದಿಂದ ಆತ್ಮತತ್ತ್ವವೇ ಎಂದಾಗಲಿ ಅದಕ್ಕಿಂತ ಬೇರೆಯೆಂದಾಗಲಿ ನಿಶ್ಚಯಿಸುವದಕ್ಕೆ ಬಾರದ ಪದಾರ್ಥವಾಗಿರುತ್ತದೆ.

    ಈ ವಿಶ್ವವು ಹೀಗೆ ಆತ್ಮನಲ್ಲಿಯೇ ಆತ್ಮನ ರೂಪದಿಂದಲೇ ಇದ್ದುಕೊಂಡಿದ್ದರೂ ಅಜ್ಞಾನದ ದಶೆಯಲ್ಲಿ ಆತ್ಮನಿಗಿಂತ ಹೊರಗೆ ಇರುವಂತೆ ಆತ್ಮತತ್ತ್ವವನ್ನರಿಯದ ಅವಿವೇಕಿಗಳಿಗೆ ತೋರುತ್ತಿರುವದು. ಹೀಗೆ ತೋರುವದಕ್ಕೆ ಕಾರಣವೇನೆಂದರೆ ಆತ್ಮನಲ್ಲಿರುವ ಮಾಯೆ. ಮಾಯೆ ಎಂದರೇನೆಂಬುದನ್ನು ಮನಸ್ಸಿಗೆ ಹತ್ತಿಸಿಕೊಳ್ಳುವದು ಒಳ್ಳೆಯದು. ಏಕೆಂದರೆ ಈ ಶಬ್ದಕ್ಕೆ ಬೇರೆಬೇರೆಯ ದರ್ಶನಗಳಲ್ಲಿ ಬೇರೆಬೇರೆಯ ಅರ್ಥವಿರುತ್ತದೆ. ವೇದಾಂತದಲ್ಲಿ ಅವಿದ್ಯಾಕಲ್ಪಿತವಾಗಿರುವ ನಾಮರೂಪಗಳನ್ನೇ ಮಾಯೆ ಎಂದು ಕರೆದಿದೆ. ಈ ವಿಷಯದಲ್ಲಿ ಸೂತ್ರಭಾಷ್ಯದಲ್ಲಿರುವ ಒಂದು ವಾಕ್ಯವನ್ನು ಇಲ್ಲಿ ಉದಾಹರಿಸುವೆವು : 'ಸರ್ವಜ್ಞಸ್ಯೇಶ್ವರಸ್ಯ ಆತ್ಮಭೂತೇ ಇವ ಅವಿದ್ಯಾಕಲ್ಪಿತೇ ನಾಮರೂಪೇ ತತ್ತ್ವಾನ್ಯತ್ವಾಭ್ಯಾಂ ಅನಿರ್ವಚನೀಯೇ ಸಂಸಾರಪ್ರಪಞ್ಚಬೀಜಭೂತೇ ಸರ್ವಜ್ಞಸ್ಯೇಶ್ವರಸ್ಯ ಮಾಯಾ, ಶಕ್ತಿಃ ಪ್ರಕೃತಿಃ ಇತಿ ಚ ಶ್ರುತಿಸ್ಮೃತಿತ್ಯೋರಭಿಲಪ್ಯೇತೇ' ಈ ವಾಕ್ಯದ ಅಭಿಪ್ರಾಯವೇನೆಂದರೆ; ಪರಮಾತ್ಮನು ಚೈತನ್ಯಮಾತ್ರಸ್ವರೂಪನಾಗಿ ಎಲ್ಲವನ್ನೂ ಬೆಳಗಬಲ್ಲವನಾಗಿರುವದರಿಂದ ಸರ್ವಜ್ಞನೆನಿಸಿರುತ್ತಾನೆ. ಸರ್ವಜ್ಞನು ಎಂದರೆ ಎಲ್ಲವನ್ನೂ ಯಾವಾಗಲೂ ಅರಿಯುತ್ತಲೇ- ಚೈತನ್ಯದಿಂದ ಬೆಳಗುತ್ತಲೇ ಇರುವವನು ಎಂದೇನು ಅರ್ಥವಲ್ಲ. ಏಕೆಂದರೆ ಪ್ರಪಂಚವು ಇಲ್ಲದಾಗಗಲೂ ಅವನು ಇರುತ್ತಾನೆ; ಉದಾಹರಣೆಗೆ ಪ್ರಲಯದಲ್ಲಿ ಬೆಳಗಬೇಕಾದ ಪ್ರಪಂಚವಿರುವದಿಲ್ಲ; ಮೋಕ್ಷದಲ್ಲಿಯೂ ಇರುವದಿಲ್ಲ ಆದರೂ ಪರಮಾತ್ಮನಿಗೆ ಯಾವದು ತೋರಿದರೂ ಬೆಳಗಬಲ್ಲ ಚೈತನ್ಯದ ಬೆಳಕು ಇದೆ. ಇದಲ್ಲದೆ ಈ ಪರಮಾತ್ಮನು ಪ್ರಪಂಚದಲ್ಲಿರುವ ಪದಾರ್ಥಗಳನ್ನು ಒಂದೊಂದಾಗಿ ಬೆಳಗುವದಿಲ್ಲ; ಸೂರ್ಯನು ತನಗೆ ವಿಷಯವಾದ ಭೂಭಾಗವನ್ನೆಲ್ಲಾ ಒಟ್ಟಿಗಗೆ ಬೆಳಗುವಂತೆ ಪ್ರಪಂಚವೆಲ್ಲವನ್ನೂ ಬೆಳಗಿ ತೋರಿಸುತ್ತಾನೆ ಆದ್ದರಿಂದ ಇವನು ಸರ್ವಜ್ಞನು ಮತ್ತು ಆಗಲೇ ಹೇಳೀರುವಂತೆ ತಾನು ಬೆಳಗುವದಕ್ಕೆ ಇವನಿಗೆ ಮತ್ತೊಂದರ ಹಂಗು ಇರುವದಿಲ್ಲ; ಆದ್ದರಿಂದ ಇವನು ಈಶ್ವರನು ಮತ್ತು ಮತ್ತೆ ಯಾವದು ತೋರಿದರೂ ಇವನ ಚೈತನ್ಯದ ಬೆಳಕಿನಿಂದಲೇ ತೋರಬೇಕು ಅದರ ಇರುವಿನಿಂದಲೇ ಇದೆಯೆನಿಸಿಕೊಳ್ಳಬೇಕು ಆದ್ದರಿಂದಲೂ ಇವನು ಈಶ್ವರನು ಹೀಗೆ ಸರ್ವಜ್ಞನು ಈಶ್ವರನೂ ಆಗಿರುವ ಈ ಪರಮಾತ್ಮನಲ್ಲಿ ನಾಮರೂಪಗಳು ಅವಿದ್ಯೆಯಿಂದ ಕಲ್ಪಿತವಾಗಿ ತೋರಿಕೊಳ್ಳುತ್ತಿರುವವು. ಈ ವಿಶ್ವವೆಂಬುದೆಲ್ಲವೂ ನಾಮರೂಪಗಳ ರಾಶಿಯೇ; ಆದ್ದರಿಂದಲೇ ಅವಿದ್ಯಾಕಲ್ಪಿತವಾಗಿರುವ ಹಾವು ಎಂಬ ನಾಮರೂಪಗಳಿಗೆ ಹಗ್ಗವು ಹೇಗೆ ಆತ್ಮನಾಗಿರುವದೋ ಹಾಗೆ ಈ ನಾಮರೂಪಪ್ರಪಂಚಕ್ಕೂ ಈ ಪರಮಾತ್ಮನೇ ಆತ್ಮನು ಎಂದರೆ ಸಾರವಾಗಿರುತ್ತಾನೆ. ನೀರು ತಾನು ಎಂದೆಂದಿಗೂ ನೀರೇ ಆಗಿದ್ದರೂ ಅದರಲ್ಲಿ ನೊರೆಯೆಂಬುದೂ ಹೇಗೆ ಅವಿದ್ಯಾಕಲ್ಪಿತವಾಗಗಿ ತೋರಿಕೊಳ್ಳುತ್ತಿರುವದೋ ಅದರಂತೆಯೇ ಈಶ್ವರನಲ್ಲಿ ನಾಮರೂಪಗಳ ರಾಶಿಯಾದ ಪ್ರಪಂಚವು ಅವಿದ್ಯಾಕಲ್ಪಿತವಾಗಿ ತೋರಿಕೊಳ್ಳುತ್ತಿರುವದು ಇದು ಪ್ರಲಯಕಾಲದಲ್ಲಿ ಅವ್ಯಾಕೃತವಾಗಿರುತ್ತದೆ ಎಂದರೆ ಬಿಡಿಬಿಡಿಯ ನಾಮರೂಪಗಳಾಗಿ ತೋರದೆ ಆತ್ಮರೂಪದಲ್ಲಿಯೇ ಇದ್ದುಕೊಂಡಿರುವದು ಸೃಷ್ಟಿಯಾದ ಬಳಿಕ ಬಿಡಿಬಿಡಿಯಾಗಿ ವ್ಯಾಕೃತನಾಮರೂಪಗಳಾಗಿ ತೋರಿಕೊಳ್ಳುತ್ತಿರುವದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ