ರುದ್ರಭಾಷ್ಯಪ್ರಕಾಶ - 2ನೇ ಅನುವಾಕ (ಸಂಪೂರ್ಣ)

ನಮೋ ಹಿರಣ್ಯಬಾಹವೇ

    ಈಗ ಎರಡನೆಯ ಅನುವಾಕವನ್ನು ವಿಚಾರಮಾಡಬೇಕಾಗಿದೆ : ಇಲ್ಲಿಂದ ಪ್ರಾರಂಭಿಸಿ ಇನ್ನು ಎಂಟು ಅನುವಾಕಗಳವರೆಗೆ ಭಗವಂತನ ಸ್ತುತಿಯಿದೆ. ಈ ಸ್ತುತಿಯಲ್ಲಿ ರುದ್ರನ ಸರ್ವೇಶ್ವರತ್ವ, ಸರ್ವಾಂತರ್ಯಾಮಿತ್ವ, ಸರ್ವಾತ್ಮತ್ವ ಮುಂತಾದ ಗುಣಗಳನ್ನು ವರ್ಣಿಸಲಾಗಿದೆ. ಎರಡು, ಮೂರಿ, ನಾಲ್ಕನೆಯ ಅನುವಾಕಗಳ ಪೂರ ಎಂದರೆ 'ಶ್ವಪತಿಭ್ಯಶ್ಚ ವೋ ನಮಃ' ಎಂಬಲ್ಲಿಯವರೆಗಿನ ಮಂತ್ರಗಳು 'ಉಭಯತೋ ನಮಸ್ಕಾರ' ಮಂತ್ರಗಳಾಗಿವೆ; ಎಂದರೆ ಪ್ರಾರಂಭದಲ್ಲಿಯೂ ಕೊನೆಯಲ್ಲಿಯೂ 'ನಮಃ' ಎಂಬ ಶಬ್ದದಿಂದ ಕೂಡಿರುತ್ತವೆ. ಹೇಗೆಂದರೆ 'ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮಃ' ಎಂಬಿದು ಒಂದು ಮಂತ್ರವು. ಇಲ್ಲಿ ಎರಡೂ ಕಡೆ ನಮಶ್ಯಬ್ದವಿರುವದನ್ನು ಗಮನಿಸಬೇಕು. ಈಗ ಮಂತ್ರಗಳ ಅರ್ಥವನ್ನು ವಿಚಾರಮಾಡೋಣ.

ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ
ನಮೋ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ
ನಮೋ ನಮಸ್ಸಸ್ಪಿಂಜರಾಯ ತ್ವಿಷೀಮತೇ ಪಥೀನಾಂ ಪತಯೇ
ನಮೋ ನಮೋ ಬಭ್ಲುಶಾಯ ವಿವ್ಯಾಧಿನೇsನ್ನಾನಾಂ ಪತಯೇ ನಮಃ ||

    'ಹಿರಣ್ಯಬಾಹುವೂ ಸೇನಾನಿಯೂ ದಿಕ್ಕುಗಳೊಡೆಯನೂ ಆದವನಿಗೆ ನಮಸ್ಕಾರ! ಹಸಿರಾದ ಕೇಶಗಳುಳ್ಳ ವೃಕ್ಷಗಳಿಗೂ ಪಶುಪತಿಗೂ ನಮಸ್ಕಾರ! ಸಸ್ಪಿಂಜರನೂ, ಕಾಂತಿಯುಕ್ತನೂ ಮಾರ್ಗಗಳಿಗೆ ಅಧಿಪತಿಯೂ ಆದವನಿಗೆ ನಮಸ್ಕಾರ! ವೃಷಭವಾಹನನಾಗಿಯೂ ವಿವ್ಯಾಧಿಯೂ ಅನ್ನಗಳೊಡೆಯನೂ ಆದವನಿಗೆ ನಮಸ್ಕಾರ!'

    ಹಿರಣ್ಯಬಾಹುವೆಂದರೆ ಚಿನ್ನದಿಂದ ಮಾಡಿದ ಒಡವೆಗಳಿಂದ ಅಲಂಕೃತವಾದ ತೋಳುಗಳ್ಳುವನು. ಬರಿಯ ತೋಳುಗಳಿಗೆ ಮಾತ್ರವೇ ಅಲ್ಲ; ಇಡಿಯ ಶರೀರಕ್ಕೇ ತೊಡಿಸಲ್ಪಟ್ಟಿರುವ ಈತನ ಎಲ್ಲಾ ಭೂಷಣಗಳೂ ಸುವರ್ಣಮಯವೇ ಆಗಿರುತ್ತವೆ. ಅವುಗಳ ಕಾಂತಿಯಿಂದ ಪರಮೇಶ್ವರನ ಶರೀರವೆಲ್ಲವೂ ಹಿರಣ್ಯವರ್ಣವಾಗಿಯೇ ಕಂಡುಬರುತ್ತದೆ. ಇಂಥ ದಿವ್ಯಮಂಗಳ ವಿಗ್ರಹನು ಎಂದರ್ಥ. ಬೇರೊಂದು ಶ್ರುತಿಯಲ್ಲಿ 'ಹಿರಣ್ಯವರ್ಣನೂ ಹಿರಣ್ಯಪತಿಯೂ ಅಂಬಿಕಾಪತಿಯೂ ಪಶುಪತಿಯೂ ಆದ ರುದ್ರನಿಗೆ ನಮಸ್ಕಾರವು' ಎಂಬ ವರ್ಣನೆಯಿದೆ. ಇದರಿಂದ ಭಗವಂತನು ನಿತ್ಯೈಶ್ವರ್ಯಸಂಪನ್ನನೆಂದಾಯಿತು. ಸೇನೆಗಳನ್ನೆಲ್ಲ ನಡೆಯಿಸುವದರಿಂದ ಸೇನಾನಿಯು; ಮಹಾದಂಡ ನಾಯಕನು ಎಂದರ್ಥ, ದೇವಾಸುರಮನುಷ್ಯಸಿದ್ಧಗಂಧರ್ವಾದಿ ಎಲ್ಲ ಜನರ ಸೇನೆಗಳಿಗೂ ಭಗವಂತನೇ ಒಡೆಯನು. ಆದ್ದರಿಂದ ಸರ್ವಸೇನಾನಿ ಯೆಂದಾಯಿತು ದಿಕ್ಕುಗಳಿಗೆಲ್ಲ ಒಡೆಯನಾದ್ದರಿಂದ ದಿಶಾಂಪತಿಯು ಹತ್ತು ದಿಕ್ಕುಗಳಿಗೂ ಪ್ರಭುವೆಂದರ್ಥ.

    ಇಲ್ಲಿ ಒಂದು ಶಂಕೆ: ಪೂರ್ವವೇ ಮುಂತಾದ ದಿಕ್ಕುಗಳಿಗೆ ಕ್ರಮವಾಗಿ ಇಂದ್ರನೇ ಮೊದಲಾದ ದೇವತೆಗಳನ್ನು ಒಡೆಯರೆಂದು ಶಾಸ್ತ್ರದಲ್ಲಿ ಹೇಳಿದೆ. ಹೀಗಿರುವಾಗ ಎಲ್ಲಕ್ಕೂ ಪರಮೇಶ್ವರನೇ ಅಧಿಪತಿಯೆಂಬುದು ಹೇಗೆ? ಎಂದರೆ ಇಂದ್ರಾದಿದೇವತೆಗಳಿಗೆ ದಿಕ್ಕುಗಳ ಒಡೆತನವನ್ನು ಅನುಗ್ರಹಿಸಿರುವವನು ಪರಮೇಶ್ವರನೇ ಎಂದರ್ಥ, ಆದ್ದರಿಂದ ಮುಖ್ಯಾರ್ಥದಲ್ಲಿ ದಿಕ್ಕುಗಳ ಪತಿಯು ರುದ್ರನೇ ಆಗಿರುತ್ತಾನೆ. ಹಾಗಾದರೆ ಇಂದ್ರಾದಿಗಳಿಗೆ ಇವನೇ ಪತಿಯೆಂಬುದಾದರೂ ಹೇಗೆ? ಎಂದರೆ ಪರಮೇಶ್ವರನಾದುದರಿಂದಲೇ ಎಂದು ಉತ್ತರವನ್ನು ಹೇಳಬಹುದಾಗಿದೆ. ಹದಿನಾಲ್ಕು ಲೋಕಗಳಿಗೂ ಒಡೆಯನೂ ಆದಿತ್ಯಾಂತರ್ಗತಪುರುಷನೂ ಆದ ಮಹಾದೇವನು ಎಲ್ಲಾ ದೇವತೆಗಳಿಗೂ ತಾನೇ ತಂದೆಯು ಅವನಿಂದಲೇ ಉಳಿದ ದೇವತೆಗಳೆಲ್ಲ ಹೊರಬಂದಿರುತ್ತಾರೆ ಮಹಾಭಾರತದಲ್ಲಿಯೂ ದೇವೇಂದ್ರಾದಿಗಳಿಗೆ ಆದಿಪತ್ಯವನ್ನು ಕೊಟ್ಟಿರುವವನು ಈ ಪರಮೇಶ್ವರನೇ ಎಂದು ತಿಳಿಸಿದೆ ಶಿವಪುರಾಣಗಳಲ್ಲಿಯೂ ಇಂತಹ ವರ್ಣನೆಗಳಿವೆ. ಹೀಗೆ ಸಮಸ್ತದೇವತೆಗಳೂ ಶಿವನ ಅನುಗ್ರಹದಿಂದಲೇ ತಮ್ಮ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ ಆದ್ದರಿಂದ ದಿಕ್ಕುಗಳಿಗೆ ಪತಿಯು ಪರಮೇಶ್ವರನು.

    ಪಶುಪತಿಯೂ ಪರಮೇಶ್ವರನೇ ಪಶುಗಳೆಂದರೆ ನಾಲ್ಕು ಕಾಲಿನ ಮತ್ತು ಎರಡು ಕಾಲಿನ ಎಲ್ಲಾ ಪಶುಗಳು ಎಂದರ್ಥ ಸಕಲಪ್ರಾಣಿಗಳಿಗೂ ಒಡೆಯನು ಎಂದದ್ದರಿಂದಲೇ ಸ್ಥಾವರಗಳೂ ಸೇರುತ್ತವೆ ಅದನ್ನು ಸ್ಪಷ್ಟಗೊಳಿಸುವದಕ್ಕಾಗಿ ಹರಿಕೇಶಗಳಾದ ವೃಕ್ಷಗಳಿಗೆ ಎಂದು ತಿಳಿಸಲಾಗಿದೆ. ಪ್ರಕೃತಿಯನ್ನು ಕಣ್ಣುತೆರೆದು ನೋಡಿದರೆ ಹಚ್ಚಹಸುರಾದ ಎತ್ತರವಾದ, ಸುತ್ತಲೂ ಹರಡಿರುವ ಶಾಖೆಗಳುಳ್ಳ, ದೊಡ್ಡದೊಡ್ಡಮರಗಳು ಕಾಣಿಸುವವು. ಇವೆಲ್ಲವೂ ಪರಮೇಶ್ವರನ ಸ್ವರೂಪವೇ ಆಗಿರುತ್ತವೆ. 'ಭೂತಾನಿ ಶಂಭಃ...' ಎಂಬ ಒಂದು ಪದ್ಯದಲ್ಲಿ ಗಿಡ, ಮರ, ಸಮುದ್ರ, ನದಿ - ಎಲ್ಲವನ್ನೂ ಶಂಭವೆಂದೇ ಸ್ತುತಿಸಲಾಗಿದೆ. ಇನ್ನೊಂದರ್ಥದಲ್ಲಿ ವೃಕ್ಷವೆಂದರೆ ಸಂಸಾರವೃಕ್ಷವು. ವೇದಗಳೇ ಮುಂತಾದವು ಸಂಸಾರವೃಕ್ಷದ ಎಲೆ ಮುಂತಾದವುಗಳಾದ್ದರಿಂದಲೂ ವೇದಗಳೇ ಮುಂತಾದವು ಸಂಸಾರವೃಕ್ಷದ ಎಲೆ ಮುಂತಾದವುಗಳಾದ್ದರಿಂದಲೂ ವೇದಗಳು ತ್ರೈಗುಣ್ಯವಿಷಯಗಳಾದ ಕರ್ಮಗಳನ್ನೂ ಫಲಗಳನ್ನೂ ತಿಳಿಸಿರುವದರಿಂದಲೂ ವೇದಗಳನ್ನು ಹರಿಕೇಶಗಳೆಂದು ಹೆಸರಿಸಬಹುದಾಗಿದೆ. ಏಕೆಂದರೆ ಹಸಿರು ಎಂಬ ಬಣ್ಣದಿಂದ ಉಳಿದ ಬಣ್ಣಗಳು ಸೂಚಿತವಾಗುವವು ಅವು ಪ್ರಕೃತಿಯನ್ನು ತಿಳಿಸುತ್ತವೆ ಹೀಗೆ ಅಭ್ಯುದಯಫಲರೂಪವಾದ ಸಾಧನಗಳನ್ನು ತಿಳಿಸುವ ವೇದಗಳೆಂಬ ಶಾಖೋಪಶಾಖೆಗಳುಳ್ಳ ಊರ್ಧ್ವಪವಿತ್ರವಾದ ಸಂಸಾರವೆಂಬ ವೃಕ್ಷವು ಪರಮೇಶ್ವರನ ಸ್ವರೂಪವೇ ಎಂಬರ್ಥದಲ್ಲಿ ಹೀಗೆ ಸ್ತುತಿಸಲಾಗಿದೆ ಎಂದೂ ಭಾವಿಸಬಹುದು.

    ಸಸ್ ಎಂದರೆ ಎಳೆಯ ಗರಿಕೆ - ಎಂದರ್ಥ. ಪಿಂಜರವೆಂದರೆ ಹಳದಿ ಕೆಂಪು ಬೆರೆತ ಒಂದು ಮಿಶ್ರವಾದ ಬಣ್ಣವು ಎಳೆಯ ಹುಲ್ಲು ಹೇಗೆ ಮಿಶ್ರವರ್ಣವಾಗಿರುವದೋ ಅಂಥ ಬಣ್ಣವುಳ್ಳವನು ಸಸ್ಪಿಂಜರನು ತ್ವಿಷೀಮಂತನೆಂದರೆ ಕಾಂತಿಯುಕ್ತನೆಂದರ್ಥ ಕಾತಿಯೆಂಬುದು ಇಲ್ಲಿ ಜ್ಞಾನವನ್ನು ಸೂಚಿಸುತ್ತದೆ. ಸರ್ವಜ್ಞನೂ ಚೈತನ್ಯಪ್ರಕಾಶಸ್ವರೂಪನೂ ಆಗರಿರುವವನೆಂದರ್ಥ ಪಂಥಾಃ ಎಂದರೆ ಮಾರ್ಗಗಳು ಇಲ್ಲಿ ಪರಮಾತ್ಮನನ್ನು ಸೇರುವ ಸಾಂಖ್ಯ ಯೋಗ ತಾಂತ್ರಿಕಾದಿ ಮಾರ್ಗಗಳನ್ನು ಪಂಥಾಃ ಎಂದು ಸೂಚಿಸಲಾಗಿದೆ. ಎಲ್ಲಾ ಸಾಧನ ಮಾರ್ಗಗಳಿಗೂ ಒಡೆಯನೂ ಆಯಾ ಮಾರ್ಗದರ್ಶಕರಾದ ಋಷಿಗಳರೂಪದಿಂದ ಲೋಕಕ್ಕೆ ಹಿತವನ್ನು ಉಪದೇಶಮಾಡಿರುವವನೂ ಪರಮೇಶ್ವರನೇ ಎಂದರ್ಥ ಆದ್ದರಿಂದ ಪಥೀನಾಂ ಪತಯೇ - ಎಂದು ಹೊಗಳಿದೆ. ಇಲ್ಲಿ ಒಂದು ಶಂಕೆ; ತಾಂತ್ರಿಕಾದಿಮಾರ್ಗಗಳು ನೇರಾಗಿ ಮೋಕ್ಷಸಾಧನಗಳಲ್ಲವಾದ್ದರಿಂದ ಅವುಗಳನ್ನು ಪರಮೇಶ್ವರನು ಉಪದೇಶಿಸಿದನೆಂಬುದು ಸರಿಯೆ? ಎಂದರೆ ಹಾಗಲ್ಲ ವೇದದಲ್ಲಿ ನಂಬಿಕೆಯಿಲ್ಲದವರೂ ಪರಮೇಶ್ವರನ ಸೃಷ್ಟಿಗೇ ಒಳಪಟ್ಟವರಾದ್ದರಿಮದ ಅವರುಗಳೂ ಉದ್ಧಾರವಾಗಲೂ ಒಂದು ದಾರಿಯು ಬೇಕೇಬೇಕು ಆದ್ದರಿಂದ ಮಹಾದೇವನು ಅಂಥ ಜನರಿಗಾಗಿ ತಾಂತ್ರಿಕಮಾರ್ಗಗಳನ್ನು ಉಪದೇಶಿಸಿ ಆ ಮಾರ್ಗಗಳಿಂದಲಾದರೂ ವಿಳಂಬವಾಗಿಯಾದರೂ ಜನರು ತನ್ನನ್ನು ಸೇರಲಿ ಎಂದು ದಯೆಯಿಂದ ತಿಳಿಸಿರುತ್ತಾನೆಂತ ಭಾವಿಸ ಬೇಕು.

    ಬಭ್ಲು - ಎಂದರೆ ಪರಮೇಶ್ವರನನ್ನು ಹೊತ್ತಿರುವ ವೃಷಭವು ಅದರ ಮೇಲೆ ಶೇತೇ - ಎಂದರೆ ಕುಳಿತಿರುತ್ತಾನಾದ್ದರಿಂದ ಬಭ್ಲುಶನು - ಎಂದು ಅಭಿಪ್ರಾಯ. ವಿಶೇಷವಾಗಿ ಗುರಿಯಿಟ್ಟು ಹೊಡೆಯುವವನು ವಿವ್ಯಾಧಿಯು. ಭಗವಂತನು ಎಂಥ ಧನುರ್ಧಾರಿಯೆಂದರೆ ಸಾವಿರವರ್ಷಗಳಿಗೊಮ್ಮೆ ಒಂದು ಘಳಿಗೆ ಕಾಲಮಾತ್ರ ಒಂದು ಕಡೆ ಕೂಡುವ ಮೂರು ಪುರಗಳನ್ನು ಒಂದೇಬಾಣದಿಂದ ಹೊಡೆದು ನಾಶಮಾಡಿದನು ಹೀಗೆ ಗುರಿಯಿಟ್ಟು ಹೊಡೆಯುವ ಹಾಗೂ ಶತ್ರುನಾಶವನ್ನು ಮಾಡಿಯೇತೀರುವಂಥ ಬಾಣಪ್ರಯೋಗನಿಪುಣನು ವಿವ್ಯಾಧಿಯು ಅನ್ನಗಳಿಗೆ ಎಂದರೆ ಸಸ್ಯಗಳಾದ ಬತ್ತ, ಗೋಧಿ ಮುಂತಾದ ನಾವು ತಿನ್ನುವ ಆಹಾರಗಳಿಗೂ ಪಶುಗಳ ಆಹಾರವಾದ ಹುಲ್ಲು ಮುಂತಾದವುಗಳಿಗೂ ತಯಾರಿಸಿದ ಎಲ್ಲಾ ಭಕ್ಷ್ಯಭೋಜ್ಯಗಳಿಗೆ ಅವನೇ ಪತಿಯು ಆದ್ದರಿಂದ ಅನ್ನಾನಾಂ ಪತಯೇ ಎಂದು ಹೊಗಳಿದೆ. ಇಲ್ಲಿ ಭಗವಂತನು ವೃಷಭಾರೂಢನೆಂದಿರುವದರಿಂದ ವೃಷಭವು ಧರ್ಮವನ್ನು ಪ್ರತಿನಿಧಿಸುವದರಿಂದ ಧರ್ಮರೂಪವಾದ ಯಜ್ಞದಿಂದಲೇ ಮಳೆಬೆಳೆಗಳುಂಟಾಗುವವಾದ್ದರಿಂದ ಅನ್ನಸ್ವಾಮಿತ್ವವು ಮಹಾದೇವನಿಗೇ ಯುಕ್ತವಾಗಿದೆ ಎಂದಭಿಪ್ರಾಯ ಅನ್ನವೇ ಭಗವಂನಿಗೆ ಬಾಣವೆಂದು ಮುಂದೆ ಸ್ತುತಿಸಲ್ಪಟ್ಟಿದೆಯಾದ್ದರಿಂದಲೂ ಅನ್ನಪತಿತ್ವವು ಅವನಿಗೆ ಯುಕ್ತವಾಗಿದೆ ಇದರ ವಿವರವು ಮುಂದೆ ಗೊತ್ತಾಗಲಿದೆ.

ನಮೋ ಹರಿಕೇಶಾಯ
ಈಗ ಎರಡನೆಯ ಅನುವಾಕದ ಉತ್ತರಾರ್ಧವನ್ನು ವಿಚಾರಮಾಡ ಬೇಕಾಗಿದೆ :

ನಮೋ ಹರಿಕೇಶಾಯೋಪವೀತಿನೇ ಪುಷ್ಟಾನಾಂ ಪತಯೇ ನಮೋ
ನಮೋ ಭವಸ್ಯ ಹೇತ್ಯೈ ಜಗತಾಂ ಪತಯೇ ನಮೋ
ನಮೋ ರುದ್ರಾಯಾತತಾವಿನೇ ಕ್ಷೇತ್ರಾಣಾಂ ಪತಯೇ ನಮೋ
ನಮಸ್ಸೂತಾಯಾಹಂತ್ಯಾಯ ವನಾನಾಂ ಪತಯೇ ನಮಃ ||

    'ಹರಿಕೇಶನೂ ಉಪವೀತಿಯೂ ಪುಷ್ಟರುಗಳ ಒಡೆಯನೂ ಸಂಸಾರವನ್ನು ಕತ್ತರಿಸುವ ಆಯುಧರೂಪನೂ ಜಗತ್ಪತಿಯೂ ರುದ್ರನೂ ಆತತಾವಿಗಳಾದ ಕ್ಷೇತ್ರಗಳ ಪತಿಯೂ ಸೂತನೂ ಅಹಂತ್ಯನೂ ವನಗಳಿಗೆ ಪತಿಯೂ ಆದವನಿಗೆ ನಮಸ್ಕಾರ!'
    ಹರಿಕೇಶನೆಂಬ ಪದವನ್ನು ಹಿಂದೊಮ್ಮೆ ವ್ಯಾಖ್ಯಾನಮಾಡಿದೆ. ಇಲ್ಲಿ ಹರಿಕೇಶನೆಂಬುದಕ್ಕೆ ಮತ್ತೊಂದು ಅರ್ಥವನ್ನು ಕೊಡಲಾಗಿದೆ. ಕಪ್ಪಾದ ಜುಟ್ಟು ಉಳ್ಳವನು ಹರಿಕೇಶನು. ಪರಮೇಶ್ವರನು ಯಾವಾಗಲೂ ನಿತ್ಯಯುವಕನು. ಅವನು ಮುದುಕನಾಗುವ ಸಂಭವವೇ ಇಲ್ಲ. ಆದ್ದರಿಂದ ಹರಿಕೇಶನೆಂದು ಕರೆದಿದೆ. ಉಪವೀತಿಯೆಂದರೆ ಯಜ್ಞೋಪವೀತವುಳ್ಳವನು. ಯಜ್ಞೋಪವೀತವನ್ನು ಕನ್ನಡದಲ್ಲಿ 'ಜನಿವಾರ'ವೆಂದು ಕರೆಯುವರು ಇದು ಇಲ್ಲದೆ ಕರ್ಮಾಧಿಕಾರವುಂಟಾಗಲಾರದು ಆದರೆ ಪರಮೇಶ್ವರನಿಗೆ ಯಾವ ಕರ್ಮಗಳೂ ಇಲ್ಲವಾದರೂ ಲೋಕಾನುಗ್ರಹಕ್ಕಾಗಿ ತಾನೂ ಕರ್ಮಾಧಿಕಾರಿಯಂತೆ ಗಾರ್ಹಸ್ಥ್ಯ ಧರ್ಮಾನುಸಾರವಾಗಿ ಯಜ್ಞೋಪವೀತವನ್ನು ಧರಿಸಿ ಎಲ್ಲರಿಗೂ ಆದರ್ಶನಾಗಿದ್ದಾನೆಂದು ಹೇಳಬಹುದು. ಯಜ್ಞೋಪವೀತವೆಂಬ ಶಬ್ದಕ್ಕೆ ವ್ಯಾಖ್ಯಾನರೂಪವಾದ ಒಂದು ನಿರುಕ್ತವಿದೆ. ಅದರಲ್ಲಿ ಯಜ್ಞಸ್ವರೂಪನಾದ ಪರಮಾತ್ಮನ ಉಪ ಎಂದರೆ ಸಮಿಪಕ್ಕೆ, ವೀತ - ಎಂದರೆ ವಿವಿಧವಾದ ಸಾಧನಗಳಿಂದ ಕರೆದೊಯ್ಯುವದು ಯಜ್ಞೋಪವೀತವು ಎಂಬರ್ಥವನ್ನು ಮಾಡಿದೆ. ಬಾಹ್ಯವಾದ ಸೂತ್ರರೂಪದಲ್ಲಿರುವ ಉಪವೀತವನ್ನು ನಾವು ಬ್ರಹ್ಮವೆಂದೇ ಪೂಜಿಸುವ ವಾಡಿಕೆಯಿದೆ ಆದ್ದರಿಂದ ಉಪಾಯವೂ ಉಪೇಯವೂ ಭಗವಂತನೇ ಆಗಿದ್ದು ನಿಜವಾದ ಯಜ್ಞೋಪನೀತಿಯು ಪರಮೇಶ್ವರನೇ ಆಗಿರುತ್ತಾನೆ ಇದಕ್ಕಾಗಿಯೇ ಇಲ್ಲಿ ಉಪವೀತಿಯೆಂದು ಆತನನ್ನು ಸ್ತುತಿಸಿದೆ ಪುಷ್ಟರೆಂದರೆ ಧನ ಕನಕಾದಿಗಳಿಂದಲೂ ಬಂಧುಜನರಿಂದಲೂ ಪರಿಪೂರ್ಣರಾದವರು; ಅತ್ಯಂತ ಪುಷ್ಟನಾದವನು ತ್ರೈಲೋಕ್ಯಾಧಿಪತಿಯಾದ ದೇವೇಂದ್ರನು ದೇವೇಂದ್ರನಂಥ ಎಲ್ಲ ಪುಷ್ಟರಿಗೂ ಪರಮೇಶ್ವರನು ಒಡೆಯನಾದ್ದರಿಂದ ಪುಷ್ಟಾನಾಂಪತಿಯೆಂದು ಹೊಗಳಿದೆ ಆದಿಮೂರ್ತಿಯಾದ ಮಹಾದೇವನು ಬ್ರಹ್ಮನೇ ಮುಂತಾದ ಸರ್ವ ಜೀವರಿಗೂ ಉಪಾಸ್ಯನಾಗಿದ್ದು ತನ್ನ ಭಕ್ತರಿಗೆ ಪುಷ್ಟಿಯನ್ನು ಕೊಟ್ಟು ಕಾಪಾಡುವನಾದ್ದರಿಂದಲೂ, ನಿತ್ಯಯುವಕನಾಗಿದ್ದು ಎಲ್ಲರಿಗೂ ದೇಹಪುಷ್ಟಿಯನ್ನು ಉಂಟು ಮಾಡುವವನಾದ್ದರಿಂದಲೂ ಹರಿಕೇಶನೂ ಪುಷ್ಟರುಗಳ ಪತಿಯೂ ಆಗಿದ್ದಾನೆ ಎಂದು ಇಲ್ಲಿ ವರ್ಣಿಸಿದೆ.

    ಭವ ಎಂದರೆ ಸಂಸಾರವು ಸಂಸಾರವೆಂಬ ವೃಕ್ಷವನ್ನು ಕತ್ತರಿಸುವ ಹೇತಿ - ಎಂದರೆ ಆಯುಧವು ಪರಮೇಶ್ವರನು ಎಂದರ್ಥ ಬ್ರಹ್ಮಜ್ಞಾನವಿಲ್ಲದೆ ಆತ್ಯಂತಿಕವಾಗಿ ಸಂಸಾರವು ನಾಶವಾಗಲಾರದಾದ್ದರಿಂದ ಇಲ್ಲಿ ಪರಮೇಶ್ವರನನ್ನು ಭವಹೇತಿ - (ಸಂಸಾರನಾಶಕವಾದ ಆಯುಧರೂಪಿ) ಎಂದು ಹೊಗಳಿದೆ. ಸ್ಥಾವರಜಂಗಮಾತ್ಮಕವಾದ ಎಲ್ಲ ಪ್ರಪಂಚಕ್ಕೂ ಒಡೆಯನಾದ್ದರಿಂದ ಜಗತ್ಪತಿಯು ಪಶುಪತಿಯೆಂದದ್ದರಿಂದಲೇ ಜಗತ್ಪತಿಯೂ ಆಗಿರುವನೆಂದಾಗಲಿಲ್ಲವೆ? ಮತ್ತೇಕೆ ಹೇಳಿದೆ? ಎಂದರೆ ಜಗತ್ತಿನ ಪತಿಯಾದ ಪರಮೇಶ್ವರನಿಗೆ ಭಕ್ತರನ್ನು ಜಗತ್ತೆಂಬ ಸಂಸಾರಬಂಧನದಿಂದ ಬಿಡಿಸುವ ಸಾಮರ್ಥ್ಯವೂ ಇದೆ ಎಂದು ತಿಳಿಸುವದಕ್ಕಾಗಿ - ಎಂದು ತಿಳಿಯಬೇಕು.

    ಈಗ ಪರಮೇಶ್ವರನನ್ನು ಬಿಡಿಬಿಡಿಯಾಗಿ ಆಯಾ ವಸ್ತುಗಳ ಅಧಿ ಪತಿಯೆಂದು ಸ್ತುತಿಸಲಾಗುವದು. ಭಗವಂತನು ಸಂಸಾರದುಃಖಗಳನ್ನು ಕಳೆಯುವವನಾದ್ದರಿಂದ ರುದ್ರನು ಆದ್ದರಿಂದಲೇ ಆತತಾವಿಯು ಎಂದರೆ ಉಪಯೋಗಿಸಲು ಸಜ್ಜಾದ ಧನುಸ್ಸಿನ ನೆರವಿನಿಂದ ಭಕ್ತರನ್ನು ಕಾಪಾಡುವವನು - ಎಂದಭಿಪ್ರಾಯ ಮತ್ತು ಕ್ಷೇತ್ರಪತಿಯು ಕ್ಷೇತ್ರವೆಂದರೆ ಶರೀರವು ಅದಕ್ಕೆ ಒಡೆಯನಾದ್ದರಿಂದ ಕ್ಷೇತ್ರಪತಿಯೆಂದು ಅಭಿಪ್ರಾಯ. ರಾಜನೇ ಮುಂತಾದ ಕ್ಷೇತ್ರಪತಿಗಳಿಲ್ಲವೆ? ಈಗಿನ ಕಾಲಕ್ಕೆ ರಾಜರಿಲ್ಲದಿದ್ದರೂ ರಾಷ್ಟ್ರಪತಿಗಳಿದ್ದೇ ಇರುವರಲ್ಲ! ಎಂದರೆ ರಾಷ್ಟ್ರಪತಿಗಳೇನೋ ದೇಶದ ಜನರನ್ನು ಶತ್ರುಗಳಿಂದ ರಕ್ಷಿಸುವರು ಆದರೆ ಪ್ರತಿಯೊಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕಂತೆ ಸುಖ ಸಂಪತ್ತುಗಳನ್ನು ಕೊಟ್ಟು ಕಾಪಾಡಲು ಸರ್ವಕ್ಷೇತ್ರಗಳಲ್ಲಿಯೂ ವ್ಯಾಪಿಸಿರುವ ಪರಮೇಶ್ವರನಿಂದ ಮಾತ್ರವೇ ಸಾಧ್ಯ ಗೋಪಾಲಕನು ದನಗಳನ್ನೆಲ್ಲ ಕಾಯುತ್ತಾನಾದರೂ ಪ್ರತಿಯೊಂದು ಕರುವಿಗೂ ಹಾಲನ್ನು ಕೊಡಲು ಅದರದರ ತಾಯಿಹಸುವೇ ಬೇಕು ಹಸುವಿಗೂ ಆಹಾರವನ್ನು ಸೃಷ್ಟಿಸಿರುವವನು ಆ ಮಹಾ ದೇವನೇ ಆದ್ದರಿಂದ 'ಹಸುವಿನಲ್ಲಿ ಹಾಲನ್ನು ಸೃಷ್ಟಿಸಿರುವಂತೆ ಕ್ಷೇತ್ರಪತಿಯಾದ ಪರಮೇಶ್ವರನು ನಮ್ಮಲ್ಲಿಯೂ ಸುಖಸಂಪತ್ತುಗಳನ್ನು ಉಂಟುಮಾಲಲೆಂದು' ಪ್ರಾರ್ಥಿಸಿ ವೇದದಲ್ಲಿ ಒಂದು ಕಡೆ ಸ್ತುತಿಸಲಾಗಿದೆ. ಹೀಗೆ ಕ್ಷೇತ್ರಪತಿಯಾದ ಮಹಾದೇವನು ಎಲ್ಲಾ ಜೀವರುಗಳಿಗೂ ಪೋಷಕನಾಗಿರುತ್ತಾನೆ. 'ಯಾವನಿಂದಲೇ ಹುಟ್ಟಿದ ಜೀವರುಗಳೆಲ್ಲರೂ ಜೀವಿಸಿರುವರೋ' - ಎಂದೂ ಉಪನಿಷತ್ತಿನಲ್ಲಿ ತಿಳಿಸಿದೆ ಇನ್ನು ಕ್ಷೇತ್ರಗಳೆಂದರೆ ಪುಣ್ಯಕ್ಷೇತ್ರಗಳೆಂದೂ ಅರ್ಥಮಾಡಬಹುದು. ಆಗಲೂ ಆಯಾ ಕ್ಷೇತ್ರಗಳಿಗೆ ಪರಮೇಶ್ವರನೇ ದೊರೆಯು ಉದಾಹರಣೆಗೆ ವಾರಣಾಸಿಗೆ ವಿಶ್ವನಾಥನೇ ಪುರಪತಿಯು.

    ಸೂತನೆಂದರೆ ಸಾರಥಿಯು ಭಗವಂತನು ಜಗತ್ತೆಂಬ ಯಂತ್ರವನ್ನು ನಡೆಯಿಸುವ ಸಾರಥಿಯಾಗಿರುತ್ತಾನೆ. ಅವನನ್ನು 'ಸನಾತನಸಾರಥಿ'ಯೆಂದೂ ಬಲ್ಲವರು ಕರೆಯುತ್ತಾರೆ. ಈಗಿನ ಕಾಲಕ್ಕೆ ಪ್ರಯಾಣವು ಅನಿವಾರ್ಯ ಆದ್ದರಿಂದ ಆ ಪ್ರಯಾಣಕಾಲದಲ್ಲಿ ಸಾರಥಿ(ಡ್ರೈವರ್)ಯ ಕೈಯಲ್ಲೇ ನಮ್ಮ ಪ್ರಾಣವಿರುವದು ಹಾಗೆಯೇ ಮುಖ್ಯಾರ್ಥದಲ್ಲಿ ಪರಮೇಶ್ವರನು ಎಲ್ಲಾ ಜೀವರುಗಳ ರಥವನ್ನೂ ನಡೆಯಿಸುವ ಸಾರಥಿಯು ಸಾರಥಿಯ ಸಾಮರ್ಥ್ಯ, ಬುದ್ಧಿಶಕ್ತಿ, ಚಾಕಚಕ್ಯತೆಗಳನ್ನೇ ರಥಿಕನ ಜಯಪರಾಜಯಗಳು ಅವಲಂಬಿಸಿರುವವು. ಪಾರ್ಥಸಾರಥಿಯಾಗಿ ಶ್ರೀಕೃಷ್ಣನು ದೊರೆತದ್ದರಿಂದಲೇ ಅರ್ಜುನನು ಜಯವನ್ನು ಗಳಿಸಲು ಸಾಧ್ಯವಾಯಿತು ಹೀಗೆ ಯೋಚಿಸಿನೋಡಿದಲ್ಲಿ ನಮ್ಮ ಜೀವನರಥಕ್ಕೆ ಪರಮೇಶ್ವರನ ಸಾರಥ್ಯವು ದೊರಕಿದಲ್ಲಿ ನಾವು ಕೃತಕೃತ್ಯರಾದಂತೆಯೇ ಸರಿ. ನಿಜವಾಗಿ ನೋಡಿದರೆ ಅವನ ಪ್ರೇರಣೆಯಿಲ್ಲದೆ ಏನು ನಡೆಯುವದೇ ಇಲ್ಲ. 'ಎಲ್ಲಾ ಪ್ರಾಣಿಗಳನ್ನೂ ಯಂತ್ರಾರೂಢವಾದ ಬೊಂಬೆಗಳಂತೆ ಈಶ್ವರನೇ ಸಕಲರ ಹೃದಯದಲ್ಲಿಯೂ ಇದ್ದುಕೊಂಡು ನಿಯಮಿಸುತ್ತಿರುವನು' ಎಂದು ಗೀತೆಯಲ್ಲಿ ಹೇಳಿದೆ ಇನ್ನು ಉಪನಿಷತ್ತುಗಳಲ್ಲಿಯೂ ಪರಮೇಶ್ವರನ ಪ್ರಶಾಸನಕ್ಕೆ ಒಳಪಟ್ಟೇ ಎಲ್ಲವೂ ತಮ್ಮತಮ್ಮ ಕಾರ್ಯವನ್ನು ಮಾಡುತ್ತಿರುವವೆಂದು ತಿಳಿಸಿದೆ. ಆದ್ದರಿಂದ ಸೂತನು ಪರಮೇಶ್ವರನು.

    ಅಹಂತ್ಯನೆಂದರೆ ಕೊಲ್ಲಲು ಅಸಾಧ್ಯನಾದವನು ಪರಮೇಶ್ವರನೇ ಎಲ್ಲರನ್ನೂ ಸಂಹಾರಮಾಡುವವನೇ ಹೊರತು ಅವನು ಯಾರಿಂದಲೂ ಸಂಹರಿಸಲ್ಪಡುವವನಲ್ಲ. ಎಕೆಂದರೆ ಅವನು ಮೃತ್ಯಂಜಯನು 'ಇವನು ಕೊಲ್ಲುವವನೂ ಅಲ್ಲ, ಕೊಲ್ಲಲ್ಪಡುವವನೂ ಅಲ್ಲ' ಎಂದು ಗೀತೆಯಲ್ಲಿ ತಿಳಿಸಿದೆ ಆದ್ದರಿಂದ ವ್ಯವಹಾರದೃಷ್ಟಿಯಿಂದ ಅಹಂತ್ಯನೆಂದು ಅರ್ಥಮಾಡಬೇಕಾಗಿದೆ. ಅಪರಿಮಿತವಾದ ಜ್ಞಾನಬಲೈಶ್ವರ್ಯಸಂಪನ್ನನಾದ ಈ ಮಹಾದೇವನನ್ನು ಎದುರಿಸಿದ ಯಾವ ಶತ್ರುವೂ ಈವರೆಗೆ ಜಯಶೀಲನಾಗಿಲ್ಲ ಆದ್ದರಿಂದ ಅಜೇಯನು ಅಹಂತ್ಯನು ಪರಮೇಶ್ವರನೆಂದು ಭಾವ. ವನಗಳಿಗೆ ಪತಿಯಾದ್ದರಿಂದ ವನಾನಾಂ ಪತಿಯು ಅರಣ್ಯಗಳಿಗೆ ಒಡೆಯನೆಂದರ್ಥ ಭಗವಂತನನ್ನು 'ಧರ್ಮಾರಣ್ಯಪತಿ'ಯೆಂದು ಪುರಾಣದಲ್ಲಿ ಹೊಗಳಿದೆ ಅಥವಾ ಅರಣ್ಯವಾಸಿಗಳಿಗೆ ಮಹಾದೇವನೇ ಗತಿಯು - ಎಂದೂ ಅರ್ಥಮಾಡಬಹುದು ಬೆಟ್ಟ, ಗುಡ್ಡಗಳಲ್ಲಿಯೂ, ಕಾಡುಗಳಲ್ಲಿಯೂ ನಮ್ಮನ್ನು ಕಾಪಾಡಲು ಪರಮೇಶ್ವರನ ಹೊರತು ಬೇರಾರೂ ದಿಕ್ಕಿರುವದಿಲ್ಲ ಆದ್ದರಿಂದ ನಾವು ಕಾಂತಾರವನದುರ್ಗಗಳಲ್ಲಿ ಮಹಾದೇವನನ್ನು ಸ್ಮರಿಸುತ್ತಾ ನಡೆದಲ್ಲಿ ನಮಗೆ ಯಾವ ಭಯವೂ ಉಂಟಾಗಲಾರದು ಹೀಗೆ ವನಾಧಿಪತಿಯಾದ ದೇವನು ನಮ್ಮ ಮನಸ್ಸೆಂಬ ವನಕ್ಕೂ ಅಧಿಪತಿಯೆಂದು ಭಾವಿಸಬಹುದು ವನದಲ್ಲಿ ದೇವರನ್ನು ಧ್ಯಾನಿಸುವಂತೆ ಮನಸ್ಸಿನಲ್ಲಿ ಮಹಾದೇವನನ್ನು ನೆನೆದು ನಾವು ಕೃತಾರ್ಥರಾಗಬೇಕಾಗಿದೆ ಬೇರೆ ಯಾವ ಕಾಡಿಗೂ ಹೋಗಬೇಕಾಗಿರುವದಿಲ್ಲ ಒಂದು ವೇಳೆ ಕಾಡಿಗೆ ಹೋದರೂ ಮನಸ್ಸು ಪರಮೇಶ್ವರನಲ್ಲಿ ನೆಲೆಗೊಳ್ಳದೆ ಹೋದರೆ ವನವಾಸದ ಪ್ರಯೋಜನವಾದರೂ ಏನಾದಂತಾಯಿತು? ಆದ್ದರಿಂದ ವನನೀಯ (ಸೇವಿಸಲು ತಕ್ಕವನಾದ) ಭಗವಂತನನ್ನು ತಾನು ಎಲ್ಲಿದ್ದರೂ ಭಜಿಸುತ್ತಿರುವವನೇ ನಿಜವಾದ ಮುನಿಯು ಎಂದು ತಿಳಿಯಬೇಕು.

ಸತ್ವನಾಂ ಪತಯೇ ನಮಃ
ಈಗ 'ನಮೋ ರೋಹಿತಾಯ' ಎಂಬಲ್ಲಿಂದ ಮುಂದಿನ ಭಾಗವನ್ನು ವಿಚಾರಮಾಡಬೇಕಾಗಿದೆ :

ನಮೋರೋಹಿತಾಯ ಸ್ಥಪತಯೇ ವೃಕ್ಷಾಣಾಂ ಪತಯೇ ನಮೋ
ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಪತಯೇ ನಮೋ ನಮೋ
ಭುವಂತಯೇ ವಾರಿವಸ್ಕೃತಾಯೌಷಧೀನಾಂ ಪತಯೇ ನಮೋ ನಮ
ಉಚ್ಚೈರ್ಘೋಷಾಯಾಕ್ರಂದಯತೇ ಪತ್ತೀನಾಂ ಪತಯೇ ನಮೋ ನಮಃ
ಕೃತ್ಸ್ನವೀತಾಯ ಧಾವತೇ ಸತ್ವನಾಂ ಪತಯೇ ನಮಃ ||

    'ಲೋಹಿವರ್ಣನೂ ಸ್ಥಪತಿಯೂ ವೃಕ್ಷಗಳ ಒಡೆಯನೂ, ಮಂತ್ರಗಳ ಪತಿಯೂ ವಾಣಿಜನೂ ಕಕ್ಷಗಳ ಪ್ರಭುವೂ ಆಗಿರುವ, ಭುವಂತನೂ ವಾರಿವಸ್ಕೃತನೂ ಸಸ್ಯಗಳ ಒಡೆಯನೂ ಆಗಿರುವ, ಗಟ್ಟಿಯಾಗಿ ನಾದಮಾಡುವವನೂ ವೈರಿಗಳನ್ನು ಆಳುವಂತೆ ಮಾಡುವವನೂ ಪದಾತಿಗಳ ಒಡೆಯನೂ, ಜಗತ್ತನ್ನೆಲ್ಲ ಪೂರ್ಣವಾಗಿ ವ್ಯಾಪಿಸಿರುವವನೂ ಓಡುವವನೂ ಸತ್ವರುಗಳಿಗೆ ಪತಿಯೂ ಆಗಿರುವವನಿಗೆ ನಮಸ್ಕಾರವು.'

    ರೋಹಿತನೆಂದರೆ ಕೆಂಪುಬಣ್ಣದವನೆಂದರ್ಥ ಕೆಂಪುಬಣ್ಣವು ರಜೋ ಗುಣವನ್ನು ಸೂಚಿಸುತ್ತದೆ. ಸೃಷ್ಟಿಕಾಲದಲ್ಲಿ ರಜೋಗುಣಮೂರ್ತಿಯಾಗಿ ಪ್ರಪಂಚವನ್ನು ಉಂಟುಮಾಡುವವನು ಎಂದರ್ಥ ಸ್ಥಪತಿ - ಎಂದರೆ ಸ್ಥಿತಿಕಾರಕನೂ ಪಾಲಕನೂ ಆಗಿರುವನೆಂದರ್ಥ ಜಗತ್ತಿನ ಇರುವಿಕೆಯೂ ಅದರ ಕ್ಷೇಮವೂ ಭಗವಂತನ ಆಳ್ವಿಕೆಗೆ ಒಳಪಟ್ಟಿರುತ್ತದೆ. ಆತನ ಅನುಗ್ರಹವಿಲ್ಲದೆ ಪ್ರಪಂಚದಲ್ಲಿ ಕ್ಷೇಮವಿರಲಾರದು. ಆತನು ಸ್ಥಾತಾ ಮತ್ತು ಪಾಲಕನೆಂಬ ಎರಡು ಬಿರುದುಗಳುಳ್ಳವನು ಆದ್ದರಿಂದಲೇ ಸ್ಥಪತಿಯೆನಿಸಿರುವನು. ವೃಕ್ಷಗಳಿಗೆ ಪತಿಯಾಗಿರುವನೆಂಬುದು ಪ್ರಸಿದ್ಧವೇ ಆಗಿದೆ ಸಂಸಾರವೆಂಬ ವೃಕ್ಷಕ್ಕೂ ಆತನೇ ಒಡೆಯನು. ಆದರೆ ಆ ವೃಕ್ಷದ ಮೇಲಿರುವವನು ಅವನು ಮತ್ತು ಪ್ರೇರಕನೂ ಆಗಿರುತ್ತಾನೆ. ಒಡೆಯನಾದ್ದರಿಂದ ವೃಕ್ಷದಲ್ಲಿದ್ದುಕೊಂಡು ಅದರ ಪಾಲನೆಯನ್ನೂ ಮಾಡುತ್ತಾನೆ ಎಂದೂ ಅರ್ಥಮಾಡಬಹುದು.

    ಮಂತ್ರಿಯೆಂದರೆ ಮಂತ್ರಗಳ ಪ್ರಭುವು ಏಳುಕೋಟಿ ಮಹಾ ಮಂತ್ರಗಳು ಇರುವವೆಂದು ಬಲ್ಲವರು ಹೇಳುತ್ತಾರೆ ಅವುಗಳಲ್ಲದೆ ನಾಲ್ಕು ವೇದಗಳು ಉಪನಿಷತ್ತುಗಳು ಹಾಗೂ ಉಳಿದ ಎಲ್ಲಾ ರಹಸ್ಯವಿದ್ಯೆಗಳೂ ಮಂತ್ರಗಳೇ ಅವುಗಳೆಲ್ಲವನ್ನೂ ಬಲ್ಲ, ಸರ್ವವಿದ್ಯೆಗಳಿಗೂ ಈಶಾನನಾದ ಈ ದೇವನೇ ಮುಖ್ಯಾರ್ಥದಲ್ಲಿ ಮಂತ್ರಿಯು ವಾಣಿಜರೆಂದರೆ ವ್ಯಾಪಾರಿಗಳ ಗುಂಪು ವ್ಯಾಪಾರಿಯೆಂಬುವನು ಅಗ್ಗವಾದ ಪ್ರದೇಶದಿಂದ ಬೇಕಾದ ಸಾಮಾನುಗಳನ್ನು ಕೊಂಡುತಂದು ಅವು ಸಿಗದೇ ಇರುವ ಪ್ರದೇಶಗಳಲ್ಲಿ ಹಂಚುತ್ತಾನೆ ಬಹಳಮಟ್ಟಿಗೆ ಅವನಿಗೆ ಯಾವಯಾವ ಪದಾರ್ಥಗಳು ಎಲ್ಲೆಲ್ಲಿ ದೊರೆಯುವವೆಂಬುದೂ ಅವುಗಳ ಗುಣ, ಬೆಲೆ, ಉಪಯೋಗಗಳೂ ತಿಳಿದಿರುತ್ತವೆ. ಹಾಗೆಯೇ ಪರಮೇಶ್ವರನೂ ವಾನಿಜನು ಈತನಿಗೆ ತಿಳಿಯದೆ ಇರುವ ಅಥವಾ ದೊರಕದೆ ಇರುವ ಪದಾರ್ಥವೆಂಬುದೇ ಇಲ್ಲ ಹೀಗೆ ಎಲ್ಲಾ ಪದಾರ್ಥಗಳನ್ನೂ ತಿಳಿದಿರುವ ಹಾಗೂ ಪಡೆದಿರುವ ಭಾರಿಯ ವರ್ತಕನು ಮತ್ತು ವರ್ತಕರ ಯಜಮಾನನು ಈತನೇ ಎಂದರ್ಥ, ಕಕ್ಷಗಳು ಎಂದರೆ ಅರಣ್ಯದಲ್ಲಿರುವ ಬಳ್ಳಿಗಳಿಂದಾದ ಪೊದೆಗಳು, ಗುಹೆಗಳು ಎಂದರ್ಥ ಕಾಡುಜನರು ಈ ಗುಹೆಗಳಲ್ಲಿ ವಾಸಿಸುತ್ತಾರೆ. ಕಿರಾತರೂಪಿಯಾದ ಭಗವಂತನು ಕಾಡುಗಳಲ್ಲಿರುವವನಾದ್ದರಿಂದ ಕಕ್ಷಾಣಾಂಪತಿಯೆಂದು ಇಲ್ಲಿ ಸ್ತುತಿಸಲಾಗಿದೆ ಮತ್ತು ಮರ, ಪೊದೆ, ಬಳ್ಳಿ ಎಲ್ಲವನ್ನೂ ಈತನೇ ಕಾಪಾಡುವವನಾದ್ದರಿಂದಲೂ ಆ ಹೆಸರು ಹೊಂದುತ್ತದೆ ಎಂದು ತಿಳಿಯಬೇಕು.

    ಭೂಮಿಯನ್ನು ವಿಸ್ತರಿಸುವವನು ಭುವಂತಿಯು ಕ್ಷೇತ್ರಪತಿ ಎಂದೂ ಇವನನ್ನು ಕರೆಯುವರು ಭೂಮಿಯ ಆಕಾರವು ಪ್ರತಿಯೊಂದು ಸೃಷ್ಟಿಯಲ್ಲಿಯೂ ಬೇರೆಬೇರೆಯಾಗಿರಬಹದು ಈಗ ನಾವು ಕಂಡುಕೊಂಡಿರುವ ಭೂಮಂಡಲವೇ ಸಾವಿರಾರು ವರ್ಷಗಳ ಹಿಂದೆ ಬೇರೆಯ ಆಕಾರದಲ್ಲಿದ್ದಿರಬಹುದೆಂದು ಬಲ್ಲವರು ಊಹಿಸುತ್ತಾರೆ ಅಂತೂ ಭೂಮಿಯು ಸಂಕೋಚ ವಿಸ್ತಾರಗಳನ್ನು ಹೊಂದಬಹುದಾದ ವಸ್ತುವಾದ್ದರಿಂದ ಆ ಕ್ರಿಯೆಯನ್ನು ನಿರ್ವಹಿಸುವವನು ಭಗವಂತನೇ ಆದ್ದರಿಂದ ಭುವಂತಯೇ - ಎಂದು ಹೊಗಳಿದೆ. ವಾರಿವಸ್ಕೃತನೆಂದರೆ ಭಕ್ತರ ರೂಪದಲ್ಲಿರುವವನು ಎಂದರ್ಥ ವರಿವ ಎಂದರೆ ಪರಿಚರ್ಯೆ ಅದನ್ನು ಮಾಡುವವರು ವಾರಿವಸ್ಕೃತರು ಭಕ್ತರು ಎಂದಭಿಪ್ರಾಯ ಪರಮೇಶ್ವರನು ಸರ್ವಗತನಾಗಿದ್ದರೂ ಅವನ ಸಾಂನಿಧ್ಯವು ಭಕ್ತರಲ್ಲಿ ಅತಿಶಯವಾಗಿರುವದು ಹೇಗೆಂದರೆ ಕಬ್ಬಿಣವು ಬೆಂಕಿಯೊಡನೆ ಸೇರಿದಾಗ ಬರಿಯ ಕಬ್ಬಿಣವಾಗಿರುವದಿಲ್ಲ ಸುಡುವ ಶಕ್ತಿಯೂ ಅದಕ್ಕೆ ಇರುತ್ತದೆ. ಅದರಂತೆಯೇ ಶಿವಭಕ್ತರೆಂದರೆ ಕೇವಲ ಮನುಷ್ಯಮಾತ್ರರಲ್ಲ ಅವರಲ್ಲಿ ಶಿವನ ಶಕ್ತಿಯೂ ತುಂಬಿರುತ್ತದೆ ಶಿವಭಕ್ತರಿಗೆ ಮಾಡಿದ ಪೂಜೆಯು ಶಿವನಿಗೇ ಮುಟ್ಟುವದು ಅಶರೀರನಾಗಿರುವ ಶಿವನು ಭಕ್ತರ ಶರೀರವೆಂಬ ಉಪಾಧಿಯನ್ನು ಧರಿಸಿ ತೋರುತ್ತಾನೆ ಎಂದು ಪುರಾಣಗಳಲ್ಲಿದೆ ಆದ್ದರಿಂದ ಭಕ್ತರ ರೂಪದಲ್ಲಿ ದರ್ಶನವನ್ನು ಕೊಡುತ್ತಿರುವ ಶಿವನನ್ನು 'ವಾರಿವಸ್ಕೃತ'ನೆಂದು ಇಲ್ಲಿ ಸ್ತುತಿಸಲಾಗಿದೆ ಔಷಧಿಗಳಿಗೆ ಒಡೆಯನಾದ್ದರಿಂದ ಔಷಧೀನಾಂ ಪತಿಯು. ಹಿಂದೆ ಭುವಂತಯೇ ಎಂದು ಹೇಳಿರುವದರ ವಿವರಣೆಯಿದು ಎಂದೂ ಭಾವಿಸಬಹುದು ಹೇಗೆಂದರೆ ಭೂಮಿಯು ತನ್ನೊಳಗೆ ಇಡಲ್ಪಟ್ಟ ಬೀಜವನ್ನು ಮೊಳಕೆಯಾಗಿ ಮಾಡಿ ದೊಡ್ಡ ವೃಕ್ಷಾದಿಗಳ ರೂಪದಿಂದ ಹೊರಚಾಚುತ್ತದೆ ಇದೇ ವಿಸ್ತಾರವು ಹೀಗೆ ಅನೇಕ ಸಸ್ಯಗಳ ರೂಪದಿಂದ ಹರಡಿಕೊಂಡಿರುವ ಭೂಮಿಯು ಎಲ್ಲಾ ಔಷಧಿಗಳಿಗೂ ತಾಯಿಯಾಗಿದೆ ಈ ಔಷಧಿಗಳನ್ನು (ಸಸ್ಯಗಳನ್ನು) ಉಪಜೀವಿಸಿಕೊಂಡೇ ಎಲ್ಲಾ ಪ್ರಾಣಿಗಳೂ ಬದುಕಿರುತ್ತವೆ. ಪ್ರಾಣಿಗಳು ತಿನ್ನುವ ಅನ್ನವು ಹೀಗೆ ಭೂಮಿಯ ಆಧಾರದಿಂದ ಪರಮೇಶ್ವರನ ಆಳ್ವಿಕೆಗೆ ಒಳಪಟ್ಟೇ ಸೃಷ್ಟಿಯಾಗುವದು ಇಂಥ ಅನ್ನಪತಿಯಾದ ದೇವನನ್ನೇ ಇಲ್ಲಿ ಔಷಧೀನಾಂ ಪತಯೇ ಎಂದು ಹೊಗಳಿದೆ. ಇಲ್ಲಿ ಹಿಂದುಮುಂದಿನ ಮಂತ್ರಗಳನ್ನು ಒಟ್ಟುಗೂಡಿಸಿದರೆ ಈ ಅಭಿಪ್ರಾಯವು ಹೊರಡುತ್ತದೆ ಭಗವಂತನು ಭಕ್ತರ ರೂಪದಿಂದ ಇದ್ದುಕೊಂಡು ಹವಿಸ್ಸುಗಳನ್ನು ಸ್ವೀಕರಿಸುವನು ಆದ್ದರಿಂದಲೇ ಬ್ರಾಹ್ಮಣಮುಖದಲ್ಲಿ ಅರ್ಪಿಸಿದ ದ್ರವ್ಯವು ಅವನಿಗೆ ಪ್ರಿಯವಾಗುವದು. ಅಗ್ನಿಯಲ್ಲಿ ಕೊಡುವ ಆಹುತಿಗಿಂತಲೂ ಇದು ಶ್ರೇಷ್ಠವಾದದ್ದು ಯಜ್ಞಗಳಲ್ಲಿಯೂ ಹೋಮದೊಡನೆ ಅನ್ನದಾನವನ್ನೇ ಧಾರಾಳವಾಗಿ ಮಾಡಲು ತಿಳಿಸಿದೆ ಅನ್ನದಾನವಿಲ್ಲದ ಯಜ್ಞವು ತಾಮಸವು ಹೀಗೆ ಭಕ್ತರ ಮುಖದಿಂದ ಹವಿಸ್ಸನ್ನು ಸ್ವೀಕರಿಸುವ ಮಹಾದೇವನು ಪ್ರತ್ಯಕ್ಷದೇವತೆಯು 'ಯಾವನು ರುದ್ರನನ್ನು ಮನಸ್ಸಿನಲ್ಲಿ ನೆನೆಯುತ್ತಾ ನಾಲಗೆಯಲ್ಲಿ ಅನ್ನವನ್ನು ಸ್ವೀಕರಿಸುವನೋ ಅವನು ಅಮೃತವನ್ನೇ ಊಟಮಾಡಿದವನಾಗುವನು ಹಾಗಿಲ್ಲದೆ ಬರಿಯ ಅನ್ನವನ್ನು ತಿನ್ನವವನು ಅಮೇಧ್ಯವನ್ನೇ ತಿಂದವನಾಗುವನು' ಎಂದೂ ಪುರಾಣಗಳಲ್ಲಿದೆ ಆದ್ದರಿಂದ ಭುವಂತನೂ ವಾರಿವಸ್ಕೃತನೂ ಔಷಧಿಗಳ ಪತಿಯೂ ಆದ ರುದ್ರನು ಮೇಲೆ ತಿಳಿಸಿದಂತೆ ಸ್ತುತ್ಯನಾಗಿರುವನು ಎಂದು ಈ ಮಂತ್ರದ ಅಭಿಪ್ರಾಯ.

    ಉಚ್ಚೈಃ ಘೋಷನೆಂದರೆ ಯುದ್ಧವೇ ಮುಂತಾದವುಗಳಲ್ಲಿ ಗಟ್ಟಿಯಾಗಿ ಸಿಂಹನಾದಮಾಡುವವನು - ಎಂದರ್ಥ ಮಾತನ್ನು ಎಲ್ಲರಿಗೂ ಮುಟ್ಟುವಂತೆ ಎಂದರೆ ದೊಡ್ಡದೊಡ್ಡ ಸಭೆಗಳಲ್ಲಿ ಸರ್ವರಿಗೂ ಕೇಳುವಂತೆ ಹೇಳಲು ದೊಡ್ಡ ಧ್ವನಿಯು ಬೇಕು ಈಗ ಲೌಡ್ ಸ್ಪೀಕರುಗಳು ಬಳಕೆಯಲ್ಲಿರುವದರಿಂದ ಹೆಚ್ಚು ಕಷ್ಟವಿಲ್ಲ ಆದರೆ ಹಿಂದಿನಕಾಲಕ್ಕೆ ಈ ಧ್ವನಿಘೋಷವು ತುಂಬ ಅಗತ್ಯವಾಗಿತ್ತು ಹಿಂದೆ ಎಷ್ಟೋ ಜನ ಭಾಷಣಕಾರರು ತಮ್ಮ ಧ್ವನಿಯನ್ನು ಎತ್ತರಿಸಿಕೊಳ್ಳಲು ಸಮುದ್ರದ ದಂಡೆಗೆ ಹೋಗಿ ಸಮುದ್ರಕ್ಕೆ ಎದುರಾಗಿ ನಿಂತು ಕಿರುಚಿಕೊಳ್ಳುತ್ತಿದ್ದರಂತೆ. ಪರಮೇಶ್ವರನ ಧ್ವನಿಯು ಎಂಥದ್ದೆಂದರೆ ಅವನು ಘೋಷಣೆಮಾಡಿದನೆಂದರೆ ಜಗತ್ತೆಲ್ಲವೂ ನಡುಗಿಹೋಗುವದು ರಾಕ್ಷಸರೆಲ್ಲ ಚದುರಿಹೋಗುವರು. ರಾಕ್ಷಸಸ್ತ್ರೀಯರ ಗರ್ಭಗಳು ನಿರ್ಭೇದವಾಗುವವು ಯುದ್ಧದಲ್ಲಿ ಶತ್ರುಗಳು ಹಿಮ್ಮೆಟ್ಟುವರು ಇಂಥ ಉಚ್ಚೈರ್ಘೋಷನು ಪರಮೇಶ್ವರನು ಇನ್ನು ಶತ್ರುಗಳನ್ನು ಹಿಂಸಿಸಿ ಅಳುವಂತೆಯೂ ಕಿರುಚಿಕೊಳ್ಳುವಂತೆಯೂ ಮಾಡುವವನಾದ್ದರಿಂದ ಆಕ್ರಂದಯತೇ ಎಂದು ಸ್ತುತಿಸಿದೆ ಪತ್ತಿಗಳಿಗೆ ಎಂದರೆ ಪದಾತಿಗಳಿಗೆ ಒಡೆಯನಾದ್ದರಿಂದ ಪತ್ತೀನಾಂ ಪತಿಯು ಪರಮೇಶ್ವರನು ತನ್ನ ಕೈಗಳಲ್ಲಿ ಶತ್ರುಸಂಹಾರಕ್ಕಾಗಿ ಆಯುಧಗಳನ್ನು ಧರಿಸಿರುತ್ತಾನಾದರೂ ಅವು ಕೇವಲ ಅಲಂಕಾರಕ್ಕಾಗಿ ಮಾತ್ರ ಎಂದು ತಿಳಿಯಬೇಕು ಏಕೆಂದರೆ ಅವನ ಅಟ್ಟಹಾಸದ ನಗೆ, ನೋಟ, ಘೋಷಣೆ, ಉಗುರುಗಳೇ ಶತ್ರುನಾಶಕ್ಕೆ ಸಾಕಾಗಿವೆ. ಅಷ್ಟರಿಂದಲೇ ಕಾಮ, ಯಮ ಮುಂತಾದವರನ್ನೆಲ್ಲ ಸಂಹರಿಸಿದ ಮಹಾವೀರನು ಅವನು ಎಂದರ್ಥ.

    ಕೃತ್ಸ್ನವೀತನಿಗೆ ನಮಸ್ಕಾರ ಎಂದು ಮತ್ತೆ ಸ್ತುತಿಸಲಾಗಿದೆ. ಕೃತ್ಸ್ನ ಎಂದರೆ ಪೂರ್ಣ ಎಂದರ್ಥ ವೀತ - ಎಂದರೆ ವ್ಯಾಪ್ತ ಎಂದರ್ಥ. ಇಡಿಯ ಜಗತ್ತನ್ನೆಲ್ಲ ತನ್ನ ಆಂತರ್ಯಾಮಿರೂಪದಿಂದ ವ್ಯಾಪಿಸಿಕೊಂಡಿರುವವನು ಎಂದು ಅಭಿಪ್ರಾಯ. ಬೃಹದಾರಣ್ಯಕೋಪನಿಷತ್ತಿನ ಆಂತರ್ಯಾಮಿಬ್ರಾಹ್ಮಣಭಾಗವನ್ನೂ ಇಲ್ಲಿ ಅನುಸಂಧಾನಮಾಡಿಕೊಳ್ಳಬೇಕು ಒಂದೊಂದು ವಸ್ತುವನ್ನೂ ಒಳಹೊಕ್ಕು ಹೊರಗೂ ಒಳಗೂ ವ್ಯಾಪಿಸಿಕೊಂಡು ಅದರ ತಿರುಳಾಗಿರುವವನು ಈ ಪರಮೇಶ್ವರನು ಈತನ ಇರವು ಇಲ್ಲದೆ ಯಾವ ವಸ್ತುವೂ ಇರಲಾರದು ಹೀಗೆ ದಾರದಲ್ಲಿ ಮಣಿಗಳು ಪೋಣಿಸಲ್ಪಟ್ಟಂತೆ ಮಹಾದೇವನಲ್ಲಿ ಇಡಿಯ ಪ್ರಪಂಚವೆಲ್ಲವೂ ಹಾಸುಹೊಕ್ಕಾಗಿ ಹೆಣೆದುಕೊಂಡಿರುವದು ಇದೇ ಭಗವಂತನ ಕೃತ್ಸ್ನವೀತತ್ವವು ಧಾವತೇ ನಮಃ ಎಂದರೆ ಭಕ್ತರನ್ನು ಕಾಪಾಡಲು ಅವರ ಹಿಂದೆಯೇ ಓಡುವವನು ಎಂದರ್ಥ ಕರುವಿನ ಹಿಂದೆ ಹಸುವು ಓಡುವಂತೆ ಭಕ್ತರ ಹಿಂದೆ ಭಗವಂತನು ಓಡುತ್ತಿರುವನು ಯಾವಾಗಲೂ ಅವರನ್ನು ಕಾಪಾಡುವ ವಿಷಯದಲ್ಲಿ ಎಚ್ಚರನಾಗಿರುವನು ಎಂದಭಿಪ್ರಾಯ ಸರ್ವವ್ಯಾಪಕನಾದ್ದರಿಂದಲೇ ಭಕ್ತರು ಎಲ್ಲಿಯೇ ಇರಲಿ ಅಲ್ಲಲ್ಲಿಗೇ ಹೋಗಲು ಭಗವಂತನಿಗೆ ಸಾಧ್ಯವಾಗಿರುತ್ತದೆ.

    ಸತ್ವನಾಂ ಪತಯೇ ನಮಃ - ಸಾತ್ವಿಕರುಗಳಿಗೆ ಒಡೆಯನಾದ ದೇವನಿಗೆ ನಮಸ್ಕಾರ ಸೃಷ್ಟಿಯಲ್ಲಿ ಸಾತ್ತ್ವಿಕ, ರಾಜಸ, ತಾಮಸ - ಎಂಬ ವಿಭಾಗದಿಂದ ಜೀವರುಗಳು ಕಂಡುಬರುತ್ತಾರೆ. ಇವರುಗಳಲ್ಲಿ ಸಾತ್ತ್ವಿಕಪಕ್ಷಪಾತಿಯು ಪರಮೇಶ್ವರನು ಎಂದು ಶ್ರುತಿಪುರಾಣಗಳಲ್ಲಿ ವರ್ಣಿಸಿರುತ್ತದೆ ಹಾಗಾದರೆ ರಾಜಸತಾಮಸರನ್ನು ಕಂಡರೆ ಭಗವಂತನಿಗೆ ದ್ವೇಷವೆ? ಅವನು ಎಲ್ಲರಲ್ಲಿಯೂ ಸಮನಾಗಿರಬೇಡವೆ? ಎಲ್ಲರೂ ಅವನಿಂದಲೇ ಹುಟ್ಟಿದವರಲ್ಲವೆ? ಈ ಪಕ್ಷಪಾತದ ಧೋರಣೆಯು ಸರ್ವಶಕ್ತನಾದ ದಯಾಳುವಾದ ಅವನಿಗೆ ಭೂಷಣವೆ? ಎಂದು ಕೇಳಬಹುದು ಹಾಗಲ್ಲ ರಾಜಸತಾಮಸರೆಂದು ನಾವು ಭಾವಿಸಿರುವವರನ್ನೂ ಪರಮೇಶ್ವರನು ತನ್ನ ದರ್ಶನ, ಸ್ಪರ್ಶನಾದಿಗಳಿಂದ ಸಾತ್ವಿಕರನ್ನಾಗಿಯೇ ಮಾಡಿಬಿಡುತ್ತಾನೆ. ಪರಮೇಶ್ವರನಿಗೆ ಶತ್ರುವಾಗಿದ್ದವನು ಕೂಡ ಜ್ಞಾನೋದಯವಾದಾಗ ಅವನ ಭಕ್ತನೇ ಆದನೆಂದು ಪೂರಾಣಗಳಲ್ಲಿದೆಯಷ್ಟೆ! ಅಂಥವನ ಆತ್ಮವು ತೇಜೋರೂಪದಿಂದ ಭಗವಂತನಲ್ಲಿ ಐಕ್ಯವಾಯಿತೆಂದೂ ಕಥೆಗಳಲ್ಲಿ ತಿಳಿಸಿರುತ್ತದೆ ಆದ್ದರಿಂದ ಪರಮೇಶ್ವರನ ದೃಷ್ಟಿಯಿಂದ ನೋಡಿದಾಗ ಎಲ್ಲಾ ಜೀವರುಗಳೂ ಸಾತ್ತ್ವಿಕರೇ ಆಗಿರುವರು. ಎಲ್ಲರೂ ಸಾತ್ತ್ವಿಕರೇ ಆದಾಗ ಆತನು 'ಸತ್ವನಾಂ ಪತಿ'ಯಲ್ಲದೆ ಮತ್ತೆ ಏನಾಗಲು ಸಾಧ್ಯ? ಹೀಗೆ ಶ್ರುತಿಯು ಭಗವಂತನ ದಿವ್ಯಮಹಿಮೆಯನ್ನು ಕೊಂಡಾಡಿರುತ್ತದೆ ಎಂದು ತಿಳಿಯಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ