ನರಸಿಂಹ ತತ್ತ್ವ

    ನರಸಿಂಹನಿಗೆ ಎರಡರಿಂದ ಹದಿನಾರು ಕೈಗಳನ್ನು ಆರೋಪಿಸಲಾಗಿದೆ. ದ್ವಿಬಾಹು ನರಸಿಂಹ ರೂಪ ಕ್ವಚಿತ್ತು. ಕೆಲವಾರು ಪ್ರಾಚೀನ ರೂಪಗಳಲ್ಲಿ ಈ ಚಿತ್ರಣವಿದೆ. ಕುಬಟೂರು, ಮಹಾಕೂಟ, ಬನವಾಸಿ, ಹಲಸಿ ಮೊದಲಾದೆಡೆಗಳಲ್ಲಿ ಇಂತಹ ಮೂರ್ತಿಗಳನ್ನು ಕಾಣಬಹುದು. ಈ ಮೂರ್ತಿಗಳಲ್ಲಿ ಇಲ್ಲಿನ ಪ್ರಾದೇಶಿಕ ವೈಲಕ್ಷಣ್ಯಗಳೂ ಸೇರಿವೆ. ತಿರುಮಲೆಯ ಆಲಯದ ತಿರುಮಲರಾಯ ಮಂಟಪದ ಕಂಬದ ಮೇಲಿರುವ ಸ್ಥಾನಕ ದ್ವಿಬಾಹು ನರಸಿಂಹನ ರೂಪವು ವಿಶಿಷ್ಟವಾದದ್ದು. ಇಲ್ಲಿ ನರಸಿಂಹನ ಬಲಬದಿಯಲ್ಲಿ ಪ್ರಹ್ಲಾದನ ಚಿತ್ರವೂ ಇದ್ದು ಪ್ರಹ್ಲಾದನ ತಲೆಯ ಮೇಲೆ ದೇವರು ಆಶೀರ್ವಾಪನದ ಕೈಯಿಟ್ಟಿಂತಹ ಪರಮ ಭಾಗವತ ಚಿತ್ರವನ್ನು ಬಿಡಿಸಲಾಗಿದೆ. ಇವೆಲ್ಲ ರೂಪಗಳಿಂದಾಗಿ ಮಾನವ ರೂಪಿಯೊಬ್ಬ ಮಹಾನ್ ದೈವ ರೂಪಿಯಾದಂತೆ ಕಲ್ಪಿಸಕೊಳ್ಳಬಹುದಾಗಿದೆ.
    ನರಸಿಂಹನ ಸಾಮಾನ್ಯರೂಪವು ನಾಲ್ಕು ಕೈಗಳಿಂದ ಶೋಭಿತವಾಗಿರುತ್ತದೆ. ಈ ನಾಲ್ಕು ಕೈಗಳಲ್ಲಿ ಶಂಖ, ಚಕ್ರ ಆಯುಧಗಳಿದ್ದು ಅಭಯ ವರದ ಮುದ್ರೆಗಳಿರುವುದು ಸಾಮಾನ್ಯ ಹಿರಣ್ಯಕಶ್ಯಪನೊಡನೆ ಹೋರಾಟದಲ್ಲಿ ತೊಡಗಿದ ನರಸಿಂಹ ನಾಲ್ಕು ಕೈಗಳನ್ನು ಹೊಂದಿರುವುದು ಸಹಜ. ಎಂಟು ಕೈಗಳ ಸಮರ ಮೂರ್ತಿಯೂ ಉಂಟು. ಹಿರಣ್ಯವಧಾ ಸಂದರ್ಭದಲ್ಲಿ ನರಸಿಂಹನಿಗೆ ಎಂಟು ಹದಿನಾರು ಕೈಗಳಿರುವುದೂ ಉಂಟು. ಶಂಖ, ಚಕ್ರ, ಗದಾ, ಪದ್ಮಗಳೊಡನೆ ಬಿಲ್ಲು, ಬಾಣ, ಪರಶು, ಅಂಕುಶಗಳಿರುವುದೂ ಉಂಟು. ಎರಡು ಕೈಗಳು ಹಿರಣ್ಯನ ಹೊಟ್ಟೆಯನ್ನು ಬಗೆಯುತ್ತಿರುವಂತೆಯೂ, ಎರಡು ಕೈಗಳು ತಲೆಯ ಮೇಲೆತ್ತಿ ಕರುಳ ಹಾರವನ್ನು ಹಾಕಿಕೊಳ್ಳುತ್ತಿರುವಂತೆಯೂ ಒಂದು ಕೈ ರಾಕ್ಷಸನ ಕಾಲುಗಳನ್ನು ಮತ್ತೊಂದು ಕೈ ತಲೆಯನ್ನೂ ಹಿಡಿದಿರುವಂತೆ ಚಿತ್ರಿತವಾಗುವುದು ಸಾಮಾನ್ಯ. ಭಗವಂತನ ಚತುರ್ವಿಂಶತಿ ಅವತಾರಗಳನ್ನು ಗುರುತಿಸುವಾಗ ನರಸಿಂಹನಿಗೆ ನಾಲ್ಕು ಕೈಗಳಲ್ಲಿ ಮೇಲೆ ಬಲದಿಂದ ಪದ್ಮ, ಗದಾ, ಶಂಖ, ಚಕ್ರಗಳು ಅನುಕ್ರಮವಾಗಿ ಗಡಿಯಾರದಂತೆ ಇದ್ದರೂ ಮುಖ ಮಾತ್ರ ಮನುಷ್ಯರದ್ದೇ ಎಂಬುದು ಮುಖ್ಯ.
    ವಿಷ್ವಕ್ಸೇನ ಸಂಹಿತೆಯಲ್ಲಿ ನರಸಿಂಹನ ಶರೀರವನ್ನು ಬಣ್ಣಿಸಲಾಗಿದೆ. ಇದು ಶ್ವೇತ ಪರ್ವತದ ಹಾಗಿದೆಯೆಂದು ಹೇಳಲಾಗಿದೆ. ಶುದ್ದ ಸ್ಫಟಿಕದಂತೆ ನಿರ್ಮಲವಾಗಿದೆಯಂತೆ. ಈಶ್ವರ ಸಂಹಿತೆಯಲ್ಲಿ ಈತನ ಶರೀರವು ತುಷಾರದ ಹಾಗೆ ಹೊಳೆಯುತ್ತ. ಮಲ್ಲಿಗೆಯ ಹೂವಿನಂತೆಯೂ, ಚಂದ್ರನಂತೆಯೂ ಶುಭ್ರವಾಗಿರುವುದೆಂದು ಹೇಳಲಾಗಿದೆ. ಸಾತ್ವತ ಸಂಹಿತೆಯು ಹೇಳುವಂತೆ ಈತನ ದೇಹವು ತನ್ನಿಂದಲೇ ಹೊರಟ ಜ್ವಾಲೆಗಳಿಂದ ಆವೃತವಾಗಿರುತ್ತದೆ. ಮಹಾ ಭೀಮಕಾಯನಾಗಿರುವ ನರಸಿಂಹನಿಗೆ ತನ್ನ ಸುತ್ತಲ ಜ್ವಾಲೆಗಳು ಒಂದು ರೀತಿಯ ಆವರಣವೂ, ಅಲಂಕರಣವೂ ಆಗಿದೆಯೆಂದರೆ ಅಡ್ಡಿಯಿಲ್ಲ.
    ವಿಷ್ಣು ಧರ್ಮೋತ್ತರ ಪುರಾಣವು ನರಸಿಂಹನನ್ನು ವಿಷ್ಣುವಿನ ಸಂಕರ್ಷಣ ರೂಪದೊಡನೆ ಗುರುತಿಸುತ್ತದೆ. 'ಹರಿಸ್ಸಂಕರ್ಷಣ ರೂಪೇಣ ನರಸಿಂಹ ವಪುರ್ಧರಃ' ಎಂಬ ನುಡಿಯನ್ನು ಗಮನಿಸಬೇಕು. ಹಿರಣ್ಯಕಶ್ಯಪನು ಅಜ್ಞಾನದ ಪ್ರತೀಕವೆಂದೂ, ಇದನ್ನು ನಾಶಪಡಿಸುವ ಕಾರಣದಿಂದ ನರಸಿಂಹನ ಆಗಮನವಾಯಿತು ಎಂಬ ಅರ್ಥದ ವಾಕ್ಯವೃಂದ ಈ ಪುರಾಣದಲ್ಲಿ ಕಂಡು ಬರುತ್ತದೆ. ಕಾಯ-ವಚನ-ಮನಸ್ಸುಗಳಿಂದ ಉಂಟಾಗತಕ್ಕ ಪಾಪಗಳನ್ನು ನರಸಿಂಹ ರೂಪವನ್ನು ಧರಿಸಿರುವ ಸಂಕರ್ಷಣನು ಹರಿಸುವನೆಂದು ಇಲ್ಲಿ ಹೇಳಲಾಗಿದೆ. ಎಲ್ಲ ಅಜ್ಞಾನಗಳ ನಾಶಕರನಾದವನು ನರಸಿಂಹ. ಈ ನರಸಿಂಹನ ಕೇವಲ ರೂಪವು ಶುದ್ಧ ಜ್ಞಾನವನ್ನು ಉಂಟು ಮಾಡುವಂತಿರುವುದು. ಇದರಿಂದಾಗಿ ಕರ್ಮ ಸಂಯೋಗದಿಂದ ಉಂಟಾಗಬಹುದಾದ ಭೀತಿ ನಿವಾರಣೆಯಾಗುತ್ತದೆ.
    ನರಸಿಂಹನ ಅಲಂಕಾರಕ್ಕೆ ವಿಶೇಷ ಗಮನವನ್ನು ಕೊಟ್ಟಿರುವುದನ್ನು ಸಂಹಿತೆಗಳು, ಪುರಾಣಗಳು ವಿವರಿಸುತ್ತವೆ. ಈತನು ಉಟ್ಟ ಬಟ್ಟೆಯು ಕೆಂಪಾಗಿದೆಯೆಂದು ಪಾದ್ಮ ಸಂಹಿತೆಯಲ್ಲಿ ಹೇಳಲಾಗಿದೆ. ಈತನನ್ನು ಕುರಿತಾದ ಸ್ತೋತ್ರಗಳು ಆರ್ಚನಾವಿವರಗಳೂ ಸಹ ರಕ್ತ ವಸ್ತ್ರಧರಂ ಎಂದೇ ತಿಳಿಸುತ್ತವೆ. ವಿಷ್ಣು ಧಮೋತ್ತರದಲ್ಲಿ ಮಾತ್ರ ಈತ ನೀಲಿ ವಸ್ತ್ರಗಳನ್ನು ಧರಿಸಿರುವನೆನ್ನಲಾಗಿದೆ. ಸಾತ್ವತ ಸಂಹಿತೆಯಲ್ಲಿ ಪೀತವರ್ಣ ವಸ್ತ್ರಧಾರಿಯಾಗಿದ್ದಾನೆ. ಒಟ್ಟಿನಲ್ಲಿ ಮೂರು ವಿವಿಧ ಬಣ್ಣದ ವಸ್ತ್ರಗಳನ್ನು ನರಸಿಂಹನಿಗೆ ತೊಡಿಸಿರುವುದು ಕೂಡಾ ಅರ್ಥಪೂರ್ಣವಾಗಿದೆ.
    ನರಸಿಂಹ ಶರೀರಕ್ಕೆ ರಕ್ತ ಚಂದನವನ್ನು ಲೇಪಿಸುತ್ತಾರೆ. ವಿಷ್ವಕ್ಸೇನ ಸಂಹಿತೆಯು ಈ ಅಂಶವನ್ನು ಖಚಿತಪಡಿಸುತ್ತದೆ. ಸಿಂಹಾಚಲದ ಸ್ವಾಮಿಯು ಸದಾಕಾಲ ಚಂದನಾ ವೃತನಾಗಿರುತ್ತಾನೆ. ಅಕ್ಷ ತದಿಗೆಯಂದು ಮಾತ್ರ ಇದರ ವಿಸರ್ಜನ. ಮರುಕ್ಷಣದಲ್ಲಿ ಮತ್ತೆ ಲೇಪನ. ಯಜ್ಞೋಪವೀತ ಧರಿಸಿದ ನರಸಿಂಹ ಶಿಲ್ಪಗಳನ್ನೂ ಕಾಣಬಹುದು ಪ್ರಾಚೀನ ಶಿಲ್ಪಗಳು ಈ ರೀತಿಯಲ್ಲಿವೆ.
    ನರಸಿಂಹ ಅಷ್ಟೋತ್ತರದಲ್ಲಿ ಬರುವ ಶ್ರೀವತ್ಸಾಂಕವೆಂಬ ನಾಮವಿಶೇಷಣವನ್ನು ಆಧರಿಸಿ ಹೇಳುವುದಾದರೆ ಇದು ವಿಷ್ಣುವಿನ ಸಾಮಾನ್ಯ ಗುಣವೂ ಆಗಿ ಕಂಡು ಬರುತ್ತದೆ. ಕೌಸ್ತುಭವಂತೂ ಇರಲೇಬೇಕು. ಉಳಿದ ಆಭರಣ, ಅಲಂಕಾರಗಳು ಆಯಾಕಾಲದ ಶಿಲ್ಪ ವಿಧಾನ ವೈವಿಧ್ಯಗಳಿಗೆ ಅನುಗುಣವಾಗಿ ಗಮನಕ್ಕೆ ಬರುತ್ತವೆ. ಹೊಯ್ಸಳರ ಕಾಲದ ನರಸಿಂಹ ಶಿಲ್ಪಗಳಂತೂ ಬಗೆಬಗೆಯ ಆಭರಣ ವಿವರಗಳಿಂದ ಮನ ಸೆಳೆಯುತ್ತವೆ.
    ಮಹಾವಿಷ್ಣುವಿನ ಅವತಾರ ರೂಪಿಯಾದ ನರಸಿಂಹ ದೇವರಿಗೆ ಭಾರತ ದೇಶದಲ್ಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಮನ್ನಣೆ ನೀಡುತ್ತ ಬರಲಾಗಿದೆ. ನಾಲ್ಕಾರು ರಾಜ್ಯಗಳಲ್ಲಿಯಂತೂ ಅತಿಶಯವಾದ, ವೈಭವದಿಂದ ನರಸಿಂಹನ ಆರಾಧನೆ ನಡೆದುಕೊಂಡು ಬಂದಿದೆ. ಪ್ರಧಾನವಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಕ್ವಚಿತ್ತಾಗಿ ಮಹಾರಾಷ್ಟ್ರ, ಬಿಹಾರ, ಕೇರಳಗಳಲ್ಲಿ ಈ ಅವತಾರದ ರೂವಾರಿಗಳು ಮನ್ನಣೆ ಪಡೆದಿದ್ದಾರೆ. ಈ ರಾಜ್ಯಗಳಲ್ಲಿ ನಿತ್ಯೋತ್ಸವ, ವಾರೋತ್ಸವ, ಪಕ್ಷೋತ್ಸವ, ಮಾಸೋತ್ಸವ, ಸಂವತ್ಸರೋತ್ಸವಗಳಲ್ಲಿ ಆರಾಧಿಸಲ್ಪಡುವ ನರಸಿಂಹನ ರೂಪ ವಿಶ್ಲೇಷಣೆಯನ್ನು ವೇದ, ಪುರಾಣ, ಉಪನಿಷತ್ ಗಳಿಂದಲೂ, ಇತಿಹಾಸ ಸಾಹಿತ್ಯ ಸ್ತೋತ್ರಗಳ ಮೂಲಕವಾಗಿಯೂ ಪರಿಶೀಲಿಸುವುದು ಪ್ರಸ್ತುತವಾಗಿದೆ.

Comments

  1. its a beatiful u r posting various stages. i like very much for this i am krishna yajurvedi, kindly send me you have a bhashya of rudra prashna complete set are if you have all prashna of krishna yajurved bhashya link kindly send me sir
    namaskkaar

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ