ಪ್ರಥಮೋ ದೈವ್ಯೋ ಭಿಷಕ್ - 2

ಅಧ್ಯವೋಚದಧಿವಕ್ತಾ ಪ್ರಥಮೋ ದೈವ್ಯೋ ಭಿಷಕ್ |
ಅಹೀಗ್ಂಶ್ಚ ಸರ್ವಾನ್ ಜಂಭಯನ್ ಸರ್ವಾಶ್ಚ ಯಾತುಧಾನ್ಯಃ ||6||

    'ಅಧಿವಕ್ತನೂ ಪ್ರಧಾನನೂ ದೇವತೆಗಳಲ್ಲಿರುವವನೂ, ಭವರೋಗವೈದ್ಯನೂ ಆದ ಪರಮೇಶ್ವರನು ಎಲ್ಲಾ ವಿಷಪ್ರಾಣಿಗಳು, ರಾಕ್ಷಸರೇ ಮುಂತಾದವರನ್ನೂ ನಾಶಮಾಡಿ ನನ್ನ ವಿಷಯದಲ್ಲಿ ಪಕ್ಷಪಾತವಚನವನ್ನು ಹೇಳುವವನಾಗಲಿ!'

    ಈ ಮಂತ್ರದಲ್ಲಿ ಭಕ್ತನು ತನ್ನನ್ನು ಪರಮೇಶ್ವರನ ಕಡೆಯವನೆಂದು ವಹಿಸಿಕೊಳ್ಳಬೇಕೆಂದು ದೇವನಲ್ಲಿ ಬೇಡುತ್ತಿದ್ದಾನೆ. ಅಧಿವಚನವೆಂದರೆ ಪಕ್ಷವನ್ನು ವಹಿಸಿಮಾತನಾಡುವದು. ಒಂದು ವೇಳೆ ಹಿಂದಿನ ನಮ್ಮ ಪ್ರಾರ್ಥನೆಗಳಿಂದ ಪರಮೇಶ್ವರನು ಸಂತುಷ್ಟನಾಗಿ ನಮ್ಮನ್ನು ಶಿಕ್ಷಿಸದೆ ಬಿಟ್ಟರೂ ಅವನ ಕಡೆಯವರಾದ ಯಮ, ಚಿತ್ರಗುಪ್ತರೇ ಮುಂತಾದ ಸಾಕ್ಷಿದೇವತೆಗಳು ನಮ್ಮನ್ನು ಬಿಟ್ಟರೆ? ಅವರು ಶಿಕ್ಷಿಸುವದಿಲ್ಲವೆ? ಎಂಬ ಶಂಕೆ ಬರಲಾಗಿ 'ಹಾಗಿಲ್ಲ, ನಾವು ಪರಮೇಶ್ವರನ ಕಡೆಯವರೆಂದು ತಿಳಿದರೆ ಅವರು ಏನೂ ಮಾಡಲಾರರು' ಎಂಬ ಅಭಿಪ್ರಾಯದಿಂದ ಭಗವಂತನನ್ನು ಕುರಿತು 'ದೇವ, ನೀನು ನನ್ನನ್ನು ನಿನ್ನ ಕಡೆಯವನನ್ನಾಗಿ ಮಾಡಿಕೊ; ಆ ರೀತಿಯಾಗಿ ನಿನ್ನ ಅಧೀನರಾದ ದೇವತೆಗಳಿಗೆ ತಿಳಿಸು' - ಎಂದು ಭಕ್ತನು ಬೇಡಿಕೊಳ್ಳುತ್ತಿದ್ದಾನೆ. ಭಕ್ತನ ಪರವಾಗಿ ವಹಿಸಿಕೊಂಡು ಮಾತನಾಡುವದೇ ಅಧಿವಚನವು. ಅದಕ್ಕಾಗಿ ಪರಮೇಶ್ವರನಿಗೆ ಇಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗಿದೆ. ಭಗವಂತನು ಅಧಿವಕ್ತನು - ಎಂದರೆ ಭಕ್ತರನ್ನು ಕುರಿತು ಅಧಿವಚನವನ್ನು ಆಡುವವನು ಮತ್ತು ಪ್ರಥಮನು ಎಂದರೆ ಪ್ರಧಾನನು ದೇವತೆಗಳಲ್ಲಿ ಶ್ರೇಷ್ಠನು - ಎಂದಭಿಪ್ರಾಯ ದೈವ್ಯನು ಎಂದರೆ ದೇವತೆಗಳಲ್ಲೆಲ್ಲ ಒಳಹೊಕ್ಕು ಅಂತರ್ಯಾಮಿಯಾಗಿರುವವನು. ಭಿಷಕ್ ಎಂದರೆ ವೈದ್ಯನು ಸಂಸಾರವೆಂಬ ರೋಗಕ್ಕೆ ಮದ್ದನ್ನು ನೀಡುವ ವೈದ್ಯನಾಥನು ಕಾಮಾದಿಮನೋರೋಗಗಳು, ದುಃಖಾದಿಗಳು, ದಾರಿದ್ರ್ಯ - ಎಲ್ಲಕ್ಕೂ ಚಿಕಿತ್ಸಕನಾಗಿರುವವನು. ಇಂಥ ಪರಮೇಶ್ವರನನ್ನು ಅಧಿವಚನವನ್ನು ಆಡಬೇಕೆಂತ ಇಲ್ಲಿ ಕೇಳಿಕೊಳ್ಳಲಾಗಿದೆ.
    ಇನ್ನು ಹೊರಗಿನ ಭಯಗಳಿಂದಲೂ ನಮ್ಮನ್ನು ಕಾಪಾಡಬೇಕೆಂತ ಪ್ರಾರ್ಥಿಸಲಾಗಿದೆ. ಹೇಗೆಂದರೆ : ಹಾವು, ಚೇಳು ಮುಂತಾದ ವಿಷಜಂತುಗಳು, ಭೂತಪ್ರೇತಪಿಶಾಚರಾಕ್ಷಸಾದಿಗಳು ಇವೆಲ್ಲವೂ ನಮಗೆ ಆಗಾಗ್ಗೆ ಭಯವನ್ನೂ ದುಃಖವನ್ನೂ ಉಂಟುಮಾಡುತ್ತಿರುವವು. ಇಂಥ ವಿಷಭಯಬಾಧಾದಿಗಳನ್ನೂ ಪರಿಹರಿಸಿ ಕಾಪಾಡಬೇಕೆಂತ ಭಕ್ತನು ಪರಮೇಶ್ವರನಲ್ಲಿ ಬೇಡಿಕೊಂಡಿರುತ್ತಾನೆ. 'ಶಿವಕವಚ'ದಲ್ಲಿ ಬರುವ 'ದುಃಸ್ವಪ್ನದುಶ್ಯಕುನ.........' ಎಂಬ ಶ್ಲೋಕವನ್ನು ಇಲ್ಲಿ ಅನುಸಂಧಾನಮಾಡಿಕೊಳ್ಳಬೇಕು. ನನಗೆ ಒದಗುವ ಕೆಟ್ಟಕನಸುಗಳು, ಶಕುನಗಳು, ದುರ್ಗತಿ, ಮನೋರೋಗ, ದುರ್ಭಿಕ್ಷ, ದುರ್ವ್ಯಸನಾದಿಗಳು, ಆಧ್ಯಾತ್ಮಿಕಾದಿತಾಪಗಳು, ವಿಷಭೀತಿ, ವ್ಯಾಧಿ - ಮುಂತಾದವುಗಳನ್ನು ಜಗದೊಡೆಯನಾದ ಭಗವಂತನು ನಾಶಮಾಡಲಿ ! ಎಂದು ಅಲ್ಲಿ ಬೇಡಿದೆ. ಅದನ್ನೇ ಇಲ್ಲಿಯೂ ನೆನಪುಮಾಡಿಕೊಳ್ಳಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ