ತ್ಯಾಗರಾಜರ ಕಾವೇರಿ ವರ್ಣನೆ


    ತ್ಯಾಗರಾಜರ ಕೃತಿ ಸಮೂಹದಲ್ಲಿ ಭಕ್ತಿ ಮಾತ್ರವಲ್ಲ. ದೇಶಪ್ರೇಮವೂ ಸೊಗಸಾಗಿ ಮೂಡಿದೆ. ತಂಜಾವೂರು ಪ್ರದೆಶವನ್ನು ಚೋಳಸೀಮೆ ಎಂದು ತ್ಯಾಗರಾಜರು ಹಾಡುತ್ತಾರೆ. ಅವರು ತಮ್ಮ ನಾಡಾದ ಚೋಳಸೀಮೆಯನ್ನು ಅದರಲ್ಲೂ ಪಂಚನದ ಕ್ಷೇತ್ರವನ್ನು ಹೆಮ್ಮೆಯಿಂದ ಹೀಗೆ ಉಲ್ಲೇಖಿಸುತ್ತಾರೆ. 'ಈ ಭುವಿಯೊಳಗೆ ಸೊಗಸಾದ ಚೋಳಸೀಮೆಯಲ್ಲಿ ಶ್ರೇಷ್ಠವಾದ ಪಂಚನದಪುರ' ಎನ್ನುತ್ತಾರೆ.

ಈ ಮಹಿಲೋ ಸೊಗಸೈನ ಚೋಳ
ಸೀಮಯಂದು ವರಮೈನ ಪಂಚನದಪುರ
   (ಮುರಿಪೆಮುಗಲಿಗೆಗದಾ - ಮುಖಾರಿ - ಆದಿತಾಳ)

    ಅವರ ಈ ದೇಶಪ್ರೇಮಕ್ಕೆ ಕಾರಣವಿಲ್ಲದಿಲ್ಲ. ನದೀತೀರದಲ್ಲಿರುವ ಈ ಸ್ಥಳ ಒಂದು ಪುಣ್ಯಕ್ಷೇತ್ರ. ಇಲ್ಲಿನ ತಂಪಾದ ನೀರ ಮೇಲಿನ ಗಾಳಿ ಹಿತವಾಗಿದೆ. ಸುಂದರವಾದ ದೊಡ್ಡದೊಡ್ಡದಾದ ಇಲ್ಲಿನ ಮನೆಗಳಲ್ಲಿ ಭೂಸುರರು ಅಗ್ನಿಹೋತ್ರರಾಗಿ ವೇದ ಘೋಷದಿಂದ ಸ್ತುತಿಸುತ್ತಿದ್ದಾರೆ. ಎಲ್ಲ ವಿಧದ ಸುಗಂಧಿತ ಪುಷ್ಪಗಳು ಇಲ್ಲಿವೆ, ಕೋಗಿಲೆಗಳು ಹಾಡುತ್ತಿವೆ, ಸುಕಸನಕಾದಿಗಳು ಸ್ತುತಿಸುತ್ತಿದ್ದಾರೆ. ಸರಸ್ವತೀದೇವಿಯು ಸಮೀಪದಿಂದಲೇ ಸೇವಿಸಲ್ಪಡುತ್ತಿದ್ದಾಳೆ ಎಂದರೆ ವಿದ್ಯಾವಂತರಾದ ಜನರಿದ್ದಾರೆ.

    ಹೀಗೆ ಪ್ರಕೃತಿಯ ಸುಂದರ ವಾತಾವರಣ ಆಧ್ಯಾತ್ಮದಲ್ಲಿ ಆಸಕ್ತರಾಗಿದ್ದ ಜನ ಸಂಸ್ಕೃತಿ-ಸಮೃದ್ಧಿಗಳ ತಾಣವಾಗಿದ್ದ ಇಲ್ಲಿ ಧರ್ಮಪರತೆಯೂ ಇದ್ದುದರಿಂದ ಇಂತಹ ನಾಡಿನ ಮೇಲೆ ಪ್ರೀತಿಯಿರುವುದು ಸಹಜವೇ ಅಂತೆಯೇ ತ್ಯಾಗರಾಜರು ಹೆಮ್ಮೆಯಿಂದ ತಮ್ಮ ನಾಡನ್ನು ಕೀರ್ತಿಸುವುದು.

    ತ್ಯಾಗರಾಜರು ಮತ್ತೊಂದು ರಚನೆಯಲ್ಲಿ ಈ ನಾಡಿನಲ್ಲಿ ಹರಿಯುವ ಕಾವೇರಿ ನದಿಯ ಹಿರಿಮೆಯನ್ನು ಹಾಡುತ್ತಾರೆ. ಇದಕ್ಕೆ ಕಾರಣ ಕಾವೇರಿಯು ಐಹಿಕ ಮತ್ತು ಆಮುಷ್ಮಿಕಗಳೆರಡು ನಿಟ್ಟಿನಲ್ಲೂ ಮನುಷ್ಯನನ್ನು ರಕ್ಷಿಸುವ ತಾಯಿಯಾಗಿದ್ದಾಳೆ. 'ಕಾವೇರಿಯ - ಭವಹಾರಿಯ - ಮುಕ್ತಿಕಾರಿಯ ನೋಡುವ ಬನ್ನಿರಯ್ಯ' ಎಂದು ದಾಸವರೇಣ್ಯರೊಬ್ಬರು ಹಾಡಿದ್ದಾರೆ 'ಕಾ' ಎಂದರೆ ಪಾಪನಾಶಕ 'ವೇ' ಎಂದರೆ ಇಷ್ಟಾರ್ಥಪ್ರದ 'ರೀ' ಎಂದರೆ ಸರ್ವ ಒಟ್ಟಾರೆ ಈ ಅಕ್ಷರಗಳು ಒಗ್ಗೂಡಿ ಪಾಪನಾಶ ಮಾಡಿ ಸರ್ವ ಇಷ್ಟಾರ್ಥಗಳನ್ನೂ ನೆರವೇರಿಸುವವಳಾದ್ದರಿಂದ ಕಾವೇರೀ ಎನಿಸುತ್ತಾಳೆ.

    ತ್ಯಾಗರಾಜರು ಕಾವೇರಿಯ ಕೃತಿಯಲ್ಲಿ ಎರಡು ಮುಖ್ಯ ಅಂಶಗಳನ್ನು ನಮ್ಮ ಮುಂದಿಡುತ್ತಾರೆ. 
(1) ಆಕೆಯು ಇಡೀ ಜಗತ್ತಿಗೆ ಜೀವಾಧಾರಳು. 'ಈರೇಡು ಜಗ ಮುಲಕು ಜೀವನಮೈನ' ಎಂಬುದು ಅವರ ಉಕ್ತಿ.
(2) ಆಕೆಯು ಕರ್ನಾಟಕ ಹಾಗೂ ಚೋಳಸೀಮೆಯ ಭಾವೈಕ್ಯತೆಯ ಸಂಕೇತ.
ಆಕೆಯು ಕನ್ನಡನಾಡಿನ ತಲಕಾವೇರಿಯಿಂದ ನೇರವಾಗಿ ಚೋಳಸೀಮೆಯೆಡೆಗೆ ಸಾಗುತ್ತಾಳೆ. ಮಾರ್ಗಮಧ್ಯೆ ಎಲ್ಲರಿಗೂ ಯಥೇಚ್ಛ ಫಲಗಳನ್ನು ನೀಡುವಳೆಂಬುದನ್ನು 'ವಾರುವೀರನುಚು ಜೂಡಕ ತಾನವ್ವಾರಿಗಾ ಅಭೀಷ್ಟಮುಲನೊಸಂಗುಚು' ಎಂಬ ಉಕ್ತಿಯಲ್ಲಿ ಸ್ಪಷ್ಟ ಮಾಡುತ್ತಾರೆ ಹೀಗಾಗಿ ಕಾವೇರಿತಾಯಿ ಭೌಗೋಳಿಕವಾಗಿ ವಿವಿಧ ಪ್ರದೇಶದ ಜನರನ್ನು ಒಂದಾಗಿಸುವ ಸಂಕೇತವಾಗಿದ್ದಾಳೆ.

    ತ್ಯಾಗರಾಜರ ವರ್ಣನೆಯಂತೆ ಈಕೆ ಒಂದೆಡೆ ವೇಗವಾಗಿ, ಇನ್ನೊಂದೆಡೆ ಗರ್ಜನೆಯೊಂದಿಗೆ ಮತ್ತೊಂದೆಡೆ ತುಂಬು ಕರುಣೆಯಿಂದ ಮುನ್ನಡೆಯುತ್ತಾಳೆ. ಕನ್ಯಾಮಣಿಯಾದ ಈಕೆ ತನ್ನ ವರನಾದ ಪಂಚನದೀಶನೆಡೆಗೆ ಸಾಗುವಾಗ ಮಾರ್ಗಮಧ್ಯೆ ಕೋಗಿಲೆಗಳು ಸಂತಸದಿಂದ ಹಾಡುತ್ತಿವೆ. ಈ ಸಂಗೀತ ಕಾವೇರಿಗೆ ತನ್ನ ಪತಿಯನ್ನು ಸೇರಲು ಉದ್ದೀಪನಗೊಳಿಸುತ್ತಿವೆ ಎಂಬುದು ಇಂಗಿತ. ಭಾರತೀಯ ರಸಕಲ್ಪನೆಯಲ್ಲಿ ಉದ್ದೀಪನ ಭಾವಕ್ಕೆ ಇದೊಂದು ಸುಂದರ ಉದಾಹರಣೆ ಇನ್ನು ತ್ಯಾಗರಾಜರ ವರ್ಣನೆಯಂತೆ ಕಾವೇರಿಯು ಶ್ರೀರಂಗನಾಥನ ದರ್ಶನಾರ್ಚನಗಳನ್ನು ಮುಗಿಸಿ ಹದಿನಾಲ್ಕು ಲೋಕಗಳಿಗೂ ಜೀವನಾಥನಾದ ಪಂಚನದೀಶನೆಡೆಗೆ ಹರಿಯುತ್ತಾಳೆ. ಈಕೆಯನ್ನು ರಾಜರಾಜೇಶ್ವರಿಯೆಂದು ಹೊಗಳುತ್ತಾ ಜನರು ಇಕ್ಕೆಲಗಳಲ್ಲೂ ಅರ್ಚಿಸುತ್ತಿದ್ದಾರೆ ತ್ಯಾಗರಾಜರೂ ಈಕೆಯನ್ನು ಸ್ತುತಿಸಿದ್ದಾರೆ ಇಂತಹ ಕಾವೇರಿಯನ್ನು ದರ್ಶಿಸಿರೆಂದು ಅವರು ಇತರರಿಗೂ ಹೇಳುತ್ತಿದ್ದಾರೆ.

ಸಾರಿವೆಡಲಿನ ಈ ಕಾವೇರಿನಿ ಜೂಡರೇ
ವಾರುವೀರನುಚು ಜೂಡಕ ತಾನವ್ವಾರಿಗಾಭೀಷ್ಟಮುಲನೊಸಂಗುಚು
ದುರಮುನನೊಕತಾವುನ ಗರ್ಜನ ಭೀಕರಮೊಕತಾವುನ ನಿಂಡು ಕರುಣತೋ
ನಿರತಮುಗನೊಕತಾವುನ ನಡಚುಚು ವರಕಾವೇರಿ ಕನ್ಯಕಾಮಣಿ

ವೇಡುಕಗಾ ಕೋಕಿಲಲು ವ್ರೋಯಗನು ವೇಡುಚು ರಂಗೇಶುನಿಜೂಚಿಮರಿಯೀ
ರೇಡು ಜಗಮುಲಕು ಜೀವನಮ್ಮನ ಮೂಡು ರೆಂಡು ನದಿ ನಾಥುನಿ ಜೂಡ
ರಾಜರಾಜೇಶ್ವರಿಯನಿ ಪೊಗಡುಚು ಜಾಜಾಸುಮಮುಲ ಧರಾಮರಗಣಮುಲು
ಪೂಜಲಿರುಗಡಲು ಸೇಯಗ ತ್ಯಾಗರಾಜ ಸನ್ನುತುರಾಲೈ ಮುದ್ದುಗ
                (ಸಾರಿವೆಡಲಿನ - ಅಸಾವೇರಿ - ಆದಿತಾಳ)

    ಈ ನದಿಗೆ 'ಕಾವೇರಿ' ಎಂದೇಕೆ ಹೆಸರಾಯಿತು ಎಂಬುದಕ್ಕೆ ಕೆಲವು ವಿವರಣೆಗಳುಂಟು ಅಗಸ್ತ್ಯ ಮುನಿಗಳು ಶಿವನಿಂದ ಪಡೆದ ನದಿಯನ್ನು ಕಮಂಡಲದಲ್ಲಿ ಅಡಗಿಸಿಕೊಂಡು ಕವೇರ ಮುನಿಯ ಆಶ್ರಮಕ್ಕೆ ಬಂದರು. ಅಲ್ಲಿ ಕಮಂಡಲವನ್ನಿಟ್ಟು ಹೂ ಕೊಯ್ಯುತ್ತಿದ್ದಾಗ ವಿನಾಯಕನು ಕಾಗೆಯ ರೂಪದಲ್ಲಿ ಬಂದು ಕಮಂಡಲವನ್ನು ಉರುಳಿಸಿಬಿಟ್ಟನು ಅದು ಹರಿದು ನದೀ ರೂಪ ತಾಳಿತು ಕವೇರಮುನಿಯ ಆಶ್ರಮದಲ್ಲಿ ಈ ನದಿ ರೂಪ ತಾಳಿದ್ದರಿಂದ ಈಕೆಯನ್ನು ಕವೇರಮುನಿ ತಮ್ಮ ಮಗಳೆಂದೆಣಿಸಿದರು ಈ ಕಾರಣದಿಂದ ನದಿಗೆ ಕಾವೇರಿ ಎಂಬ ಹೆಸರಾಯಿತು ಎಂಬುದು ಅಂತಹ ವಿವರಣೆಗಳಲ್ಲಿ ಮುಖ್ಯ ಒಂದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ