ಸ ದೃಷ್ಟೋ ಮೃಡಯಾತಿ ನಃ - 2

ಅಸೌ ಯೋವಸರ್ಪತಿ ನೀಲಗ್ರೀವೋ ವಿಲೋಹಿತಃ |
ಉತೈನಂ ಗೋಪಾ ಅದೃಶನ್ನದೃಶನ್ ಉದಹಾರ್ಯಃ |
ಉತೈನಂ ವಿಶ್ವಾಭೂತಾನಿ ಸ ದೃಷ್ಟೋ ಮೃಡಯಾತಿ ನಃ ||8||

    'ಯಾವ ನೀಲಗ್ರೀವನೂ ವಿಶೇಷವಾಗಿ ಕೆಂಪಾಗಿರುವವನೂ ಆದ ಈ ಸಂಚರಿಸುವ ಆದಿತ್ಯ(ರೂಪನಾದ ರುದ್ರನೆಂಬುವ)ನಿದಾನಲ್ಲ, ಇವನನ್ನು ದನಕಯುವವರೂ ನೀರುತರುವವರೂ ನೊಡಿರುತ್ತಾರೆ. ಮತ್ತು ಗೋವು, ಎಮ್ಮೆ ಮುಂತಾಗಿ ಎಲ್ಲಾ ಪ್ರಾಣಿಗಳೂ ಕಂಡಿರುವವು. ಹೀಗೆ ಎಲ್ಲರಿಗೂ ಕಂಡುಬಂದಿರುವ ಆತನೇ ಧ್ಯಾನಮಾಡಿದವರನ್ನು ಸುಖಗೊಳಿಸುವವನಾಗಿರುವನು.'


    ಈ ಮಂತ್ರದಲ್ಲಿ ಭಗವಾನ್ ರುದ್ರನು ಎಲ್ಲರಿಗೂ ಚಿರಪಚಿತನೆಂದು ತಿಳಿಸಿದೆ. ಹೇಗೆಂದರೆ : ಸೂರ್ಯರೂಪದಿಂದ ಲೋಕವನ್ನೆಲ್ಲ ಬೆಳಗುತ್ತಿರುವ ಈತನನ್ನು 'ನಾವು ಕಾಣೆವು' ಎಂದು ಕುರುಡರನ್ನು ಬಿಟ್ಟರೆ ಉಳಿದವರು ಯಾರೂ ಹೇಳುವಂತಿಲ್ಲ. ಇವನು ಎಷ್ಟು ಸುಲಭನೆಂದರೆ ದನಗಳನ್ನು ಕಾಯುವ ಗೋಪಾಲಕರೂ ನೀರನ್ನು ತರುವ ಹೆಂಗಸರೂ ಈತನನ್ನು ಬಲ್ಲರು - ಎಂದು ಶ್ರುತಿಯು ತಿಳಿಸುತ್ತದೆ. ಗೋಪಾಲಕರೆಂದರೆ ತೀರ ಅಜ್ಞರು ಎಂದರ್ಥ ಏನೊಂದು ವಿದ್ಯಾಬುದ್ಧಿಗಳಿಲ್ಲದೆ ದನಕರುಗಳನ್ನು ಮೇಯಿಸುತ್ತಾ ಅಲ್ಲಲ್ಲಿ ತಿರುಗುತ್ತಿರುವವರು ಯಾವ ತಿಳಿವಳಿಕೆಯಾಗಲಿ ಶಾಸ್ತ್ರಪಾಂಡಿತ್ಯವಾಗಲಿ ಇಲ್ಲದವರೆಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾಗೆಯೇ ಮನಗೆಲಸಮಾಡುವ, ನೀರನ್ನು ತರುವ ಪ್ರಾಕೃತಸ್ತ್ರೀಯರು ಸಹ ಅಜ್ಞರೆಂಬುದು ಪ್ರಸಿದ್ಧವು. ಆದರೆ ಇಂಥವರೂ ಕೂಡ 'ನಾವು ಸೂರ್ಯನನ್ನು ನೋಡಿಲ್ಲ' ಎನ್ನಲಾರರು; ಎಂದರೆ ರುದ್ರನು ಇಷ್ಟು ಸುಲಭವಾಗಿ ಎಲ್ಲರಿಗೂ ದೊರಕುವನು - ಎಂದಭಿಪ್ರಾಯ. ಈ ಸೂರ್ಯರೂಪದಿಂದ ಭಗವಂತನಾದರೂ ಏಕೆ ಸಂಚರಿಸುತ್ತಾನೆಂದರೆ : ಲೋಕದ ಪ್ರಯೋಜನಕ್ಕಾಗಿಯೇ ಹೊರತು ಬೇರೆಯಲ್ಲ ಜೀವರಿಗೆಲ್ಲ ಕಾಲಗಣನೆ, ಶಾಖ, ಮಳೆ, ಬೆಳಕು - ಮುಂತಾದ ಸೌಕರ್ಯಗಳನ್ನು ಒದಗಿಸಿಕೊಟ್ಟು ಎಲ್ಲರಿಗೂ ಸಮಾನವಾಗಿ ತೋರಿಕೊಂಡು ಅನುಗ್ರಹಿಸುತ್ತಿರುವವನು ಸೂರ್ಯನು ಅವನಿಗೆ ಬಡವ-ಬಲ್ಲಿದರೆಂಬ ಭೇದವಿಲ್ಲ ಅರಮನೆಯನ್ನು ಬೆಳಗುವಂತೆಯೇ ಬಡವನ ಗುಡಿಸಲನ್ನೂ ತನ್ನ ಕಿರಣಗಳಿಂದ ಅಷ್ಟೇ ಚೆನ್ನಾಗಿ ಬೆಳಗುತ್ತಾನೆ. ಸೂರ್ಯನು ಉದಯಿಸಿದನೆಂದರೆ ಸಾಕು ಎಲ್ಲರೂ ಸಂತೋಷಪಡುವರು ಇಂಥ ಜಗದಾಧಾರನಾದ ಸೂರ್ಯನ ರೂಪದಿಂದ ತೋರಿಕೊಂಡು ಎಲ್ಲರಿಗೂ ದರ್ಶನವನ್ನು ಕೊಡುತ್ತಿರುವವನು ರುದ್ರನೇ ಎಂದಭಿಪ್ರಾಯ.
    ಪರಮೇಶ್ವರನು ತನ್ನ ವಿಭೂತಿಮಹಿಮಾಯುಕ್ತವಾದ ಒಂದಾನೊಂದು ಅಸಾಧಾರಣರೂಪದಿಂದಲೂ ಭಕ್ತರಿಗೆ ಕೈಲಾಸವೆಂಬ ಸ್ಥಾನದಲ್ಲಿ ದರ್ಶನವೀಯುತ್ತಿರುವನು. ಆ ರೂಪವು ಹೇಗಿರುವದೆಂದರೆ : ನೀಲಗ್ರೀವನೇ ಮುಂತಾದ ವಿಶೇಷಗಳಿಂದ ಕೂಡಿದ್ದಾಗಿದೆ. ಆತನು ಕಾಲಕೂಟವಿಷವನ್ನು ನುಂಗಿದ್ದರಿಂದ ಕಪ್ಪಾದ ಕಂಠವುಳ್ಳವನಾಗಿದ್ದಾನೆ. ಚಂದ್ರನನ್ನು ಗಂಗೆಯನ್ನೂ ಜಟೆಯಲ್ಲಿ ಧರಿಸಿದ್ದಾನೆ. ನಾಗಾಭರಣಗಳಿಂದ ಭೂಷಿತನಾಗಿದ್ದಾನೆ. ಗಜ ಚರ್ಮವನ್ನು ಹೊದ್ದಿದ್ದಾನೆ. ತ್ರಿಶೂಲ, ಡಮರು, ಪಾಶಾಂಕುಶಾದಿ ಆಯುಧಗಳನ್ನು ಧರಿಸಿದ್ದಾನೆ. ವೃಷಭವಾಹನನೂ ಪಾರ್ವತೀಪತಿಯೂ ಪ್ರಮಥಾದಿಗಣಸೇವಿತನೂ ಆಗಿದ್ದು ದೇವತೆಗಳಿಂದಲೂ ಋಷಿಮುನಿಗಳಿಂದಲೂ ಸ್ತೋತ್ರಮಾಡಲ್ಪಡುತ್ತಾ ಸರ್ವಜ್ಞನೂ, ಸರ್ವೇಶ್ವರನೂ ಆಗಿ ಮಹಾದೇವನಾಗಿ ವಿರಾಜಿಸುತ್ತಿರುವನು. ಈತನೇ ಯೋಗಿಗಳಿಗೆ ಸಚ್ಚಿದಾನಂದ ಸ್ವರೂಪನಾದ ಆತ್ಮನಾಗಿ ತೋರುತ್ತಿರುವನು ಇಂಥ ಸಗುಣರೂಪವನ್ನೂ ನಿರ್ಗುಣಸ್ವರೂಪವನ್ನೂ ತಾನೊಬ್ಬನೇ ಧರಿಸಿದ್ದಾನಾದರೂ ಇವನ ದರ್ಶನವಾಗಬೇಕಾದರೆ ಉಪಾಸಕರಿಗಾಗಲಿ ಯೋಗಿಗಳಿಗಾಗಲಿ ಸಾಧ್ಯವೇ ಹೊರತು ಸಾಮಾನ್ಯರಿಗೆ ಈ ಎರಡು ಸ್ವರೂಪಗಳೂ ದುರ್ಲಭವು. ಇದನ್ನು ಅರಿತ ಪರಮೇಶ್ವರನು ಜೀವರುಗಳ ಮೇಲಿನ ದಯೆಯಿಂದ ಯಾವ ಸಾಧನವೂ ಇಲ್ಲದ ಪ್ರಾಕೃತರಿಗೂ ತಾನು ಗೋಚರನಾಗಬೇಕೆಂದು ಬಯಸಿ ಆದಿತ್ಯರೂಪದಿಂದ ತೋರಿಕೊಂಡು ಎಲ್ಲರನ್ನೂ ಉದ್ಧರಿಸುತ್ತಿರುವನು. ಎಂಥ ಆಶ್ಚರ್ಯವಿದು? ಎಂದು ಪರಮೇಶ್ವರನ ದಯಾಮಯತ್ವವನ್ನು ಇಲ್ಲಿ ಕೊಂಡಾಡಿದೆ. ಹೀಗೆ ಕಾಣಲ್ಪಡುವ ಆ ಭಗವಂತನು ನಮ್ಮನ್ನು ಸುಖವಾಗಿ ಕಾಪಾಡಲಿ! ನಮ್ಮೆಲ್ಲರಿಗೂ ಆನಂದವನ್ನು ಕೊಡಲಿ! ಎಂದು ಇಲ್ಲಿ ಬೇಡಿಕೊಂಡಿದೆ.
    ಈ ಮಂತ್ರವು ಅನಾವೃಷ್ಟಿಪರಿಹಾರಕವೆಂದು ಮಂತ್ರಶಾಸ್ತ್ರಗಳಲ್ಲಿ ಹೇಳಿದೆ. ಈ ಮಂತ್ರಕ್ಕೆ ಆದಿತ್ಯರೂಪಿಯಾದ ರುದ್ರನೇ ದೇವತೆಯು ಯಾವನೇ ಆಗಲಿ ಪ್ರಾಯಶ್ಚಿತ್ತಪೂರ್ವಕವಾಗಿ ಶುದ್ಧಿಯನ್ನು ಮಾಡಿಕೊಂಡು ಹದಿನಾರುವರ್ಷಗಳಕಾಲ ನಿರಂತವಾಗಿ ಜಪಿಸಿದರೆ ಮಂತ್ರಸಿದ್ಧಯಾಗುವದು. ಅನಾವೃಷ್ಟಿಯನ್ನೂ ಇದರಿಂದ ಪರಿಹರಿಸಬಹುದು - ಎಂದು ಶಾಸ್ತ್ರದಲ್ಲಿ ತಿಳಿಸಿದೆ. ಸಾಧಕನಾದವನು ಈ ಮಂತ್ರದಿಂದ ಸೂರ್ಯನನ್ನು ಪ್ರಾರ್ಥಿಸಿ ಆರೋಗ್ಯವೇ ಮುಂತಾದ ಇಷ್ಟಾರ್ಥಸಿದ್ಧಿಯನ್ನೂ ಪಡೆಯಬಹುದಾಗಿದೆ. ಸೂರ್ಯರೂಪದಿಂದ ಪ್ರತಿದಿನವೂ ನಮಗೆ ದಶ್ನವೀಯುತ್ತಿರುವ ರುದ್ರನನ್ನು ವೇದವು ಬಹಳವಾಗಿ ಹೊಗಳುತ್ತಿದೆಯಾದರೂ ನಮಗೆ ಮಾತ್ರ ಇನ್ನೂ ಭಕ್ತಿಯು ಬಂದಿಲ್ಲ ಇದಕ್ಕೆ ಕಾರಣ ನಮ್ಮ ಔದಾಸೀನ್ಯ ಯಾವದು ಅಪರಿಮಿತವಾಗಿದೆಯೋ ಅದರ ವಿಷಯಕ್ಕೆ ಜನರಿಗೆ ಅನಾದರವು ಹೆಚ್ಚು ; ಹಾಗಾಗಬಾರದು ಜಗಜ್ಜ್ಯೋತಿಯಾದ ಸೂರ್ಯನೆಂಬ ರುದ್ರನನ್ನು ನಾವು ನಿಷ್ಠೆಯಿಂದ ಆರಾಧಿಸಿ ಕೃತಾರ್ಥರಾಗಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ