ದಕ್ಷಿಣಾಮೂರ್ತಿಸ್ತೋತ್ರ - 5 - ದೇಹಾದಿಗಳಲ್ಲಿ ಆತ್ಮತ್ವಭ್ರಾನ್ತಿ

ದೇಹಂ ಪ್ರಾಣಮಪೀನ್ದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ
ಸ್ತ್ರೀಬಾಲಾನ್ಧಜಡೋಪಮಾಸ್ತ್ವಹಮಿತಿ ಭ್ರಾನ್ತಾ ಭೃಶಂ ವಾದಿನಃ |
ಮಾಯಾಶಕ್ತಿವಿಲಾಸಕಲ್ಪಿತಮಹಾವ್ಯಾಮೋಹಸಂಹಾರಿಣೇ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||


    ಪರಮಾತ್ಮನು ಸ್ವಯಂಪ್ರಕಾಶನೆಂದೂ ಆತನ ಚೈತನ್ಯಪ್ರಕಾಶದಿಂದಲೇ ಹೊರಗಿನ ವಸ್ತುಗಳೆಲ್ಲವೂ ನಮಗೆ ತೋರುತ್ತಿರುವವೆಂದೂ ಈವರೆಗೆ ತಿಳಿದುಕೊಂಡದ್ದಾಯಿತು. ವಿಷಯಗಳನ್ನು ಇಂದ್ರಿಯಗಳ ಮೂಲಕವಾಗಿ ಚೈತನ್ಯವು ಬೆಳಗುತ್ತಿರುವದರಿಂದಲೇ ವಿಷಯನಾನಾತ್ವವೂ ವಿಷಯವೈಚಿತ್ರ್ಯವೂ ಜ್ಞಾನ ನಾನಾತ್ವವೂ ಜ್ಞಾನವೈಚಿತ್ರ್ಯವೂ ನಮಗೆ ತೋರುತ್ತಿದೆಯೇ ಹೊರತು ಪರಮಾರ್ಥವಾಗಿ ಈ ನಾನಾತ್ವವೈಚಿತ್ರ್ಯಗಳು ಇರುವದಿಲ್ಲ - ಎಂದು ಇದರಿಂದ ತಾನೇ ಸಿದ್ಧವಾಗುತ್ತದೆ.

    ಆದರೂ ಇಲ್ಲಿ ಒಂದು ಶಂಕೆಯುಂಟಾಗುತ್ತದೆ. ವ್ಯವಹೃದಲ್ಲಿ ಬೇರೆ ಬೇರೆಯ ವಸ್ತುಗಳನ್ನು ಅರಿಯುವಾಗ ನಮಗೆ ಇವನ್ನು ನೋಡುತ್ತೇನೆ ಕೇಳುತ್ತೇನೆ, ಮೂಸುತ್ತೇನೆ, ಮುಟ್ಟುತ್ತೇನೆ, ಅರಿಯುತ್ತೇನೆ - ಎಂದು ಮುಂತಾಗಿಯೇ ಅರಿವಾಗುತ್ತದೆ. ನನ್ನೊಳಗೆ ನಾನು ಅಲೋಚಿಸುತ್ತಿದೇನೆ, ನಿಶ್ಚಯಿಸುತ್ತೇನೆ, ಕಲ್ಪಿಸುತ್ತೇನೆ, ನೆನಪಿಸಿಕೊಳ್ಳುತ್ತೇನೆ - ಎಂದು ಮುಂತಾದ ವ್ಯವಹಾರಗಳೂ ನಮಗೆ ಆಗುತ್ತಿರುತ್ತವೆ. ಯಾವ ಜ್ಞಾನವಾಗಲಿ ಕೆಲಸವಾಗಲಿ ಇಲ್ಲದೆ ಇರುವ ಗಾಢ ನಿದ್ರೆಯ ವಿಷಯದಲ್ಲಿ ಕೂಡ ಸುಮ್ಮನಿದ್ದೆನು, ಏನನ್ನೂ ಮಾಡಲಿಲ್ಲ, ಏನನ್ನೂ ಅರಿಯಲಿಲ್ಲ ಎಂದೇ ಪರಮಾರ್ಶನವಾಗುತ್ತದೆ. "ನಾನು" ಎಂಬ ಪ್ರತ್ಯಯದ ಹಂಗಿಲ್ಲದೆ 'ಕೇವಲ ಚೈತನ್ಯರೂಪನು" ಎನ್ನುವಾಗಲೂ 'ನಾನು' ಎಂಬ ಅರಿವು ಹತ್ತಿಕೊಂಡೇ ಆತ್ಮವ್ಯವಹಾರವಾಗುವದು ಕಂಡಿರುತ್ತದೆ. ಹೀಗಿರುವದರಿಂದ ಜಗತ್ತೆಲ್ಲವೂ ಕೇವಲ ಶುದ್ಧಚಿನ್ಮಾತ್ರರೂಪವಾದ ಪರಮಾರ್ಥದ ತೋರಿಕೆಯೆಂದೂ ಇದನ್ನು ಅರಿಯುವದು ಅದರ ಬೆಳಕಿನಿಂದಲೇ ಎಂದೂ ನಿಶ್ಚಯಿಸುವದು ಹೇಗೆ ಸರಿಯಾದೀತು? ವ್ಯವಹಾರದಲ್ಲಿ ಎಲ್ಲರಿಗೂ ಆಗುತ್ತಿರುವ ಅನುಭವಕ್ಕನುಗುಣವಾಗಿ 'ನಾನು ಇಂದ್ರಿಯಗಳಿಂದ ವಿಷಯಗಳನ್ನು ಅರಿಯುತ್ತೇನೆ', 'ಮನಸ್ಸಿನ ಸಹಾಯದಿಂದ ಹಾಗೆ ಆರಿಯುತ್ತೇನೆ' - ಎಂದು ನಿಶ್ಚಯಿಸುವದೇ ಯುಕ್ತವಲ್ಲವೆ? "ನಾನು ವಿಷಯಗಳನ್ನು ಜ್ಞಾನೇಂದ್ರಿಯಗಳಿಂದಲೂ ಮನಸ್ಸಿನಿಂದಲೂ ಅರಿಯುತ್ತಿರುವ ಜ್ಞಾತೃಸ್ವರೂಪನು, ಕರ್ಮೇಂದ್ರಿಯಗಳ ಸಹಾಯದಿಂದ ಕೆಲಸಮಾಡುತ್ತಿರುವ ಕರ್ತೃಸ್ವರೂಪನು' ಎಂದು ತಿಳಿಯುವದೇ ಯುಕ್ತವಲ್ಲವೆ?

    ಈ ತರ್ಕಸರಣಿಯು ಸರಿಯಲ್ಲ. ಏಕೆಂದರೆ ನಮ್ಮ ಅನುಭವದಲ್ಲಿ ಯಾವದನ್ನು ನಾನೆಂದು ತಿಳಿದಿರುವೆವೋ ಅದೇ ನಮ್ಮ ಆತ್ಮನೆಂದೂ ಅದಕ್ಕಿಂತ ಬೇರೆಯಾಗಿ ಅದರ ಸ್ವರೂಪವು ಇಲ್ಲವೇ ಇಲ್ಲವೆಂದೂ ನಂಬುವದು ಕುರುಡರಿಗೆ ಬೆಳಕೆಂಬುದು ಕಾಣುವದಿಲ್ಲವಾದ್ದರಿಂದ ಬೆಳಕೆಂಬ ವಸ್ತುವೇ ಇಲ್ಲವೆಂದು ನಿಶ್ಚಯಿಸುವ ಅಪಸಿದ್ಧಾಂತವನ್ನು ಹೋಲುತ್ತದೆ ಪ್ರಪಂಚದ ವ್ಯವಹಾರದಲ್ಲಿಯೇ ನಿರತರಾಗಿರುವ ಪ್ರಾಕೃತಜನರು ಉಣ್ಣುವದು, ತಿನ್ನುವದು, ಕುಡಿಯುವದು, ನಿದ್ರಿಸುವದು - ಇಷ್ಟೇ ಜೀವನದಲ್ಲಿ ಪರಮಪುರುಷಾರ್ಥವೆಂದು ತಿಳಿಯಬಹುದು. ಅಷ್ಟುಮಾತ್ರದಿಂದ ಪ್ರಪಂಚದಲ್ಲಿ ವಿವೇಕಿಗಳಿಗೂ ಅದೇ ಪುರುಷಾರ್ಥವೆನಿಸೀತೆ? ಚಾರ್ವಾಕಸಿದ್ಧಾಂತದವರು ಪ್ರತ್ಯಕ್ಷದಿಂದ ಕಾಣದೆ ಇರುವ ಪದಾರ್ಥಗಳು ಇಲ್ಲವೆಂದೂ ಶರೀರವೇ ನಮ್ಮ ಸ್ವರೂಪವು, ಶರೀರದ ಸುಖಕ್ಕಾಗಿಯೇ ನಮ್ಮ ಜೀವನವನ್ನು ಮಿಸಲಾಗಿಟ್ಟುಕೊಳ್ಳುವದು ನ್ಯಾಯವು ಎಂದೂ ವಾದಿಸಬಹುದು. ದೇಹವನ್ನು ನಾನು ಎಂದು ವ್ಯವಹರಿಸುತ್ತೇವೆಂಬ ಅನುಭವವನ್ನು ಅದಕ್ಕೆ ಪ್ರಮಾಣವಾಗಿ ಉದಾಹರಿಸಲೂಬಹುದು. 'ನಾನು ಬೆಳ್ಳಗಿದ್ದೇನೆ, ಕರ್ರಗಿದ್ದೇನೆ, ಆಗ ದಪ್ಪನಾಗಿದ್ದೆನು, ಈಗ ಕೃಶನಾದೆನು; ಕೂರುತ್ತೇನೆ, ಹಾರುತ್ತೇನೆ' - ಎಂದು ಮುಂತಾಗಿ ಆಗುವ ಪ್ರತ್ಯಯಗಳ ಬಲದಿಂದ ದೇಹಕ್ಕಿಂತ ವ್ಯತಿರಿಕ್ತವಾಗಿ ಏನು ಇಲ್ಲವೆಂದೇ ವಾದಿಸಬಹುದು ಆದ ಮಾತ್ರಕ್ಕೆ ದೇಹಕ್ಕಿಂತ ಬೇರೆಯಾಗಿರುವ ನಮ್ಮ ಅನುಭವಗಳು ಸುಳ್ಳೆಂದಾಗುವದೆ? ಇಲ್ಲ ಮನುಷ್ಯನು ಸತ್ತಮೇಲೂ ಶರೀರವು ಸ್ವಲ್ಪ ಕಾಲದವರೆಗೆ ಇರುತ್ತದೆ; ಆದರೆ ಆಗ ಅದನ್ನು ಇವನು ನಮ್ಮ ತಂದೆ, ಮಗ, ಅಣ್ಣ, ತಮ್ಮ- ಎಂದು ಯಾರೂ ಮೊದಲಿನಿಂತೆ ಪ್ರೀತಿಸುವದಿಲ್ಲ. ಆ ಶರೀರವು ಕೊಳೆತುಹೋಗುವದೆಂದು ಎಲ್ಲರಿಗೂ ಗೊತ್ತಾದ್ದರಿಂದ ಅದನ್ನು ಹೂತು ಬಿಡುತ್ತಾರೆ, ಅಥವಾ ಸುಟ್ಟುಬಿಡುತ್ತಾರೆ ಆದ್ದರಿಂದ ದೇಹವು ಆತ್ಮನಲ್ಲ.
   
    ಹಾಗಾದರೆ ಪ್ರಾಣವೇ ಆತ್ಮನು - ಎಂದು ಯಾರಾದರೂ ವಾದಿಸಬಹುದು. ಏಕೆಂದರೆ ಪ್ರಾಣದಿಂದಲೇ ಮನುಷ್ಯನು ಬದುಕಿರುತ್ತಾನೆ; ಮನುಷ್ಯನ ಎಲ್ಲಾ ಚಲನವಲನಗಳೂ ಪ್ರಾಣದ ಬಲದಿಂದಲೇ ಆಗುತ್ತಿರುತ್ತವೆ- ಎಂಬ ಯುಕ್ತಿಯಿದೆ. ಪ್ರಾಣವಿಲ್ಲದ ಮನುಷ್ಯನ ಪ್ರತಿಕೃತಿಯನ್ನು ಮಣ್ಣಿನಿಂದ, ಕಲ್ಲಿನಿಂದ ಅಥವಾ ಮತ್ತೆ ಯಾವದಾದರೊಮದು ದ್ರವ್ಯದಿಂದ ಮಾಡಿಸಿಟ್ಟಮಾತ್ರದಿಂದ ಅದನ್ನು ಮನುಷ್ಯನೆಂದೇನೂ ನಾವು ತಿಳಿಯುವದಿಲ್ಲ ಎಂಬ ವ್ಯತಿರೇಕಾನುಮಾನವೂ ಇದೆ ಆದ್ದರಿಂದ ಪ್ರಾಣವೇ ಆತ್ಮನೆಂದಾಗಲಿ ಎಂದರೆ ಅದೂ ಸರಿಯಲ್ಲ; ಏಕೆಂದರೆ ಪ್ರಾಣಕ್ಕೆ ನಾನು ಎಂಬ ಅರಿವು ಇರುವದಿಲ್ಲ. 'ನಾನು ಇದನ್ನು ಅರಿಯುತ್ತೇನೆ' ಎಂಬ ಭಾವನೆಯು ನಮಗೆಲ್ಲ ಇರುತ್ತದೆ; ಅದರ ಬಲದಿಂದಲೇ ಪ್ರಾಣವು ನಮ್ಮ ಶರೀರದಲ್ಲಿದೆ ಎಂದು ಗೊತ್ತಾಗುತ್ತದೆ. ಆ ನನ್ನ ಅರಿವಿಗೆ ಪ್ರಾಣವು ವಿಷಯವಾಗಿರುತ್ತದೆ ಆದ್ದರಿಂದ ನಾನೆಂಬ ಆತ್ಮಸ್ವರೂಪಕ್ಕೆ ಹೊರಚ್ಚಾಗಿರುವ ಪ್ರಾಣವು ಹೇಗೆ ತಾನೆ ನನ್ನ ಆತ್ಮವಾದೀತು? ನನ್ನ ಸ್ವರೂಪಕ್ಕೇ ನಾನೆಂಬ ಅರಿವು ಇಲ್ಲ - ಎನ್ನಬಹುದೆ?
   
    ಇನ್ನು ಇಂದ್ರಿಯಗಳಿಗೆ ಅರಿಯುವ ಶಕ್ತಿ ಇರುವದರಿಂದ ಅವನ್ನೇ ಆತ್ಮವೆನ್ನೋಣವೆ? ಎಂದರೆ ಅದೂ ಆಗುವಂತಿಲ್ಲ ಏಕೆಂದರೆ ಇಂದ್ರಿಯಗಳು ಅನೇಕವಾಗಿವೆ; ನಾನು ಅನೇಕರು ಎಂದು ಯಾರೂ ಬಗೆಯುವದಿಲ್ಲ ನಾನು ಅನೇಕರಾಗಿದ್ದರೆ ನನ್ನ ಸ್ವಾರ್ಥವನ್ನು ಸಂಪಾದಿಸಿಕೊಳ್ಳುವದಕ್ಕೆ ಆಗುತ್ತಿರಲಿಲ್ಲ; ಕಣ್ಣು ಕಂಡದ್ದನ್ನಾಗಲಿ ಕೇಳಿದ್ದನ್ನಾಗಲಿ ನನ್ನ ವಶಕ್ಕೆ ತೆಗೆದುಕೊಳ್ಳಬೇಕು ಅಥವಾ ನನ್ನಿಂದ ದುರವಾಗಿರಿಸಿಕೊಳ್ಳಬೇಕು ಎಂದು ಪ್ರಯತ್ನಿಸುವದು ಆಗುತ್ತಿರಲಿಲ್ಲ ಈಗ್ಗೆ ಹೀಗಿಲ್ಲ ಶರೀರೇಂದ್ರಿಯಗಳೆಲ್ಲ ಸೇರಿ ತಮ್ಮತಮ್ಮ ಕಾರ್ಯವನ್ನು ಒಂದಕ್ಕೊಂದು ಹೊಂದುಗೆಯಾಗಿ ಮಾಡಿಕೊಂಡು 'ನಾನು' ಎಂಬ ಆತ್ಮನಿಗಾಗಿ ದುಡಿಯುತ್ತಿರುತ್ತವೆ. ಕಿವಿಯಿಂದ ಕೇಳಿದ ಒಂದು ಶಬ್ದದತ್ತ ಕತ್ತನ್ನು ತಿರುಗಿಸಿ ನೋಡಿದಾಗ ಕಣ್ಣಿಗೆ ಅಲ್ಲಿ ಒಂದು ಹಣ್ಣು ಬೀಳುತ್ತಿದೆ ಎಂದು ತಿಳಿಯಬರಲು ಕಾಲಿನಿಮದ ಅಲ್ಲಿಗೆ ನಡೆದು ಕೈಯಿಂದ ತೆಗೆದುಕೊಂಡು ಅದನ್ನು ತಿನ್ನುವದಕ್ಕೆ ಪ್ರಯತ್ನಿಸುವೆವೆಂಬುದು ನಮ್ಮೆಲ್ಲರಿಗೂ ಅನುಭವಸಿದ್ಧವಗಿದೆ ಆದ್ದರಿಮದ ಈ ಎಲ್ಲಾ ಕರಣಗಳೂ ಯಾವನಿಗಾಗಿ ಕೆಲಸಮಾಡುತ್ತಿರುವವೋ ಆ ನಾನೇ ಆತ್ಮನು ಎಂದಾಗುತ್ತದೆ.


    ಒಳ್ಳೆಯದು, ಇಂದ್ರಿಯಗಳಿಂದ ಉಂಟಾಗುವ ಎಲ್ಲಾ ತಿಳಿವಳಿಕೆಗಳೂ ಮನಸ್ಸಿನಲ್ಲಿ ಉಂಟಾಗುತ್ತವೆ; ಅವನ್ನು ಒಂದುಗೂಡಿಸಿ ಇದನ್ನು ಒಂದು ಹಣ್ಣು ಎಂದು ನಿಶ್ಚಯಿಸುವ ಬುದ್ಧಿಯೂ ನಮ್ಮಲ್ಲಿರುತ್ತದೆಯಲ್ಲ! ಅದೇ ಏಕೆ ನಮ್ಮ ಆತ್ಮನಾಗಿಬಿಡಬಾರದು? ಎಂದರೆ ಇದೂ ಸರಿಯಾಗುವದಿಲ್ಲ ಏಕೆಂದರೆ ಬುದ್ಧಿಯು ಚಂಚಲವಾಗಿರುತ್ತದೆ; ಒಂದೊಂದು ಕ್ಷಣದಲ್ಲಿ ನಮಗೆ ಒಂದೊಂದು ಬುದ್ಧಿಯುಂಟಾಗುತ್ತಿರುತ್ತದೆ ಬುದ್ಧಿಯೇ ನಾನು ಎಂಬುದರ ಸ್ವರೂಪವೆಂದಾದರೆ ನಾನು ಒಂದೊಂದು ಗಳಿಗೆಗೂ ಬದಲಾಯಿಸುತ್ತಿರುವೆನೆಂದಾಗುವದು ಬುದ್ಧಿಯು ಇಲ್ಲವಾದರೆ ನಾನೇ ಇಲ್ಲವಾದೆನೆಂದೂ ಅದು ಎದ್ದುಕೊಂಡರೆ ನಾನೇ ಎದ್ದುಕೊಂಡೆನೆಂದೂ ತಿಳಿಯಬೇಕಾಗುವದು ಬುದ್ಧಿಯು ಮಂಕಾಗಿರುವದು ವಿಕಾಸಹೊಂದುವದು ಮುಂತಾದ ಮಾರ್ಪಾಡುಗಳನ್ನು ಹೊಂದುತ್ತಿರುವದು ಅನುಭವದಲ್ಲಿದೆ ಆದರೆ ಆ ಮಾರ್ಪಾಡುಗಳೆಲ್ಲ ನನಗೆ ಆಗುತ್ತವೆಯೆಂದು ಹೇಳುವದು ಸರಿಯಾಗುವದಿಲ್ಲ ಯಾರಾದರೂ ಹಾಗೆಂದು ಬಗೆದರೆ, ಆ ಮಾರ್ಪಾಡುಗಳನ್ನೆಲ್ಲ ನೋಡಿದವರು ಯಾರು? ಎಂದು ಅವರನ್ನು ಕೇಳಬೇಕು ತಾನೇ ತನ್ನ ಮಾರ್ಪಾಡುಗಳನ್ನು ಅರಿಯುವದು ಆಗಲಾರದಷ್ಟೇ? ಆದ್ದರಿಂದ ಅವನ್ನೆಲ್ಲ ಅರಿಯುತ್ತಾ ತನ್ನಲ್ಲಿ ಯಾವ ಮಾರ್ಪಾಡೂ ಇಲ್ಲದ ಕೂಟಸ್ಥರೂಪವೊಂದು ಇದೆ ಎಂದಾಯಿತು ಆ ಸ್ವರೂಪದಿಂದಲೇ ನಾವು ದೇಹೇಂದ್ರಿಯಪ್ರಾಣ ಬುದ್ಧಿಗಳನ್ನು ನೋಡುತ್ತಾ ಇರುತ್ತೇವೆ ಆ ಕೂಟಸ್ಥರೂಪವೇ ನಮ್ಮ ನಿಜವಾದ ಆತ್ಮನು ತಿಳಿದೋ ತಿಳಿಯದೆಯೋ ನಾವೆಲ್ಲರೂ ಅದನ್ನೇ ನಾನು ಎಂಬ ಶಬ್ದದಿಂದ ಕರೆಯುತ್ತಿರುತ್ತೇವೆ ಇದೇ ನಿಜವಾದ ತಿಳಿವಳಿಕೆ ಮಿಕ್ಕದ್ದೆಲ್ಲವೂ ಭ್ರಾಂತಿ.

    ಇಲ್ಲೊಂದು ಪ್ರಶ್ನೆ, ಹಾಗಾದರೆ ದೇಹಾದಿಗಳನ್ನೇ ನಾನು ಎಂದು ಜನರು ತಪ್ಪಾಗಿ ತಿಳಿಯುವದಕ್ಕೆ ಕಾರಣವೇನು? ನಮ್ಮೊಳಗೆ ನಾನು ಎಂಬ ರೂಪವೂ ಇದೆ ನಾನಲ್ಲದ ದೇಹಾದಿಗಳೂ ಇವೆ. ಇವುಗಳೊಳಗೆ ನಾನು ಎಂಬ ರೂಪವನ್ನೇ ನಾನು ಎಂದುಕೊಳ್ಳದೆ, ನಾನಲ್ಲದ್ದನ್ನೇ ನಾನು ಎಂದು ಜನರು ತಿಳಿದುಕೊಳ್ಳುತ್ತಿರುವದಕ್ಕೆ ಕಾರಣವೇನು? ಇದಕ್ಕೆ ಉತ್ತರವನ್ನು ಹೇಳುವದಕ್ಕಾಗಿ ಒಂದು ದೃಷ್ಟಾಂತವನ್ನು ಕೊಡಬಹುದು. ಒಬ್ಬ ಉದ್ಯೋಗಸ್ಥನಿಗೆ ಒಬ್ಬಳು ಹೆಂಡತಿಯೂ ಇಬ್ಬರು ಮೂವರು ಮಕ್ಕಳೂ ಇರುತ್ತಾರೆಂದು ಇಟ್ಟುಕೊಳ್ಳೊಣ ಅವನು ಕಚೇರಿಯಿಂದ ಮನೆಗೆ ಬಂದಾಗ ಪೇಟೆಯಲ್ಲಿ ಮಕ್ಕಳಿಗೆಂದು ಕೆಲವು ಹಣ್ಣುಗಳನ್ನು ತೆಗೆದುಕೊಂಡು ಬಂದಿರುತ್ತಾನೆ ಅವನು ಅಂಗಿಯ ಜೇಬಿನಲ್ಲಿ ಕೆಲವು ಬಿಡಿ ನಯೆಪೈಸೆಗಳನ್ನು ಮಕ್ಕಳಿಗೆ ಕೊಡುವದಕ್ಕೆಂದು ಇಟ್ಟುಕೊಂಡಿರುತ್ತಾನೆ ತನ್ನ ಸಂಬಳದ ಹಣವನ್ನು ಒಂದು ಸಣ್ಣ ಚೀಲದಲ್ಲಿ ಹಾಕಿ ಇಟ್ಟುಕೊಂಡಿರುತ್ತಾನೆ ತನ್ನ ಸಂಬಳದ ಹಣವನ್ನು ಒಂದು ಸಣ್ಣ ಚೀಲದಲ್ಲಿ ಹಾಕಿ ಇಟ್ಟುಕೊಂಡಿರುತ್ತಾನೆ ತನ್ನ ಸಂಬಳದ ಹಣವನ್ನು ಒಂದು ಸಣ್ಣ ಚೀಲದಲ್ಲಿ ಹಾಕಿ ಇಟ್ಟುಕೊಂಡಿರುತ್ತಾನೆ ಅವನ ಮಕ್ಕಳಲ್ಲಿ ಒಬ್ಬನು ಅವನು ತಂದ ಕೈಚೀಲದಲ್ಲಿ ಯಾವಾಗಲೂ ನಯೆಪೈಸೆಗಳಿರುತ್ತವೆಯೆಂದೂ ಮತ್ತೊಬ್ಬನು ಅವನ ಜೇಬಿನಲ್ಲಿ ಯಾವಾಗಲೂ ನಯೆಪೈಸೆಗಳಿರುತ್ತವೆಯೆಂದೂ ತಿಳಿವಳಿಕೆ ಸಾಲದ ಅವನ ಹೆಂಡತಿಯು ಅವನ ಜೇಬಿನಲ್ಲಿ ಯಾವಾಗಲೂ ನೋಡುಗಳಿರುವವೆಂದು ತಿಳಿದುಕೊಂಡರೆ ಕುರುಡನಾದ ಅವನ ಮಗನೊಬ್ಬನು ಅವನ ಮೈಮೇಲೆ ಇರುವ ಒಂದು ರಂಧ್ರದಲ್ಲಿ ಯಾವದೋ ದುಂಡನೆಯ ಬಿಲ್ಲೆಗಳಿರುವವೆಂದೂ ಅವುಗಳಿಂದ ಮಿಠಾಯಿ ಕೊಂಡುಕೊಳ್ಳಬಹುದೆಂದೂ ಕಲ್ಪಿಸಿದರೆ - ಅವನ ಆ ತಿಳಿವಳಿಕೆಯ ಸರಿಯೆಂದಾದೀತೇ? ಅವೆಲ್ಲ ಅವರ ಏಕದೇಶ ಕಲ್ಪನೆಗಳಲ್ಲವೆ? ಅವನ ತಿಳಿವಳಿಕೆಯಲ್ಲಿ ನಿಜವಾಗಿರುವದು ಇಲ್ಲದ್ದು ಈ ಎರಡರ ಕಲಬೆರಕೆಯಾಗಿರುವದಷ್ಟೆ? ಅದರಂತೆಯೇ ಸಾಮಾನ್ಯಜನರು ತಮ್ಮ ದೇಹ, ಪ್ರಾಣ, ಇಂದ್ರಿಯ, ಬುದ್ಧಿ - ಇವುಗಳನ್ನು ನಾನು ಎಂದು ತಿಳಿದುಕೊಂಡಿರುವದಕ್ಕೆ ನಿಜವಾಗಿ ಇರುವದು ಇಲ್ಲದ್ದು ಈ ಎರಡನ್ನೂ ವಿಂಗಡಿಸಿಕೊಳ್ಳದ್ದರಿಂದಾದ ತಪ್ಪುತಿಳಿವಳಿಕೆಯೇ ಕಾರಣವೆಂದು ನಿಶ್ಚಯಿಸಬೇಕು.

    ದೃಷ್ಟಾಂತದಲ್ಲಿ ಆ ಹುಡುಗರೂ ಹೆಂಡತಿಯೂ ಆ ಉದ್ಯೋಗಸ್ಥನ ಅಂಗಿಯ ಜೇಬಿನಲ್ಲಿ ಹಣದ ಚೀಲದಲ್ಲಿ ಅಥವಾ ಕೈಚೀಲದಲ್ಲಿ ಹಣವನ್ನೂ ಹಣ್ಣನ್ನೂ ಕಂಡದ್ದೂ ಸುಳ್ಳಲ್ಲ; ಆದರೆ ಆ ಹಣವು ಅಥವಾ ಹಣ್ಣು ಆ ಜೇಬಿಗೆ ಹಣದ ಚೀಲಕ್ಕೆ ಅಥವಾ ಕೈಚೀಲಕ್ಕೆ ಸ್ವಭಾವದಿಂದ ಸೇರಿದವಲ್ಲ ಜೇಬು ಅಥವಾ ಚೀಲದಲ್ಲಿ ಹಣವನ್ನಿಟ್ಟರೆ ಇರುತ್ತದೆ, ಇಲ್ಲದಿದ್ದರೆ ಇಲ್ಲ ಈ ವಿವೇಕವು ಅವನ ಮನೆಯವರಿಗೆ ಇಲ್ಲದೆ ಹೋಗಿರುತ್ತದೆ ಇದರಂತೆ ಆತ್ಮನಲ್ಲಿರುವ ಚೈತನ್ಯದ ನೆರಳು ಬುದ್ಧಿ, ಇಂದ್ರಿಯ, ಪ್ರಾಣ, ದೇಹ ಇವುಗಳಲ್ಲಿ ಆಗಾಗ್ಗೆ ತೋರಿಕೊಂಡಿರುತ್ತದೆ ಅದು ಅವುಗಳಿಗೆ ಸ್ವಭಾವದಿಂದ ಸೇರಿರುವದಿಲ್ಲ ಇದನ್ನರಿಯದೆ ಜನರು ತಿಳಿವಳಿಕೆ ಸಾಲದ ಸ್ತ್ರೀಯರಂತೆಯೂ ಹುಡುಗರಂತೆಯೂ, ಕುರುಡರಂತೆಯೂ ಚೈತನ್ಯವು ಆ ದೇಹಾದಿಗಳಿಗೇ ಸೇರಿದ್ದೆಮದು ಭ್ರಾಂತರಾಗಿಬಿಟ್ಟಿರುತ್ತಾರೆ. ಇನ್ನೊಂದು ಹೋಲಿಕೆಯನ್ನು ದೃಷ್ಟಾಂತದಾರ್ಷ್ಟಾಂತಿಕಗಳಿಗೆ ಕೊಡಬಹುದು ಚೀಲದಲ್ಲಿ ಹಣ್ಣೇ ಇರಬೇಕು ಅಥವಾ ಹಣವೇ ಇರಬೇಕು ಎಂಬ ನಿಯಮವು ಹೇಗೆ ಇರುವದಿಲ್ಲವೋ ಹಾಗೆಯೇ ಹಣ್ಣೂ ಹಣವೂ ಚೀಲದಲ್ಲಿಯೇ ಇರಬೇಕೆಂಬ ನಿಯಮವೂ ಇರುವದಿಲ್ಲ ಇದರಂತೆ ದೇಹಪ್ರಾಣಾದಿಗಳು ಚೈತನ್ಯಯುಕ್ತವಾಗಿಯೇ ಇರಬೇಕೆಂಬ ನಿಯಮವು ಹೇಗಿಲ್ಲವೋ, ಹಾಗೆಯೇ ಚೈತನ್ಯವು ಈ ದೇಹಾದಿಗಳಲ್ಲಿಯೇ ಇರಬೇಕೆಂಬ ನಿಯಮವೂ ಇರುವದಿಲ್ಲ ಉದಾಹರಣೆಗೆ ಕನಸಿನಲ್ಲಿ ನಮ್ಮ ಆತ್ಮಚೈತನ್ಯಕೆ ಎಚ್ಚರದಲ್ಲಿ ಈಗ ಕಾಣುತ್ತಿರುವ ದೇಹ ಪ್ರಾಣೇಂದ್ರಿಯಗಳು ಯಾವವೂ ಗಂಟುಬಿದ್ದಿರುವದಿಲ್ಲ ಆದರೂ ನಾವು ಅಲ್ಲಿಯೂ ದೇಹಾದಿಗಳೊಳಗೇ ಅದು ಇರುವವೆಂದು ಕಲ್ಪಿಸಿಕೊಮಡಿರುವೆವು ಇನ್ನು ಸುಷುಪ್ತಿಯ ಅನುಭವವನು ಲೆಕ್ಕಕ್ಕೆ ತೆಗೆದುಕೊಂಡರಂತೂ ನಮ್ಮ ಆತ್ಮಕ್ಕೆ ಯಾವ ದೇಹಾದಿಗಳ ಹಂಗೂ ಇರುವದೇ ಇಲ್ಲ ಆದ್ದರಿಂದ ದೇಹಾದಿಗಳು ನಾನು ಎಂದು ತಿಳಿದಿರುವದು ಬರಿಯ ಭ್ರಾಂತಿಯೆಂಬುದಿಷ್ಟೇ ಅಲ್ಲ ನಮ್ಮ ಆತ್ಮನಿಗೆ ಯಾವಾಗಲೂ ದೇಹಾದಿಗಳ ಸಂಬಂಧವಿರುವದೆಂಬುದೂ ಆ ಆತ್ಮನು ಯಾವಾಗಲೂ ದೇಹಾದಿಗಳೊಳಗೇ ಇರುವನೆಂಬುದೂ ಭ್ರಾಂತಿಯೇ ಎಂದಾಯಿತು.

    ಈಗ ನಾನು ದೇಹವು, ಪ್ರಾಣವು, ಇಂದ್ರಿಯವು ಅಥವಾ ಬುದ್ಧಿಯು ಎಂದು ತಿಳಿಯುವ ಭ್ರಾಂತಿಯ ಸ್ವರೂಪವನ್ನು ಇನ್ನಷ್ಟು ಬಿಡಿಸಿನೋಡೋಣ ಆತ್ಮನೆಂಬುದು ಚೈತನ್ಯವು ಬರಿಯ ಅರಿವಿನ ಸ್ವಭಾವದ್ದು ದೇಹಾದಿಗಳು ಅಚೇತನಗಳು ತಮ್ಮಲ್ಲಿ ಯಾವ ಚೈತನ್ಯವೂ ಇಲ್ಲ ತೋರಿಕೆಗಳು ಆತ್ಮಚೈತನ್ಯವು ಯಾವಾಗಲೂ ತನ್ನ ರೂಪದಲ್ಲಿಯೇ ಇದ್ದುಕೊಂಡಿರುತ್ತದೆ; ಎಚ್ಚರದಲ್ಲಾಗಲಿ ತನಿನಿದ್ರೆಯಲ್ಲಾಗಲಿ ಈ ಚೈತನ್ಯಸ್ವರೂಪದಲ್ಲಿ ಯಾವ ಹೆಚ್ಚುಕಡಿಮೆಯೂ ಇರುವದಿಲ್ಲ. ದೇಹಾದಿಗಳು ಹೀಗಲ್ಲ. ಇವು ಎಚ್ಚರದಲ್ಲಿರುವಾಗಲೇ ಬೆಳೆಯುವದು, ಸವೆಯುವದು, ಸೊರಗುವದು - ಮುಂತಾದ ಹೆಚ್ಚುಕಡಿಮೆಗಳನ್ನು ಅನುಭವಿಸುತ್ತಿರುತ್ತವೆ. ಕನಸಿನಲ್ಲಿ ಇವು ಇರುವದೇ ಇಲ್ಲ ದೇಹಾದಿಗಳಂತೆ ತೋರುವ ಕೆಲವು ತೋರಿಕೆಗಳು ಅಲ್ಲಿರುವದು ನಿಜ; ಆದರೆ ಅವನ್ನು ಈ ದೇಹಾದಿಗಳೆಂದಾಗಲಿ ಇವಕ್ಕಿಂತ ಬೇರೆಯಾದ ನಿಜವಾದ ದೇಹಾದಿಗಳೆಂದಾಗಲಿ ನಾವುಗಳು ಬಗೆಯುತ್ತಿಲ್ಲ ಸುಷುಪ್ತಿಯಲ್ಲಂತೂ ಯಾವ ದೇಹಾದಿಗಳು ಅಥವಾ ದೇಹಾದಿಗಳ ಹುಸಿತೋರಿಕೆಗಳೂ ಇರುವದೇ ಇಲ್ಲ ಹೀಗೆ ಆತ್ಮಚೈತನ್ಯವು ಕುಟಸ್ಥವಾಗಿ ತನ್ನ ಸ್ವರೂಪದಲ್ಲಿ ಯಾವ ಹೆಚ್ಚುಕಡಿಮೆಯೂ ಇಲ್ಲದೆ ಒಂದೇ ರೂಪದಿಂದ ಇದ್ದುಕೊಂಡಿರುವ ಸತ್ಯವಸ್ತು; ದೇಹಾದಿಗಳು ಇದ್ದಂತೆ ಇಲ್ಲದೆ ಮಾರ್ಪಡುತ್ತಿರುವ ಮತ್ತು ಸುಷುಪ್ತ್ಯಾದಿಗಳಲ್ಲಿ ಸ್ವರೂಪವೇ ಇಲ್ಲದ ಅನೃತವಸ್ತು ಹೀಗೆ ಚೇತನವೂ ಅಚೇತನವೂ ಸತ್ಯವೂ ಅನೃತವೂ ಆಗಿರುವ ಅತ್ಯಂತವಿರುದ್ಧ ಸ್ವಭಾವದ ಆ ಆತ್ಮಾನಾತ್ಮಗಳೆರಡನ್ನೂ ಜನರು ತಮ್ಮ ಬುದ್ಧಿಯಲ್ಲಿ ಕಲೆಬೆರಕೆ ಮಾಡಿಕೊಂಡಿರುತ್ತಾರೆ. ಸತ್ಯವಾದ ಆತ್ಮನ ಸ್ವರೂಪವನ್ನು ಅನೃತವಾದ ದೇಹಾದಿಗಳಂತೆ ಮಾರ್ಪಡುವವನೆಂದು ತಿಳಿದುಕೊಮಡಿರುತ್ತಾರೆ ಅನೃತವಾಗಿ ಅಚೇತನಗಳಾಗಿರುವ ದೇಹಾದಿಗಳನ್ನೂ ಸತ್ಯವಾಗಿ ಚೈತನ್ಯಸ್ವರೂಪನಾಗಿರುವ ಆತ್ಮನಂತೆಯೇ ನಿತ್ಯವಾಗಿ ಇದ್ದುಕೊಂಡು ಚೇತನವಾಗಿರುವವೆಂದು ತಪ್ಪಾಗಿ ಎಣಿಸಿಕೊಂಡಿರುತ್ತಾರೆ ಎಂದಾಯಿತು.

    ಇನ್ನೂ ಒಂದು ಅಂಶವು ಈ ಭ್ರಾಂತಿಯಲ್ಲಿ ಅಡಗಿರುತ್ತದೆ. ದೇಹ, ಪ್ರಾಣ, ಮನಸ್ಸು ಬುದ್ಧಿ - ಇವುಗಳಲ್ಲಿ ಯಾವದೊಂದೊ 'ನಾನು' ಎನಿಸಿಕೊಳ್ಳುವದಕ್ಕೆ ಅರ್ಹವಾಗಿರುವದಿಲ್ಲ. ಏಕೆಂದರೆ ಅವುಗಳೆಲ್ಲ ಆತ್ಮಚೈತನ್ಯಕ್ಕೆ ವಿಷಯವಾಗಿ ತೋರಿಕೊಳ್ಳುವದರಿಂದ 'ಇದು' ಎನಿಸಿಕೊಳ್ಳುವದಕ್ಕೆ ತಕ್ಕವಾಗಿರುತ್ತವೆ. ಇನ್ನು ಬರಿಯ ಆತ್ಮಚೈತನ್ಯವೂ ನಾನು ಎನಿಸಿಕೊಳ್ಳುವದಕ್ಕೆ ತಕ್ಕದ್ದಾಗಿಲ್ಲ ಏಕೆಂದರೆ ನಾನು ಎಂಬುದು 'ನೀನು', 'ಇದು' ಎಂಬುದಕ್ಕೆ ಪ್ರತಿದ್ವಂದ್ವಿಯಾದ ಶಬ್ದವು ಆದರೆ ಚೈತನ್ಯಸ್ವರೂಪವು ಸುಷುಪ್ತಿಯಲ್ಲಿ ತಾನೊಂದೇ ಇರುವದರಿಂದ ನಾನು ಎಂದು ಅನುಭವಕ್ಕೆ ಬರುತ್ತಲೇ ಇಲ್ಲ ಕನಸಿನಲ್ಲಿ ನಾನು ಎಂದು ತೋರಿಬರುತ್ತಿದ್ದರೂ ಅಲ್ಲಿರುವ 'ಇದು' ಎನಿಸಿಕೊಳ್ಳುವ ತೋರಿಕೆಗಳೆಲ್ಲ ಹುಸಿತೋರಿಕೆಗಳೇ ಆಗಿರುವದರಿಂದ ಅದು ನಾನು ಎಂದು ತೋರುವದೆಂಬುದೂ ಹುಸಿಯೇ ಎಂದಾಯಿತು ಹೀಗೆ ನೋಡಿದರೆ ನಮ್ಮ ನಿಜವಾದ ಆತ್ಮ ಮತ್ತು ಅನಾತ್ಮ ಈ ಎರಡರಲ್ಲಿ ಯಾವದೊಂದೂ ನಾನು ಎನಿಸಿಕೊಳ್ಳುವದಕ್ಕೆ ಅರ್ಹವಲ್ಲವೆಂದಾಯಿತು. ಹೀಗಿದ್ದರೂ ಸತ್ಯನೃತಗಳಾದ ಆತ್ಮ, ಅನಾತ್ಮ ಈ ಎರಡರ ಕಲಬೆರಕೆಯಿಂದಾದ ಭ್ರಾಂತಿಯಲ್ಲಿ ಈ 'ಅಹಂತ್ವ'(ನಾನು ಎನ್ನುವಿಕೆ)ವು ಆತ್ಮನ ಮೇಲೆ ಕುತಿರುತ್ತದೆ.

    ಈ ರೀತಿಯಲ್ಲಿ ನಾನು ಎಂಬ ಅರಿವಿಗೆ ಗೋಚರವಾದ ವಸ್ತುವೇ ನಿಜವಾಗಿ ಯಾವದೂ ಇಲ್ಲದಿದ್ದರೂ ಆತ್ಮನು ನಾನು ಎಂದು ತೋರುತ್ತಿರುವದೇಕೆಂಬುದನ್ನು ತಿಳಿಯುವದಕ್ಕೆ ಸುಷುಪ್ತಿಯ ಅನುಭವವನ್ನು ಮತ್ತಷ್ಟು ಬಿಡಿಸಬೇಕಾಗುತ್ತದೆ. ಸುಷುಪ್ತಿಯಲ್ಲಿ ನೀನಿಲ್ಲ, ಅವನಿಲ್ಲ, ಮತ್ತೆ ಯಾವ ಪ್ರಾಣಿಗಳೂ ಇಲ್ಲ; ಅಲ್ಲಿ ನಾನು ಎಂಬ ಅರಿವೂ ಇರುವದಿಲ್ಲ ಜಾಗ್ರತ್ಸ್ವಪ್ನಗಳಲ್ಲಿ ಮಾತ್ರವೇ ನಾನು, ನೀನು, ಇವರು ಎಂಬ ಅರಿವೂ ಉಂಟಾಗುತ್ತದೆ. ಅರಿವಿನ ಸ್ವರೂಪವನ್ನು ನೋಡಿದರೆ ಅದಕ್ಕೆ ಯಾವ ವಿಭಾಗವನ್ನೂ ಕಲ್ಪಿಸುವದಕ್ಕೆ ಆಗದೆ ಇದ್ದರೂ ದೊಡ್ಡದೊಂದು ಕೆರೆಯ ನೀರು ಸ್ವಲ್ಪ ಒಣಗಿದ್ದಾಗ ನಡುವೆ ಎದ್ದುಕೊಂಡ ಭೂಭಾಗದಿಂದ 'ಆಚೆಯ ಕೆರೆ', 'ಈಚೆಯ ಕೆರೆ' ಎಂದು ಒಂದೇ ಕೆರೆಯಲ್ಲಿ ಎರಡು ಭಾಗವನ್ನು ಮಾಡಿ ವ್ಯವಹರಿಸುವದಿಲ್ಲವೆ? ಹಾಗೆಯೇ ಆತ್ಮಚೈತನ್ಯವು ಅಖಂಡವಾಗಿ ಒಂದೇ ಆಗಿದ್ದರೂ ಎಚ್ಚಕನಸುಗಳಲ್ಲಿ ತೋರಿಕೊಳ್ಳುವ ನಾಮರೂಪಗಳ ಮಾಯೆಯ ತೋರಿಕೆಯಿಂದ ನಾನು, ನೀನು, ಇವರು ಮುಂತಾದ ವಿಭಾಗಗಳ ಅರಿವು ಎದ್ದುಕೊಳ್ಳುತ್ತದೆ. ಮಾಯೆ ಎಂದರೆ ಅವಿದ್ಯಾ ಕಲ್ಪಿತವಾದ ಹುಸಿತೋರಿಕೆ ಈ ಹುಸಿತೋರಿಕೆಯು ಜೀವರ ಸುಷುಪ್ತಿಯಲ್ಲಿ ಬೀಜರೂಪದಿಂದ ಇದ್ದುಕೊಂಡಿದ್ದು ಅವರು ಎಚ್ಚರುತ್ತಲೂ ವಿಭಕ್ತವಾಗಿ ಹರಡಿಕೊಳ್ಳುವದು ಶರೀರ, ಪ್ರಾಣ, ಇಂದ್ರಿಯ - ಮುಂತಾದ ನಾಮರೂಪಗಳು ಆಧ್ಯಾತ್ಮಿಕವಾದ ಉಪಾಧಿಗಳೆನಿಸಿ ಚೈತನ್ಯವನ್ನು 'ನಾನು' ಎಂಬ ಹೆಸರಿಗೂ ಅರಿವಿಗೂ ತಕ್ಕದ್ದಾಗಿ ಮಾಡುವವು ಇದರಂತೆ ಆಕಾಶಾದಿಭೂತಗಳ ಪರಿಣಾಮವಾದ ಬೆಟ್ಟ, ನದಿ, ಸಮುದ್ರ - ಮುಂತಾದ ನಾಮರೂಪಗಳ ಗುಂಪುಗಳೂ ಮತ್ತು ಅದೇ ಭೂತಗಳ ಪರಿಣಾಮಗಳಾದ ಮತ್ತೆ ಕೆಲವು ಶರೀರಾದಿಸಂಘಾತಗಳೂ ಎದ್ದು ಹರಡಿಕೊಂಡು ನೀನು, ಇವನು, ಈ ಪ್ರಾಣಿಗಳು ಮುಂತಾದ ವಿಭಾಗದ ಅರಿವನ್ನುಂಟು ಮಾಡುತ್ತಿರುವವು.

    ಅವಿದ್ಯೆಯಿಂದ ಕಲ್ಪಿತವಾಗಿರುವ ನಾಮರೂಪಗಳ ಬೀಜಶಕ್ತಿಗೆ ಮಾಯಾಶಕ್ತಿ ಎಂದು ಹೆಸರು ಆ ಮಾಯಾಶಕ್ತಿಯು ಜಾಗ್ರತ್ಸ್ವಪ್ನಗಳಲ್ಲಿ ಹರಡಿಕೊಂಡಿರುವದಕ್ಕೆ ಮಾಯಾಶಕ್ತಿವಿಲಾಸವೆಂದು ಹೆಸರು. ಈ ಮಾಯಾಶಕ್ತಿಯ ವಿಲಾಸದಲ್ಲಿ ನೆಟ್ಟ ದೃಷ್ಟಿಯಿಂದಲೇ ನಮಗೆ ಅನೇಕ ದೇಹಾದಿಸಂಘಾತಗಳೂ, ಆ ಸಂಘತಗಳಲ್ಲಿರುವ ಅನೇಕ ಜೀವರೂ ಮತ್ತು ಒಂದಾನೊಂದು ಗೊತ್ತಾದ ದೇಹಾದಿಸಂಘಾತಕ್ಕೆ ಅಭಿಮಾನಿಯಾಗಿರುವ ನಾನೂ ವಿಂಗಡವಾಗಿರುವಂತೆ ತೋರುತ್ತಿರುವವು.

    ಯಾವ ಜೀವರು ಅನೇಕ ಜನ್ಮಗಳಲ್ಲಿ ತಾವು ಮಾಡಿರುವ ಪುಣ್ಯಮಹಿಮೆಯಿಂದ ಚಿತ್ತಶುದ್ಧಿಯನ್ನು ಹೊಂದಿ ಈ ಶರೀರಾದಿಗಳೇ ತಾವೆಂಬ ತಿಳಿವಳಿಕೆಯಿಂದಾಗಿರುವ ಸಂಸಾರಬಂಧದಿಂದ ಬಳಲಿಬೆಂಡಾಗಿ ಹೇಗಾದರೂ ಈ ಬಂಧದಿಂದ ಮುಕ್ತರಾಗಬೇಕೆಂಬ ದೃಢಸಂಕಲ್ಪದಿಂದ ಪರಮೇಶ್ವರನನ್ನು ಶರಣು ಹೊಂದುವರೋ ಅವರಿಗೆ ಆ ಕರುಣಾಳುವಾದ ಭಗವಂತನು ಪ್ರಸನ್ನನಾಗಿ ಶ್ರೀಗುರುಮೂರ್ತಿಯ ರೂಪದಿಂದ ಕಾಣಿಸಿಕೊಳ್ಳುವನು.

    ಯಾರು ಆ ಸದ್ಗುರುಮೂರ್ತಿಗೆ ನಮಸ್ಕಾರವನ್ನು ಮಾಡಿ, 'ಸ್ವಾಮಿ, ಈ ಶರೀರಾದಿಗಳಿಂದಾಗುತ್ತಿರುವ ದುಃಖದಿಂದ ಪಾರಾಗುವದಕ್ಕೆ ಯಾವದಾದರೂ ಉಪಾಯವುಂಟೆ?" - ಎಂದು ದೈನ್ಯದಿಂದ ಬೇಡಿಕೊಳ್ಳುವರೋ ಅವರಿಗೆ ಮಹಾಕರುಣಾಮಯನಾದ ಶ್ರೀಗುರುವು "ಅಪ್ಪ ಹೆದರದಿರು ನೀನು ಈಗಲೇ ಇಲ್ಲಿಯೇ ಶ್ರೀದಕ್ಷಿಣಾಮೂರ್ತಿಯಾದ ಪರಮಶಿವಸ್ವರೂಪನೇ ಆಗಿರುವೆ. ಈ ಶರೀರ, ಪ್ರಾಣ, ಇಂದ್ರಿಯಗಳು, ಬುದ್ಧಿ- ಇವುಗಳಲ್ಲಿ ನಾನು, ನನ್ನದು ಎಂಬ ಅಭಿಮಾನವನ್ನು ಮಾಡದೆ ಇರು; ಇವು ಬರಿಯ ಮಾಯಾವಿಲಾಸವು, ಕೇವಲ ಹುಸಿತೋರಿಕೆ; ಇವು ಸ್ವಪ್ನದಲ್ಲಿ ಕಾಣುವ ದೇಹಾದಿಗಳಂತೆಯೇ ನಿನಗೆ ಸಂಬಂಧ್ಧವಾಗಿರದಿದ್ದರೂ ವಿವೇಕಶೂನ್ಯನಾಗಿ ನೀನು ಇವುಗಳ ಧರ್ಮವನ್ನು ನೀನ್ನ ಸ್ವರೂಪದಲ್ಲಿ ಹುಟ್ಟಿಹಾಕಿಕೊಂಡು ವ್ಯಥೆಪಡುತ್ತಿದ್ದೀಯೆ ಸರಿಯಾಗಿ ನಿನ್ನ ಚೈತನ್ಯವೊಂದೇ ಹರಡಿಕೊಂಡಿರುವದು ಅನುಭವಾರೂಢವಾಗುವದು" ಎಂದು ಬೋಧಿಸುವನು ಆ ಸದ್ಗುರುವಿನ ದಯಾಪೂರಿತವಾದ ಬೋಧೆಯಿಂದ- ಸೂರ್ಯನು ಉದಯಿಸುತ್ತಲೂ ಕಾವಳದ ಮಬ್ಬು ಹರಿದು ಎಲ್ಲೆಲ್ಲಿಯೂ ಸೂರ್ಯಪ್ರಕಾಶವೇ ತೋರುವಂತೆ ನಾನು ಶರೀರೇಂದ್ರಿಯಸಂಘಾತಕ್ಕೆ ಕಟ್ಟುಬೀಳದ ಅಖಂಡಚಿನ್ಮಾತ್ರಸ್ವರೂಪನೇ ಎಂಬ ಜ್ಞಾನವು ಉದಯಿಸುವದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ